ಈ ಯೋಜನೆ ಮೂಲಕ 6 ತಿಂಗಳಲ್ಲಿ ರೂ. 5 ಕೋಟಿ ಗಳಿಸಬಹುದು. ಹೇಗೆ ಗೊತ್ತಾ..?
ಕೇಂದ್ರ ಸರಕಾರದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಇಲಾಖೆ ಇತ್ತೀಚೆಗೆ ತನ್ನ ಪುರಸ್ಕಾರ ಯೋಜನೆಯನ್ನು ಪರಿಷ್ಕರಿಸಿದ್ದು, ಬಹುಮಾನದ ಮೊತ್ತವನ್ನು 5 ಕೋಟಿ ರೂಪಾಯಿಗಳಿಗೆ ಏರಿಸಿದೆ.
ಕೋಟ್ಯಾಧೀಶರಾಗಬೇಕೆಂಬ ಬಯಕೆ ಯಾರಿಗಿರಲ್ಲ ಹೇಳಿ? ನಿಮಗೂ ಇಂಥದೊಂದು ಆಸೆ ಇರಲೂಬಹುದು. ಆದರೆ ಈಗ ಆ ಒಂದು ಬಯಕೆಯನ್ನು ಈಡೇರಿಸಿಕೊಳ್ಳುವ ಅವಕಾಶ ಬಂದೊದಗಿದೆ.. ಅದೂ ಸುಲಭವಾಗಿ.
ತೆರಿಗೆ ವಂಚಕರು ಹಾಗೂ ಕಾಳಧನ ಸಂಪತ್ತನ್ನು ಹೊಂದಿರುವವರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡುವ ಮೂಲಕ ಈ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಹೌದು.. ಇಂಥದೊಂದು ಅವಕಾಶವನ್ನು ಈಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಕಲ್ಪಿಸಿದೆ. ಇದನ್ನು ಬಳಸಿಕೊಂಡಲ್ಲಿ ಶೀಘ್ರವಾಗಿ ನೀವೂ ಶ್ರೀಮಂತರಾಗಬಹುದು. ಇದು ಒಂದು ರೀತಿ ದೇಶ ಸೇವೆಯೂ ಹೌದು. ಇದೆಲ್ಲ ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ..
ಬಹುಮಾನದ ಮೊತ್ತ ರೂ. 5 ಕೋಟಿ
ಕೇಂದ್ರ ಸರಕಾರದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಇಲಾಖೆ ಇತ್ತೀಚೆಗೆ ತನ್ನ ಪುರಸ್ಕಾರ ಯೋಜನೆಯನ್ನು ಪರಿಷ್ಕರಿಸಿದ್ದು, ಬಹುಮಾನದ ಮೊತ್ತವನ್ನು 5 ಕೋಟಿ ರೂಪಾಯಿಗಳಿಗೆ ಏರಿಸಿದೆ. ಇಷ್ಟು ದೊಡ್ಡ ಮೊತ್ತದ ಬಹುಮಾನ ನಿಮ್ಮದಾಗಬೇಕಾದರೆ, ಆದಾಯ ತೆರಿಗೆ ವಂಚಕರು ಹಾಗೂ ಕಾಳಧನವನ್ನು ಸಂಗ್ರಹಿಸಿರುವವರ ಬಗ್ಗೆ ಖಚಿತ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ. ಆದರೆ ಸುಳ್ಳು ಮಾಹಿತಿ ನೀಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸಹ ನೆನಪಿರಲಿ.
ಆದಾಯ ತೆರಿಗೆ ಮಾಹಿತಿದಾರರ ಪುರಸ್ಕಾರ ಯೋಜನೆ - 2018
Income-Tax Informants Reward Scheme 2018: (ITI) ಎಂದು ಇಂಗ್ಲಿಷ್ನಲ್ಲಿ ಕರೆಯಲಾಗುವ ಆದಾಯ ತೆರಿಗೆ ಮಾಹಿತಿದಾರರ ಪುರಸ್ಕಾರ ಯೋಜನೆಯನ್ನು ಕೇಂದ್ರ ಸರಕಾರ ಏಪ್ರಿಲ್ 24, 2018 ರಿಂದ ಜಾರಿಗೆ ತಂದಿದೆ. ಬಚ್ಚಿಡಲಾದ ಆದಾಯ ಹಾಗೂ ಆದಾಯ ತೆರಿಗೆ ವಂಚನೆ ಕುರಿತಾದ ಕಾಳಧನ ಕಾಯ್ದೆ-2015 ಹಾಗೂ ತೆರಿಗೆ ವಸೂಲು ಕಾಯ್ದೆ-2015 ರ ಅನ್ವಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರೆ ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆ ಇದಾಗಿದೆ.
ಬೇನಾಮಿ ವ್ಯವಹಾರಗಳ ಮಾಹಿತಿದಾರರ ಪುರಸ್ಕಾರ ಯೋಜನೆ- 2018
ಇದರ ಜೊತೆಗೆ 'ಬೇನಾಮಿ ವ್ಯವಹಾರಗಳ ಮಾಹಿತಿದಾರರ ಪುರಸ್ಕಾರ ಯೋಜನೆ- 2018' (Benami Transactions Informants Reward Scheme 2018) ಎಂಬ ಇನ್ನೊಂದು ಯೋಜನೆ ಸಹ ಜಾರಿಯಾಗಿದೆ. ಇದು ಬೇನಾಮಿ ಆಸ್ತಿ ಹಾಗೂ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ಯೋಜನೆಯಾಗಿದೆ.
ಐಟಿಐ ಸ್ಕೀಂ ಅಡಿ ಕಪ್ಪು ಹಣದ ಮಾಹಿತಿ ನೀಡುವವರಿಗೆ 5 ಕೋಟಿ ರೂಪಾಯಿವರೆಗೆ ಬಹುಮಾನ ಹಾಗೂ ಬಿಟಿಐ ಸ್ಕೀಂನಲ್ಲಿ 1 ಕೋಟಿ ರೂಪಾಯಿವರೆಗೆ ಬಹುಮಾನ ನೀಡಲಾಗುತ್ತದೆ.
ಸರ್ಕಾರಕ್ಕೆ ಯಾರು, ಹೇಗೆ ಮಾಹಿತಿ ನೀಡಬಹುದು?
ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಸರಕಾರಕ್ಕೆ ಮಾಹಿತಿ ನೀಡಲು ಅವಕಾಶವಿದೆ. 5 ಕೋಟಿ ರೂ. ಅಥವಾ ಅದಕ್ಕೂ ಮೀರಿದ ಆದಾಯ ತೆರಿಗೆ ವಂಚನೆ ಹಾಗೂ 1 ಕೋಟಿ ರೂಪಾಯಿವರೆಗಿನ ಬೇನಾಮಿ ಸ್ಥಿರಾಸ್ತಿ, ಚರಾಸ್ತಿಗಳ ನಿರ್ದಿಷ್ಟ ಮಾಹಿತಿ ನೀಡಬಹುದು. ಆದರೆ ಈ ಎಲ್ಲ ಆರೋಪಗಳನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ನೀಡುವುದು ಅಗತ್ಯ.
ಆದಾಯ ತೆರಿಗೆ ವಂಚನೆ ಅಥವಾ ಕಪ್ಪುಹಣದ ಬಗ್ಗೆ ಮಾಹಿತಿ ಇರುವವರು ಡೈರೆಕ್ಟರ್ ಜನರಲ್ ಆಫ್ ಇನ್ಕಮ್ ಟ್ಯಾಕ್ಸ್ (ಇಂಟೆಲಿಜೆನ್ಸ್) ಅವರನ್ನು ಸಂಪರ್ಕಿಸಬಹುದು. ಹಾಗೆಯೇ ಬಿಟಿಐ ಸ್ಕೀಂನಡಿ ಮಾಹಿತಿ ನೀಡಬಯಸುವವರು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು.
ಎರಡೂ ಸ್ಕೀಂನಲ್ಲಿ ಮಾಹಿತಿ ನೀಡುವವರು ನಿರ್ದಿಷ್ಟ ಫಾರ್ಮನಲ್ಲಿ ವಿವರಗಳನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಬೇಕು. ಅಲ್ಲದೆ ಈ ಫಾರ್ಮನಲ್ಲಿ ಮಾಹಿತಿ ನೀಡುವವರು ತಮ್ಮ ವೈಯಕ್ತಿಕ ವಿವರಗಳಾದ ಹೆಸರು, ತಂದೆಯ ಹೆಸರು, ವಿಳಾಸ, ಆಧಾರ ಸಂಖ್ಯೆ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಬೇಕಾಗುತ್ತದೆ.
ಇದರೊಂದಿಗೆ ತೆರಿಗೆ ವಂಚಕರು ಹಾಗೂ ಕಪ್ಪುಹಣ ಸಂಗ್ರಹಿಸಿರುವವರ ಹೆಸರು, ವಿಳಾಸ, ಅವರು ಹೊಂದಿರುವ ಆಸ್ತಿಗಳ ಮಾಹಿತಿ ಮುಂತಾದ ವಿವರಗಳನ್ನು ಸಲ್ಲಿಸಬೇಕಿರುತ್ತದೆ.
ಬಹುಮಾನ ಯೋಜನೆ ಶ್ಲಾಘನೀಯ- ಕರಣ್ ಬಾತ್ರಾ
ಸರಕಾರದ ಈ ಸ್ಕೀಂ ನ ಪ್ರಯೋಜನಗಳ ಬಗ್ಗೆ ಚಾರ್ಟರ್ಡ್ಕ್ಲಬ್ ಡಾಟ್ ಕಾಂ ನ ಸಂಸ್ಥಾಪಕ ಹಾಗೂ ಸಿಇಓ ಕರಣ್ ಬಾತ್ರಾ ಹೇಳುವುದು ಹೀಗೆ;
ತೆರಿಗೆ ವಂಚಕರ ಪತ್ತೆಗೆ ಬಹುಮಾನ ಯೋಜನೆ ಶ್ಲಾಘನೀಯ. ಮಾಹಿತಿ ನೀಡುವುದರಿಂದ ಬಹುಮಾನ ಸಿಗುವುದರಿಂದ ಜನ ಮಾಹಿತಿ ನೀಡಲು ಮುಂದಾಗುತ್ತಾರೆ. ಯಾರು, ಯಾವಾಗ, ಎಲ್ಲೆಲ್ಲಿ, ಹೇಗೆ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರುತ್ತದೆ. ಸಾಮಾನ್ಯ ಜನರಿಗೆ ಬಹುಮಾನ ನೀಡುವ ಯೋಜನೆಯಿಂದ ಈ ಮಾಹಿತಿ ಇಲಾಖೆಗೆ ತಿಳಿಯಲು ಸಹಕಾರಿಯಾಗುತ್ತದೆ. ಇದರಿಂದ ಖಂಡಿತವಾಗಿಯೂ ಸರಕಾರದ ಆದಾಯ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುತ್ತದೆ.
ಗುರುತು ಬಹಿರಂಗವಾದರೆ ಹೇಗೆ ಎಂಬ ಆತಂಕ!
ಸರಕಾರದ ಯೋಜನೆಯಿಂದ ವಾಸ್ತವದಲ್ಲಿ ಪ್ರಯೋಜನವಾಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಗದದ ಮೇಲೆ ಈ ಯೋಜನೆ ಅದ್ಭುತವಾಗಿ ಗೋಚರಿಸುತ್ತದೆ. ಆದರೆ ಪ್ರಾಯೋಗಿಕವಾಗಿ ಯೋಜನೆ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ ಯೋಜನೆಯ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಮಾಹಿತಿ ಇದ್ದರೂ, ಒಂದು ವೇಳೆ ತಮ್ಮ ಗುರುತು ಬಹಿರಂಗವಾದರೆ ಹೇಗೆ ಎಂಬ ಆತಂಕವೂ ಜನರಲ್ಲಿದೆ. ಆದ್ದರಿಂದ ಸರಕಾರ ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಹಾಗೂ ಮಾಹಿತಿ ನೀಡುವವರ ವಿವರಗಳನ್ನು ಗುಪ್ತವಾಗಿಡುವ ಬಗ್ಗೆ ವಿಶ್ವಾಸ ಮೂಡಿಸುವ ಕ್ರಮ ಕೈಗೊಳ್ಳಬೇಕು ಎಂದು ಕರಣ್ ಬಾತ್ರಾ ಹೇಳುತ್ತಾರೆ.
ಎಷ್ಟು ಬಹುಮಾನ ಸಿಗಬಹುದು?
ಮಾಹಿತಿ ಹಾಗೂ ಆಸ್ತಿಗಳ ಮೌಲ್ಯವನ್ನಾಧರಿಸಿ ಸಿಬಿಡಿಟಿ, ಮಧ್ಯಂತರ ಹಾಗೂ ಅಂತಿಮ ಹೀಗೆ ಎರಡು ಹಂತಗಳಲ್ಲಿ ಬಹುಮಾನ ನೀಡುತ್ತದೆ.
ಯಾವೆಲ್ಲ ಮಾಹಿತಿಗೆ ಎಷ್ಟು ಬಹುಮಾನ?
1. ಕಾಳಧನ ಕಾಯ್ದೆ- 2015ರ ಅನ್ವಯ ಬಚ್ಚಿಟ್ಟ ವಿದೇಶಿ ಆಸ್ತಿ ಅಥವಾ ಆದಾಯ:
ಈ ಕುರಿತು ಮಾಹಿತಿ ನೀಡುವವರಿಗೆ 50 ಲಕ್ಷ ರೂಪಾಯಿ ಮಧ್ಯಂತರ ಬಹುಮಾನ ನೀಡಲಾಗುತ್ತಿದ್ದು, ಅಂತಿಮವಾಗಿ 5 ಕೋಟಿ ರೂಪಾಯಿವರೆಗೆ ಬಹುಮಾನ ನೀಡಲು ಅವಕಾಶವಿದೆ. ಆದರೂ ಅಂತಿಮವಾಗಿ ಹೆಚ್ಚುವರಿ ತೆರಿಗೆಯ ಶೇ. 10 ರಷ್ಟನ್ನು ಬಹುಮಾನವಾಗಿ ನೀಡಲಾಗುತ್ತದೆ.
2. ಆದಾಯ ತೆರಿಗೆ ಕಾಯ್ದೆ- 2015ರಡಿ ಬಚ್ಚಿಟ್ಟ ಆದಾಯ ಹಾಗೂ ಸಂಪತ್ತು:
ಇದರಲ್ಲಿ ಮಧ್ಯಂತರವಾಗಿ 5 ಲಕ್ಷ ರೂಪಾಯಿ ಹಾಗೂ ಅಂತಿಮವಾಗಿ 50 ಲಕ್ಷ ರೂಪಾಯಿ ಬಹುಮಾನ ನೀಡಲು ಅವಕಾಶವಿದೆ. ಕೊನೆಯ ಹಂತದಲ್ಲಿ ಸರಕಾರಕ್ಕೆ ಬರುವ ಹೆಚ್ಚುವರಿ ತೆರಿಗೆಯ ಶೇ. 5ರಷ್ಟನ್ನು ಬಹುಮಾನವಾಗಿ ನೀಡಲಾಗುವುದು.
3. ಇನ್ಕಮ್ ಟ್ಯಾಕ್ಸ್ ಕಾಯ್ದೆ 1961ರ ಸೆಕ್ಷನ್ 132ರ ಅನ್ವಯ ಲೆಕ್ಕವಿಡದ ಅಥವಾ ಬಚ್ಚಿಟ್ಟ 1 ಕೋಟಿಗೂ ಅಧಿಕ ಮೊತ್ತದ ನಗದು:
ಇದರಡಿ ಮಧ್ಯಂತರ ಗರಿಷ್ಠ 15 ಲಕ್ಷ ರೂಪಾಯಿ ಹಾಗೂ ಅಂತಿಮವಾಗಿ ಗರಿಷ್ಠ 1 ಕೋಟಿ ರೂಪಾಯಿವರೆಗೆ ಬಹುಮಾನ ನೀಡಬಹುದು. ಅಂತಿಮವಾಗಿ ಸರಕಾರಕ್ಕೆ ಸಂದಾಯವಾಗುವ ಹೆಚ್ಚುವರಿ ತೆರಿಗೆಯ ಶೇ. 5 ರಷ್ಟನ್ನು ನೀಡಲಾಗುವುದು.
ಪರಿಶೀಲನೆ ಬಳಿಕ 6 ತಿಂಗಳೊಳಗೆ ಅಂತಿಮ ಬಹುಮಾನ
ಮಾಹಿತಿ ನೀಡಿದ ನಂತರ ವಿವರಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ ನಾಲ್ಕು ತಿಂಗಳಲ್ಲಿ ಮಧ್ಯಂತರ ಬಹುಮಾನ ಹಾಗೂ ವಂಚನೆ, ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡ ಆರು ತಿಂಗಳೊಳಗೆ ಅಂತಿಮ ಬಹುಮಾನವನ್ನು ನೀಡಲಾಗುವುದು.
ತೆರಿಗೆ ವಂಚಕರು ಹಾಗೂ ಕಾಳಧನಿಕರ ಬಗ್ಗೆ ಮಾಹಿತಿ ನೀಡಿ ದೇಶದ ಅಭಿವೃದ್ಧಿಯಲ್ಲಿ ತಮ್ಮ ಕಾಣಿಕೆ ನೀಡುವ ಮೂಲಕ, ಸರಕಾರದಿಂದ ಬಹುಮಾನ ಪಡೆದು ಶ್ರೀಮಂತರಾಗುವ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ನೀವೂ ಭಾಗ್ಯವಂತರಾಗಬಹುದು.