ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ; ತನಿಖೆ ಸಿಐಡಿ ಹೆಗಲಿಗೆ
ಬೆಂಗಳೂರು: ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಫರೇಟಿವ್ ಬ್ಯಾಂಕ್ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಐಡಿ) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಈ ಎರಡು ಸಹಕಾರಿ ಬ್ಯಾಂಕ್ಗಳಿಂದ ಕೋಟ್ಯಾಂತರ ಠೇವಣಿ ಹಣ ದುರುಪಯೋಗ ಆಗಿತ್ತು ಎಂದು ಅನೇಕ ಗ್ರಾಹಕರು ಪ್ರತಿಭಟನೆ ಮಾಡಿ ದೂರು ಸಲ್ಲಿಸಿದ್ದರು. ಈ ಕುರಿತು ಕೆಪಿಐಡಿ ಕಾಯ್ದೆ ಅಡಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲವರು ನ್ಯಾಯಲಯದ ಮೆಟ್ಟಿಲು ಕೂಡ ಏರಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಐಡಿಗೆ ಪ್ರಕರಣ ವಹಿಸುವುದಾಗಿ ನ್ಯಾಯಲಯಕ್ಕೆ ತಿಳಿಸಿದ್ದರು. ಅದರಂತೆ ಸರ್ಕಾರ ಬುಧವಾರ ಸಿಐಡಿಗೆ ತನಿಖೆ ಹೊಣೆ ವಹಿಸಲು ಆದೇಶಿಸಿದೆ.
ಬಗೆದಷ್ಟು ಹೊರಬರುತ್ತಿದೆ ಗುರು ರಾಘವೇಂದ್ರ ಬ್ಯಾಂಕಿನ ಕರಾಳ ಅಧ್ಯಾಯ: ರಾಯರ ಹೆಸರಿನಲ್ಲಿ ಇದೇನಿದು?
ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕೂಡ ಹೈಕೋರ್ಟ್ ಸೂಚನೆ ನೀಡಿದೆ. ಬ್ರಷ್ಟಾಚಾರ ನಿಗ್ರಹ ದಳ ಹಾಗೂ ಸಿಐಡಿ ದಾಖಲಿಸಿರುವ ಬೇರೆ ಬೇರೆ ಎಫ್ಐಆರ್ಗಳನ್ನು ಒಂದೇ ಕಡೆ ಸೇರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಠೆವಣಿದಾರರಿಗೆ ಹಣ ತಲುಪಿಸುವಲ್ಲಿ ಯಾವ ಬೆಳವಣಿಗೆ ಆಗಿದೆ ಎಂಬುದರ ವರದಿಯನ್ನೂ ಹೈಕೋರ್ಟ್ ಕೇಳಿದೆ.
ಗುರು ರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಡಿಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಡಿಜಿಪಿ ಗೆ ನಿರ್ದೇಶನ ನೀಡಬೇಕೆಂದು ಕೋರಿ ಬಸವನಗುಡಿಯ ಕೆ ಆರ್ ನರಸಿಂಹಮೂರ್ತಿ ಹಾಗೂ ಇನ್ನಿತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.