ಫೋರ್ಬ್ಸ್ ಪಟ್ಟಿಯಲ್ಲಿನ ಭಾರತೀಯ ಟಾಪ್ 10 ಸಿರಿವಂತರು ಯಾರು?
ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿ ಅಗ್ರ ಸ್ಥಾನದಲ್ಲಿದ್ದು, ಒಟ್ಟು 22.7 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಈ ಬಾರಿಯೂ ಬಿಲ್ ಗೇಟ್ಸ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. 100 ಜನ ಸಿರಿವಂತ ಭಾರತೀಯರಲ್ಲಿ ಟಾಪ್ ಟೆನ್ ಶ್ರೀಮಂತ ಕುಬೇರರ ಮಾಹಿತಿ ಇಲ್ಲಿದೆ.
1. ಮುಖೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಮತ್ತೊಮ್ಮೆ ಹೊರಹೊಮ್ಮಿದ್ದು, ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ೯ನೇ ಬಾರಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಒಟ್ಟು 22.7 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ನಂಬರ್ ಒನ್ ಪಟ್ಟ ಅಲಂಕರಿಸಿದ್ದಾರೆ.
ಮುಕೇಶ್ ಅಂಬಾನಿ ಕಳೆದ ವರ್ಷ 18.9 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದರು. ಆದರೆ ಕಳೆದ 12 ತಿಂಗಳಲ್ಲಿ ಶೇ. 21 ರಷ್ಟು ಆಸ್ತಿ ಹೆಚ್ಚಳದಿಂದಾಗಿ ಮುಕೇಶ್ ಅಂಬಾನಿ ಆಸ್ತಿ 1.50 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಕೇಶ್ ಅಂಬಾನಿ ಇದೇ ಸಪ್ಟೆಂಬರ್ ನಲ್ಲಿ ರಿಲಾಯನ್ಸ್ ಜಿಯೋ ಸೇವೆಯನ್ನು ಆರಂಭಿಸಿದ್ದರು. ಈ ಮೂಲಕ ಏರ್ಟೆಲ್ ಇನ್ನಿತರ ಕಂಪನಿಗಳಿಗೆ 12 ಸಾವಿರ ಕೋಟಿ ರೂ. ನಷ್ಟವಾಗಿತ್ತು.
2. ದಿಲೀಪ್ ಸಾಂಘ್ವಿ
ಭಾರತದ ಔಷಧಿಯ ಉದ್ಯಮಿ ಫಾರ್ಮಸಿ ಕಂಪೆನಿಯ ದಿಲೀಪ್ ಸಾಂಘ್ವಿ 2ನೇ ಸ್ಥಾನದಲ್ಲಿದ್ದು, 16.9 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಷೇರುಗಳಲ್ಲಿ 1.1 ಬಿಲಿಯನ್ ಡಾಲರ್ ಕುಸಿತದಿಂದಾಗಿ ಸಂಪತ್ತಿನಲ್ಲಿ ಇಳಿಕೆಯಾಗಿದೆ.
3. ಹಿಂದುಜಾ ಸಹೋದರರು
ಮೂರನೇ ಸ್ಥಾನದಲ್ಲಿ ಹಿಂದುಜಾ ಸಹೋದರರು ಇದ್ದು, 15.2 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. ಕಳೆದ ವರ್ಷ 14.8 ಬಿಲಿಯನ್ ಆಸ್ತಿ ಹೊಂದಿದ್ದರು. ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ಈ ನಾಲ್ಕು ಸಹೋದರರು ಹಿಂದೂಜಾ ಗ್ರೂಪ್ ನಿಯಂತ್ರಿಸುತ್ತಿದ್ದಾರೆ. ಲಾರಿ, ಲೂಬ್ರಿಕೆಂಟ್ಸ್, ಬ್ಯಾಂಕಿಂಗ್ ಮತ್ತು ಕೇಬಲ್ ದೂರದರ್ಶನ ಇತ್ಯಾದಿ ವ್ಯವಹಾರಗಳನ್ನು ಹಿಂದುಜಾ ಗ್ರೂಪ್ ನಡೆಸುತ್ತಿದೆ.
4. ಅಜೀಂ ಪ್ರೇಮ್ ಜಿ
ಭಾರತದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಪ್ರೇಮ್ ಜಿ ಹೊರಹೊಮ್ಮಿದ್ದಾರೆ. 15 ಬಿಲಿಯನ್ ಆಸ್ತಿಯನ್ನು ಹೊಂದಿದ್ದು, ಏಷಿಯಾದ ಅತಿದೊಡ್ಡ ದಾನಿಯೆನಿಸಿದ್ದಾರೆ.
ವಿಪ್ರೊ ಸಂಸ್ಥೆಯನ್ನು ಕಳೆದ 5 ದಶಕಗಹಳಿಂದ ನಡೆಸುತ್ತಾ ಬಂದಿದ್ದು, ಇದು ಭಾರತದ ಮೂರನೇ ಅತಿದೊಡ್ಡ ಹೊರಗುತ್ತಿಗೆ (outsourcer)ಕಂಪನಿಯಾಗಿದೆ.
ಅಜೀಂ ಪ್ರೇಮ್ ಜಿ ಯವರಿಗೆ ೨೦೦೫ರಲ್ಲಿ ಪದ್ಮ ಭೂಷಣ ಹಾಗೂ 2011ರಲ್ಲಿ ಪದ್ಮ ವಿಭೂಷಣ ಪುರಷ್ಕಾರ ಲಭಿಸಿದೆ.
5. ಪಲ್ಲೊಂಜಿ ಮಿಸ್ರ್ತಿ
13.9 ಬಿಲಿಯನ್ ಸಂಪತ್ತಿನೊಂದಿಗೆ ಪಲ್ಲೊಂಜಿ ಮಿಸ್ರ್ತಿ ಐದನೇ ಸ್ಥಾನದಲ್ಲಿದ್ದಾರೆ. ಇವರು ಐರಿಷ್ ಭಾರತೀಯರಾಗಿದ್ದು, ಭಾರತೀಯ ನಿರ್ಮಾಣ ಉದ್ಯಮಿಯಾಗಿದ್ದಾರೆ. ಪ್ರಸ್ತುತ ಶಪೂರ್ಜಿ ಪಲ್ಲೊಂಜಿ ಗ್ರೂಪಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಭಾರತದ ಕಾರೈಕಲ್ ಬಂದರಿನ ಶೇ. 51ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಸಮಾಲೋಚನೆ ಶಪೂರ್ ಗೆ ಇದೆ.
6. ಲಕ್ಷ್ಮೀ ಮಿತ್ತಲ್
ಭಾರತೀಯ ಉಕ್ಕು ಉದ್ಯಮಿ ಆಗಿರುವ ಲಕ್ಷ್ಮೀ ಮಿತ್ತಲ್ ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲೆಸಿದ್ದಾರೆ. ಒಟ್ಟು 12.5 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ.
ವಿಶ್ವದ ಅತಿದೊಡ್ಡ ಉಕ್ಕು ತಯಾರಿಕಾ ಕಂಪನಿಯಾದ ಆರ್ಸೆಲರ್ ಮಿತ್ತಲ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. ಆರ್ಸೆಲರ್ ಮಿತ್ತಲ್ ನಲ್ಲಿ ಶೆ. 38ರಷ್ಟು ಮತ್ತು ಕ್ವೀನ್ಸ್ ಪಾರ್ಕ್ ರೇಂಜರ್ಸ್ ನಲ್ಲಿ ಶೇ. 34ರಷ್ಟು ಪಾಲನ್ನು ಹೊಂದಿದ್ದಾರೆ.
2008ರಲ್ಲಿ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿದೆ.
7. ಗೋದ್ರೆಜ್ ಕುಟುಂಬ
ಆದಿ ಗೋದ್ರೆಜ್ ಭಾರತೀಯ ಉದ್ಯಮಿ ಮತ್ತು ಬಿಸಿನೆಸ್ ಮೆನ್. ಇವರು ಗೋದ್ರೆಜ್ ಕುಟುಂಬದ ಮುಖ್ಯಸ್ಥರು ಹಾಗೂ ಗೋದ್ರೆಜ್ ಗ್ರೂಪ್ ನ ಅಧ್ಯಕ್ಷರು. ಭಾರತದ ಏಳನೇ ಶ್ರೀಮಂತ ಹಾಗೂ ಏಷಿಯಾದ 15ನೇ ಶ್ರೀಮಂತ ವ್ಯಕ್ತಿ.
1987ರಲ್ಲಿ ಗೋದ್ರೆಜ್ ಗ್ರೂಪ್ ಪಾರ್ಸಿ ಕುಟುಂಬದ ಅರ್ದೆಶಿರ್ ಗೋದ್ರೆಜ್ ಮತ್ತು ಫಿರೋಜ್ ಶಾ ಗೋದ್ರೆಜ್ ಸಹೊದರರಿಂದ ಪ್ರಾರಂಭಿಸಲಾಯಿತು.
ಗೋದ್ರೆಜ್ ಗ್ರೂಪ್ 119 ವರ್ಷಗಳ ಇತಿಹಾಸ ಹೊಂದಿದ್ದು, ಗ್ರಾಹಕ ಬಳಕೆಯ ಸರಕುಗಳ ಸೇವೆಯನ್ನು ಒದಗಿಸುತ್ತಿದೆ. ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿದೆ.
8. ಶಿವ ನಾಡಾರ್
ಶಿವ ನಾಡಾರ್ ಭಾರತೀಯ ಉದ್ಯಮಿ ಮತ್ತು ಸಮಾಜಸೇವಕ. ಎಚ್ಸಿಎಲ್ ಮತ್ತು ಶಿವ ನಾಡಾರ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 11.5 ಬಿಲಿಯನ್.
2008ರಲ್ಲಿ ಪದ್ಮ ಭೂಷಣ ಪಾರಿತೋಷಕ ಲಭಿಸಿದೆ.
ಫೆಬ್ರವರಿಯಲ್ಲಿ ವೋಲ್ವೋ ಐಟಿ ಹೊರಗುತ್ತಿಗೆ ಘಟಕವನ್ನು 130 ಮಿಲಿಯನ್ ಗೆ ಸ್ವಾಧೀನ ಪಡಿಸಿಕೊಂಡಿತ್ತು. ಏಪ್ರಿಲ್ ನಲ್ಲಿ ಗೋದ್ರೆಜ್ ಕುಟುಂಬದಿಂದ ನಿಯಂತ್ರಿಸಲ್ಪಡುವ ಮುಂಬೈ ಮೂಲದ ಜಿಯೋಮೆಟ್ರಿಕ್ ಸಾಪ್ಟವೇರ್ ಉದ್ಯಮವನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿತ್ತು.
9. ಕುಮಾರ್ ಬಿರ್ಲಾ
8.8 ಬಿಲಿಯನ್ ಸಂಪತ್ತಿನೊಂದಿಗೆ 9ನೇ ಭಾರತದ ಶ್ರೀಮಂತರಾಗಿದ್ದು, ಕುಮಾರ್ ಮಂಗಳಂ ಆದಿತ್ಯ ಬಿರ್ಲಾ ಗ್ರೂಪ್ ನ ಪ್ರಸ್ತುತ ಚೇರಮನ್ ಆಗಿದ್ದಾರೆ.
ಇವರು ತಮ್ಮ ತಂದೆಯ ನಿಧನದ ನಂತರ 1995ರಲ್ಲಿ 28 ವಯಸ್ಸಿನಲ್ಲಿ ಬಿರ್ಲಾ ಗ್ರೂಪಿನ ಅಧ್ಯಕ್ಷರಾದರು. 1995ರಲ್ಲಿದ್ದ 2 ಬಿಲಿಯನ್ ಡಾಲರ್ ವಹಿವಾಟನ್ನು ಇಂದು 40 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿದ್ದು, ಕುಮಾರ್ ಮಂಗಳಂ ಬಾರತ ಮತ್ತು ಜಾಗತಿಕವಾಗಿ 17 ವರ್ಷಗಳಲ್ಲಿ 26ಸ್ವಾಧೀನಗಳನ್ನು ಮಾಡಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ ವಾರ್ಷಿಕ ಸಂಭಾವನೆ 49.62 ಕೋಟಿ.
2016ರಲ್ಲಿ 'ಸಿಇಒ ಆಫ್ ದಿ ಇಯರ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.
10. ಸೈರಸ್ ಪೂನಾವಾಲಾ
ಇವರು ಪೂನಾವಾಲಾ ಗ್ರೂಪಿನ ಅಧ್ಯಕ್ಷರು. ಭಾರತೀಯ ಬಯೊಟೆಕ್ ಕಂಪನಿಯಾದ ಸೇರಮ್ (ರಕ್ತಸಾರ) ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೂಲಕ ಮಕ್ಕಳ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಸೈರಸ್ ಪೂನಾವಾಲಾ ಭಾರತದ 10ನೇ ಸಿರಿವಂತ ಹಾಗೂ ವಿಶ್ವದ 129ನೇ ಸಿರಿವಂತ ಎನಿಸಿದ್ದಾರೆ.
2005ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.