ಸಿಹಿಸುದ್ದಿ! ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ರದ್ದು ಇಲ್ಲ
ಮನೆ ಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಮತ್ತು ಸೀಮೆಎಣ್ಣೆ ಸಬ್ಸಿಡಿ ರದ್ದುಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ.
ಬಡವರು ಮತ್ತು ಜನಸಾಮಾನ್ಯರು ಬಳಸುತ್ತಿರುವ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಗೆ ನೀಡುತ್ತಿರುವ ಸಹಾಯಧನ ಮುಂದುವರೆಯಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಕಳೆದ ವಾರ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಇರುವುದಿಲ್ಲ ಹಾಗೂ ಪ್ರತಿ ತಿಂಗಳು ರೂ. 4 ಏರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ತದನಂತರ ಕೇಂದ್ರದ ಈ ನಿರ್ಧಾರದ ವಿರುದ್ಧ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?
ರದ್ದು ಪ್ರಸ್ತಾಪ ಇಲ್ಲ
ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಬೆಳವಣಿಗೆಗಳನ್ನು ಮನಗಂಡ ಸರ್ಕಾರ ಇದೀಗ ತನ್ನ ನಿಲುವನ್ನು ಬದಲಿಸಿದೆ. ಮನೆ ಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಮತ್ತು ಸೀಮೆಎಣ್ಣೆ ಸಬ್ಸಿಡಿ ರದ್ದುಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಇದು ಈ ಹಿಂದಿನಂತೆಯೇ ಮುಂದುವರೆಯಲಿದೆ ಎಂದು ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೊಂದಿಗೆ ಮಾತುಕತೆ
ದೇಶದ ಈಶಾನ್ಯ ರಾಜ್ಯಗಳಲ್ಲಿರುವ ಅಡುಗೆ ಅನಿಲ(ಎಲ್ಪಿಜಿ) ಬಿಕ್ಕಟ್ಟನ್ನು ನಿವಾರಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ನೈಸರ್ಗಿಕ ಅನಿಲ ಪೂರೈಕೆಗಾಗಿ ಚಿತ್ತಗಾಂಗ್ನಿಂದ ತ್ರಿಪುರಾಕ್ಕೆ ಪೈಪ್ಲೈನ್ ಅಳವಡಿಸಲು ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಸಿಲಿಂಡರ್ ಬೆಲೆ 4 ಏರಿಕೆ
ಕಳೆದ ವಾರದ ಸರ್ಕಾರ ಆದೇಶದಂತೆ ಬರುವ ಮಾರ್ಚ್ 2018ರ ನಂತರ ಪ್ರತಿ ತಿಂಗಳು ಸಿಲಿಂಡರ್ ದರವನ್ನು ರೂ. 4ರಂತೆ ಏರಿಕೆ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕನುಗುಣವಾಗಿ ತೈಲ ಪೂರೈಕೆ ಸಂಸ್ಥೆಗಳಿಗೆ ಸರ್ಕಾರ ಸೂಚನೆ ರವಾನಿಸಲಾಗಿತ್ತು. ಎಲ್ಪಿಜಿ ಬೆಲೆ ಏರಿಕೆ ಸಿಲಿಂಡರ್ ತೂಕ ಆಧರಿಸಿ ನಿರ್ಧರಿಸಲಾಗುತ್ತದೆ. ರೂ. 4 ಏರಿಕೆ 14.2 ಕೆ.ಜಿ ತೂಕದ ಗ್ಯಾಸ್ ಗೆ ಅನ್ವಯವಾಗುತ್ತದೆ ಎಂದು ತಿಳಿಸಿತ್ತು.
ಸಬ್ಸಿಡಿ ರದ್ದಾದರೆ ಹೊರೆ
ಒಂದು ವೇಳೆ ಎಲ್ಪಜಿ ಸಬ್ಸಿಡಿ ರದ್ದಾಗಿ, ಪ್ರತಿ ತಿಂಗಳು ನಾಲ್ಕು ಏರಿಕೆ ಮಾಡಿದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಭಾರೀ ಹೊರೆಯಾಗುತ್ತಿತ್ತು. ಈಗಾಗಲೇ ಸಿಲಿಂಡರ್ ಗೆ ರೂ. 2 ದರದಂತೆ ಹತ್ತು ಬಾರಿ ಬೆಲೆ ಏರಿಸಲಾಗಿದೆ. ಕಳೆದ ವಾರ ರೂ. 4 ಏರಿಸುವಂತೆ ಆದೇಶ ಹೊರಡಿಸಿದ್ದು, ಜನಸಾಮಾನ್ಯರನ್ನು ಕೆರಳಿಸಿತ್ತು. ಈಗಾಗಲೇ ಜಿಎಸ್ಟಿ ಜಾರಿಯಿಂದಾಗಿ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ ಸಿಲಿಂಡರ್ ಮೇಲಿನ ಸಹಾಯಧನ ರದ್ದುಪಡಿಸಿದರೆ ಬಡವರಿಗೆ ಇನ್ನಷ್ಟು ಹೊರೆಯಾಗಲಿದೆ. ಬಡಜನರ ದಿನನಿತ್ಯದ ಖರ್ಚುಗಳು ಏರಿಕೆಯಾಗಲಿವೆ.