ವಿವಿಧ ವಿಮೆ ಕೊಳ್ಳಿರಿ, ನಿಮ್ಮ ಜೀವನ ಭದ್ರ ಮಾಡಿಕೊಳ್ಳಿ
ವಿಮೆ ಶಬ್ದದ ಅರ್ಥವೇ ಹೇಳುವಂತೆ ಇದು ಜೀವ ಮತ್ತು ಜೀವನಕ್ಕೆ ಭದ್ರತೆ ಒದಗಿಸುತ್ತದೆ. ಅಪಘಾತ, ಸಾವು, ಅನಾರೋಗ್ಯ ಅಥವಾ ಆಸ್ತಿಗೆ ಹಾನಿಯಾದ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆದುಕೊಳ್ಳಲು ವಿಮೆಯೇ ಆಧಾರ.
ಜೀವನ ಹೇಗಿರುತ್ತೋ ಬಲ್ಲವರಾರು? ಆದರೆ, ಯಾವುದೇ ಪರಿಸ್ಥಿತಿ ಎದುರಿಸಲು ಆರ್ಥಿಕವಾಗಿ ನಾವು ಸಿದ್ಧರಿರಬೇಕು. ಆಧುನಿಕ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ, ಜತೆಗೆ ಆಸ್ತಿಯ ಮೇಲೂ ವಿಮೆ ಮಾಡಿಸಿಕೊಳ್ಳಬೇಕಾಗುತ್ತದೆ. ವಿಮೆ ಕೇವಲ ನಿಮ್ಮ ಜೀವನಕ್ಕೆ ಭದ್ರತೆ ಒದಗಿಸುವುದು ಮಾತ್ರವಲ್ಲದೇ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಲು ನೆರವು ನೀಡುತ್ತದೆ.
ಕಾರು, ದ್ವಿಚಕ್ರ ವಾಹನ, ಮನೆ... ಯಾವುದಕ್ಕೆ ಮೌಲ್ಯವಿರುತ್ತದೋ ಅವುಗಳಲ್ಲವನ್ನು ಇನ್ಶೂರನ್ಸ್ ಪರಿಧಿಗೆ ತರಬಹುದು. ಅನೇಕ ಕಂಪನಿಗಳು ವಿಮಾ ಸೌಲಭ್ಯವನ್ನು ನೀಡುತ್ತ ಬಂದಿವೆ. ಬಡ್ಡಿ, ಅವಧಿ, ಕಾಲ, ಪ್ರೀಮಿಯಂ ಸೇರಿದಂತೆ ವಿಮೆಯ ಲಕ್ಷಣ ಬದಲಾಗುವುದು. ಅವೆಲ್ಲದರ ಮೇಲೆ ಒಂದು ನೋಟ ಇಲ್ಲಿದೆ.
ಕಾರಿನ ಮೇಲಿನ ವಿಮೆ
ಕಾರಿನ ಮೇಲೆ ವಿಮೆ ಮಾಡಿಸುವುದು ಭಾರತದಲ್ಲಿ ಕಡ್ಡಾಯ. ಆರೋಗ್ಯ ವಿಮೆ ಅಥವಾ ಜೀವ ವಿಮೆಯಂತೆ ಇದು ಐಚ್ಛಿಕವಾಗಿಲ್ಲ. ಅನೇಕ ಕಂಪನಿಗಳು ಹೆಚ್ಚಿನ ಬಡ್ಡಿ ದರ ನೀಡುವುದರೊಂದಿಗೆ ನಿಮ್ಮ ಕಾರಿಗೆ ವಿಮಾ ಭದ್ರತೆ ಒದಗಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಕಂಪನಿಗಳು ಆನ್ ಲೈನ್ ಮುಖಾಂತರ ವಿಮೆ ಸೌಲಭ್ಯವನ್ನು ಒದಗಿಸುತ್ತಿರುವುದರಿಂದ ವಿಮೆ ಮಾಡಿಸುವುದು ಸುಲಭವಾಗಿದೆ. ಆನ್ ಲೈನ್ ಮೂಲಕ ನೀವು ಯಾವ ವಿಮೆ ಹೆಚ್ಚು ಲಾಭ ತಂದುಕೊಡುತ್ತದೆ ಎಂಬುದನ್ನು ವಿವಿಧ ವೆಬ್ ಸೈಟುಗಳನ್ನು ತುಲನೆ ಮಾಡಿ ತಿಳಿದುಕೊಳ್ಳಬಹುದು. ಅಪಘಾತಕ್ಕೆ ಸಿಗುವ ಮೊತ್ತವನ್ನು ಇಲ್ಲಿ ಪರಿಶೀಲನೆ ಮಾಡಬಹುದು.
ಟರ್ಮ್ಸ್ ಲೈಫ್ ಇನ್ಶೂರನ್ಸ್
ಇದು ಸಹ ಕಡ್ಡಾಯ ವಿಮೆಯಾಗಿ ಮಾರ್ಪಾಡಾಗಿದೆ. ಹಲವರು ಇದನ್ನು ಎಂಡೋವ್ ಮೆಂಟ್ ಪಾಲಿಸಿ ಎಂದು ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಕವರೇಜ್ ಪ್ರಮಾಣ ಅತೀ ಹೆಚ್ಚಿನದಾಗಿರುತ್ತದೆ. ಇದು ಒಂದು ಹೂಡಿಕೆಯಲ್ಲ. ಆದರೆ ಆಕಸ್ಮಿಕ ಸಂದರ್ಭದಲ್ಲಿ ಅಪಾಯ ಎದುರಾದರೆ ನಿಮಗೆ ಅತೀ ಹೆಚ್ಚಿನ ಹಣ ದೊರೆಯುತ್ತದೆ.
ಟರ್ಮ್ ಇನ್ಶೂರನ್ಸ್ ನಲ್ಲಿ ಹಣ ವಾಪಸ್ ಬರುವುದಿಲ್ಲವಾದರೂ, ಇಲ್ಲಿ ಕವರೇಜ್ ಎಲ್ಲಕ್ಕಿಂತ ಹೆಚ್ಚಿನದಾಗಿರುತ್ತದೆ. ಎಂಡೋವ್ ಮೆಂಟ್ ಮಾಲಿಸಿ ಮಾಡಿಸುವ ಮುನ್ನ ಟರ್ಮ್ ಪಾಲಿಸಿ ಮಾಡಿಸುವುದು ಉತಮ.
ಮನಿ ಬ್ಯಾಕ್ ಪಾಲಿಸಿ
ಹೆಸರೇ ಹೇಳುವಂತೆ ಇಲ್ಲಿ ನೀವು ತುಂಬಿದ ಹಣ ಒಂದು ನಿರ್ದಿಷ್ಟ ಅವಧಿಯ ನಂತರ ಬಡ್ಡಿ ಸಮೇತ ಹಿಂದಕ್ಕೆ ಬರುತ್ತದೆ. ಬ್ಯಾಂಕ್ ನಲ್ಲಿ ಹಣ ಹೂಡುವುದಕ್ಕಿಂತ ಇಲ್ಲಿ ವಿನಿಯೋಗ ಮಾಡುವುದು ಉತ್ತಮ. ಇದು ನಿಮಗೆ ಲೈಫ್ ಕವರ್ ಸಹ ಒದಗಿಸುತ್ತದೆ. ಬದುಕಿದ್ದಾಗ ಹೆಚ್ಚಿನ ರಿಟರ್ನ್ಸ್ ಸಾಧ್ಯವಿಲ್ಲದಿದ್ದರೂ ಭದ್ರತೆ ದೃಷ್ಟಿಯಿಂದ ಒಳ್ಳೆಯದು.
ಮಕ್ಕಳಿಗೆ ಸಂಬಂಧಿತ ವಿಮಾ ಯೋಜನೆಗಳು
ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಕ್ಕಳ ಹೆಸರಿನಲ್ಲಿ ಒಂದು ವಿಮೆ ಮಾಡಿಸುವುದು ರಕ್ಷಣಾ ತಂತ್ರವಾಗುತ್ತದೆ. ಅಲ್ಲದೇ 80ಸಿ ಅನ್ವಯ ತೆರಿಗೆ ವಿನಾಯಿತಿ ಲಾಭವನ್ನು ಪಡೆದುಕೊಳ್ಳಬಹುದು.
ಚೈಲ್ಡ್ ಪಾಲಿಸಿಯ ಲಾಭವೇನೆಂದರೆ, ಒಂದು ವೇಳೆ ಪಾಲಿಸಿ ಮಾಡಿಸಿದವರು(ತಂದೆ, ತಾಯಿ. ಪೋಷಕರು) ಅಕಸ್ಮಾತಾಗಿ ಸಾವನ್ನಪ್ಪಿದರೆ ಯಾರ ಹೆಸರಿನಲ್ಲಿ ಪಾಲಿಸಿ ಇದೆಯೋ ಅವರು ಪ್ರೀಮಿಯಂ ಕಟ್ಟದೆ ವಿಮೆಯನ್ನು ಮುಂದುವರಿಸಿಕೊಂಡು ಹೋಗಬಹುದು.
ಅಂಥ ಸಂದರ್ಭದಲ್ಲಿ ಶೈಕ್ಷಣಿಕ ಅಗತ್ಯತೆಗಳನ್ನು ಯಾವುದೇ ತೊಂದರೆಯಿಲ್ಲದೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ. ಅಲ್ಲದೆ, ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ ಮತ್ತು ವಿಮೆಯಿಂದ ಬರುವ ಆದಾಯ ಕೂಡ 10ಡಿ ಅಡಿಯಲ್ಲಿ ತೆರಿಗೆಯಿಂದ ಮುಕ್ತವಾಗಿರುತ್ತದೆ.
ವಿಪರೀತ ಅನಾರೋಗ್ಯ ಎದುರಾದರೆ?
ಆರೋಗ್ಯ ವಿಪರೀತವಾಗಿ ಹದಗೆಟ್ಟು ಹಣಕಾಸಿನ ತುರ್ತುಪರಿಸ್ಥಿತಿ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ಕಂಪನಿಗಳು ಆರೋಗ್ಯ ವಿಮೆ ನೀಡುತ್ತಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳುವುದು ಜಾಣತನ. ಯಾವುದೇ ಒಂದೇ ಸಂಸ್ಥೆ ಅಥವಾ ಕಂಪನಿಯಲ್ಲಿ ಕುಟುಂಬದ ಎಲ್ಲರನ್ನೂ ಒಳಗೊಳ್ಳುವಂತೆ ಆರೋಗ್ಯ ವಿಮೆ ಮಾಡಿಸಿಕೊಂಡರೆ ಒಳ್ಳೆಯದು.
ಇತರ ಆರೋಗ್ಯ ವಿಮೆಯ ಜೊತೆಗೆ ಕ್ರಿಟಿಕಲ್ ಹೆಲ್ತ್ ಇನ್ಶೂರನ್ ಕೂಡ ಮಾಡಿಸಿಕೊಳ್ಳುವುದು ಒಳಿತು. ಅನಾರೋಗ್ಯ ಮತ್ತು ವಿಮೆ ಮೊತ್ತದ ಆಧಾರದ ಮೇಲೆ ಪ್ರೀಮಿಯಂ ಕೂಡ ಬದಲಾಗುತ್ತದೆ. ಆದರೆ, ಯಾವುದಾದರೂ ಒಬ್ಬ ಕಂಪನಿಯನ್ನು ಅವಲಂಬಿಸುವುದು ಒಳ್ಳೆಯದು.
ಪ್ರವಾಸ ವಿಮೆ
ಪಾಸ್ ಪೋರ್ಟ್ ಕಳೆದುಕೊಂಡರೆ, ವೈದ್ಯಕೀಯ ತುರ್ತು ಸ್ಥಿತಿ, ಪ್ರಯಾಣದ ವೇಳೆ ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೆ ಈ ಪಾಲಿಸಿ ರಕ್ಷಣೆ ಒದಗಿಸುತ್ತದೆ. ಪ್ರವಾಸ ವಿಮೆ ಇಂದು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಜನರು ಆನ್ ಲೈನ್ ಮೂಲಕವೇ ಯೋಜನೆಯನ್ನು ಖರೀದಿ ಮಾಡುತ್ತಿದ್ದಾರೆ.
ಪ್ರವಾಸ ಆರಂಭವಾಗಿ ಕೊನೆಗೊಳ್ಳುವವರೆಗೆ ಈ ವಿಮೆ ಅನ್ವಯವಾಗುತ್ತಿರುತ್ತದೆ. ಆದರೆ, ಇಂಥ ವಿಮೆ ತೆಗೆದುಕೊಳ್ಳುವ ಮುನ್ನ ಆಯಾ ಕಂಪನಿಯ ನಿಯಮ, ನಿಬಂಧನೆಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ನಂತರ ತೆಗೆದುಕೊಳ್ಳುವುದು ಉತ್ತಮ.
ಆರೋಗ್ಯ ವಿಮೆ
ಆರೋಗ್ಯ ಕಾಪಾಡಿಕೊಳ್ಳಬೇಕಾದಂಥ ಪ್ರಸಂಗ ಬಂದಾಗ ಆರೋಗ್ಯ ವಿಮೆ ಹಣಕಾಸಿನ ನೆರವನ್ನು ನೀಡುತ್ತದೆ. ವೈದ್ಯಕೀಯ ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತಿರುವ ಮತ್ತು ಜೀವಕ್ಕೆ ಅಪಾಯವಾಗುವಂಥ ರೋಗಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ವಿಮೆ ಮಾಡಿಸುವುದು ಒಳಿತು.
ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಒದಗಿಸಿರುವ ಆರೋಗ್ಯ ವಿಮೆ ಮೊತ್ತ ಸಾಕಾಗದು ಎಂಬ ಭಾವನೆ ಮೂಡಿದ್ದರೆ ತಕ್ಷಣ ಇಂಥದ್ದೊಂದು ವಿಮಾ ಯೋಜನೆ ಖರೀದಿ ಮಾಡುವುದು ಒಳ್ಳೆಯದು. ಜೀವನ ಅಸ್ಥಿರತೆಯಿಂದ ಕೂಡಿರುತ್ತದೆ. ಯಾವಾಗ ಅಪಘಾತ ಬರುತ್ತೋ, ಯಾವಾಗ ವಿಷಮಸ್ಥಿತಿ ಬರುತ್ತೋ ಬಲ್ಲವರಾರು? ನಾವು ನಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಆರೋಗ್ಯ ವಿಮೆ ಮಾಡಿಸಿಕೊಂಡಿರುವುದು ಒಳಿತು.
ಆರೋಗ್ಯ ವಿಮೆ ಮಾಡಿಸಿದರೆ, 80ಡಿ ಅಡಿಯಲ್ಲಿ ನಿಮಗೆ ತೆರಿಗೆ ವಿನಾಯಿತಿಯೂ ದೊರೆಯುವುದು. ಅಲ್ಲದೇ ಹಿರಿಯ ನಾಗರಿಕರು 20 ಸಾವಿರ ವರೆಗೆ ಮತ್ತು ಉಳಿದವರು 15 ಸಾವಿರ ರು.ವರೆಗೆ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು.
ಎಂಡೋವ್ ಮೆಂಟ್ ಪಾಲಿಸಿ
ಇದು ಸಾಂಪ್ರದಾಯಿಕ ಯೋಜನೆ ಎಂದೇ ಕರೆಸಿಕೊಂಡು ಬಂದಿದೆ. ಎಂಡೋವ್ ಮೆಂಟ್ ಪಾಲಿಸಿ ಉಳಿತಾಯ ಮತ್ತು ವಿಮೆ ಎರಡರ ನಡುವಿನ ಸಂಯೋಜನೆಯಾಗಿದೆ. ಇಲ್ಲಿ ನಿಮಗೆ ಹೆಚ್ಚಿನ ರಿಟರ್ನ್ಸ್ ಸಿಗದೇ ಇರಬಹುದು ಆದರೆ ಭದ್ರತೆಗೆ ಯಾವ ಧಕ್ಕೆ ಆಗುವುದಿಲ್ಲ. ಪಾಲಿಸಿಯ ಅಂತ್ಯಕಾಲಕ್ಕೆ ದೊಡ್ಡ ಮೊತ್ತ ಕೈ ಸೇರುತ್ತದೆ.
ಸುದೀರ್ಘ ಅವಧಿಗೆ ಇಂಥ ಪಾಸಿಲಿ ಮಾಡಿದರೆ ಲಾಭ ಹೆಚ್ಚು. ಹೆಚ್ಚಿನ ಹಣ ವಾಪಸ್ ಆಗಬೇಕು ಮತ್ತು ಹೂಡಿದ ಹಣ ಗ್ಯಾರಂಟಿಯಾಗಿ ವಾಪಸ್ ಬರಬೇಕು ಎಂದು ಇಚ್ಛಿಸುವವರು ಎಂಡೋವ್ ಮೆಂಟ್ ಪಾಲಿಸಿ ಮಾಡಿಸಬಹುದು.
ದ್ವಿಚಕ್ರ ವಾಹನ ವಿಮೆ
ಭಾರತದಲ್ಲಿ ದ್ವಿಚಕ್ರ ವಾಹನ ವಿಮೆಯನ್ನು ಕಡ್ಡಾಯ ಮಾಡಲಾಗಿದೆ. ಅಪಘಾತಕ್ಕೆ ತುತ್ತಾಗಿ ವಾಹನ ಹಾನಿಗೀಡಾದರೆ ಇದು ನೆರವಿಗೆ ಬರುತ್ತದೆ. ಕೆಲವೆಡೆ ನಿಮ್ಮ ದ್ವಿಚಕ್ರ ವಾಹನಕ್ಕೆ ಕ್ಯಾಶ್ ಲೆಸ್ ದುರಸ್ತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಳ್ಳತನ, ಹಾನಿ, ಬೆಂಕಿ ಅವಘಡ, ಗಲಭೆ, ಪ್ರವಾಹ ಮತ್ತು ಉಗ್ರರ ದಾಳಿಗೆ ವಾಹನ ಸಿಕ್ಕರೆ ನಿಮಗೆ ವಿಮೆ ಲಾಭ ದೊರೆಯುತ್ತದೆ. ಆದರೆ ಸಾಮಾನ್ಯ ದುರಸ್ತಿಗೆ ಯಾವ ಹಣ ನೀಡಲಾಗುವುದಿಲ್ಲ.
ನಿವೃತ್ತಿ ಯೋಜನೆಗಳು
ಯಾವುದೇ ವ್ಯಕ್ತಿ ತನ್ನ ನಿವೃತ್ತಿ ಜೀವನವನ್ನು ಸುಂದರವಾಗಿ ಕಳೆಯಲು ಕನಸು ಕಂಡಿರುತ್ತಾನೆ. ನಿವೃತ್ತಿ ನಂತರದ ಯೋಜನೆಗಳನ್ನು ಈಗಲೇ ಹಾಕಿಕೊಂಡು ಉಳಿತಾಯ ಹಣವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತ ಸಾಗುವುದು ಉತ್ತಮ.
80ಸಿಸಿಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ ಮತ್ತು 1.5 ಲಕ್ಷ ರು. ವರೆಗೆ ಈ ವಿಮೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ತೆರಿಗೆ ವಿನಾಯಿತಿಯೂ ಇಲ್ಲಿ ದೊರೆಯುತ್ತದೆ. ವಿವಿಧ ಯೋಜನೆಗಳು ಲಭ್ಯವಿದ್ದು ಉತ್ತಮವಾದನ್ನು ಆರಿಸಿಕೊಳ್ಳಬಹುದು. ಆದರೆ, ವಿವಿಧ ಯೋಜನೆ, ಪ್ರೀಮಿಯಂ, ಸೌಲಭ್ಯ, ವೆಚ್ಚಗಳನ್ನು ತುಲನೆ ಮಾಡಿ ನಂತರ ಕೊಳ್ಳುವುದು ಉತ್ತಮ.
ವೈಯಕ್ತಿಕ ಅಪಘಾತ ವಿಮೆ
ಅಪಘಾತ ಸಂಭವಿಸಿ ಸಾವು ಅಥವಾ ಅಂಗವೈಕಲ್ಯ ಉಂಟಾದರೆ ಈ ವಿಮೆ ನಿಮ್ಮನ್ನು ಕಾಪಾಡುತ್ತದೆ. ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಎರಡನ್ನು ನೀಡುತ್ತದೆ. ಅನಾರೋಗ್ಯದ ಕಾರಣ ಅಂಗವೈಕಲ್ಯವಾದರೆ ವಿಮಾ ಪರಿಹಾರ ಸಿಗುವುದಿಲ್ಲ. ಅಪಘಾತದ ಮೂಲಕ ಅಂಗವೈಕಲ್ಯ ಉಂಟಾದರೆ ವಿಮಾ ಪರಿಹಾರಕ್ಕೆ ವ್ಯಕ್ತಿ ಭಾಜನನಾಗುತ್ತಾನೆ.