ಬಡ್ಡಿ ದರ ಇಳಿಕೆಗೆ ಮುನ್ನ ಹೂಡಿಕೆ ಮಾಡೋನೆ ಜಾಣ
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 50 ಮೂಲಾಂಶ ಕಡಿಮೆ ಮಾಡಿದೆ. ಇದರ ಪರಿಣಾಮಗಳು ಬ್ಯಾಂಕಿಂಗ್ ಮತ್ತು ಉಳಿದ ವಿಭಾಗಗಳ ಮೇಲೂ ಆಗುತ್ತಿವೆ. ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ರೆಪೋ ದರವನ್ನು ಕಡಿತ ಮಾಡಲಾಗಿದೆ.
ಇದಾದ ನಂತರ ವಿವಿಧ ಬ್ಯಾಂಕ್ ಗಳು ಸಹ ಬಡ್ಡಿ ದರ ಇಳಿಕೆಗೆ ಮುಂದಾಗಿವೆ. ಸಾಲ ಪಡೆಯುವುದಕ್ಕೆ ಬಡ್ಡಿ ದರ ಹೇಗೆ ಕಡಿಮೆಯಾಗುತ್ತಿದೆಯೋ ಅಂತೆಯೇ ಡಿಪಾಸಿಟ್ ಇಡುವುದಕ್ಕೂ ಬಡ್ಡಿ ದರ ಕಡಿಮೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ಭಾರತೀಯ ಅಂಚೆ ಮೇಲೂ ಈ ಬಡ್ಡಿ ದರ ಇಳಿಕೆ ಪರಿಣಾಮ ಉಂಟು ಮಾಡಲಿದೆ. ಸಣ್ಣ ಪ್ರಮಾಣದ ಹಣ ಹೂಡಿಕೆ ಮೇಲೂ ಬಡ್ಡಿ ದರ ಇಳಿಕೆಯಾಗಲಿದೆ.
ಭಾರತೀಯ ಅಂಚೆ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಕೊಡಮಾಡಿದ್ದು ಬಡ್ಡಿ ದರದಲ್ಲಿ ಸದ್ಯ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಚಿಕ್ಕ ಪ್ರಮಾಣದ ಹೂಡಿಕೆಗೆ ಅಂಚೆ ಉತ್ತಮ ತಾಣ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹಾಗಾದರೆ ಬಡ್ಡಿ ದರ ಇಳಿಕೆ ಮಾಡುವ ಮುನ್ನ ಭಾರತೀಯ ಅಂಚೆಯ ಯಾವ ಯೋಜನೆಗಳ ಮೇಲೆ ಹೂಡಿಕೆ ಮಾಡಬಹುದು ಎಂಬುದನ್ನು ಒಮ್ಮೆ ನೋಡಿಕೊಂಡು ಬರೋಣ...['ಸುಕನ್ಯಾ ಸಮೃದ್ಧಿ' ಯೋಜನೆ ಎಂದರೇನು?]
* ಅಂಚೆ ಕಚೇರಿಯ ತಿಂಗಳ ಉಳಿತಾಯ ಯೋಜನೆ: ಬಡ್ಡಿ ದರ-ಶೇ. 8.40-ತೆರಿಗೆ ವಿನಾಯಿತಿ ಇಲ್ಲ
* ಕಿಸಾನ್ ವಿಕಾಸ ಪತ್ರ: ಶೇ. 8.70-ತೆರಿಗೆ ವಿನಾಯಿತಿ ಇಲ್ಲ
* 5 ವರ್ಷದ ಎನ್ ಎಸ್ ಸಿ(8ನೇ ಯೋಜನೆ): ಶೇ. 8.50-ತೆರಿಗೆ ವಿನಾಯಿತಿ ಇದೆ
* 10 ವರ್ಷದ ಎನ್ ಎಸ್ ಸಿ(9ನೇ ಯೋಜನೆ): ಶೇ. 8.80-ತೆರಿಗೆ ವಿನಾಯಿತಿ ಇದೆ
* ಅಂಚೆ ಕಚೇರಿಯ ಸಮಯಕ್ಕೆ ಬದ್ಧ ಡಿಪಾಸಿಟ್ ಗಳು: ಶೇ. 8.40ದಿಂದ ಶೇ. 8.50-ತೆರಿಗೆ ವಿನಾಯಿತಿ ಇದೆ
* ಐದು ವರ್ಷದ ಆರ್ ಡಿ: ಶೇ. 8.40-ತೆರಿಗೆ ವಿನಾಯಿತಿ ಇಲ್ಲ
* ಉಳಿತಾಯ ಖಾತೆ ಡಿಪಾಸಿಟ್: ಶೇ.4-ತೆರಿಗೆ ವಿನಾಯಿತಿ ಇಲ್ಲ
* ಸುಕನ್ಯಾ ಸಮೃದ್ಧಿ ಯೋಜನಾ: ಶೇ. 9.20 -ತೆರಿಗೆ ವಿನಾಯಿತಿ ಇದೆ
* ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 9.30-ತೆರಿಗೆ ವಿನಾಯಿತಿ ಇದೆ [ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?]
ಯುವ ಹೂಡಿಕೆದಾರರು ಅಂಚೆ ಇಲಾಖೆಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ನಿಂದ ಬಚಾವಾಗಬಹುದು. ಕಿಸಾನ್ ವಿಕಾಸ ಪತ್ರ ಒಂದು ಅತ್ಯುತ್ತಮ ಆಯ್ಕೆ. ಎಂಟು ವರ್ಷ ಅವಧಿಯಲ್ಲಿ ಅಪರಿಮಿತ ರಿಟರ್ನ್ಸ್ ಪಡೆಯಲು ಸಾಧ್ಯವಿದೆ. ಇದರೊಂದಿಗೆ ಪಿಪಿಎಫ್, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಯೋಜನೆ ಸಹ ಉತ್ತಮ ಆಯ್ಕೆಗಳಾಗಿವೆ.
ಕೊನೆ ಮಾತು:
ರೆಪೋ ದರ ಇಳಿಕೆ ಪರಿಣಾಮ ಅಂಚೆ ಕಚೇರಿಯ ಮೇಲೆ ಆಗುವ ಮುನ್ನ, ಅಂದರೆ ನೀಡುತ್ತಿರುವ ಬಡ್ಡಿ ದರ ಇಳಿಕೆ ಮಾಡುವ ಮುನ್ನ ಮೇಲಿನ ಆಯ್ಕೆಗಳಲ್ಲಿ ಒಂದರಲ್ಲಿ ಹಣ ಹೂಡಿಕೆ ಮಾಡಬಹುದು.(ಗುಡ್ ರಿಟರ್ನ್ಸ್.ಇನ್)