ಇನ್ಫೋಸಿಸ್ ನಲ್ಲಿ ಸತತ ಭಾರಿ ಸಮರ! ನಷ್ಟದ ಹಾದಿಯಲ್ಲಿ ಇನ್ಫೋಸಿಸ್!!
ದೇಶದ ಪ್ರಸಿದ್ದ ಕಂಪನಿಯಾದ ಇನ್ಫೋಸಿಸ್ ನಲ್ಲಿ ಆಂತರಿಕ ಸಂಘರ್ಷ, ಹಿತಾಸಕ್ತಿ ಕಲಹಗಳು ಮನೆ ಮಾಡಿವೆ. ಆಡಳಿತ ಮಂಡಳಿ, ನಿರ್ದೇಶಕ ಮಂಡಳಿ, ಪ್ರವರ್ತಕರು ಹೇಗೆ ಎಲ್ಲರಲ್ಲೂ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ದೇಶದ ಐಟಿ(ಮಾಹಿತಿ ತಂತ್ರಜ್ಞಾನ) ವಲಯದ ಪ್ರಮುಖ ಸಂಸ್ಥೆಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕಳೆದ ಐದಾರು ತಿಂಗಳು ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಗ್ರೂಪ್ ನಲ್ಲಿ ಬಿರುಗಾಳಿ ಎದ್ದಿತ್ತು. ಇದೀಗ ದೇಶದ ಇನ್ನೊಂದು ಪ್ರಸಿದ್ದ ಕಂಪನಿಯಾದ ಇನ್ಫೋಸಿಸ್ ನಲ್ಲಿ ಆಂತರಿಕ ಸಂಘರ್ಷ, ಹಿತಾಸಕ್ತಿ ಕಲಹಗಳು ಮನೆ ಮಾಡಿವೆ. ಆಡಳಿತ ಮಂಡಳಿ, ನಿರ್ದೇಶಕ ಮಂಡಳಿ, ಪ್ರವರ್ತಕರು ಹೇಗೆ ಎಲ್ಲರಲ್ಲೂ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಆಂತರಿಕ ಕಲಹಗಳು ಹೀಗೆ ಮುಂದುವರೆದರೆ ಹೂಡಿಕೆದಾರರು ಹಿಂದೆ ಸರಿಯಲಿದ್ದು, ಈಗಾಗಲೇ ಷೇರು ಮರುಖರೀದಿಗೆ(buyback) ಬೇಡಿಕೆ ಇಡಲಾಗುತ್ತಿದೆ. ಹೀಗಾಗಿ ಷೇರು ನಷ್ಟದೊಂದಿಗೆ ಕಂಪನಿಗೆ ಆರ್ಥಿಕ ಹಿನ್ನಡೆಯಾಗಲಿದೆ ಎನ್ನಲಾಗಿದೆ. (Read More: ಇನ್ಫೋಸಿಸ್)
ಶೇಷಸಾಯಿ ಸತತ ಯತ್ನ
ಕಳೆದ ಕೆಲ ದಿನಗಳಿಂದ ಸತತವಾಗಿ ಇನ್ಫೊಸಿಸ್ ನ ಅಧ್ಯಕ್ಷ ಶೇಷಸಾಯಿ ಮತ್ತು ಸಿಇಒ ವಿಶಾಲ್ ಸಿಕ್ಕಾ ಅವರು ಹೂಡಿಕೆದಾರರ ಆತಂಕ ದೂರ ಮಾಡುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಯಾವುದೇ ಗೊಂದಲಗಳು ಬೇಡ ಎಲ್ಲವೂ ಸರಿಯಾಗಿದ್ದು ಭಯಪಡಬೇಕಾದ ಅಗತ್ಯ ಇಲ್ಲ ಎಂದು ಧೈರ್ಯ ನೀಡಿದ್ದಾರೆ.
ಹೂಡಿಕೆದಾರರಿಗೆ ಮನವರಿಕೆ
ಆಡಳಿತ ನಿರ್ವಹಣೆ ಕುರಿತಾಗಿ ಇನ್ಫೊಸಿಸ್ ಸಹ ಸ್ಥಾಪಕರ ಜತೆಗಿನ ವಿವಾದದಿಂದ ವಿಚಲಿತಗೊಂಡಿಲ್ಲ ಎಂಬುದನ್ನು ನಿರ್ದೇಶಕ ಮಂಡಳಿಯು ತನ್ನ ಹೂಡಿಕೆದಾರರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ತೊಡಗಿದೆ.
ನನ್ನ ವಿರುದ್ದ ಕುತಂತ್ರ
ರಾಜೀವ್ ಬನ್ಸಲ್ ಗೆ ದೊಡ್ಡ ಮೊತ್ತದ ಪರಿಹಾರ ನೀಡಿರುವುದನ್ನು ಬಹಿರಂಗಪಡಿಸಿದವರ ವರ್ತನೆಯನ್ನು ವಿಶಾಲ್ ಸಿಕ್ಕಾ ಖಂಡಿಸಿದ್ದು, ‘ಅದು ನನ್ನ ವಿರುದ್ಧ ಮಾಡಿದ ವೈಯಕ್ತಿಕ ದಾಳಿಯಾಗಿದೆ. ಕುತಂತ್ರ ಭರಿತ ದೂಷಣೆ ಮತ್ತು ಕುಟಿಲ ಪ್ರಯತ್ನ ಆಗಿದೆ' ಎಂದು ಹೇಳಿದ್ದಾರೆ.
30 ತಿಂಗಳ ವೇತನ ಶಂಕೆ
ಈ ಹಿಂದೆ ಕಂಪನಿ ಬಿಟ್ಟು ಹೋಗಿರುವ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಲ್ ಸಂಸ್ಥೆಯ ಹಣಕಾಸಿನ ವ್ಯವಹಾರ ಸಂಬಂಧ ಯಾವುದೇ ಗುಟ್ಟು ಬಹಿರಂಗ ಮಾಡಬಾರದು ಎಂಬ ಕಾರಣಕ್ಕೆ ಗುತ್ತಿಗೆ ಒಪ್ಪಂದದನ್ವಯ 30 ತಿಂಗಳ ವೇತನ ನೀಡಲಾಗಿದೆ ಎಂದು ಶಂಕಿಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.
ಹಣಕಾಸು ಅಧಿಕಾರಿಗಳ ನಿರಾಶೆ
ಕಾರ್ಪೊರೇಟ್ ಆಡಳಿತ ನಿರ್ವಹಣೆಗೆ ಸಂಬಂಧಪಟ್ಟಂತೆ ಇನ್ಫೊಸಿಸ್ ನಿರ್ದೇಶಕ ಮಂಡಳಿ ನೀಡಿರುವ ಸಮಜಾಯಿಷಿಗೆ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿಗಳಾದ ಟಿ. ವಿ. ಮೋಹನದಾಸ್ ಪೈ ಮತ್ತು ವಿ. ಬಾಲಕೃಷ್ಣನ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ವಿಶಾಲ್ ಸಿಕ್ಕಾ ವೇತನ ಪ್ಯಾಕೇಜ್ ಗೊಂದಲ
ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್ ಸಿಕ್ಕಾ ಅವರ ವೇತನ ಮತ್ತು ಭತ್ಯೆ ನಿಗದಿಪಡಿಸುವುದಕ್ಕೆ ಹಾಗೂ ಕಾರ್ಪೊರೇಟ್ ಆಡಳಿತದ ನಿಯಮಗಳ ಪಾಲನೆಗೆ ಯಾವುದೇ ಸಂಬಂಧಗಳಿಲ್ಲ. ವಹಿವಾಟಿನ ಮಹತ್ವಾಕಾಂಕ್ಷೆಯ ಗುರಿಗೆ ಈ ವೇತನ ಸಂಬಂಧಿಸಿದ್ದು, ಜಾಗತಿಕ ಮಾನದಂಡಗಳ ಪ್ರಕಾರ ವೇತನ ಪ್ಯಾಕೇಜ್ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ನಾರಾಯಣ ಮೂರ್ತಿ ಪ್ರತಿಕ್ರಿಯೆ ಇಲ್ಲ
ನಿರ್ದೇಶಕ ಮಂಡಳಿಯ ಎಲ್ಲ ವಿವಾದಾತ್ಮಕ ಹೇಳಿಕೆ ಮತ್ತು ನಿರ್ಧಾರಗಳನ್ನು ಅಧ್ಯಕ್ಷ ಆರ್. ಶೇಷಸಾಯಿ ಅವರು ಸಮರ್ಥಿಸಿಕೊಂಡ ನಂತರ ಎನ್. ಆರ್. ನಾರಾಯಣ ಮೂರ್ತಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಆದರೆ ನಾರಾಯಣಮೂರ್ತಿಯವರಿಗೆ ಬೆಂಬಲವಾಗಿ ನಿಂತಿರುವ ಇಬ್ಬರು ಮಾಜಿ ಹಣಕಾಸು ಅಧಿಕಾರಿಗಳು ಶೇಷಸಾಯಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಪರಿಹಾರ ಉತ್ತರ ತೃಪ್ತಿದಾಯಕ ಆಗಿಲ್ಲ
ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರ ವೇತನ ಕೊಡುಗೆ ಮತ್ತು ಮಾಜಿ ಅಧಿಕಾರಿಗಳಿಗೆ ಗುತ್ತಿಗೆ ಒಪ್ಪಂದದನ್ವಯ ಹೆಚ್ಚುವರಿ ಪರಿಹಾರ ನೀಡಿರುವುದಕ್ಕೆ ಸಂಸ್ಥೆ ನೀಡಿರುವ ಉತ್ತರ ತೃಪ್ತಿದಾಯಕವಾಗಿಲ್ಲ. ನಾರಾಯಣಮೂರ್ತಿ ಅವರು ವ್ಯಕ್ತಪಡಿಸಿರುವ ಆತಂಕ ದೂರ ಮಾಡಲು ನಿರ್ದೇಶಕ ಮಂಡಳಿಯು ಮೊದಲು ಪ್ರಯತ್ನ ಮಾಡಬೇಕಿದೆ ಇಡಬೇಕಾಗಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.
ಆರ್. ಶೇಷಸಾಯಿ ಹೇಳಿಕೆ
ಇನ್ಫೋಸಿಸ್ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಬೋರ್ಡ್ ರೂಂ ಮತ್ತು ಹಿತಾಸಕ್ತಿ ಸಂಘರ್ಷ ನಡೆಯುತ್ತಿಲ್ಲ ಎಂದು ಇನ್ಫೊಸಿಸ್ ಅಧ್ಯಕ್ಷ ಆರ್. ಶೇಷಸಾಯಿ ನಿನ್ನೆ ಮುಂಬೈನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರ ವೇತನ ಮತ್ತು ಭತ್ಯೆ ನಿಗದಿಪಡಿಸುವುದಕ್ಕೆ ಹಾಗೂ ಕಾರ್ಪೊರೇಟ್ ಆಡಳಿತದ ನಿಯಮಗಳ ಪಾಲನೆಗೆ ಯಾವುದೇ ಸಂಬಂಧಗಳಿಲ್ಲ ಎಂದು ತಿಳಿಸಿದ್ದಾರೆ.
ನಾರಾಯಣಮೂರ್ತಿ ಸ್ಪಷ್ಟನೆ
ಇನ್ಫೋಸಿಸ್ ನಲ್ಲಿ ಕಾರ್ಪೊರೇಟ್ ಆಡಳಿತದ ವೈಫಲ್ಯ ಕಂಡುಬಂದಿದೆ ಎಂಬ ತಮ್ಮ ಆಕ್ಷೇಪವನ್ನು ವಾಪಸ್ ತೆಗೆದುಕೊಂಡಿರುವೆ ಎನ್ನುವ ವರದಿ ನಾರಾಯಣಮೂರ್ತಿ ಈ ಹಿಂದೆ ಅಲ್ಲಗಳೆದಿದ್ದಾರೆ. ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಉತ್ತಮ ಉದ್ದೇಶ ಹೊಂದಿರುವ ಪ್ರಾಮಾಣಿಕರಾದವರಿದ್ದಾರೆ. ಸಂಸ್ಥೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಆಡಳಿತದಲ್ಲಿ ಸುಧಾರಣೆ ತರಲಿದೆ. ಎಲ್ಲ ಪಾಲುದಾರರ ಅಹವಾಲು ಕೇಳಬೇಕು ಎಂದರು.
ಸೆಬಿ ವಿಶೇಷ ನಿಗಾ
ಇನ್ಫೋಸಿಸ್ ನ ಪ್ರಸಕ್ತ ಬೆಳವಣಿಗೆಗಳ ಮೇಲೆ ನಿಗಾ ಇರಿಸುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಿಳಿಸಿದೆ. ಇನ್ಫೋಸಿಸ್ ಬೆಳವಣಿಗೆಗಳು ಕಾರ್ಪೊರೇಟ್ ಆಡಳಿತ ವಲಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ್ದು, ಸಂಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ನಡುವಿನ ಆಂತರಿಕ ಕಲಹ ಹಾಗೂ ಉಂಟಾಗಿರುವ ಭಿನ್ನಾಭಿಪ್ರಾಯಗಳ ಬೆಳವಣಿಗೆ ಮೇಲೆ ಸೆಬಿ ನಿಗಾ ಇರಿಸಿದೆ.
ಷೇರುಪೇಟೆಗೆ ಸೆಬಿ ಸೂಚನೆ
ಇನ್ಫೊಸಿಸ್ನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಅಲ್ಲದೇ ಬೆಳವಣಿಗೆಗಳ ಕುರಿತು ಮಾಧ್ಯಮ ವರದಿಗಳ ಬಗ್ಗೆ ವಿವರಣೆ ಪಡೆಯಲು ಷೇರುಪೇಟೆಗಳಿಗೆ ಸೂಚನೆ ನೀಡಲಾಗಿದೆ.
ನಕರಾತ್ಮಕ ಪರಿಣಾಮ
ಆಡಳಿತ ಮಂಡಳಿ ಒಳಗಿನ ಆಂತರಿಕ ಕಲಹಗಳು, ಭಿನ್ನಾಭಿಪ್ರಾಯಗಳು ಬಹಿರಂಗಗೊಳ್ಳುವುದರಿಂದ ವಿದೇಶಿ ಬಂಡವಾಳದ ಒಳಹರಿವಿನ ಮೇಲೆ ವ್ಯತಿರಿಕ್ತ ಹಾಗೂ ನಕರಾತ್ಮಕ ಪರಿಣಾಮ ಬೀರುತ್ತವೆ ಎಂದು ಸೆಬಿ ತಿಳಿಸಿದೆ.