ಲಾಕ್ ಡೌನ್ ಕಾಲದಲ್ಲಿ ಅಂಗಡಿಗಳಲ್ಲಿ ದಿನಸಿ ಖಾಲಿ ಖಾಲಿ; ಹೀಗಾದ್ರೆ ಹೇಗೆ?
ಅಕ್ಕಿ, ಬೇಳೆ, ಗೋಧಿ ಹಿಟ್ಟು- ರಾಗಿ ಹಿಟ್ಟು, ಬೇಳೆ, ಇನ್ ಸ್ಟಂಟ್ ನೂಡಲ್ಸ್, ಬಿಸ್ಕೆಟ್, ಚಿಪ್ಸ್... ಹೀಗೆ ನಾನಾ ಆಹಾರ ಪದಾರ್ಥಗಳು, ಪಾಕೇಜ್ಡ್ ಫುಡ್ ಗಳು ರೀಟೇಲ್ ಸ್ಟೋರ್ ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದು ಭಾರತದ ಒಂದು ನಗರದ ಸ್ಥಿತಿಯಲ್ಲ. ದೇಶದ ಹಲವೆಡೆ ಇದೇ ಪರಿಸ್ಥಿತಿ ಇದೆ.
ಈ ಕಾರಣಕ್ಕೆ ದಿನಸಿ ಹಾಗೂ ಪಾಕೇಜ್ಡ್ ಫುಡ್ ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಉತ್ಪಾದನೆಯೇ ಕಡಿಮೆ ಆಗಿರುವುದು ಮತ್ತು ಕೊರೊನಾ ಲಾಕ್ ಡೌನ್ ನಿಂದ ಸಾಗಾಟ ಸಮಸ್ಯೆಯಾಗಿರುವುದರಿಂದ ಕೊರತೆ ಎದ್ದುಕಾಣುತ್ತದೆ. "ಹಿಟ್ಟುಗಳು ದೊರೆಯುತ್ತಿಲ್ಲ. ಆ ನಂತರ ಇನ್ ಸ್ಟಂಟ್ ನೂಡಲ್ಸ್, ಬಿಸ್ಕೆಟ್ ಗಳ ಪೂರೈಕೆ ಆಗುತ್ತಿಲ್ಲ. ಎಲ್ಲ ಎಫ್ ಎಂಸಿಜಿ ಸಂಸ್ಥೆಗಳಲ್ಲೂ ಉತ್ಪಾದನೆ, ಸಾಗಾಟದ್ದೇ ಸಮಸ್ಯೆಯಾಗಿದೆ" ಎಂದು ಪ್ರಮುಖ ರೀಟೇಲ್ ಸಂಸ್ಥೆಯೊಂದರ ಸಿಇಒ ಹೇಳಿದ್ದಾರೆ.
ಕಾರ್ಮಿಕರು, ಸಿಬ್ಬಂದಿ ಊರುಗಳಿಗೆ ತೆರಳಿದ್ದಾರೆ
ಬೇಳೆಕಾಳುಗಳನ್ನು ಹೆಚ್ಚು ಉತ್ಪಾದಿಸುತ್ತಿದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ 75 ಪರ್ಸೆಂಟ್ ನಷ್ಟು ಮಿಲ್ ಗಳು ಬಾಗಿಲು ಮುಚ್ಚಿವೆ. ಇನ್ನು ಸದ್ಯಕ್ಕೆ ಇರುವ ಸರಕು ಸಾಗಾಟ ಮಾಡಬೇಕು ಅಂದರೆ, ಅದು ಕೂಡ ಸಾಧ್ಯವಾಗುತ್ತಿಲ್ಲ. ಮ್ಯಾಗಿ ನೂಡಲ್ಸ್ ತಯಾರಿಸುವ ನೆಸ್ಟ್ಲೆ ಕಂಪೆನಿ ಕಳೆದ ತಿಂಗಳಿಂದಲೇ ಕೆಲವೆಡೆ ಉತ್ಪಾದನೆ ಕಡಿಮೆ ಮಾಡಿದೆ ಮತ್ತು ಕೆಲವೆಡೆ ಸ್ಥಗಿತ ಮಾಡಿದೆ. ಐಟಿಸಿ, ಬ್ರಿಟಾನಿಯಾ, ಪೆಪ್ಸಿ ಕೋ, ಪಾರ್ಲೆಯಲ್ಲೂ ಇದೇ ರೀತಿಯ ಸಮಸ್ಯೆಯಾಗಿದೆ. ಎಫ್ ಎಂಸಿಜಿ ಕಂಪೆನಿಗಳ ಒಟ್ಟು ಸಾಮರ್ಥ್ಯದ ಶೇಕಡಾ 20ರಿಂದ 30ರಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಅದಕ್ಕೆ ಕಾರಣ ಕೂಡ ಸ್ಪಷ್ಟ: ಹಲವು ಕಾರ್ಮಿಕರು, ಸಿಬ್ಬಂದಿ ತಮ್ಮ ಊರುಗಳಿಗೆ ಮರಳಿದ್ದಾರೆ.
ಕೇಂದ್ರದ ನಿರ್ದೇಶನದಂತೆ ಕೆಲವು ರಾಜ್ಯದಲ್ಲಿ ನಡೆಯುತ್ತಿಲ್ಲ
ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಪ್ಯಾಕೇಜ್ಡ್ ಫುಡ್ ಮತ್ತು ಪಾನೀಯ ತಯಾರಿಕೆಗೆ ಅವಕಾಶ ನೀಡುತ್ತಿಲ್ಲ. ಚಿಪ್ಸ್ ಮತ್ತಿತರ ಕುರುಕಲು ತಿಂಡಿ ಬೇಡಿಕೆಗೆ ತಕ್ಕಷ್ಟು ಸಿಗುತ್ತಿಲ್ಲ. ನಿಮಗೆ ಇನ್ನೊಂದು ವಿಷಯ ತಿಳಿಸಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಪ್ರಕಾರ ಇವೆಲ್ಲವೂ ಅಗತ್ಯ ವಿಭಾಗದ ಅಡಿಯಲ್ಲಿ ಬರುವ ಆಹಾರ ಪದಾರ್ಥಗಳು. ಕೇಂದ್ರ ಸರ್ಕಾರದ ನಿರ್ದೇಶನವನ್ನು ಎಲ್ಲ ರಾಜ್ಯಗಳಲ್ಲೂ ಸಂಪೂರ್ಣ ಜಾರಿ ಮಾಡಿಲ್ಲ. ಉದಾಹರಣೆಗೆ, ಪಶ್ಚಿಮ ಬಂಗಾಲದಲ್ಲಿ ಪೆಪ್ಸಿಕೋ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ. ಉಳಿದ ಎರಡು ಘಟಕದಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಒಟ್ಟು ಸಾಮರ್ಥ್ಯದ 15% ಮಾತ್ರ ಕೆಲಸ ನಿರ್ವಹಿಸುತ್ತಿವೆ. ಈಗಿರುವ ಸರಕು ಕೆಲವೇ ಸಮಯ ಬಳಕೆ ಮಾಡಲು ಸಾಧ್ಯ. ಆ ನಂತರ ಅವು ಹಾಳಾಗುತ್ತವೆ. ಆದ್ದರಿಂದ ಪ್ಯಾಕೇಜ್ಡ್ ಫುಡ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎನ್ನುತ್ತಾರೆ ಈ ವಲಯದ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು.
ಅಂಗಡಿಗಳಿಗೆ ತಲುಪಿಸುವವರಿಲ್ಲ
ಕಾರ್ಮಿಕರ ಕೊರತೆ ಕಾರಣಕ್ಕೆ ಬ್ರಿಟಾನಿಯಾದ ಒಟ್ಟು ಸಾಮರ್ಥ್ಯದ 20-30%, ಪಾರ್ಲೆ 25% ಕಾರ್ಯ ನಿರ್ವಹಿಸುತ್ತಿವೆ. ತಮ್ಮ ಊರುಗಳಿಗೆ ತೆರಳಿರುವವರಿಗೆ ಆಯಾ ಸ್ಥಳದ ಜನ, ಹೊರಗೆ ಹೋಗದಂತೆ ಎಚ್ಚರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವೇ ಮಧ್ಯಪ್ರವೇಶಿಸಿ, ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಮರಳುವಂತೆ ಮಾಡಲು ಜನರ ಮನವೊಲಿಸಬೇಕು ಎನ್ನುತ್ತವೆ ಕಂಪೆನಿಗಳು. ಭಾರತದ ಪ್ರಮುಖ ಪ್ಯಾಕೇಜ್ಡ್ ಫುಡ್ ತಯಾರಿಕಾ ಕಂಪೆನಿಯೊಂದು ಇಂದೋರ್ ನಿಂದ ಕಾರ್ಯ ನಿರ್ವಹಿಸುತ್ತದೆ. ಅದರ 14 ಘಟಕಗಳಿದ್ದು, 10 ಪರ್ಸೆಂಟ್ ನಷ್ಟು ಸಾಮರ್ಥ್ಯದಲ್ಲಿ ಮಾತ್ರ ಅವು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಮೊದಲೇ ತಿಳಿಸಿದಂತೆ ಸರಕು ಸಾಗಿಸುವುದೇ ಅತಿ ದೊಡ್ಡ ಸವಾಲಾಗಿದೆ. ದಿನಸಿ ಅಂಗಡಿಗಳಿಗೆ ತಲುಪಿಸುವ ಒಂದು ಜಾಲವೇ ತುಂಡಾದಂತೆ ಆಗಿದೆ. ಉತ್ಪಾದನೆ, ಸರಕು ಸಾಗಣೆ ಸರಿಹೋಯಿತು ಅಂದುಕೊಂಡರೂ ಆ ನಂತರ ದಿನಸಿ ಮಳಿಗೆಗಳಿಗೆ ತಲುಪಿಸಲು ಹೋಲ್ ಸೇಲ್ ಮಾರಾಟಗಾರರ ಬಳಿ ಸಿಬ್ಬಂದಿ ಇಲ್ಲದಂತಾಗಿದೆ.