ಬಾಹುಬಲಿ ಬ್ಲಾಕ್ ಬಸ್ಟರ್ ಯಶಸ್ಸಿಗೆ ಕಾರಣವಾದ 7 ತಂತ್ರಗಳನ್ನು ನೀವೂ ಅಳವಡಿಸಿಕೊಳ್ಳಿ..
ವಾರೆನ್ ಬಫೆಟ್ ರಿಂದ ಹೂಡಿಕೆ ಟಿಪ್ಸ್ ಗಳನ್ನು ಪಡೆಯುತ್ತಿದ್ದವರು ಇದೀಗ ಬಾಹುಬಲಿಯ ಸಕ್ಸಸ್ ಮೂಲಕ ಕೂಡ ಕೆಲ ಹೂಡಿಕೆ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು ಎನ್ನುವುದು ಎಂಜೆಲ್ ಬ್ರೋಕಿಂಗ್ ವಿಶ್ಲೇಷಣೆ.
ಜಗಂ ಬಾಹುಬಲಿಮಯಂ... ಹೌದು ಪ್ರತಿಯೊಬ್ಬರ ಬಾಯಲ್ಲೂ ಬಾಹುಬಲಿ.. ಬಾಹುಬಲಿ... ಇದು ಬಾಹುಬಲಿ ಸಿನಿಮಾ ಕ್ರಿಯೆಟ್ ಮಾಡಿರುವ ಟ್ರೆಂಡ್. ಈಗಾಗಲೇ ಎಲ್ಲಾ ದಾಖಲೆಗಳು ಬಾಹುಬಲಿಗೆ ಬಲಿಯಾಗಿವೆ. ಇದು ಭಾರತದ ಚರಿತ್ರೆಯಲ್ಲಿನ ಅತ್ಯಂತ ಯಶಸ್ವಿ ಚಿತ್ರ. ಅಷ್ಟೇ ಅಲ್ಲ ಹೂಡಿಕೆದಾರರಲ್ಲಿ ಯಶಸ್ವಿ ಹೂಡಿಕೆ ತಂತ್ರಗಳನ್ನು ಬಿತ್ತುವ ಚಿತ್ರ.
ರಾಜಮೌಳಿ ಎಂಬ ಮಾಂತ್ರಿಕನ ವೈಭೋವೊಪೇತ ರೋಮಾಂಚಕ ದೃಶ್ಯಕಾವ್ಯಗಳನ್ನು ಕಣ್ತುಂಬಿಕೊಳ್ಳುವುದೇ ಸಿನಿಮಾ ರಸಿಕರಿಗೆ ಪ್ರಿಯ. ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ಜಗತ್ತಿನಾದ್ಯಂತ ಬಾಹುಬಲಿಯ ಆರ್ಬಟ ಜೋರಾಗಿದ್ದು, ಎಲ್ಲವೂ ಧೂಳೀಪಟ. ಎಲ್ಲಾ ಸಾರ್ವಕಾಲೀಕ ದಾಖಲೆಗಳು ಬಾಹುಬಲಿ 2 ತನ್ನ ಹೆಸರಿಗೆ ಬರೆಸಿಕೊಂಡಿದೆ. ಇದರ ಗಳಿಕೆ ಈಗಾಗಲೇ 1500 ಕೋಟಿ ದಾಟಿಯಾಗಿದೆ. ಹಾಲಿವುಡ್, ಬಾಲಿವುಡ್, ಸೌತ್ ವುಡ್(ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಮೊಲಿವುಡ್) ಹೀಗೆ ಎಲ್ಲಾ ವುಡ್ ಗಳಲ್ಲೂ ಬಾಹುಬಲಿನೇ ಗುಡ್. (ಇವು ಭಾರತದ ಸಾರ್ವಕಾಲಿಕ ಅತಿಹೆಚ್ಚು ವೆಚ್ಚದ ಸಿನಿಮಾಗಳು)
ಎಲ್ಲೆಡೆಯಲ್ಲೂ ಬಾಹುಬಲಿ ಸಾಧಿಸಿರುವ ಚಕ್ರಾಧಿಪತ್ಯಕ್ಕೆ, ಊಹಿಸಲಾಗದ ಯಶಸ್ಸಿಗೆ, ಇದಮಿತ್ತಂ ಗಳನ್ನು ನಾಶಮಾಡಿ ಏರಿರುವ ಅಪರಿಮಿತ ಶಿಖರಕ್ಕೆ ಹಾಲಿವುಡ್, ಬಾಲಿವುಡ್ ಕಂಗಾಲಾಗಿದೆ. ಹಾಗಿದ್ದರೆ ಇಂತಹ ಬೃಹತ್ ಯಶಸ್ಸಿಗೆ ಕಾರಣಗಳೇನು? ಬಾಹುಬಲಿ ಅಂಡ್ ಟೀಮ್ ನ ಸ್ಟ್ರಾಟಜಿ ಏನು? ರಾಜಮೌಳಿಯವರ ಪ್ಲಾನ್ ಏನು? ಈ ಅದ್ಬುತ ಪರಾಕ್ರಮಗಳು ಹೇಗೆ ಸಾಧ್ಯ ಎಂಬ ಕುತೂಹಲ ಇದ್ದೆ ಇರುತ್ತದೆ.
ಈ ಹಿಂದೆ ವಾರೆನ್ ಬಫೆಟ್ ರಿಂದ ಹೂಡಿಕೆ ಟಿಪ್ಸ್ ಗಳನ್ನು ಪಡೆಯುತ್ತಿದ್ದವರು ಇದೀಗ ಬಾಹುಬಲಿಯ ಸಕ್ಸಸ್ ಮೂಲಕ ಕೂಡ ಕೆಲ ಹೂಡಿಕೆ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಬಾಹುಬಲಿ ಸಕ್ಸಸ್ ಆಧರಿಸಿ ಅದನ್ನು ಹೂಡಿಕೆದಾರನೊಂದಿಗೆ ಸಮೀಕರಿಸಿ ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಎಂಜೆಲ್ ಬ್ರೋಕಿಂಗ್ ವಿಶ್ಲೇಷಣೆ ಇಲ್ಲಿ ಮುಖ್ಯ ಅಂಶವಾಗಿದೆ. ಉತ್ತರ ಇಲ್ಲಿದೆ ನೋಡಿ...
ಹೂಡಿಕೆ ಕಾಯುವ ನಿರೀಕ್ಷೆಯ ಆಟ
ಬಾಹುಬಲಿ ಕನ್ಕ್ಲೂಷನ್ ಜನರಲ್ಲಿ ಹುಟ್ಟುಹಾಕಿದ್ದ ಕುತೂಹಲ, ನಿರೀಕ್ಷೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಒಂದು ವರ್ಷ ಕಾಯಿಸಿತ್ತು. ಅಮರೇಂದ್ರ ಬಾಹುಬಲಿ ಸಿಂಹಾಸನಕ್ಕಾಗಿ ತನ್ನ ಹಕ್ಕನ್ನು ಕಳೆದುಕೊಳ್ಳುತ್ತಾನೆ ಆದರೆ ಸಾಮ್ರಾಜ್ಯದ ದೃಷ್ಟಿ ಕಳೆದುಕೊಳ್ಳುವುದಿಲ್ಲ. ಕಿಂಗ್ ಡಮ್ ಮರಳಿ ಪಡೆಯಲು ಎರಡು ತಲೆಮಾರು ಕಾಯಬೇಕಾಗುತ್ತದೆ. ಅದೇ ರೀತಿ ಹೂಡಿಕೆ ಕ್ಷೇತ್ರದಲ್ಲಿ ಕೂಡ ಕಾಯುವ ನಿರೀಕ್ಷೆಯ ಆಟ ಅಂತಿಮವಾಗಿ ಉತ್ತಮವಾದುದ್ದನ್ನೇ ಪಾವತಿಸುತ್ತದೆ. ಒಂದೇಡೆ ಪ್ರೇಕ್ಷಕ, ಇನ್ನೊಂದೆಡೆ ಅಮರೇಂದ್ರ ಬಾಹುಬಲಿ, ಮತ್ತೊಂದೆಡೆ ಹೂಡಿಕೆದಾರ ಈ ರೀತಿ ಎಂಜೆಲ್ ಬ್ರೋಕಿಂಗ್ ವಿಶ್ಲೇಷಣೆ ಮಾಡಿದೆ.
ಹೆಚ್ಚು ಹೂಡಿಕೆ ಹೆಚ್ಚು ಗಳಿಕೆ
ಬಾಹುಬಲಿ ತನ್ನ ಜೀವನದುದ್ದಕ್ಕೂ ಭಾರೀ ಬೆಲೆ ಕಟ್ಟುತ್ತಾನೆ. ಅವರು ಸಿಂಹಾಸನ ಸಿಗದಂತೆ ಮಾಡುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಐಷಾರಾಮಿ ಜೀವನ ಬಿಟ್ಟುಬಿಡುತ್ತಾನೆ. ಅಂತಿಮವಾಗಿ ತನ್ನ ಜೀವನವನ್ನು ಕೂಡ ನೀಡುತ್ತಾರೆ.
ಅದೇ ರೀತಿ ಹೂಡಿಕೆ ಮಾಡುವಾಗ ವ್ಯಾಪಾರ ಮಾಡಲು ಈ ತತ್ವಗಳು ಸತ್ಯವಾಗುತ್ತವೆ. ನಿಜವಾದ ವೆಚ್ಚ ಮತ್ತು ಅವಕಾಶ ವೆಚ್ಚಗಳನ್ನು ಅರ್ಥೈಸಿಕೊಳ್ಳದೆ ಹೂಡಿಕೆ ಮಾಡಿ. ನಾವು ನಮ್ಮ ಹೂಡಿಕೆಗಳನ್ನು ದೀರ್ಘ ಸಮಯದವರೆಗೆ ಇಟ್ಟು ನಂತರ ತಪ್ಪು ಸಮಯದಲ್ಲಿ ಹಿಂಪಡೆಯುತ್ತೆವೆ. ಆದರೆ ಹಾಗಾಗಬಾರದು.
ತಪ್ಪು-ಸರಿ, ಆಸೆ-ದುರಾಶೆಯ ಪ್ರಜ್ಞೆ
ಬಾಹುಬಲಿಯ ತಮ್ಮ ದುರಾಶೆಗೆ ಒಳಗಾಗಿ ಅಂತಿಮವಾಗಿ ಅದಕ್ಕೆ ಬಲಿಯಾಗುತ್ತಾನೆ. ಮತ್ತೊಂದೆಡೆ ಅದೇ ಸರಿಯಾದ ಸಮಯಕ್ಕಾಗಿ ಬಾಹುಬಲಿ ಉತ್ಸಾಹಭರಿತನಾಗಿ ಕಾದುಕುಳಿತ್ತಿರುತ್ತಾನೆ.
ಅದೇ ರೀತಿಯಾಗಿ, ಹೂಡಿಕೆ ಕ್ಷೇತ್ರದಲ್ಲಿ ನೀವು ಯಾವ ಸಮಯದಲ್ಲಿ ದುರಾಶೆ ಪಡಬೇಕು ಮತ್ತು ಯಾವಾಗ ಭಯಭೀತರಾಗಿರಬೇಂದು ತಿಳಿದಿರಬೇಕು. ಹೂಡಿಕೆ ಪ್ರಾರಂಭದ ಸಂದರ್ಭದಲ್ಲಿ ದುರಾಶೆ ಹೊಂದಿದ್ದರೆ ಲಾಭಾಂಶ ಪಡೆಯುವ ಸಮಯದಲ್ಲಿ ಭಯ ಇರಬೇಕು.
ಸೂಪರ್ ಸ್ಟಾರ್ ಗಳ ಅಗತ್ಯವಿಲ್ಲ
ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ಮಾಡಲು ಸೂಪರ್ ಸ್ಟಾರ್ ಗಳ ಅಗತ್ಯವಿಲ್ಲ. ಇದು ನಿಮ್ಮ ಬಂಡವಾಳಕ್ಕೂ ಅನ್ವಯವಾಗುತ್ತದೆ ಎನ್ನುವುದು ಎಂಜೆಲ್ ಬ್ರೋಕಿಂಗ್ ಅಭಿಪ್ರಾಯ. ನಿಮ್ಮ ಹೂಡಿಕೆ ಬಂಡವಾಳದಲ್ಲಿ ಕೇವಲ ಸೂಪರ್ ಸ್ಟಾರ್ ಅಂದರೆ ಸಲಹೆಗಾರರನ್ನು ನಂಬಿ ಹೂಡಿಕೆ ಮಾಡಬಾರದು. ಬದಲಾಗಿ ನಿಮಗೆ ಹೂಡಿಕೆ ಕ್ಷೇತ್ರದ ಏರಿಳಿತಗಳ ಜ್ಞಾನದೊಂದಿಗೆ ಸ್ವಯಂ ಸಾಮರ್ಥ್ಯ ಇರಬೇಕಾಗುತ್ತದೆ. ಈ ಜ್ಞಾನ ಹೂಡಿಕೆದಾರನಿಗೆ ಸ್ವಯಂ ಸಾಮರ್ಥ್ಯದ ಸ್ಟಾರ್ ಸಂಭಾವ್ಯತೆ ಒದಗಿಸುತ್ತದೆ. ಹೂಡಿಕೆದಾರನಾಗಿ ಯಾವುದೇ ಹಣಕಾಸು ಸಲಹೆಗಾರರ ಮೇಲೆ ಹೆಚ್ಚು ಅವಲಂಬಿತರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೂಡಿಕೆದಾರ ತನ್ನ ಕ್ಷೇತ್ರದಲ್ಲಿ ತಾನೇ ಸೂಪರ್ ಸ್ಟಾರ್ ಆಗಿರಬೇಕಾಗುತ್ತದೆ ಎನ್ನುವುದು ಎಂಜೆಲ್ ಬ್ರೋಕಿಂಗ್ ಅಭಿಮತ.
ಎಮೋಷನ್ಸ್ ಬದಲು ಲಾಜಿಕ್ ಇರಬೇಕು
ಇದು ಬಾಹುಬಲಿ ಪಾತ್ರದ ಮೂಲ ವಿಷಯವಾಗಿತ್ತು. ತೀರ್ಪುಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಎಮೋಷನ್ ಗಳಿಗೆ, ಭಾವನೆಗಳಿಗೆ ಅವಕಾಶ ನೀಡಬಾರದು. ತಾಯಿ, ಹೆಂಡತಿ ಬಗೆಗೆ ಹಲವು ಬದ್ದತೆಗಳಿದ್ದರೂ ಜಡ್ಜಮೆಂಟ್ ಸಂದರ್ಭದಲ್ಲಿ ಎಮೋಷನ್ ಗಳಿಗೆ ಅವಕಾಶ ನೀಡಲಿಲ್ಲ.
ಎಮೋಷನ್ ಗಳು ಹೂಡಿಕೆದಾರರ ಅತಿದೊಡ್ಡ ಶತ್ರುಗಳಾಗಿದ್ದು, ದುರ್ಬಲ ಮನಸ್ಥಿತಿಗೆ ಅವಕಾಶ ನೀಡಬಾರದು. ಮಾನಸಿಕವಾಗಿ ಸ್ಥಿರವಾಗಿರಬೇಕಿದ್ದು, ಹೂಡಿಕೆ ನಿರ್ಧಾರಗಳನ್ನು ತರ್ಕಿಸಿ, ವಿಶ್ಲೇಷಿಸಿ, ಭಾಗಿಸಿ, ಗುಣಿಸಿ, ಕೂಡಿಸಿ ಕೈಗೊಳ್ಳಬೇಕು. ಯಾವುದೇ ರಾಜಿ ಇಲ್ಲದೆ ಲಾಜಿಕಲಿ ಮ್ಯಾಜಿಕ್ ಮಾಡಬೇಕು.
ತಾಳ್ಮೆ ಯಶಸ್ಸಿನ ಕೀಲಿಕೈ
ತಾಳ್ಮೆಯೆ ಯಶಸ್ಸಿನ ಮೂಲಮಂತ್ರ ಎಂಬುದು ನಾವು ಕೇಳಿರುತ್ತೇವೆ. ಯಶ್ಸವಿ ಹೂಡಿಕೆದಾರರಲ್ಲಿ ಇದು ನಿಖರವಾಗಿರಬೇಕು. ಬಾಹುಬಲಿ ರಾಜ್ಯವನ್ನು ಬಲ್ಲಾಳದೇವನಿಂದ ಮರಳಿ ಪಡೆಯಲು ಹೊಂದಿರುವ ತಾಳ್ಮೆಯಂತೆ. ತಾಳಿದವನು ಬಾಳಿಯಾನು ಎಂಬಂತೆ ಹೂಡಿಕೆಯಲ್ಲೂ ಕೂಡ, ಕಾಯುವ ಆಟ ಕೊನೆಯಲ್ಲಿ ಅತಿಹೆಚ್ಚು ಮೊತ್ತ ಪಾವತಿಸುತ್ತದೆ.
ನಿಮ್ಮ ನಿರ್ಧಾರ ಬಲವಾಗಿ ನಂಬಿ
ಜೀವನದ ಪ್ರತಿಯೊಂದು ಹಂತದಲ್ಲೂ ನಾವು ತಿಳಿದುಕೊಳ್ಳಬೇಕಾದ ನಿಜವಾದ ಪಾಠ ನಂಬಿಕೆ. ಬಾಹುಬಲಿ ತನ್ನ ಅಪಾರವಾದ ನಂಬಿಕೆ ಮತ್ತು ಸಂಪೂರ್ಣ ವಿಶ್ವಾಸವಿತ್ತು. ಬಹಳಷ್ಟು ನಷ್ಟ, ನೋವು ಅನುಭವಿಸಿ, ಎಲ್ಲವನ್ನೂ ಕಳೆದುಕೊಂಡರು ವಿಶ್ವಾಸ ಮಾತ್ರ ಕಡಿಮೆ ಆಗಲಿಲ್ಲ. ಇದು ಹೂಡಿಕೆಯಲ್ಲೂ ನಿಜ. ಅನೇಕ ವಿಚಿತ್ರ ಸಂದರ್ಭಗಳು, ಮಾರುಕಟ್ಟೆಯಲ್ಲಿ ಏಳುಬೀಳುಗಳು, ನಷ್ಟಗಳು ಕಂಗಾಲು ಮಾಡಬಹುದು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತುಂಬಾ ಜಾಣ್ಮೆಯಿಂದ, ತಾಳ್ಮೆಯಿಂದ ದೃಢವಾಗಿ ಮುನ್ನಡೆಯಬೇಕು. ಆಗ ಹೂಡಿಕೆದಾರರು ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ ಎನ್ನುವುದು ಎಂಜೆಲ್ ಬ್ರೋಕಿಂಗ್ ವಿಶ್ಲೇಷಣೆ.