ಐಟಿ ಕ್ಷೇತ್ರದಲ್ಲಿ 98000 ಕೋಟಿ ಹೂಡಿಕೆ ನಿರೀಕ್ಷೆ
ಮಾಹಿತಿ ತಂತ್ರಜ್ಞಾನ ಬಂಡವಾಳ ಹೂಡಿಕೆ ಪ್ರದೇಶ(ITIR)ಕ್ಕೆ ಸುಮಾರು 98,000 ಕೋಟಿ ರು ಹರಿದು ಬರುವ ನಿರೀಕ್ಷಯಿದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ತೀವ್ರ ಸ್ಪರ್ಧೆಯನ ನಡುವೆ ಕರ್ನಾಟಕ ಈ ಗಾತ್ರದ ಬಂಡವಾಳ ಆಕರ್ಷಿಸುವಲ್ಲಿ ಸಫಲವಾಗಿದೆ.
ಕಳೆದ ಎರಡು ವರ್ಷಗಳಿಂದ ಈ ಮಹತ್ವದ ಬಂಡವಾಳ ಹೂಡಿಕೆ ಅನುಮತಿ ನೀಡದೆ ಸತಾಯಿಸಿದ್ದ ಯಪಿಎ ಸರ್ಕಾರ ಈಗ ಓಕೆ ಎಂದಿದೆ.
ಬೆಂಗಳೂರಿನ ದೇವನಹಳ್ಳಿ ಬಳಿ 10,200 ಎಕರೆ ಭೂಮಿಯನ್ನು ಸ್ವಾದೀನ ಪಡಿಸಿಕೊಂಡು 98000 ಕೋಟಿ ರು ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
'ಕೇಂದ್ರ ಸರ್ಕಾರದಿಂದ ಈ ರೀತಿ ಭಾರಿ ಯೋಜನೆಗೆ ಒಪ್ಪಿಗೆ ಪಡೆದ ರಾಜ್ಯ ಕರ್ನಾಟಕವಾಗಿದೆ. ಹಲವಾರು ಹೂಡಿಕೆದಾರರು ಈ ಯೋಜನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಟೆಂಡರ್ ಕರೆದು ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಲಾಗುವುದು' ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಎಂಎನ್ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ 2,500 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗುವುದು. ಮೊದಲ ಹಂತದಲ್ಲಿ 37,000 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ. 45ಕ್ಕೂ ಅಧಿಕ ಕಂಪನಿಗಳು ಹೂಡಿಕೆಗೆ ಮುಂದೆ ಬಂದಿದೆ.
ಜಿಮ್ 2012: ಜೂನ್ 7 ಹಾಗೂ 8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ (GIM) ದಿಂದ ಸುಮಾರು 1.5 ಲಕ್ಷ ಕೋಟಿ ರು ಬಂಡವಾಳ ನಿರೀಕ್ಷೆಯಿದೆ. ಜಪಾನ್, ಮೆಕ್ಸಿಕೋ, ಇಟಲಿ ಸೇರಿದಂತೆ 30ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಂಎನ್ ವಿದ್ಯಾಶಂಕರ್ ವಿವರಿಸಿದರು.
ವಿಯೆಟ್ನಾಂ, ಥೈಲ್ಯಾಂಡ್ ನಿಂದ ಕರ್ನಾಟಕ ಹಾಗೂ ಭಾರತದ ಐಟ, ಐಟಿಯೇತರ ಉದ್ಯಮಕ್ಕೆ ತೀವ್ರ ಪೈಪೋಟಿ ಎದುರಾಗಿದೆ. ಇದನ್ನು ತಡೆಗಟ್ಟಲು ಈ ರೀತಿ ಸಮಾವೇಶ ಸಹಕಾರಿ ಎಂದು ವಿದ್ಯಾಶಂಕರ್ ಹೇಳಿದರು.
ಜಿಮ್ ನಲ್ಲಿ ಒಪ್ಪಂದವಾದಂತೆ ಕಾಮಗಾರಿಗಳು ನಡೆಯುತ್ತಿದೆ. ಶೇ 60 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 6 ಲಕ್ಷ ಕೋಟಿ ಬಂಡವಾಳ ಆಕರ್ಷಿಸುವುದು ಸುಲಭದ ಮಾತಲ್ಲ, ಕರ್ನಾಟಕದ ಕೈಗಾರಿಕೆಯ ಚಿತ್ರಣವನ್ನೇ ಇದು ಬದಲಿಸುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.