ಕಾವೇರಿಗಾಗಿ 25 ಸಾವಿರ ಕೋಟಿ ನಷ್ಟ
ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ಸಮಗ್ರ ಕರ್ನಾಟಕವೇ ಸ್ಥಬ್ದಗೊಂಡಿದೆ. ಕರ್ನಾಟಕಕ್ಕೆ ಕಾವೇರಿ ಗಲಾಟೆಯಿಂದಾಗಿ ಅಂದಾಜು 22 ರಿಂದ 25 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಹಲವು ದಿನಗಳಿಂದ ಸಂಚಾರ ಸ್ಥಗಿತಗೊಂಡಿದ್ದು, ಐಟಿ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಅಲ್ಲದೆ ಉದ್ಯಮಗಳ ನೈತಿಕ ಸ್ಥೈರ್ಯ ಕುಸಿತಗೊಂಡಿದೆ.
1. ಬೆಂಗಳೂರಿನ ವರ್ಚಸ್ಸಿಗೆ ಧಕ್ಕೆ
ಜಗತ್ತಿನ 500 ಪ್ರಮುಖ ಕಂಪನಿಗಳಿರುವ(ಪಾರ್ಚೂನ್ 500) ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನ ವರ್ಚಸ್ಸಿಗೆ ಜಾಗತಿಕ ಮಟ್ಟದಲ್ಲಿ ಧಕ್ಕೆಯಾಗಿದೆ ಎಂದು ವಾಣಿಜ್ಯೋದ್ಯಮ ಮಹಾ ಸಂಘ(ಅಸೋಚಾಂ) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2. ಐಟಿ ಉದ್ಯಮ ತತ್ತರ
ಕಾವೇರಿ ಗಲಭೆಯಿಂದಾಗಿ ಐಟಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗದೆ ಇರುವುದರಿಂದ ಕಳೆದ ಹಲವು ದಿನಗಳಿಂದ ಐಟಿ ಉದ್ಯಮ ಭಾರಿ ನಷ್ಟ ಅನುಭವಿಸಿದೆ.
ಇನ್ಫೋಸಿಸ್, ವಿಪ್ರೊ, ಫ್ಲಿಪ್ಕಾರ್ಟ್, ಅಮೆಜಾನ್ ನಂತಹ ಅನೇಕ ಐಟಿ ಮತ್ತು ಇ-ಕಾಮರ್ಸ್ ಉದ್ಯಮಗಳು ಭಾರೀ ನಷ್ಟ ಅನುಭವಿಸಿವೆ.
3. ಸಾರಿಗೆ ಸಂಪರ್ಕ ನಷ್ಟ
ಹಲವು ದಿನಗಳಿಂದ ಬಸ್, ರೈಲು, ವಿಮಾನ, ಮೆಟ್ರೊ ಸಂಚಾರ ಸ್ಥಗಿತಗೊಂಡಿದ್ದು, ಬೆಂಗಳೂರಿನಿಂದ ತೆರಳುವ ಮತ್ತು ಬರುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ವಿಮಾನ, ರೇಲ್ವೆ ಪ್ರಯಾಣದ ಟಿಕೇಟ್ ಗಳನ್ನು ರದ್ದು ಮಾಡಲಾಗಿದ್ದು, ಅಂತರ್ ರಾಜ್ಯ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.
4.ಮಾಲ್, ಕೈಗಾರಿಕಾ ಮತ್ತು ಚಿಲ್ಲರೆ ವಹಿವಾಟು ಕುಸಿತ
ಕಳೆದ ನಾಲ್ಕೈದು ದಿನಗಳಿಂದ ಇಡೀ ಬೆಂಗಳೂರು ಬೀಕೋ ಎನ್ನುತ್ತಿದ್ದು, ಕೈಗಾರಿಕೊದ್ಯಮ ಭಾರಿ ನಷ್ಟ ಅನುಭವಿಸಿದೆ. ಸರಕು ಸಾಗಾಣೆ, ಚಿಲ್ಲರೆ ವಹಿವಾಟು, ಹೋಟೆಲ್, ಶಾಪಿಂಗ್ ಮಾಲ್, ಸಿನಿಮಾ ಮಂದಿರಗಳ ಮೇಲೂ ಪರಿಣಾಮ ಬೀರಿದೆ.
5. ನೈತಿಕ ಸ್ಥೈರ್ಯದ ಕುಸಿತ
ಬೆಂಗಳೂರು ಮತ್ತು ರಾಜ್ಯದ ಕೆಲವೆಡೆ ಹಾಗೂ ಅಲ್ಲದೆ ತಮಿಳುನಾಡಿನಲ್ಲಿ ನಿಲ್ಲದ ಗಲಭೆ-ಹಿಂಸಾಚಾರದಿಂದಾಗಿ ನಾಡಿನ ಮಾನಸಿಕ ಸ್ಥೈರ್ಯ, ಉದ್ಯಮಗಳ ನೈತಿಕ ಸ್ಥೈರ್ಯ ಕುಸಿಯುವಂತಾಗಿದೆ ಎಂದು ಅಸೋಚಾಂ ಅಭಿಪ್ರಾಯ ಪಟ್ಟಿದೆ.
6. ಕಾನೂನು ಸುವ್ಯವಸ್ಥೆ ಕಾಪಾಡಬೇಕು
ಕಾವೇರಿ ನಾಡಿನ ಆಸ್ತಿಯಾಗಿದ್ದು, ನೀರು ಎಲ್ಲರಿಗೂ ಅಗತ್ಯವಾಗಿದೆ. ಇದರೊಂದಿಗೆ ಎರಡು ರಾಜ್ಯಗಳ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಹೀಗಾಗಿ ಎರಡೂ ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದೆ ಎಂದು ಅಸೋಚಾಂ ಮನವಿ ಮಾಡಿದೆ.