ಭಾರತದ ಆರ್ಥಿಕ ಪ್ರಗತಿಯಲ್ಲಿ ಏರಿಕೆ: ವಿಶ್ವಬ್ಯಾಂಕು
2016ರಲ್ಲಿ ಜಾಗತಿಕ ಪ್ರಗತಿಯಲ್ಲಿ ದಕ್ಷಿಣ ಏಷ್ಯಾ ಮಹತ್ವದ ಪಾತ್ರ ವಹಿಸಲಿದ್ದು, ಭಾರತದ ಆರ್ಥಿಕ ಪ್ರಗತಿ ಏರುಗತಿಯಲ್ಲಿ ಸಾಗುತಿದ್ದು ಮುಂದಿನ ದಿನಗಳಲ್ಲಿ ದೃಢವಾಗಿರಲಿದೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ತಿಳಿಸಿದೆ.
1. ಆರ್ಥಿಕ ಏರುಗತಿಗೆ ಕಾರಣ
- ಕೃಷಿ ವಲಯದ ನಿರಂತರ ಚೇತರಿಕೆ
- ಏಳನೇ ವೇತನ ಆಗೋಗ ಜಾರಿಯಿಂದ ಖರೀದಿ ಸಾಮರ್ಥ್ಯದಲ್ಲಿ ಹೆಚ್ಚಳ
- ಅಲ್ಪಾವಧಿಗೆ ಖಾಸಗಿ ಹೂಡಿಕೆ ಪ್ರಮಾಣದಲ್ಲಿ ಏರಿಕೆ
- ಮೂಲಭೂತ ಸೌಕರ್ಯಗಳಲ್ಲಿ ಗಣನೀಯ ಅಭಿವೃದ್ಧಿ
- ಜನಸಾಮಾನ್ಯರ ಅಭಿವೃದ್ಧಿಗಾಗಿ ಸರ್ಕಾರ ಜಾರಿ ತಂದಿರುವ ಯೋಜನೆಗಳ ಪರಣಾಮ
2. ಭಾರತದ ಜಿಡಿಪಿ ಬೆಳವಣಿಗೆ ದರ
ದೇಶದ ಗಡಿಭಾಗದಲ್ಲಿನ ಸಮಸ್ಯೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಅನಿಶ್ಚಿತತೆ, ಆರ್ಥಿಕ ಉತ್ತೇಜನ ನೀತಿಯಲ್ಲಾಗುತ್ತಿರುವ ಇಳಿಮುಖ, ಚೀನಾದ ನಿಧಾನಗತಿಯ ಆರ್ಥಿಕ ಪ್ರಗತಿ ಹಾಗೂ ಹಣ ರವಾನೆ ತಗ್ಗಿರುವುದು ಸೇರಿದಂತೆ ಇನ್ನೂ ಹಲವು ಬಾಹ್ಯ ಅಡೆತಡೆಗಳ ಹೊರತಾಗಿಯೂ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) 2016ರಲ್ಲಿ ಶೇ 7.6ರಷ್ಟು ಮತ್ತು 2017ರಲ್ಲಿ ಶೇ 7.7ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.
3. ಭಾರತದ ಎದುರಿರುವ ಸವಾಲುಗಳು
ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ದಕ್ಷಿಣ ಏಷ್ಯಾ ಪ್ರದೇಶವು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಬಡತನ ನಿರ್ಮೂಲನೆ, ಆರೋಗ್ಯ, ನಿರುದ್ಯೋಗ, ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಲಿಂಗ ತಾರತಮ್ಯಗಳು ಭಾರತದ ಬೆಳವಣಿಗೆಗೆ ಎದುರಾಗಿರುವ ಸವಾಲುಗಳಾಗಿವೆ ಎಂದು ‘ಸೌತ್ ಏಷ್ಯಾ ಇಕನಾಮಿಕ್ ಫೋಕಸ್' ವರದಿಯಲ್ಲಿ ತಿಳಿಸಲಾಗಿದೆ.
4. ಜಿಎಸ್ಟಿ ಪ್ರಭಾವ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಕ್ರಮಗಳಿಂದಾಗಿ ಈ ವರ್ಷ ಗ್ರಾಮೀಣ ಮತ್ತು ನಗರ ಪ್ರದೇಶದ ಆರ್ಥಿಕತೆ ಒಂದು ನಿರ್ದಿಷ್ಟ ಪಥದಲ್ಲಿ ಚಲಿಸುವಂತೆ ಮಾಡಲಿದೆ. ಅದರಲ್ಲೂ ಜಿಎಸ್ಟಿ ಅನುಮೋದನೆ ಭಾರತದ ಆರ್ಥಿಕ ಪ್ರಗತಿ ಮತ್ತು ಉತ್ತೇಜನಕ್ಕೆ ಪೂರಕ ಶಕ್ತಿಯಾಗಲಿದೆ ಎಂದು ತಿಳಿಸಿದೆ.