ಕೋವಿಡ್: 4.2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲ ಮಾಡಲು ಮುಂದಾದ ಕೇಂದ್ರ
ನವದೆಹಲಿ, ಜೂನ್ 6: ಕೋವಿಡ್ ಹಾವಳಿಯಿಂದಾಗಿ ಭಾರತದ ಅರ್ಥವ್ಯವಸ್ಥೆ ಕುಸಿಯುತ್ತಿರುವ ಬಗ್ಗೆ ಅನೇಕ ಆರ್ಥಿಕ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ''2020-21ರಲ್ಲಿ ಕೇಂದ್ರದ ಹಣಕಾಸಿನ ಕೊರತೆ, ಒಟ್ಟು ದೇಶೀಯ ಉತ್ಪನ್ನದ (ಶೇ 3.5) ಶೇ 1.7 ರಿಂದ 1.8 ಹೆಚ್ಚು ಇರಲಿದೆ'' ಎಂದಿದ್ದಾರೆ.
ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಬಿಸಿನೆಸ್ ಸ್ಟ್ಯಾಂಡರ್ಡ್ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ತೀವ್ರ ಕುಸಿತ ಕಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.
ಕಾರ್ಪೊರೇಟ್ ಗಳಿಗಿಂತ ಆರ್ಥಿಕ ದುರ್ಬಲ ವರ್ಗಕ್ಕೆ ಬ್ಯಾಂಕ್ ಗಳಿಂದ ಹೆಚ್ಚಿನ ಸಾಲ
''ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ನಲ್ಲಿ ಅಂದಾಜು ಮಾಡಲಾಗಿದ್ದ ಮೊತ್ತಕ್ಕಿಂತ 4.2 ಲಕ್ಷ ಕೋಟಿ ರೂ.ಗಳ ಹೆಚ್ಚು ಸಾಲ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಮ್ಮ ಜಿಡಿಪಿಯ ಶೇಕಡಾ 5 ರಷ್ಟು ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡುವ ಮೂಲಕ, ರಾಜ್ಯಗಳಿಗೆ 4.3 ಟ್ರಿಲಿಯನ್ ರೂ.ಗಳ ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಲಾಗಿದೆ'' ಎಂದು ಅವರು ತಿಳಿಸಿದ್ದಾರೆ
''ಘೋಷಿಸಲ್ಪಟ್ಟ ಸಾಲದಲ್ಲಿ ಶೇಕಡಾ 50 ರಷ್ಟು ಅಥವಾ ಅದರ ಹೆಚ್ಚಳವನ್ನು ಗಮನಿಸಿದರೆ, ಈ ಸಮಯದಲ್ಲಿ, ಬಜೆಟ್ ಹಣಕಾಸಿನ ಕೊರತೆಯ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ ಎಂದು ಹೇಳುವುದು ಸಮಂಜಸವಾದ ಅಂದಾಜು. ನಾವು ಆಗಸ್ಟ್ ನಂತರ ಜಿಡಿಪಿಯಲ್ಲಿ ಚೇತರಿಕೆ ಕಾಣುತ್ತೇವೆ" ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ.