ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡುವುದು ಹೇಗೆ? ಇಲ್ಲಿವೆ 10 ಸಲಹೆಗಳು
ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ನೀಡುವುದು ಎಲ್ಲ ಪೋಷಕರ ಕನಸು ಮತ್ತು ಮುಖ್ಯ ಗುರಿಯಾಗಿರುತ್ತದೆ. ಆದರೆ ಅದನ್ನು ಸಾಕಾರಗೊಳಿಸಲು ನೀವು ಸಾಕಷ್ಟು ಉಳಿತಾಯ ಮಾಡಿದ್ದೀರಾ?
ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ನೀಡುವುದು ಎಲ್ಲ ಪೋಷಕರ ಕನಸು ಮತ್ತು ಮುಖ್ಯ ಗುರಿಯಾಗಿರುತ್ತದೆ. ಆದರೆ ಅದನ್ನು ಸಾಕಾರಗೊಳಿಸಲು ನೀವು ಸಾಕಷ್ಟು ಉಳಿತಾಯ ಮಾಡಿದ್ದೀರಾ? ಅಥವಾ ಆ ಕನಸನ್ನು ನನಸುಗೊಳಿಸಲು ನಿಮ್ಮ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಿದ್ದೀರಾ?
ಮಕ್ಕಳಿಗಾಗಿ ಇರುವ ವಿಮಾ ಕಂಪನಿಗಳ ಹಲವು ಯೋಜನೆಗಳಿಂದ ಹಿಡಿದು, ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ನೀಡುವ ಸುಕನ್ಯಾ ಸಮೃದ್ಧಿ ಯೋಜನೆಯವರೆಗೆ ಮಾರುಕಟ್ಟೆಯಲ್ಲಿ ಹೂಡಿಕೆಯ ಅವಕಾಶಗಳು ಹೇರಳವಾಗಿವೆ. ಆದರೆ ಅದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಹಾಗು ಎಷ್ಟು ಬಂಡವಾಳ ಹೂಡುವುದು ಎಂಬುದೇ ಕಷ್ಟದ ಪ್ರಶ್ನೆಗಳು.
ಹೂಡಿಕೆ ತಜ್ಞರ ಪ್ರಕಾರ, ಹೂಡಿಕೆಯಲ್ಲಿ ತೊಡಗಿಸಿಕೊಳ್ಳ ಬಯಸುವ ಪೋಷಕರ ಉಳಿತಾಯದ ಯೋಜನೆಗಳು ಹೇಗಿರಬೇಕು ಹಾಗೂ ಎಲ್ಲಿ, ಎಷ್ಟು ಹೂಡಿಕೆ ಮಾಡಬೇಕು ಎಂಬ ಕೆಲವು ಮುಖ್ಯ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
1. ಸ್ಪಷ್ಟ ಗುರಿ ಇರಲಿ
ಮೊದಲಿಗೆ ನಿಮ್ಮ ಗುರಿಯನ್ನು ಸ್ಪಷ್ಟಗೊಳಿಸಿಕೊಳ್ಳಿ. ಈಗಿನ ಕಾಲಕ್ಕೆ ಇಂಜಿನಿಯರಿಂಗ್ ಓದಲು ಸುಮಾರು 10 ಲಕ್ಷ ಬೇಕಾಗಬಹುದು. ಇನ್ನು ಎಂ.ಬಿ.ಎ ಯಂತಹ ಕೋರ್ಸ್ ಗಳಿಗೆ ಅದಕ್ಕಿಂತ ಹೆಚ್ಚು ಖರ್ಚಾಗಬಹುದು. ಮೊದಲಿಗೆ ಇಷ್ಟು ಮೊತ್ತದ ಹಣ ನಿಮಗೆ ಯಾವಾಗ ಬೇಕಾಗಬಹುದು ಎಂಬ ಸ್ಪಷ್ಟ ಆಲೋಚನೆ ಇರಬೇಕು.
2. ಕಾಲಾವಧಿಯ ಮುಂದಾಲೋಚನೆ ಅಗತ್ಯ
ನಿಮಗೆ ಇಷ್ಟು ಮೊತ್ತದ ಹಣ ಮುಂದಿನ 10-15 ವರ್ಷಗಳ ನಂತರ ಬೇಕಾಗಬಹುದೆಂದರೆ, ಮುಂಬರುವ ಕಾಲಕ್ಕೆ ಉಂಟಾಗಬಹುದಾದ ಹಣದುಬ್ಬರದ ಮೊತ್ತಕ್ಕೆ ಹೋಲಿಸಿದರೆ ನೀವು ಎಷ್ಟು ಕೂಡಿಡಬೇಕಾಗುತ್ತದೆ ಎಂಬ ಸ್ಪಷ್ಟ ಮುಂದಾಲೋಚನೆ ಇರಬೇಕಾಗುತ್ತದೆ. ಉದಾ: ಇಂದಿನ 15 ಲಕ್ಷ ರೂಪಾಯಿಗಳು, ಮುಂದಿನ 15 ವರ್ಷಗಳ ನಂತರ (ಶೇ. 8 ಹಣದುಬ್ಬರ ದರದಂತೆ) 46 ಲಕ್ಷ ರೂಪಾಯಿಗಳಾಗುತ್ತದೆ.
3. ಇಕ್ವಿಟಿ ಮ್ಯುಚುವಲ್ ಫಂಡ್ಸ್
ಷೇರುಗಳಲ್ಲಿ ಬಂಡವಾಳ ಹೂಡುವುದು ಅತ್ಯಂತ ಕಷ್ಟದ ಆಯ್ಕೆಗಳಲ್ಲಿ ಒಂದು. ಆದರೆ ಇದು ಹಣದುಬ್ಬರದ ಹೊಡೆತದ ನಡುವೆಯೂ ಉತ್ತಮ ಲಾಭಗಳಿಸುವ ಸಾಮರ್ಥ್ಯ ಹೊಂದಿರುವ ಒಂದು ಮಾರ್ಗವೂ ಹೌದು. ಇಕ್ವಿಟಿಯಿಂದ ಪಡೆದ ಲಾಭಕ್ಕೆ ಆದಾಯ ತೆರಿಗೆ ಇಲ್ಲದ ಕಾರಣ ಈ ಆದಾಯವು ನಿಶ್ಚಿತ ಠೇವಣಿಯಿಂದ ಗಳಿಸುವ ಲಾಭಕ್ಕಿಂತ ಹೆಚ್ಚು ಲಾಭದಾಯಕವಾಗಿದೆ. ವ್ಯವಸ್ಥಿತ ಯೋಜನೆಯೊಂದಿಗೆ ಇಕ್ವಿಟಿ ಮ್ಯುಚುವಲ್ ಫಂಡ್ಸ್ ಗಳಲ್ಲಿ ಬಂಡವಾಳ ಹೂಡುವುದು ಹೆಚ್ಚು ಲಾಭದಾಯಕ.
4. ಸಮತೋಲಿತ ನಿಧಿ
ಇವು ಮ್ಯೂಚುವಲ್ ಫಂಡ್ ಗಳಾಗಿದ್ದು, ಶೇ. 60ರಷ್ಟು ಆಸ್ತಿ ಮೇಲೆ ಮತ್ತು ಇನ್ನುಳಿದವುಗಳನ್ನು ಸಾಲಪತ್ರಗಳ ಮೇಲೆ ಇಕ್ವಿಟಿ ಮುಖಾಂತರ ಹೂಡಿಕೆ ಮಾಡಬಹುದಾಗಿದೆ. ಇವುಗಳನ್ನು ತೆರಿಗೆಯ ಉದ್ದೇಶಕ್ಕಾಗಿ ರೂಪಿಸಲಾದ ಇಕ್ವಿಟಿ ಫಂಡ್ಸ್ ಗಳೆಂದು ಪರಿಗಣಿಸಲಾಗಿದೆ. ಸುರಕ್ಷಿತ ಹೂಡಿಕೆ ಬಯಸುವ ಹೂಡಿಕೆದಾರರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.
5. ಸುಕನ್ಯ ಸಮೃದ್ಧಿ ಯೋಜನೆ
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಯಡಿ ಅಭಿವೃದ್ದಿಪಡಿಸಲಾಗಿದೆ. ಇದು ಒಟ್ಟು 21 ವರ್ಷ ಕಾಲಾವಧಿಯ ಯೋಜನೆಯಾಗಿದ್ದು, 14 ವರ್ಷಗಳ ಕಾಲ ಹಣ ಪಾವತಿಸಬೇಕು. ಇದರ ಸಂಪೂರ್ಣ ಲಾಭವನ್ನು 7 ವರ್ಷಗಳು ಕಳೆದ ಬಳಿಕ ಬಡೆಯಬಹುದಾಗಿದೆ. ಇದರ ಮೊತ್ತ ವಾರ್ಷಿಕ 1 ಸಾವಿರದಿಂದ ಶುರುವಾಗಿ, ರೂ. 1.50 ಲಕ್ಷದವರೆಗೆ ಹಣ ಹೂಡಬಹುದಾಗಿದೆ.
ನಿಮ್ಮ ಪ್ರದೇಶದಲ್ಲಿರುವ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಈ ಖಾತೆ ತೆರೆಯಬಹುದು. ಈ ಯೋಜನೆ ಆದಾಯ ತೆರಿಗೆಯಿಂದ ಮುಕ್ತವಾಗಿದ್ದು, ಮೆಚ್ಯುರಿಟಿ ಬಳಿಕ ಬಂದ ಹಣಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.6ರಷ್ಟು ಇದೆ.
6. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್)
ಇದು ಸುಕನ್ಯ ಸಮೃದ್ದಿ ಯೋಜನೆಯ ರೀತಿಯೇ ಇದ್ದು, ಹೆಣ್ಣು ಮಕ್ಕಳಿಲ್ಲದ ಪೋಷಕರು ಇದರ ಪ್ರಯೋಜನವನ್ನು ಪಡೆಯಬಹುದು. ಸುಕನ್ಯ ಸಮೃದ್ದಿ ಯೋಜನೆಗೆ ಇರುವ ಆದಾಯ ತೆರಿಗೆ ವಿನಾಯಿತಿಯಂತೆ ಇಲ್ಲಿಯೂ ಸಹ ಅದೇ ವಿನಾಯಿತಿ ಹಾಗೂ ತೆರಿಗೆ ಪ್ರಯೋಜನಗಳು ಅನ್ವಯಿಸುತ್ತವೆ.
7. ಡೆಬ್ಟ್ ಮ್ಯೂಚವಲ್ ಫಂಡ್
ಇದು ನಿಶ್ಚಿತ ಠೇವಣಿಗೆ ಪರ್ಯಾಯವಾಗಿ ರೂಪಿಸಿರುವ ಒಂದು ಒಳ್ಳೆಯ ಯೋಜನೆಯಾಗಿದ್ದು, ಆದಾಯ ತೆರಿಗೆ ವಿನಾಯಿತಿ ಕೂಡ ಹೊಂದಿರುತ್ತದೆ. ಮೂರು ವರ್ಷಗಳ ನಂತರದ ಡೆಬ್ಟ್ ಮ್ಯೂಚವಲ್ ಫಂಡ್ಸ್ ಗಳಿಕೆ ಮೇಲೆ 20% ತೆರಿಗೆ ಪಾವತಿಸಬೇಕಾಗುತ್ತದೆ. ಈ ಗಳಿಕೆಗೆ ಹಣದುಬ್ಬರದ ಸಮಯದಲ್ಲಿ ಮರುಮೌಲ್ಯಮಾಪನ ಮಾಡಿಕೊಳ್ಳುಂತಹ ಆಯ್ಕೆ ಸಹ ಕೊಡಲಾಗಿದೆ.
8. ಆಪ್ತ ಸಲಹೆ
ಹಣಕಾಸು ಯೋಜಕರುಗಳು ಹೇಳುವಂತೆ, ಬೇರೆ ಬೇರೆ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ನಿಮ್ಮಲ್ಲಿರುವ ಗಂಡಾಂತರ ಎದುರಿಸುವ ಸಾಮರ್ಥ್ಯ ಮತ್ತು ಸಮಯ ಮಿತಿಯ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಖಾತೆಯನ್ನು ಆಗಾಗ್ಗೆ ಪರಿಶೀಲನೆ ಮಾಡುವ ಮೂಲಕ ನಿಮ್ಮ ಆಸ್ತಿ ಹಂಚಿಕೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
9. ದೃಢ ನಿರ್ಧಾರ ಮುಖ್ಯ
ನೀವು ತಲುಪಬೇಕಾದ ಗುರಿಗೆ ನಾಲ್ಕೈದು ವರ್ಷಗಳಿರುವಾಗ ಹಣವನ್ನು ಷೇರುಗಳಾಗಿ ಪರಿವರ್ತಿಸಿ. ನಿಮ್ಮ ಇತರ ಪೂರೈಕೆಗಳನ್ನು ನೀಗಿಸಿಕೊಳ್ಳಲು ಹಣವನ್ನು ಮಧ್ಯದಲ್ಲಿಯೇ ಹಿಂದಕ್ಕೆ ಪಡೆಯಬೇಡಿ. ಇಂತಹ ಗಟ್ಟಿ ನಿರ್ಧಾರಗಳು ನಿಮ್ಮ ಗುರಿಯನ್ನು ನೀವು ತಲುಪಲು ತುಂಬಾ ಸಹಕಾರಿಯಾಗುತ್ತವೆ.
10. ವೆಲ್ತ್ ಅಡ್ವೈಸರಿ ಅನಿಲ್ ರೆಗೋ ಏನ್ ಹೇಳ್ತಾರೆ?
ವೆಲ್ತ್ ಅಡ್ವೈಸರಿ ಸಂಸ್ಥಾಪಕ ಹಾಗೂ ಮುಖ್ಯ ನಿರ್ವಹಣಾ ಅಧಿಕಾರಿ ಅನಿಲ್ ರೆಗೋ ಹೇಳುವಂತೆ - "ಹಣವನ್ನು ಎಲ್ಲಿ ಹೂಡಬೇಕು ಎಂದು ತೀರ್ಮಾನಿಸುವುದಕ್ಕಿಂತ ಮುಂಚೆ ಎದುರಿಸಬೇಕಾದ ಸವಾಲುಗಳು ಹಾಗು ಸಮಯದ ಮಿತಿ ಗಮನದಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಮಕ್ಕಳ ವಿಧ್ಯಾಭ್ಯಾಸ ಕೇವಲ 4-5 ವರ್ಷಗಳದ್ದಾದರೆ ಹೂಡಿಕೆ ಮಾಡುವವರು ಅಷ್ಟೇನೂ ಅಪಾಯವಿಲ್ಲದ ಮತ್ತು ಸುಲಭವಾಗಿ ಬಗೆಹರಿಸಬಲ್ಲಂತಹ ಸುಲಭ ಮಾರ್ಗಗಳನ್ನು ಹುಡುಕಿಕೊಳ್ಳಬೇಕು.