ಆನ್ಲೈನ್ ಮೂಲಕ ಪಿಎಫ್/ಪಿಂಚಣಿ ಪ್ರಕರಣಗಳ ಇತ್ಯರ್ಥ, ಆಧಾರ್ ಕಡ್ಡಾಯ
ನೌಕರರ ಭವಿಷ್ಯ ನಿಧಿ ಮತ್ತು ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಆನ್ಲೈನ್ ಮೂಲಕ ಇತ್ಯರ್ಥಗೊಳಿಸುವ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ.
ನೌಕರರ ಭವಿಷ್ಯ ನಿಧಿ ಮತ್ತು ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಆನ್ಲೈನ್ ಮೂಲಕ ಇತ್ಯರ್ಥಗೊಳಿಸುವ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ.
ಮೇ ತಿಂಗಳ ಒಳಗಾಗಿ ಆನ್ಲೈನ್ ಮೂಲಕ ಪಿಎಫ್ ಇತ್ಯರ್ಥ, ಮೊತ್ತ ವಾಪಸು, ಪಿಂಚಣಿ ನಿಗದಿ ಸೌಲಭ್ಯ ಜಾರಿಯಾಗಲಿದೆ ಎಂದು ನೌಕರರ ಭವಿಷ್ಯನಿಧಿ ಸಂಘಟನೆ(ಇಪಿಎಫ್ಒ) ತಿಳಿಸಿದೆ.
1 ಕೋಟಿಗೂ ಹೆಚ್ಚು ಅರ್ಜಿಗಳು
ಪ್ರತಿ ವರ್ಷ ಇಪಿಎಫ್ಒ ಕಚೇರಿಗೆ ಭವಿಷ್ಯನಿಧಿ ಇತ್ಯರ್ಥ ಮತ್ತು ಪಿಂಚಣಿ ನಿಗದಿ ಸಂಬಂಧಿಸಿದಂತೆ ಕೋಟಿಗೂ ಹೆಚ್ಚು ಅರ್ಜಿಗಳು ಬರುತ್ತಿವೆ. ಪ್ರಸ್ತುತ ಪ್ರಕರಣದ ಇತ್ಯರ್ಥಕ್ಕೆ 20 ದಿನಗಳು ಬೇಕಾಗುತ್ತವೆ.
ಡಿಜಿಟಲಿಕರಣಕ್ಕೆ ಒತ್ತು
ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ, ಡಿಜಿಟಲೀಕರಣಕ್ಕೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಎಲ್ಲ ವ್ಯವಹಾರಗಳು ಆನ್ಲೈನ್ ಮೂಲಕ ನಡೆಯಲಿದೆ. ಹೀಗಾಗಿ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಗೊಳಿಸಲು ಸಾಧ್ಯ ಆಗಲಿದೆ.
4-5 ಗಂಟೆಯೊಳಗೆ ಪರಿಹಾರ
ನೌಕರರು/ಚಂದಾದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಾಲ್ಕೈದು ಗಂಟೆಯೊಳಗೆ ಅರ್ಜಿಗಳ ವಿಲೇವಾರಿ ಮಾಡಲಾಗುವುದು. ಹಾಗೂ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
ಎಲ್ಲ ಕಚೇರಿಗಳು ಸೇವಾ ವ್ಯಾಪ್ತಿಗೆ
ಪ್ರಸ್ತುತ 50 ಇಪಿಎಫ್ಒ ಕಚೇರಿಗಳನ್ನು ಕೇಂದ್ರೀಯ ಸರ್ವರ್ ನೊಂದಿಗೆ ಪ್ರಾಯೋಗಿಕವಾಗಿ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ 123 ಕಚೇರಿಗಳನ್ನೂ ಈ ಸೇವಾ ವ್ಯಾಪ್ತಿಗೆ ತರಲಾಗುವುದು ಎಂದು ವರದಿ ಆಗಿದೆ.
ಮಾರ್ಚ್ 31ರವರೆಗೆ ಗಡುವು
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಪ್ಒ)ಇಪಿಎಫ್ ಸೇವೆ ಪಡೆಯಲು ಆಧಾರ್ ನಂಬರ್ ಕಡ್ಡಾಯ ಮಾಡಿದ್ದು, ಉದ್ಯೋಗಿಗಳು ತಮ್ಮ ಆಧಾರ್ ನಂಬರ್ ಒದಗಿಸಲು ಮಾರ್ಚ್ 31ರ ವರೆಗೆ ಗಡುವು ನೀಡಿದೆ. ಇಪಿಎಪ್ ಚಂದಾದಾರರು, ನಿವೃತ್ತಿದಾರರು ಮತ್ತು ಪಿಂಚಣಿದಾರರು ಮಾರ್ಚ್ 31ರ ಒಳಗಾಗಿ ಆಧಾರ್ ನಂಬರ್ ಒದಗಿಸಬೇಕು ಎಂದು ಕಚೇರಿ ಮೂಲಗಳು ತಿಳಿಸಿವೆ. ಇನ್ನುಮುಂದೆ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗುವುದು. ಎಲ್ಲ ಚಂದಾದಾರರು, ಪಿಂಚಣಿದಾರರು ಕಚೇರಿಗೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ ಎಂದು ಇಪಿಎಫ್ಒ ಅಧಿಸೂಚನೆ ಹೊರಡಿಸಿದೆ.