ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿ ಸ್ವಂತ ಮನೆ ಪಡೆಯಿರಿ
ಸರ್ಕಾರಗಳು ಕಾಲ ಕಾಲಕ್ಕೆ ಅನೇಕ ಜನೋಪಯೋಗಿ ಯೋಜನೆಗಳನ್ನು ಘೊಷಿಸುತ್ತವೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತವೆ.
ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯ. ಆ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಎಂಬ ಉತ್ತಮವಾದ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದರೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೀಗಾಗಿ ಈ ಯೋಜನೆ ಅನೇಕ ಕೆಲ ಪ್ರಮುಖ ಅಂಶಗಳನ್ನು ಹೊಂದಿದೆ. ವಾಸ್ತವದಲ್ಲಿ ನೀವು ಸ್ವಂತ ಮನೆ ಹೊಂದಿಲ್ಲದಿದ್ದರೆ ಈ ಯೋಜನೆ ಅಡಿಯಲ್ಲಿ ಮನೆ ಪಡೆಯಲು ಖಂಡಿತ ಪ್ರಯತ್ನಿಸಿ. ಅದಕ್ಕೆ ಸಂಬಂಧಿಸಿದ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಾನದಂಡ
ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರು ಪ್ರಧಾನ ಮಂತ್ರಿ ಅವಾಸ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಈ ವರ್ಗದ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಬರುವುದರಿಂದ ತುಂಬಾ ಕುಟುಂಬಗಳಿಗೆ ಸೂರು ಸೌಲಭ್ಯ ಸಿಗಲಿದೆ.
ಪಕ್ಕಾ ಮನೆ ಮಾಲೀಕತ್ವ
ಪ್ರಧಾನ ಮಂತ್ರಿ ಅವಾಸ ಯೋಜನೆಯ ಸೌಲಭ್ಯ ಪಡೆಯಲು ನೀವು ಉತ್ತಮವಾದ(pucca) ಸ್ವಂತ ಮನೆಯನ್ನು ಹೊಂದಿರಬಾರದು ಎಂಬುದು ಎರಡನೇ ಪ್ರಮುಖ ಮಾನದಂಡವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಕುಟುಂಬಗಳನ್ನು ಇಲ್ಲಿಯವರೆಗೂ ಸ್ವಂತ ಮನೆಗಳನ್ನು ಹೊಂದಿಲ್ಲ. ಅನೇಕರು ಟೆಂಟ್ ಮತ್ತು ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.
ನಿಮ್ಮ ಸ್ವಂತ ಮನೆ ನಿರ್ಮಿಸಲು ನೆರವು
ನೀವು ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲಿ (ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ) ಬರುವವರಾದರೆ ಸರ್ಕಾರ ನಿಮಗೆ ರೂ.1.5 ಲಕ್ಷಗಳ ನೆರವಿನಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತಾರೆ.
ಬಡ್ಡಿದರ ಪ್ರಯೋಜನ
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಗೃಹಸಾಲ ಸಬ್ಸಿಡಿ ಯೋಜನೆ ಅಡಿಯಲ್ಲಿ ಶೇ. 6.5ರಷ್ಟು ಹೆಚ್ಚಿನ ಬಡ್ಡಿದರಕ್ಕೆ ಸಾಲ ಸಿಗುತ್ತದೆ. ಜತೆಗೆ ಮನೆ ಸಾಲ ಬಡ್ಡಿದರ ಶೇ. 9ರಷ್ಟು ಇರುತ್ತದೆ.
ಹೀಗಾಗಿ ತೀರಾ ಕಡುಬಡವರು ಈ ಬಡ್ಡಿದರದಲ್ಲಿ ಗೃಹ ಸಾಲ ಪಡೆದು ಮನೆ ಕಟ್ಟುವುದು ಕಷ್ಟ. ಅಂತವರಿಗೆ ಶೇ. 2.5ರಷ್ಟು ಬಡ್ಡಿದರದಲ್ಲಿ ಗೃಹಸಾಲ ಲಭ್ಯವಿದ್ದು, ಕನಸಿನ ಮನೆ ಕಟ್ಟಬಹುದು.
ಕೊಳಗೇರಿ ಪುನರ್ವಸತಿ
ಕೊಳಗೇರಿ ವಾಸಿಗಳಿಗೂ ಸಹ ಕೊಳಗೇರಿ ಪುನರ್ವಸತಿ ಸೌಲಭ್ಯ ಕಲ್ಪಿಸಿದ್ದು, ಪುನರ್ವಸತಿಗಾಗಿ ಒಂದು ಲಕ್ಷ ಮೊತ್ತ ನೀಡಲಾಗುತ್ತದೆ. ಕೊಳಗೇರಿ ನಿವಾಸಿಗಳೆಲ್ಲರೂ ಮೂಲಭೂತ ಸೌಕರ್ಯಗಳನ್ನು ಹಾಗೂ ಯೋಗ್ಯ ಪ್ರದೇಶವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಕಡಿಮೆ ಆದಾಯ ಗುಂಪಿನವರಿಗೆ ಬಡ್ಡಿದರ ಪ್ರಯೋಜನಗಳು
ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲಗಳ ಮೇಲೆ ಕಡಿಮೆ ಬಡ್ಡಿದರ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದನ್ನು 60 ಚದರ ಮೀಟರ್ ಅಂತರದ ಮನೆ ಕಟ್ಟುವ ಜಾಗಕ್ಕಾಗಿ ನೀಡಲಾಗುತ್ತದೆ.
ಅನುಷ್ಠಾನಕ್ಕೆ
ಸರ್ಕಾರದ ಯೋಜನೆಗಳೆಂದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಫಲರಾಗುತ್ತಾರೆಯೇ ಅಥವಾ ಇಲ್ಲವೆ ಎಂಬುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಏಕೆಂದರೆ ಇಂತಹ ಯೋಜನೆಗಳು ಅಧಿಕಾರಶಾಹಿ ಅಡಚಣೆಯಲ್ಲಿ, ಸಮಸ್ಯೆಗಳಲ್ಲಿ ಸಿಲುಕಿ ಸಾಯುತ್ತವೆ.
ಇಂತಹ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಬಡವರಿಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ತರುತ್ತಾರೆ ಎಂದು ಹೇಳುವುದು ಕಷ್ಟ.
ಯೋಜನೆಯ ಗುರಿ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ. 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು ಕಟ್ಟಿಸುವ ಯೋಜನೆ ಇದೆ.