ಚೆಕ್ ಬೌನ್ಸ್, ಫಲಿತಾಂಶ ಮತ್ತು ಪರಿಣಾಮಗಳು
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರದಲ್ಲಿ ಖಾತೆದಾರರು ನೀಡುವ ಬಹುತೇಕ ಚೆಕ್ಗಳು ಹಣ ಸಂದಾಯವಾಗದೇ ಬೌನ್ಸ್ ಆಗುವುದು ಆತಂಕಕಾರಿ ಬೆಳವಣಿಗೆ.
ಇಂತಹ ಬೌನ್ಸ್ ಆದ ಚೆಕ್ಕುಗಳು ತಮ್ಮ ಮೂಲಸ್ವರೂಪವಾದ ಮುಖಬೆಲೆಯನ್ನು ಕಳೆದುಕೊಂಡು ಸಾರ್ವಜನಿಕರಲ್ಲಿ ಒಂದು ರೀತಿಯ ಅಪನಂಬಿಕೆಗೆ ಕಾರಣವಾಗಿದೆ.
ವಾಣಿಜ್ಯ ವಲಯದಲ್ಲಿ ತಮ್ಮ ವ್ಯವಹಾರಗಳಲ್ಲಿ ಚೆಕ್ಕುಗಳನ್ನು ನೀಡುವ ಸಂಪ್ರದಾಯ ವಾಡಿಕೆಯಲ್ಲಿದ್ದು, ವ್ಯವಹಾರಗಳು ಒಂದು ರೀತಿಯಲ್ಲಿ ಸರಳವಾಗಿ ಮುಕ್ತಾಯಗೊಳ್ಳುವಲ್ಲಿ ಬಹಳಷ್ಟು ಸಹಕಾರಿಯಾಗಿವೆಯಾದರೂ, ಮೋಸ ಮಾಡುವ ವ್ಯವಹಾರಸ್ಥರಿಗೆ ಇದೊಂದು ವರದಾನವಾಗಿದೆ.
ತಮ್ಮ ವ್ಯವಹಾರ ಮುಗಿಸುವಲ್ಲಿ ಮುಕ್ತಾಯಗೊಂಡರೂ ಚೆಕ್ ಪಡೆದವರು ತಮ್ಮ ಖಾತೆಗೆ ಹಣ ಪಡೆಯುವವರೆಗೂ ಖಾತ್ರಿಇಲ್ಲದೆ ಪರಿತಪಿಸಬೇಕಾಗಿದೆ. ಇಂತಹ ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕಾನೂನಿನಲ್ಲಿ ನೆಗೋಷಿಯಬಲ್ ಇನ್ಸ್ಟ್ರಮೆಂಟ್ ಎಂಬಾ ಕಾಯಿದೆಯ ಕಾಲಂ 138 ರ ಅಧಿನಿಯಮದಲ್ಲಿ ನ್ಯಾಯಾಲಯದ ಮೆಟ್ಟಿಲುಹತ್ತಿ ಪರಿಹರಿಸಿಕೊಳ್ಳಬಹುದಾದರೂ ಇದು ಎಷ್ಟರ ಮಟ್ಟಿಗೆ ಪ್ರಯೋಜನ ಮತ್ತು ಪರಿಣಾಮಕಾರಿ ಎಂಬುದನ್ನು ವಿಶ್ಲೇಷಿಸಿದಾಗ ಅನಾನುಕೂಲ ಅಡಚಣೆ ಮತ್ತು ಹಿಂಸೆ ಆಗುತ್ತದೆ.
ಸಾಮಾನ್ಯವಾಗಿ ಚೆಕ್ಕುಗಳು ಹಣ ಪಾವತಿಯಾಗದೇ ವಾಪಸ್ಸು ಬಂದಲ್ಲಿ ಚೆಕ್ ಪಡೆದವರು ಚೆಕ್ಕನ್ನು ನೀಡಿದವರನ್ನು ಸಂಪರ್ಕಿಸುತ್ತಾರೆ. ಚೆಕ್ ನೀಡಿದ ಹಲವಾರು ತಮ್ಮ ತಪ್ಪನ್ನು ಒಪ್ಪಿಕೊಂಡು ನಗದಾಗಿಯೋ ಇಲ್ಲವೇ ತಮ್ಮ ಖಾತೆಗೆ ಹಣತುಂಬಲು ಸಮಯಾವಕಾಶ ಕೋರಿ ಮತ್ತೊಮ್ಮೆ ಅದೇ ಚೆಕ್ಕನ್ನು ಮರುಚಲಾವಣೆಮಾಡಲು ವಿನಂತಿಸಿಕೊಳ್ಳುತ್ತಾರೆ.
ಇನ್ನೂ ಕೆಲವು ಭಂಡರು ತಾವು ನೀಡಿದ ಚೆಕ್ಕುಗಳ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲದಂತೆ ವರ್ತಿಸಿ ತಮ್ಮ ದರ್ಪವನ್ನು ಪ್ರದರ್ಶಿಸಿ ಇಲ್ಲವೇ ವಿನಾಕಾರಣ ವಿಳಂಬ ಮಾಡುವ ಕಲೆಯಲ್ಲಿ ಪ್ರವೀಣರಾಗಿರುತ್ತಾರೆ. ತಾವು ನೀಡಿರುವ ಚೆಕ್ಕುಗಳ ಮುಖಬೆಲೆಯನ್ನು ತಾವೇ ಈ ರೀತಿ ಕಳೆದುಕೊಂಡರು ಅದರ ಬಗ್ಗೆ ಕೊಂಚವೂ ಚಿಂತಿಸದ ಈ ವರ್ಗದ ಜನ ತಮ್ಮ ಚಾಳಿಯನ್ನು ಮುಂದೂವರೆಸಿಕೊಂಡು ಹೋಗುತ್ತಾರೆ.
ಇಂತಹ ಸಂದರ್ಭಗಳಲ್ಲಿ ಚೆಕ್ಕು ಪಡೆದವರಿಗೆ ಉಳಿದಿರುವ ಒಂದೇ ಮಾರ್ಗ ನ್ಯಾಯಾಲಯಕ್ಕೆ ಹೋಗುವುದು. ಇದಕ್ಕಾಗಿ ಒಬ್ಬ ವಕೀಲರನ್ನು ನೇಮಿಸಿ ಅವರು ಕೇಳಿದಷ್ಟು ಸಂಭಾವನೆಯನ್ನು ಕೊಟ್ಟು ಕೋರ್ಟಿಗೆ ಅಲೆಯಬೇಕಾದುದು ಅವರ ಹಣೆಬರಹವಾಗುತ್ತದೆ.
ನ್ಯಾಯಾಲಯದ ಮೂಲಕ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಲಕ್ಷಗಟ್ಟಲೆ ಇಲ್ಲವೇ ಕೋಟಿಗಳ ಮೊತ್ತದಲ್ಲಿರುವ ಬೌನ್ಸ್ ಆಗಿರುವ ಚೆಕ್ಕುಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯ. ಕಷ್ಟವಾದರೂ ಕೊನೆಗೆ ಫಲ ಸಿಗುತ್ತದೆ. ಆದರೆ ಕೇವಲ ಹಲವು ಸಾವಿರ ರೂಗಳಿಗೆ ನೀಡಲಾದ ಚೆಕ್ಕುಗಳು ಹಣವಿಲ್ಲದೆ ಹಿಂತಿರುಗಿ ಬಂದಾಗ ಕಾನೂನಿನ 138 ಕಾಯಿದೆಯಡಿ ಹೋರಾಡುವುದು ಗಾಳಿಯನ್ನು ಗುದ್ದಿ ಮೈ ನೋವಿಸಿಕೊಡಂತೆ ಆಗುತ್ತದೆ.
ಉದಾಹರಣೆಗೆ ಹತ್ತು, ಇಪ್ಪತ್ತು ಇಲ್ಲವೇ ಐವತ್ತು ಸಾವಿರದಂತಹ ಕಡಿಮೆ ಮಟ್ಟದ ಚೆಕ್ಕುಗಳು ಬೌನ್ಸ್ ಆದಾಗ ಅದಕ್ಕೆ ತಗಲುವ ಕೋರ್ಟ್ ವೆಚ್ಚ, ಕಾಲವಿಳಂಬ, ಅನಿರ್ದಿಷ್ಟಕಾಲ ಕೋರ್ಟಿಗೆ ಓಡುವುದು, ವಕೀಲರಿಗೆ ನೀಡಬೇಕಾದ ಸಂಭಾವನೆ ಇವೆ ಮುಂತಾದ ಗೋಜು ಗೊಂದಲಗಳು, ಚೆಕ್ ಪಡೆದವರು ತಮ್ಮ ಹಣ ಪಡೆಯುವುದರಲ್ಲಿ ನಿರಾಸಕ್ತಿಯನ್ನು ಹೊಂದಿ ಕೋರ್ಟ್ ಮೆಟ್ಟಲು ಹತ್ತುವ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬರುವ ಪ್ರಸಂಗ ಇದೆ. ಇಲ್ಲಿ ನೊಂದವರಿಗೆ ನ್ಯಾಯ ಸಿಗದಂತಾಗುತ್ತದೆ.
ಕಾಲಂ 138ರ ಅನ್ವಯ ಒಂದು ಚೆಕ್ ಬೌನ್ಸ್ ಆದ 30 ದಿನಗಳಲ್ಲಿ ಅದರ ಬಗ್ಗೆ ವಕೀಲರ ಮೂಲಕ ನೋಟಿಸ್ ನೀಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಬೇಕು.
ಬಳಿಕ ನ್ಯಾಯಾಲಯ ಚೆಕ್ಕು ನೀಡಿದವರಿಗೆ ಸಮನ್ಸ್ ಕಳಿಸಿ ಕೋರ್ಟಿಗೆ ಹಾಜರಾಗುವ0ತೆ ಆದೇಶ ನೀಡುತ್ತದೆ. ಇಂತಹ ಸೂಚನೆಗೂ ಜಗ್ಗದ ಹಲವರಿಗೆ ಪಾಠ ಕಲಿಸಲು ಉಳಿದಿರುವ ಮಾರ್ಗ ಪೊಲೀಸ್ ಇಲಾಖೆಯಿಂದ ಬಂಧನದ ವಾರೆಂಟ್ ತರಿಸಿಕೊಳ್ಳಬೇಕು. ಇದಕ್ಕೆ ಕೋರ್ಟ್ ಆದೇಶಬೇಕು. ಅಂತೆಯೇ ಪೊಲೀಸರು ಸಂಬಂಧ ಪಟ್ಟವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಬೇಕು. ಆಗ ಅದು ಕ್ರಿಮಿನಲ್ ಮೊಕದ್ದಮೆಯಾಗಿ ಪರಿವರ್ತನೆಗೊಳ್ಳುತ್ತದೆ.
ಈಗಾಗಲೇ ನಮ್ಮ ಪೊಲೀಸ್ ಠಾಣೆಗಳಲ್ಲಿ ಲೆಕ್ಕವಿಲ್ಲದಷ್ಟು ಸಾರ್ವಜನಿಕ ಜ್ವಲಂತ ಸಮಸ್ಯೆಗಳ ದೂರು ದಾಖಲಾಗುತ್ತಿದ್ದು ಈ ದೂರುಗಳ ನಡುವೆ ಚೆಕ್ ಬೌನ್ಸ್ ಪ್ರಕರಣಗಳು ಅವರಿಗೆ ಗೌಣವಾಗಿ ಕಾಣುವ ಸಂಭವ ಹೆಚ್ಚು. ಹೀಗಾಗಿ ಚೆಕ್ ಬೌನ್ಸ್ ಆಗಿ ನೊಂದವರು ಮಾಡಬೇಕಾದ ಕೆಲಸವೆನೆಂದರೆ ಕೋರ್ಟಿನ ಆದೇಶವನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿ ಸಂಬಂಧಪಟ್ಟ ಪೊಲೀಸರಿಗೆ ಆಮಿಷ ನೀಡಿ ಅವರಿಗೆ ಸಮರ್ಪಕ ವಾಹನ ಸೌಕರ್ಯ ವ್ಯವಸ್ಥೆ ಮಾಡಿ ಅಪರಾಧಿ ವಾಸಮಾಡುವ ಜಾಗವನ್ನು ತೋರಿಸಿ ಅವರ ಬಂಧನಕ್ಕೆ ಸಹಕಾರ ನೀಡಬೇಕಾಗುತ್ತದೆ.
ಕೆಲವೊಮ್ಮೆ ಇಂತಹ ಪ್ರಕರಣಗಳಲ್ಲಿ ಹಲವಾರು ತಮ್ಮ ವಿಳಾಸವನ್ನೇ ಬದಲಾಯಿಸಿರುತ್ತಾರೆ. ಬಹು ಮುಖ್ಯವಾಗಿ ಹಲವು ಬ್ಲೇಡ್ ಕಂಪೆನಿಯ ವ್ಯವಸ್ಥಾಪಕರು ಇಂತಹ ವಿಳಾಸ ಬದಲಿಸುವ ತಮ್ಮ ವೃತ್ತಿಯಲ್ಲಿ ಚತುರರೇ ಆಗಿರುತ್ತಾರೆ.
ಇದಿಷ್ಟು ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕಾದ ನಡವಳಿಕೆಗಳು. ಇಂತಹ ಸಂದರ್ಭದಲ್ಲಿ ಐವತ್ತು ಸಾವಿರ ರೂಗಳ ಒಳಗಡೆ ಇರುವ ಅಪಮೌಲ್ಯಗೊಂಡ ಚೆಕ್ಕುಗಳ ಬಗ್ಗೆ ಕ್ರಮ ಜರುಗಿಸಲು ನ್ಯಾಯಾಲಯಕ್ಕೆ ಮೊರೆಹೋಗುವ ಬದಲು ವ್ಯಾಪ್ತಿಗೆ ಒಳಪಡುವ ಆರಕ್ಷಕಠಾಣೆಗಳಲ್ಲಿ ಇವುಗಳ ಇತ್ಯರ್ಥವಾದಲ್ಲಿ, ಸಣ್ಣ ಮೊತ್ತದ ಚೆಕ್ ಪಡೆದವರ ಬವಣೆ ತೀರಬಲ್ಲದು.
ಪೊಲೀಸರಿಗೆ ಇಂತಹ ಅಧಿಕಾರವನ್ನು ನೀಡುವಲ್ಲಿ ಸರ್ಕಾರ ಕಾಯಿದೆ ರೂಪಿಸಬೇಕಾಗಿದೆ. ಅಂತೆಯೇ ಸರಿಯಾದ ಹಣ ವ್ಯವಸ್ಥೆ ಮಾಡದೇ ಚೆಕ್ ಬೌನ್ಸ್ ಆಗಲು ಕಾರಣರಾದ ಆ ವ್ಯಕ್ತಿಗಳ ಬ್ಯಾಂಕಿನ ಖಾತೆಯನ್ನು ವಜಾ ಮಾಡಿ ಮತ್ತ್ಯಾವುದೇ ಬ್ಯಾಂಕಿನಲ್ಲಿ ಅವರು ವ್ಯವಹಾರ ಮಾಡಲಾರದಂತಹ ಕಾನೂನು ರೂಪಿಸಿದ್ದಲ್ಲಿ ಚೆಕ್ ಬೌನ್ಸ್ ಪ್ರಕರಣಕ್ಕೆ ಕಡಿವಾಣ ಹಾಕಬಹುದಾಗಿದೆ.