ಕಪ್ಪು ಹಣ ವ್ಯವಹಾರಗಳ ವಿರುದ್ಧ ತೆರಿಗೆ ಇಲಾಖೆಯ ಕ್ರಮಗಳೇನು?
ಹಳೆ ನೋಟುಗಳ ಠೇವಣಿ ಇಡಲು ಮತ್ತು ಬದಲಾವಣೆ ಮಾಡಿಕೊಳ್ಳಲು ಡಿಸೆಂಬರ್ 30ರ ತನಕ ಕಾಲಾವಕಾಶನೀಡಲಾಗಿದ್ದು, ಬೇರೆಯವರ ಬ್ಯಾಂಕ್ ಖಾತೆಯಲ್ಲಿ ತಮ್ಮ ಲೆಕ್ಕಕ್ಕೆ ಸಿಗದ ಹಳೆಯ ಕರೆನ್ಸಿ ಇರಿಸುವವರ ವಿರುದ್ಧ ತೆರಿಗೆ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.
ಹಳೆ ನೋಟುಗಳ ಠೇವಣಿ ಇಡಲು ಮತ್ತು ಬದಲಾವಣೆ ಮಾಡಿಕೊಳ್ಳಲು ಡಿಸೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದ್ದು, ಬೇರೆಯವರ ಬ್ಯಾಂಕ್ ಖಾತೆಯಲ್ಲಿ ತಮ್ಮ ಲೆಕ್ಕಕ್ಕೆ ಸಿಗದ ಹಳೆಯ ಕರೆನ್ಸಿ ಇರಿಸುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.
ಈಗಾಗಲೇ ಜನಧನ್ ಖಾತೆ, ಗೃಹಿಣಿಯರು ಮತ್ತು ಕಾರ್ಮಿಕರ ಖಾತೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಇಂತಹ ಕಾನೂನು ಉಲ್ಲಂಘನೆಯ ಅಕ್ರಮ ವ್ಯವಹಾರಗಳು ಕಂಡು ಬಂದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ತೆರಿಗೆ ಇಲಾಖೆ ಮುಂದಾಗಿದೆ.
1. 7 ವರ್ಷ ಜೈಲು ಶಿಕ್ಷೆ
ಅಕ್ರಮ ನಗದು ವ್ಯವಹಾರ ಕೈಗೊಂಡು ಕಾನೂನು ಉಲ್ಲಂಘಿಸುವವರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಬೇನಾಮಿ ವ್ಯವಹಾರ ಕಾಯಿದೆ ಅಡಿಯಲ್ಲಿ ಪೆನಾಲ್ಟಿ ಮತ್ತು ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
2. ಜನಧನ ಖಾತೆದಾರರಿಗೆ ಎಚ್ಚರಿಕೆ
ರೂ. 500 / 1,000 ಮುಖಬೆಲೆ ನೋಟುಗಳ ವಿನಿಮಯ ಸಂದರ್ಭದಲ್ಲಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಅಕ್ರಮ ಹಣವನ್ನು ಠೇವಣಿ ಇರಿಸುವ ಮೂಲಕ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಲು ಅವಕಾಶ ನೀಡಿದ್ದು ರುಜುವಾತು ಆದಲ್ಲಿ ಆದಾಯ ತೆರಿಗೆ ಕಾಯಿದೆಯಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜನಧನ್ ಖಾತೆದಾರರು, ಗೃಹಿಣಿಯರು ಮತ್ತು ಕಾರ್ಮಿಕರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
3. ಇನಾಮು ನೀಡುವ ಮೂಲಕ ಖಾತೆದಾರರ ಬಳಕೆ
ಕೆಲವರು ತಮ್ಮ ಬಳಿಯಿರುವ ಕಪ್ಪು ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಲು ಇತರರ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳುತ್ತಿರುವುದು ವರದಿ ಆಗಿದೆ. ಕೆಲವು ಪ್ರಕರಣಗಳಲ್ಲಿ ಕಪ್ಪು ಹಣ ಬಿಳಿ ಹಣಕ್ಕೆ ಬದಲಾಯಿಸಲು ಅವಕಾಶ ನೀಡುವ ಖಾತೆದಾರರಿಗೆ ಇನಾಮು ಕೂಡ ನೀಡಲಾಗುತ್ತಿದೆ.
4. ಠೇವಣಿ ಮಾನದಂಡಗಳೇನು?
- ರೂ. 2.50 ಲಕ್ಷ ತನಕದ ಠೇವಣಿಗಳು ಪರಿಶೀಲನೆ ವ್ಯಾಪ್ತಿಯಡಿ ಬರುವುದಿಲ್ಲ ಹಾಗೂ ತೆರಿಗೆ ಕೂಡ ಇರುವುದಿಲ್ಲ.
- ಪ್ರಧಾನಮಂತ್ರಿ ಜನಧನ್ ಖಾತೆದಾರರು ರೂ. 50,000 ತನಕ ಠೇವಣಿ ಇಡಬಹುದು. ಕೆವಾಯ್ಸಿ(KYC) ಹೊಂದಿರುವವರು ಒಂದು ಲಕ್ಷದವರೆಗೆ ಠೇವಣಿ ಹೊಂದಬಹುದು.
- ಡಿಸೆಂಬರ್ 30ರವರೆಗೆ ಖಾತೆಗಳಲ್ಲಿ ಠೇವಣಿ ಇರಿಸಲಾಗುವ ಕಪ್ಪು ಹಣವನ್ನು ತೆರಿಗೆ, ಬಡ್ಡಿ ಮತ್ತು ಶೇ. 200 ದಂಡಕ್ಕೆ ಒಳಪಡಿಸಲಾಗುವುದು.
- ಬ್ಯಾಂಕು ಖಾತೆಗಳಲ್ಲಿ ರೂ. 2.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಇರಿಸುವಾಗ ಪಾನ್ ನಂಬರ್ ನಮೂದಿಸುವುದನ್ನು ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ.
5. ತೆರಿಗೆ ವಂಚನೆ
ಮೂಲ ಖಾತೆಯಲ್ಲಿ ಠೇವಣಿ ಇಡಲಾಗುವ ಹಣ ಮೂಲ ಖಾತೆದಾರನದ್ದಾಗಿರದೆ ಬೇರೆ ಯಾರದೋ ಆಗಿರುವುದು ಸಾಬೀತು ಆದಲ್ಲಿ ಅಂತವರನ್ನು ತೆರಿಗೆ ವಂಚನೆ ಅಡಿಯಲ್ಲಿ ದಂಡಕ್ಕೆ ಒಳಪಡಿಸಬಹುದಾಗಿದೆ ತೆರಿಗೆ ಇಲಾಖೆ ಹೇಳಿದೆ. ಇಂತಹ ದುರುಪಯೋಗಕ್ಕಾಗಿ ಅವನ/ಅವಳ ಖಾತೆಯನ್ನು ಬಳಸಿದಲ್ಲಿ ಅವಕಾಶ ನೀಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
6. ಸರ್ಕಾರದ ಮನವಿ
ಸಾರ್ವಜನಿಕರು ಯಾವುದೇ ಆಮಿಷಕ್ಕೆ ಒಳಗಾಗದೆ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ಅಪರಾಧದಲ್ಲಿ ಭಾಗಿಯಾಗದಂತೆ ಸರಕಾರ ಜನರಲ್ಲಿ ಮನವಿ ಮಾಡಿದೆ. ಕಪ್ಪು ಹಣ ತಡೆಗಟ್ಟುವಲ್ಲಿ ದೇಶದ ಎಲ್ಲಾ ನಾಗರಿಕರು ನೆರವಾದಲ್ಲಿ ಕಪ್ಪು ಹಣ ವಿರುದ್ಧದ ಹೋರಾಟ ಯಶಶ್ವಿಯಾಗಬಹುದು ಎಂದು ತಿಳಿಸಿದೆ.