ಪ್ರತಿ ತಿಂಗಳು ಸಂಬಳ ಪಡೆದ ತಕ್ಷಣ ಹೀಗೆ ಮಾಡಿ...
ನಿಮ್ಮ ಮೊದಲ ಸಂಬಳ ಇಲ್ಲವೇ ಪ್ರತಿ ತಿಂಗಳು ಸಂಬಳ ಪಡೆದಾಗ ನಿಮ್ಮ ಹಣಕಾಸು ಭದ್ರತೆ ಮತ್ತು ಭವಿಷ್ಯತ್ತಿನ ಬಗ್ಗೆ ವಿಚಾರ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಮನೆ, ಕಾರು, ಬೈಕ್ ಮತ್ತು ಇನ್ನೂ ಹೆಚ್ಚು ಮಾಲೀಕತ್ವದ ಕನಸುಗಳಿಗೆ ಅಡಿಪಾಯ ಹಾಕಿ.
ಪ್ರಥಮ ಬಾರಿ ಪಡೆಯುವ ಸಂಬಳ ನಿಮಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಮಿಗಿಲಾಗಿ ನಿಮ್ಮ ಸ್ವಾಭಿಮಾನ ಮತ್ತು ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಸಾಮಾನ್ಯವಾಗಿ ಮೊದಲ ಬಾರಿ ಇಲ್ಲವೇ ಪ್ರತಿ ತಿಂಗಳು ಸಂಬಳ ಪಡೆದಾಗ ಮಾಡುವ ಕೆಲಸವೆಂದರೆ ನಿಮಗೆ ಅಥವಾ ಪೋಷಕರಿಗೆ ಗಿಫ್ಟ್ ಕೊಡುವುದು. ಇಲ್ಲವೇ ಸ್ನೇಹಿತರಿಗೆ ಪಾರ್ಟಿ ಕೊಡುತ್ತೇವೆ.
ನಿಮ್ಮ ಮೊದಲ ಸಂಬಳ ಇಲ್ಲವೇ ಪ್ರತಿ ತಿಂಗಳು ಸಂಬಳ ಪಡೆದಾಗ ನಿಮ್ಮ ಹಣಕಾಸು ಭದ್ರತೆ ಮತ್ತು ಭವಿಷ್ಯತ್ತಿನ ಬಗ್ಗೆ ವಿಚಾರ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಮನೆ, ಕಾರು, ಬೈಕ್ ಮತ್ತು ಇನ್ನೂ ಹೆಚ್ಚು ಮಾಲೀಕತ್ವದ ಕನಸುಗಳಿಗೆ ಅಡಿಪಾಯ ಹಾಕಲು ಇದು ಸೂಕ್ತ ಸಮಯ. ಹೀಗಾಗಿ ಜೀವನಕ್ಕೆ ಭದ್ರ ಬುನಾದಿ ಹಾಕಲು ಇಂತಹ ಪ್ರಾಥಮಿಕ ನಿರ್ಧಾರಗಳನ್ನು ಕಯಗೊಂಡು ಹಂತಹಂತವಾಗಿ ಆ ಮೆಟ್ಟಿಲುಗಳನ್ನು ಏರುತ್ತಾ ಸಾಗಬೇಕು.
ಪ್ರತಿ ಬಾರಿ ಸಂಬಳ ಪಡೆದಾಗ ಏನು ಮಾಡಬೇಕು, ಹೇಗೆ ಉಳಿತಾಯ ಮಾಡಬೇಕು ಇಲ್ಲವೇ ಎಲ್ಲಿ ಹೂಡಿಕೆ ಮಾಡಬೇಕು ಇತ್ಯಾದಿ ಗೊಂದಲ ನಿಮ್ಮಲ್ಲಿ ಇರುತ್ತದೆ. ಅದಕ್ಕಾಗಿ ಇಲ್ಲಿ ಕೆಲ ಪ್ರಮುಖ ಅಂಶಗಳನ್ನು ನೀಡಲಾಗಿದ್ದು, ಇವುಗಳನ್ನು ತಪ್ಪದೆ ಪಾಲಿಸಿದರೆ ಸುಂದರ, ಸುಸ್ಥಿರ, ಸುಕ್ಷೇಮ ಜೀವನ ನಿಮ್ಮದಾಗುತ್ತದೆ.
ಆ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ...
1. ಉಳಿತಾಯ ಹವ್ಯಾಸ ಬೆಳಸಿ
ಪ್ರತಿಬಾರಿ ಪಡೆಯುವ ಸಂಬಳ ಅತ್ಯಮೂಲ್ಯವಾದದ್ದು. ಅದರಲ್ಲೂ ಹೆಚ್ಚಿನವರು ಮೊದಲ ಬಾರಿ ಪಡೆಯುವ ಸಂಬಳವನ್ನು ಮನರಂಜನೆ, ಪಾರ್ಟಿಗಳಿಗಾಗಿ ಖರ್ಚುಮಾಡುತ್ತಾರೆ. ಏನೇನೋ ಖರೀದಿ, ಶಾಪಿಂಗ್, ಹೋಟೆಲ್ ಗಳು ನಿಮ್ಮ ಸಂಬಳವನ್ನು ನುಂಗಿಹಾಕುತ್ತವೆ. ಆದರೆ ಇದೇ ನಿಮ್ಮ ಹವ್ಯಾಸವಾಗಿ ಪರಿವರ್ತನೆ ಆಗಬಾರದು ಎಂಬುದನ್ನು ನೆನಪಿಡಬೇಕು. ನಿಮ್ಮ ಭವಿಷ್ಯಕ್ಕಾಗಿ ಉಳಿತಾಯವನ್ನು ಪ್ರಾರಂಭಿಸಬೇಕು. ಹೀಗಾಗಿ ಪ್ರತಿತಿಂಗಳು ಉಳಿತಾಯ ಮಾಡಲು ಗುರಿಯನ್ನು ನಿಗದಿಪಡಿಸಿ.(Pay yourself before you pay others by saving.)
2. ಬಜೆಟ್ ಪ್ಲಾನ್
ಪ್ರತಿ ಬಾರಿ ಸಂಬಳ ಪಡೆದಾಗ ಬಜೆಟ್ ಪ್ಲಾನ್ ರೂಪಿಸುವುದು ತುಂಬಾ ಸೂಕ್ತ. ಪ್ರತಿನಿತ್ಯ, ವಾರ, ತಿಂಗಳಿಗೆ ಅನುಸಾರವಾಗಿ ಖರ್ಚುವೆಚ್ಚದ ಯಾದಿಯನ್ನು ತಯಾರಿಸಬೇಕು. ನಿಮ್ಮ ವೈಯಕ್ತಿಕ ಹಣಕಾಸು ಪರಿಸ್ಥಿತಿ ತಿಳಿಯಲು ಪ್ರತಿ ತಿಂಗಳ ನಿಮ್ಮ ಆದಾಯವನ್ನು ಲೆಕ್ಕ ಹಾಕಿ, ಅದರಲ್ಲಿ ನಿಮ್ಮ ಹಣ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ( ಬಾಡಿಗೆ, ಪ್ರಯಾಣ ವೆಚ್ಚ, ಆಹಾರ ವೆಚ್ಚ, ಮನರಂಜನೆ ಮತ್ತು ಗೃಹ ನಿರ್ಮಾಣ, ಬಟ್ಟೆ ಮತ್ತು ಇನ್ನಿತರ ಉಪಯುಕ್ತತೆ)ಎಂಬುದನ್ನು ತಿಳಿದುಕೊಳ್ಳಬೇಕು. ಇದು ನಿಮ್ಮ ಆದಾಯ ಮತ್ತು ಖರ್ಚುವೆಚ್ಚಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತವೆ. ದೈನಂದಿನ ಹಣಕಾಸು ಯೋಜನೆಗಾಗಿ ಕಾಗದ, ಎಕ್ಸೆಲ್ ಸೀಟ್ ಅಥವಾ ಗೂಗಲ್ ಡಾಕ್ಸ್ ಬಳಸಬಹುದು. ಬಜೆಟ್ ಪ್ಲಾನ್ ನಂತರ ನಿಮ್ಮ ವೆಚ್ಚವನ್ನು ಟ್ರ್ಯಾಕ್ ಮಾಡಿ ಆದಾಯಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಕೊಡದೆ ವಾಸ್ತವಿಕವಾಗಿ ಖರ್ಚುವೆಚ್ಚ ನಿರ್ವಹಿಸಿ.
3. ಇನ್ಸೂರೆನ್ಸ್ ಮಾಡಿಸಿ
ಮೊದಲಿಗೆ ನಮ್ಮ ಬಗ್ಗೆ ನಾವು ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಜಾಬ್ ಪಡೆದ ನಂತರ ಮೊದಲು ಟರ್ಮ್ ಲೈಫ್ ಇನ್ಸೂರೆನ್ಸ್ ಪಾಲಿಸಿ ಖರೀದಿಸಲು ಮರೆಯಬೇಡಿ. ನಮ್ಮಲ್ಲಿ ಹಲವರಿಗೆ ವಿಮೆ ಪಾಲಿಸಿಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಹೀಗಾಗಿ ಮುಂದಿನ ಭವಿಷ್ಯದ ತುರ್ತು ಪರಿಸ್ಥಿತಿಯ ಬಗ್ಗೆ ಸಿದ್ದತೆ ಮಾಡಿಕೊಂಡಿರುವುದಿಲ್ಲ. ವಿಮೆ ರಕ್ಷಣೆಯನ್ನು ಆಯ್ಕೆ ಮಾಡದೆ ನಿಮ್ಮನ್ನು, ನಿಮ್ಮ ಕುಟುಂಬ ಹಾಗೂ ಆಸ್ತಿಯನ್ನು ಆರ್ಥಿಕವಾಗಿ ಅಸುರಕ್ಷಿತನನ್ನಾಗಿಸುತ್ತಿರಿ. ಜೀವನದಲ್ಲಿ ಏನೋ ಒಂದು ಅವಘಡ ಸಂಭವಿಸಿ ಆರ್ಥಿಕ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಿಗಾಗಿ ಈಗಿನಿಂದಲೇ ಸರಿಯಾದ ಹಣಕಾಸು(ವಿಮೆ/ಪಾಲಿಸಿ) ಯೋಜನೆ ಪ್ರಾರಂಭಿಸಿ. (Read more in english: https://www.goodreturns.in/)
4. FD, RD, ಇಕ್ವಿಟಿಗಳಲ್ಲಿ ಉಳಿತಾಯ ಮಾಡಿ
ಹೌದು. ಖರ್ಚು ಮಾಡುವ ಮುನ್ನವೇ ಬಂದ ಸಂಬಳ ಅಥವಾ ಆದಾಯದಲ್ಲಿ ಒಂದಿಷ್ಟು ಪ್ರಮಾಣದ ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡಿಡಬೇಕು. ಇದನ್ನು ಸಂಬಳ ಬರುತ್ತಿದ್ದಂತೆಯೇ FD(ಸ್ಥಿರ ಠೇವಣಿ) ಅಥವಾ ಆರ್ಡಿ(RD), ಇಕ್ವಿಟಿ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ. ಕೆಲ ದಿನಗಳು ಕಳೆದ ನಂತರ ನೀವೂ ಹೆಚ್ಚಿನ ಮೊತ್ತ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಸಿಪ್(SIP)ಗಳಲ್ಲಿ ಹೂಡಿಕೆ ಮಾಡುವುದು ಭವಿಷ್ಯತ್ತಿಗೆ ತುಂಬಾ ಲಾಭದಾಯಕ.
5. ನಿವೃತ್ತಿ ಜೀವನ ರೂಪಿಸಿ
ಪ್ರಾರಂಭದಲ್ಲಿಯೇ ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಲು ಆರಂಭಿಸಿದಲ್ಲಿ ಹೆಚ್ಚು ಲಾಭ ಪಡೆಯುವಿರಿ. ಅದಕ್ಕಾಗಿ ಯಾವ ಹಣಕಾಸು ಮೂಲ ನಿಮ್ಮ ನಿವೃತ್ತಿ ಜೀವನಕ್ಕೆ ಸಹಾಯಕ ಆಗಬಲ್ಲದು ಎಂಬುದನ್ನು ತಿಳಿದುಕೊಳ್ಳಿ. ಪಿಎಫ್, ಮೂಲ ಉಳಿತಾಯ ಖಾತೆಗಳು, ಠೇವಣಿ ಪತ್ರಗಳು, ಪಿಂಚಣಿ ಯೋಜನೆಗಳು, ಮ್ಯೂಚುವಲ್ ಫಂಡ್, ಸ್ಟಾಕ್, ಬಾಂಡ್ಸ್ ಮತ್ತು ಇನ್ನಿತರ ಉಳಿತಾಯ ಆಯ್ಕೆಗಳನ್ನು ಈ ವ್ಯಾಪ್ತಿಗೆ ತರಬಹುದು. ಇದರ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಿ ಅಗತ್ಯತೆಗೆ ಅನುಗುಣವಾಗಿ ಹಣಕಾಸು ಯೋಜನೆ ರೂಪಿಸಿಕೊಳ್ಳಬೇಕು.
6. ಆದಾಯಕ್ಕಿಂತ ಹೆಚ್ಚು ಖರ್ಚು ಬೇಡ
ಇದು ನಮ್ಮಲ್ಲಿನ ಮೂಲ ಸಮಸ್ಯೆ ಎಂದೆ ಹೇಳಬೇಕು. ಏಕೆಂದರೆ ಆದಾಯಕ್ಕಿಂತ ನಮ್ಮ ಖರ್ಚಿನ ಪ್ರಮಾಣ ತುಸು ಹೆಚ್ಚೆಂದೆ ಹೇಳಬೇಕು. ಇದು ನಮಗೆ ಗೊತ್ತಿರದ ವಿಚಾರವೆನಲ್ಲ. ಹೀಗಾಗಿ ನಮ್ಮ ತಿಂಗಳ ಆದಾಯವನ್ನು ತಲೆಯಲ್ಲಿಟ್ಟು ಅದಕ್ಕನುಗುಣವಾಗಿ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಿದ್ದರೆ ಅದು ಕಿಸೆಗೆ ಬಿದ್ದಿರುವ ದೊಡ್ಡ ರಂಧ್ರ ಎಂದೇ ಹೇಳಬೇಕಾಗುತ್ತದೆ. ಇದು ಭವಿಷ್ಯಕ್ಕಾಗಿ ಶುಭ ಸುದ್ದಿ ಅಲ್ಲ.
7. ತುರ್ತು ನಿಧಿ
ಇದು ತುಂಬಾ ಮುಖ್ಯವಾಗಿ ಪ್ರತಿಯೊಬ್ಬರೂ ಗಮನವಹಿಸಿಬೇಕಾದ ವಿಚಾರ. ಏಕೆಂದರೆ ಎಲ್ಲರಿಗೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ತುರ್ತು ಸನ್ನಿವೇಷಗಳು, ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ. ಇವು ಹೇಳಿ ಕೇಳಿ ಬರುವಂತವುಗಳಲ್ಲ. ಹೀಗಾಗಿ ಪೂರ್ವ ಯೋಜಿತವಾಗಿ ತುರ್ತುನಿಧಿಯನ್ನು ಇಡುವುದು ಉತ್ತಮ ಹವ್ಯಾಸ. ಇದು ಕಷ್ಟಕಾಲದ ಆಪತ್ ಬಾಂಧವನಾಗಿ ಕೆಲಸ ಮಾಡುತ್ತದೆ. ಹೆಚ್ಚಿಗೆ ಉಳಿದರೆ ಹೂಡಿಕೆ ಮಾಡಬಹುದು.
8. ಮೋಜು-ಮಸ್ತಿಯಿಂದ ದೂರವಿರಿ
ಮೋಜು-ಮಸ್ತಿ, ಕುಡಿತ, ಜೂಜು, ವಿಪರೀತ ಎನ್ನಬಹುದಾದ ಪಾರ್ಟಿಗಳು ಹಾಗೂ ಆಗಾಗ್ಗೆ ತಿನ್ನುವ ಚಪಲದಿಂದಾಗಿ ನಿಮ್ಮ ಭವಿಷ್ಯದ ಹಣಕಾಸಿನ ಮೇಲಷ್ಟೆ ಅಲ್ಲ ಪ್ರಸ್ತುತ ಆರ್ಥಿಕ ಸ್ಥಿರತೆ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ಆರೋಗ್ಯ ಕೂಡ ಹದಗೆಡುತ್ತದೆ. ಎಂಜಾಯ್ ಮೆಂಟ್ ಮಾಡಬೇಡಿ ಎಂದು ಹೇಳುತ್ತಿಲ್ಲ ಬದಲಾಗಿ ಇಂತ ವಿಚಾರಗಳ ಮೇಲೆ ನಿಯಂತ್ರಣ ಇದ್ದರೆ ಕ್ಷೇಮಕರ. (Read more: ಉಳಿತಾಯ ಯೋಜನೆ)