ಭಾರತದ ಕೇಂದ್ರ ಬಜೆಟ್ 2016-17ರ ಮುಖ್ಯಾಂಶಗಳ ಅವಲೋಕನ...
2016-17ರ ಬಜೆಟ್ ನಲ್ಲಿರುವ ಕೈಗಾರಿಕೆ ಉತ್ತೇಜನಾ ಅಂಶಗಳು, ರೈತರಿಗೆ ಸಾಲ ಸೌಲಭ್ಯ, ಸಬ್ಸಿಡಿ, ನರೇಗಾ, ಪಿಎಫ್ ಸೌಲಭ್ಯ, ನಬಾರ್ಡ್ ನಿಧಿ ಇತ್ಯಾದಿ ಅಂಶಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಕೇಂದ್ರ ಬಜೆಟ್ 2017-18 ಮಂಡನೆಯಾಗಲಿರುವ ಸಂದರ್ಭದಲ್ಲಿ ಕಳೆದ 2016-17ರಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ನ ಕುರಿತು ಅವಲೋಕನ ಮಾಡಲಾಗಿದೆ.
2016-17ರ ಬಜೆಟ್ ನಲ್ಲಿರುವ ಕೈಗಾರಿಕೆ ಉತ್ತೇಜನಾ ಅಂಶಗಳು, ರೈತರಿಗೆ ಸಾಲ ಸೌಲಭ್ಯ, ಸಬ್ಸಿಡಿ, ನರೇಗಾ, ಪಿಎಫ್ ಸೌಲಭ್ಯ, ನಬಾರ್ಡ್ ನಿಧಿ ಇತ್ಯಾದಿ ಅಂಶಗಳ ಸಂಕ್ಷಿಪ್ತ ನೋಟ ಇಲ್ಲಿದೆ. 2016-17ರ ಕೇಂದ್ರ ಆಯವ್ಯಯವನ್ನು 2016 ಫೆಬ್ರವರಿ 29ರಂದು ಮಂಡಿಸಿದ್ದರು.
1. ಸ್ಟಾರ್ಟ್ಅಪ್ ಉತ್ತೇಜನ
ಸ್ಟಾರ್ಟ್ಅಪ್ ಗಳಿಗೆ ಬಜೆಟ್ ನಲ್ಲಿ ಭಾರಿ ಉತ್ತೇಜನಾ ಕ್ರಮ ಮತ್ತು ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ನವೋದ್ಯಮಗಳಿಗೆ ಮೊದಲ ಮೂರು ವರ್ಷ ಶೇಕಡ ನೂರರಷ್ಟು ತೆರಿಗೆ ವಿನಾಯ್ತಿ ನೀಡಲಾಗಿದೆ.
ಏಪ್ರಿಲ್ 1, 2019ರ ಒಳಗಾಗಿ ಸ್ಥಾಪನೆಯಾಗುವ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಆಧಾರಿತ ನವೋದ್ಯಮಗಳು ಶೇಕಡಾ ನೂರು ತೆರಿಗೆ ವಿನಾಯ್ತಿ ಪಡೆಯಲಿವೆ.
2. ನಿಧಿಗಳ ನಿಧಿ ಸ್ಥಾಪನೆ
ಸ್ಟಾರ್ಟ್ ಅಪ್ ಇಂಡಿಯಾ ಕ್ರಿಯಾ ಯೋಜನೆ ಅಡಿ ಹೊಸದಾಗಿ ‘ನಿಧಿಗಳ ನಿಧಿ' ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. ಈ ನಿಧಿ ಮೂಲಕ ವಾರ್ಷಿಕ ರೂ. 2,500 ಕೋಟಿಯಂತೆ ನಾಲ್ಕು ವರ್ಷ ಸಂಗ್ರಹಿಸಲಾಗುವ ಹಣವನ್ನು ಸ್ಟಾರ್ಟ್ ಅಪ್ಗಳಿಗೆ ಉತ್ತೇಜನ ನೀಡಲು ವಿನಿಯೋಗಿಸಲಾಗುವುದು.
* 500 ಕೋಟಿ: ‘ಸ್ಟ್ಯಾಂಡ್ ಅಪ್ ಇಂಡಿಯಾ' ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಬಜೆಟ್ ನಲ್ಲಿ 500 ಕೋಟಿ ತೆಗೆದಿರಿಸಲಾಗಿದೆ.
3. ಕೇಂದ್ರದಿಂದಲೇ ಪಿಎಫ್
* ಉದ್ಯೋಗಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಮೊದಲ ಮೂರು ವರ್ಷ ಅವರ ಪಿಎಫ್ ಖಾತೆಗೆ (ಭವಿಷ್ಯನಿಧಿ ಯೋಜನೆ)ಮೂಲ ವೇತನದ ಶೇ. 8.33 ರಷ್ಟು ಹಣವನ್ನು ಉದ್ಯೋಗದಾತ ಕಂಪೆನಿಗಳ ಬದಲು ತಾನೇ ಪಾವತಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು.
4. ಗ್ರಾಮ ಮತ್ತು ಕೃಷಿಗೆ ಉತ್ತೇಜನ
* ಗೊಬ್ಬರ ಸಬ್ಸಿಡಿ ರೈತರ ಖಾತೆಗೆ
ರಸಗೊಬ್ಬರ ಸಬ್ಸಿಡಿ ಮಧ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸುವ ಉದ್ದೇಶದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಕಳೆದ ಬಾರಿಯ ಬಜೆಟ್ನಲ್ಲಿ ಕೃಷಿ ವಲಯಕ್ಕೆ ರೂ. 35,984 ಕೋಟಿ ಅನುದಾನ ನೀಡಿದ್ದು, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಲಾಗಿತ್ತು.
5. ರೂ.20 ಸಾವಿರ ಕೋಟಿ ನಿಧಿ ಸ್ಥಾಪನೆ
ನಬಾರ್ಡ್ ನೆರವಿನಡಿ ದೀರ್ಘಾವಧಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೂ.20 ಸಾವಿರ ಕೋಟಿ ನಿಧಿ ಸ್ಥಾಪನೆ. ಬಜೆಟ್ ಮೂಲಕ ರೂ. 12,517 ಕೋಟಿ ಅನುದಾನ. ಅಂತರ್ಜಲದ ಸಮರ್ಥ ನಿರ್ವಹಣೆಗೆ ರೂ.6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆಗೆ ಅವಕಾಶ ನೀಡಲಾಗಿದೆ.
6. ರೈತರಿಗೆ ಸೌಲಭ್ಯಗಳು
* ರೈತರಿಗಾಗಿ ಜಾರಿಗೊಳಿಸಿರುವ ‘ಫಸಲ್ ಭಿಮಾ ಯೋಜನೆ'ಗೆ ರೂ.5,500 ಕೋಟಿ.
* ದೇಶದ ವಿವಿಧ ಭಾಗಗಳ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಮೂರು ನಿರ್ದಿಷ್ಟ ಕಾರ್ಯಕ್ರಮ
1. ವಿಕೇಂದ್ರೀಕರಣ ಖರೀದಿ ವ್ಯವಸ್ಥೆ ಹೊಂದಿರದ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ
2. ಭಾರತ ಆಹಾರ ನಿಗಮದ ಮೂಲಕ ‘ಆನ್ಲೈನ್ ಖರೀದಿ ವ್ಯವಸ್ಥೆ. ಇದರಿಂದ ಪಾರದರ್ಶಕತೆ, ರೈತರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಅನುಕೂಲವಾಗಲಿದೆ.
3. ದ್ವಿದಳ ಧಾನ್ಯಗಳ ಖರೀದಿಗೆ ಪರಿಣಾಮಕಾರಿ ವ್ಯವಸ್ಥೆ ಜಾರಿ.
7. ನರೇಗಾಕ್ಕೆ ಹೆಚ್ಚುವರಿ ರೂ.3,800 ಕೋಟಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) 2016-17ರಲ್ಲಿ ರೂ. 3,800 ಕೋಟಿ ಹೆಚ್ಚಿಗೆ ಅನುದಾನ ನೀಡಲಾಗಿದೆ. 2015-16ರ ಬಜೆಟ್ನಲ್ಲಿ ನರೇಗಾಕ್ಕೆ ರೂ. 34,699 ಕೋಟಿ ಮೀಸಲಿಡಲಾಗಿತ್ತು. ಅದನ್ನು ರೂ. 38,500 ಕೋಟಿಗೆ ಏರಿಸಲಾಗಿತ್ತು.
8. ಗ್ರಾಮೀಣ ಭಾರತದತ್ತ ಒಲವು
ಸ್ವಚ್ಛ ಭಾರತಕ್ಕೆ 2016-17ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ರೂ. 11,300 ಸಾವಿರ ಕೋಟಿ ಮೀಸಲಿಡಲಾಗಿತ್ತು. ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಈ ಯೋಜನೆಗೆ ಹೆಚ್ಚಿನ ಹಣ ಒದಗಿಸಲಾಗಿದೆ.