ಜಿಎಸ್ಟಿ ಗೆ ಒಂದು ವರ್ಷ: ಯಶಸ್ಸು ಮತ್ತು ವೈಫಲ್ಯಗಳೇನು..?
ಸ್ವಾತಂತ್ರ್ಯೋತ್ತರ ಭಾರತದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಜಾರಿಗೊಳಿಸಲಾದ ಜಿಎಸ್ಟಿ (Goods and Services Tax) ತೆರಿಗೆ ಪದ್ಧತಿಗೆ ಮೊನ್ನೆ ಜುಲೈ 1ರಂದು ಭರ್ತಿ ಒಂದು ವರ್ಷ ಪೂರ್ಣಗೊಂಡಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಜಾರಿಗೊಳಿಸಲಾದ ಜಿಎಸ್ಟಿ (Goods and Services Tax) ತೆರಿಗೆ ಪದ್ಧತಿಗೆ ಮೊನ್ನೆ ಜುಲೈ 1ರಂದು ಭರ್ತಿ ಒಂದು ವರ್ಷ ಪೂರ್ಣಗೊಂಡಿತು.
ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ಜಿಎಸ್ಟಿ ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇದರ ಜಾರಿಗಾಗಿ ವಿಜಯ ಕೇಲ್ಕರ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಮೀಟಿಯೊಂದನ್ನು ಆಗಿನ ವಾಜಪೇಯಿ ಸರಕಾರ ನೇಮಿಸಿತ್ತು. ಆದರೆ ವಾಜಪೇಯಿ ಅವರ ಎನ್ಡಿಎ ಸರಕಾರದ ಪತನದ ನಂತರ ಇದು ನೆನೆಗುದಿಗೆ ಬಿದ್ದಿತ್ತು. ಆದರೆ ಕೊನೆಗೂ ಒಂದು ದಶಕದ ನಂತರ ಜುಲೈ 1, 2017 ರಂದು ಜಿಎಸ್ಟಿ ದೇಶಾದ್ಯಂತ ಜಾರಿಗೊಂಡಿತು.
ನರೇಂದ್ರ ಮೋದಿ ನೇತೃತ್ವದ ಸರಕಾರದ ಆರ್ಥಿಕ ಸುಧಾರಣೆಗಳಲ್ಲೊಂದಾಗಿರುವ ಜಿಎಸ್ಟಿ ತೆರಿಗೆ ಪದ್ಧತಿ ಜಾರಿಯಾಗಿ ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಜಿಎಸ್ಟಿಯಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ಆಗಿರುವ ಪರಿಣಾಮಗಳು ಹಾಗೂ ಇದರ ಫಲಶೃತಿಯ ಬಗ್ಗೆ ಅವಲೋಕನ ನಡೆಸಲು ಇದು ಸೂಕ್ತ ಸಮಯವಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ, ತೆರಿಗೆ ವ್ಯಾಪ್ತಿ ಏರಿಕೆ, ತೆರಿಗೆ ವಂಚನೆ ತಪ್ಪಿಸುವಿಕೆ ಹಾಗೂ ಏಕರೂಪದ ತೆರಿಗೆ ವ್ಯವಸ್ಥೆ ಮುಂತಾದ ಗುರಿಗಳನ್ನು ಸಾಧಿಸಲು ಜಿಎಸ್ಟಿ ಜಾರಿಗೊಳಿಸಲಾಗಿದೆ ಎಂದು ಸರಕಾರ ಹೇಳಿತ್ತು. ಹಾಗಾದರೆ ಜಿಎಸ್ಟಿ ಜಾರಿಯ ಫಲಿತಾಂಶಳು, ಯಶಸ್ಸು ಹಾಗು ವೈಫಲ್ಯಗಳೇನು ನೋಡೋಣ ಬನ್ನಿ..
ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳ
ದೇಶದ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳವರೆಗೆ 1 ಲಕ್ಷ ಕೋಟಿ ರೂಪಾಯಿ ಬೊಕ್ಕಸಕ್ಕೆ ಹರಿದು ಬಂದಿದೆ. ತೆರಿಗೆ ಸಂಗ್ರಹಣೆ ಹೀಗೆಯೇ ಮುಂದುವರೆಯುಬಹುದು ಎನ್ನಲಾಗದಿದ್ದರೂ, ತೆರಿಗೆ ವಂಚನೆ ತಡೆಗಟ್ಟಲು ಇ-ವೇ ಬಿಲ್ ವ್ಯವಸ್ಥೆ ಹಾಗೂ ಟಿಡಿಎಸ್/ಟಿಸಿಎಸ್ ಕ್ರಮಗಳು ಬರುವ ಕೆಲ ತಿಂಗಳಲ್ಲಿ ಸಂಪೂರ್ಣವಾಗಿ ಜಾರಿಯಾಗಲಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇನ್ಪುಟ್ ಕ್ರೆಡಿಟ್ ಜಾರಿ
ಇದೇ ಆರ್ಥಿಕ ವರ್ಷದಲ್ಲಿ ಇನ್ಪುಟ್ ಕ್ರೆಡಿಟ್ ವ್ಯವಸ್ಥೆ ಸಂಪೂರ್ಣಗೊಳ್ಳಲಿದ್ದು, ಇದರಿಂದ ತೆರಿಗೆ ಸಂಗ್ರಹಣೆಗೆ ಮತ್ತಷ್ಟು ವೇಗ ಸಿಗಲಿದೆ.
4.5 ಮಿಲಿಯನ್ ಹೊಸ ತೆರಿಗೆದಾತರ ಸೇರ್ಪಡೆ
ಜಿಎಸ್ಟಿ ಅಡಿಯಲ್ಲಿ ಹೊಸದಾಗಿ 4.5 ಮಿಲಿಯನ್ ತೆರಿಗೆದಾರರು ಸೇರ್ಪಡೆಯಾಗಿದ್ದು, ಇದರಲ್ಲಿ ಶೇ. ೭೦ರಷ್ಟು ಅರ್ಹ ತೆರಿಗೆ ಪಾವತಿದಾರರು ಮಾರ್ಚ್ ೨೦೧೮ಕ್ಕೆ ತಮ್ಮ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಹಿಂದಿನ ತೆರಿಗೆ ವ್ಯವಸ್ಥೆಗಿಂತ ಜಿಎಸ್ಟಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಒಂದು ದೇಶ, ಒಂದು ತೆರಿಗೆ
'ಒಂದು ದೇಶ, ಒಂದು ತೆರಿಗೆ' (One Nation, One Tax) ಎಂಬುದು ಜಿಎಸ್ಟಿಯ ಘೋಷವಾಕ್ಯವಾಗಿತ್ತು. ಇದು ಬಹುತೇಕ ಸಾಕಾರವಾಗಿದೆ. ದ್ವಿಮುಖ ತೆರಿಗೆ ಹಾಗೂ ತೆರಿಗೆ ವ್ಯವಸ್ಥೆಯಲ್ಲಿನ ಸಂಕೀರ್ಣತೆಯನ್ನು ಜಿಎಸ್ಟಿ ಯಶಸ್ವಿಯಾಗಿ ತೊಡೆದು ಹಾಕಿದೆ. (ಜಿಎಸ್ಟಿಯಲ್ಲಿ ಇನ್ನೂ ಸೇರ್ಪಡೆಯಾಗದ ಪೆಟ್ರೋಲಿಯಂ ಉತ್ಪಾದನೆಗಳನ್ನು ಹೊರತು ಪಡಿಸಿ)
ತೆರಿಗೆ ವ್ಯವಸ್ಥೆ ಭ್ರಷ್ಟಾಚಾರಕ್ಕೆ ಕಡಿವಾಣ
ಜಿಎಸ್ಟಿ ವ್ಯವಸ್ಥೆಯಲ್ಲಿ ತೆರಿಗೆದಾರರು ಒಂದೇ ತೆರಿಗೆ ಪ್ರಾಧಿಕಾರಕ್ಕೆ ಉತ್ತರದಾಯಿಗಳಾಗಿದ್ದಾರೆ. ಇದು ತೆರಿಗೆ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗುವ ಸಂದರ್ಭಗಳನ್ನು ಕಡಿಮೆ ಮಾಡಿದೆ. ತೆರಿಗೆದಾರ ಹಾಗೂ ತೆರಿಗೆ ಅಧಿಕಾರಿಯ ಮುಖತಃ ಎದುರಾಗುವ ಸಂದರ್ಭಗಳು ಇಲ್ಲವಾಗಿದ್ದರಿಂದ ಸಹಜವಾಗಿಯೇ ಭ್ರಷ್ಟಾಚಾರಕ್ಕೂ ಕಡಿವಾಣ ಬಿದ್ದಿದೆ.
ಬರಲಿದೆ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (Authority for Advanced Ruling- AAR)
ಜಿಎಸ್ಟಿ ಕಾಯ್ದೆಯ ಬಗ್ಗೆ ಏಕರೂಪತೆ ಹಾಗೂ ಸುಲಭವಾಗಿ ಕಾಯ್ದೆ ಅರ್ಥೈಸಲು ಅನುವಾಗುವಂತೆ ರಾಷ್ಟ್ರ ಮಟ್ಟದಲ್ಲಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಆರಂಭಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಹೆಚ್ಚಳ
ಕೈಗಾರಿಕಾ ವಲಯದ ಬೆಳವಣಿಗೆಯನ್ನು ಅಳೆಯಲು ಕೈಗಾರಿಕಾ ಉತ್ಪಾದನಾ ಸೂಚ್ಯಂಕ (Index of Industrial Production- IIP) ವನ್ನು ಮಾನದಂಡವಾಗಿ ಬಳಸಲಾಗುತ್ತದೆ. ಜುಲೈ ೨೦೧೭ ರಿಂದ ಜನೇವರಿ ೨೦೧೮ ರ ಅವಧಿಯಲ್ಲಿ ಐಐಪಿ ಬೆಳವಣಿಗೆ ದರ ಶೇ. ೫ರಷ್ಟಿತ್ತು. ಇದು ಕಳೆದ ಜುಲೈ ೨೦೧೬ ರಿಂದ ಜನೇವರಿ ೨೦೧೭ ರಲ್ಲಿದ್ದ ಶೇ. ೩.೯ ಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. (ಮೂಲ- ಮಾರ್ಚ್ ೨೩, ೨೦೧೮ರ ಪಿಐಬಿ ವರದಿ) ಅಂದರೆ ಜಿಎಸ್ಟಿ ನಂತರ ಕೈಗಾರಿಕಾ ವಲಯ ಗಣನೀಯ ಬೆಳವಣಿಗೆ ಸಾಧಿಸಿದೆ.
ಅವಶ್ಯಕ ವಸ್ತುಗಳ ಜಿಎಸ್ಟಿ ಇಳಿಕೆ
ಹಲವಾರು ಅವಶ್ಯಕ ವಸ್ತುಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಶೇ.೨೮ ರಿಂದ ಶೇ.೮ ಹಾಗೂ ೫ಕ್ಕೆ ಇಳಿಸಲಾಗಿದೆ. ಕೆಲ ಸೇವೆಗಳ ಮೇಲಿನ ಜಿಎಸ್ಟಿ ಇಳಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಲುವಾಗಿ ಕೆಲ ಕಾಲ ಮುಂದೂಡಲಾಗಿದೆ. (ಟಿಸಿಎಸ್/ಟಿಡಿಎಸ್, ರಿವರ್ಸ್ ಚಾರ್ಜ್, ಟ್ಯಾಕ್ಸ್ ರಿಟರ್ನ್ ಫಾರ್ಮ ಇತ್ಯಾದಿ)
ವಿವಿಧ ಹಂತಗಳ ಜಿಎಸ್ಟಿ
ಜಿಎಸ್ಟಿ ಪ್ರಕ್ರಿಯೆಯಲ್ಲಿನ ಹಲವಾರು ಹಂತಗಳ ಬಗ್ಗೆ ಅನೇಕ ಟೀಕೆಗಳು ಕೇಳಿ ಬಂದಿವೆಯಾದರೂ, ಜಗತ್ತಿನಾದ್ಯಂತ ಇದೇ ಮಾದರಿಯಲ್ಲಿ ಜಿಎಸ್ಟಿ ಜಾರಿಯಲ್ಲಿದೆ. ಜನ ಸಾಮಾನ್ಯರ ನಿತ್ಯ ಬಳಕೆ ವಸ್ತುಗಳು ಹಾಗೂ ಶ್ರೀಮಂತರ ದುಬಾರಿ ವಸ್ತುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸಲು ವಾಸ್ತವದಲ್ಲಿ ವಿವಿಧ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಆರಂಭಿಕ ತೊಡಕುಗಳು
ಜಿಎಸ್ಟಿ ಹೊಸ ಮಾದರಿಯ ಕಾಯ್ದೆಯಾಗಿದ್ದು ಹಾಗೂ ಇದರ ಜಾರಿಯ ವ್ಯಾಪ್ತಿ ಬೃಹತ್ ಆಗಿರುವುದರಿಂದ ಆರಂಭದಲ್ಲಿ ಕೆಲ ಗಂಭೀರ ಸಮಸ್ಯೆಗಳು ಎದುರಾದವು. ಆರಂಭದಲ್ಲಿ ಹಲವಾರು ವ್ಯಾಪಾರಗಳು ತೊಂದರೆಗೆ ಸಿಲುಕಿ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಪರದಾಡುವಂತಾಯಿತು. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಸಮಸ್ಯೆಗಳು ಸೃಷ್ಟಿಯಾದವು. ಆದರೂ ತೆರಿಗೆ ಪದ್ಧತಿಯ ಬಗ್ಗೆ ಅಂಥ ಗೊಂದಲಗಳಿರಲಿಲ್ಲ. ಸಕಾಲಕ್ಕೆ ರಿಟರ್ನ್ ಫೈಲ್ ಮಾಡುವುದು, ಇ-ವೇ ಬಿಲ್ ತಯಾರಿಸುವುದು ಮುಂತಾದ ಪ್ರಕ್ರಿಯೆಗಳು ಜನರಿಗೆ ಗಂಭೀರ ಸಮಸ್ಯೆ ಸೃಷ್ಟಿಸಿದವು.
ಗೊಂದಲ ನಿವಾರಣೆಗೆ ಸರಕಾರದ ಯತ್ನ
ಜಿಎಸ್ಟಿ ಜಾರಿ ಇನ್ನೂ ಆರಂಭಿಕ ಹಂತದಲ್ಲಿದ್ದು, ಕಾಯ್ದೆಯ ಬಗ್ಗೆ ಜನರಲ್ಲಿ ಉಂಟಾಗುತ್ತಿರುವ ಗೊಂದಲಗಳ ನಿವಾರಣೆಗೆ ಸರಕಾರ ಸತತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ಸುತ್ತೋಲೆ, ಪ್ರಕಟಣೆಗಳ ಮುಖಾಂತರ ಕಾನೂನಾತ್ಮಕ ಗೊಂದಲಗಳನ್ನು ನಿವಾರಿಸಲು ಸರಕಾರ ಯತ್ನಿಸುತ್ತಿದೆ.
ರಿಟರ್ನ್ ಫೈಲಿಂಗ್ಗೆ ಹೊಸ ಸೂತ್ರ
ರಿಟರ್ನ್ ಫೈಲ್ ಮಾಡಲು ಉಂಟಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿತು ಹಾಗೂ ಇನ್ನೂ ಕೆಲ ಪ್ರಕ್ರಿಯೆಗಳನ್ನು ಮುಂದೂಡಿತು. ಮುಂದಿನ ದಿನಗಳಲ್ಲಿ ರಿಟರ್ನ್ ಫೈಲಿಂಗ್ ಸರಳೀಕರಣಗೊಳಿಸಲು ನೂತನ ಮಾರ್ಗೋಪಾಯಗಳನ್ನು ಜಾರಿಗೊಳಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ.
ರಫ್ತುದಾರರ ರಿಫಂಡ್ ಗೊಂದಲ
ರಫ್ತುದಾರರ ರಿಫಂಡ್ ನೀತಿಯಲ್ಲಿನ ಗೊಂದಲದಿಂದ ಆರಂಭದಲ್ಲಿ ಹಲವಾರು ರಫ್ತುದಾರರು ದುಡಿಯುವ ಬಂಡವಾಳದ ಕೊರತೆ ಅನುಭವಿಸಬೇಕಾಯಿತು. ನಂತರ ಸರಕಾರ ಕೈಗೊಂಡ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸಿತು. ಮೂಲಗಳ ಪ್ರಕಾರ ಪ್ರಸ್ತುತ ಶೇ. ೯೦ಕ್ಕೂ ಹೆಚ್ಚು ರಿಫಂಡ್ ಅರ್ಜಿಗಳು ವಿಲೇವಾರಿಯಾಗಿವೆ.
ಕೊನೆ ಮಾತು
ಒಟ್ಟಾರೆಯಾಗಿ ನೋಡಿದರೆ ಕೇಂದ್ರ ಸರಕಾರ ಜಿಎಸ್ಟಿಯ ಮೂಲ ಉದ್ದೇಶಗಳನ್ನು ಸಫಲವಾಗಿ ಜಾರಿಗೆ ತರಲು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಲಾಗದು. ಜೊತೆಗೆ ಹೊಸ ವ್ಯವಸ್ಥೆಗೆ ಜನ ಹೊಂದಿಕೊಳ್ಳುವಂತೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರು, ಅನೇಕ ಎಡರು ತೊಡರುಗಳು ಎದುರಾಗಿವೆ. ಐಟಿ ತಳಹದಿಯ ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಾಗಿದ್ದು, ತೊಡಕುಗಳ ನಿವಾರಣೆಗೆ ಮುಂದಾಗಿದೆ.