ಕೇಂದ್ರ ನೌಕರರಿಗೆ 2 ವರ್ಷಗಳ ಬೋನಸ್ ಘೋಷಿಸಿದ ಸರ್ಕಾರ
ಕಳೆದ ಎರಡು ವರ್ಷಗಳಿಂದ ಬಾಕಿ ಇದ್ದ ವಾರ್ಷಿಕ ಬೋನಸ್ ಹಣವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಇದರಿಂದ 33 ಲಕ್ಷ ನೌಕರರು ಬೋನಸ್ ಕೊಡುಗೆಯ ಸಂಭ್ರಮದಲ್ಲಿದ್ದಾರೆ.
ಈ ಮೂಲಕ ಸೆಪ್ಟಂಬರ್ 2ರ ದೇಶವ್ಯಾಪಿ ಮುಷ್ಕರದ ಬಿಸಿಯನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು, ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೇಟ್ಲಿ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ಕ್ರಮ, ಯೋಜನೆ ಮತ್ತು ಯಾವ ಕ್ಷೇತ್ರಕ್ಕೆ ಏನು ಲಾಭ ಸಿಗಲಿದೆ ಎಂಬುದರ ಸಂಕ್ಷೀಪ್ತ ವಿವರ ಇಲ್ಲಿದೆ.
33 ಲಕ್ಷ ನೌಕರರಿಗೆ ಬೋನಸ್
33 ಲಕ್ಷ ಕೇಂದ್ರ ನೌಕರರಿಗೆ ಬರಬೇಕಿರುವ 2014-15 ಮತ್ತು 2015-16 ನೇ ಸಾಲಿನ ಬೋನಸ್ ಕೈಸೇರಲಿದೆ. ಇದರ ಜತೆಗೆ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚುವರಿ ಬೋನಸ್ ಕೂಡ ಸಿಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೂಲಿಯಲ್ಲಿ ಹೆಚ್ಚಳ
ಕೇಂದ್ರ ಸರ್ಕಾರದ ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ರೂ. 246 ರಿಂದ ರೂ. 350 ಕ್ಕೆ ಹೆಚ್ಚಿಸಲಾಗಿದೆ. ಇದು ಸೆಪ್ಟಂಬರ್ 2ರ ದೇಶವ್ಯಾಪಿ ಮುಷ್ಕರದ ಪರಿಣಾಮ ಎನ್ನಲಾಗಿದೆ.
ಬಾಕಿ ಬೋನಸ್ ಪರಿಹಾರ ಕ್ರಮ
ಬಾಕಿ ಬೋನಸ್ ಸಂದಾಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಇರುವ ಕೇಸುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಲಿದೆ ಎಂದು ಅರುಣ್ ಜೇಟ್ಲಿ ಭರವಸೆ ನೀಡಿದರು.
ಕೇಂದ್ರ ವ್ಯಾಪಾರ ಒಕ್ಕೂಟ ಶಿಫಾರಸ್ಸು
ಕಳೆದ ಒಂದೂವರೆ ವರ್ಷಗಳ ಹಿಂದೆ ಅಂತರ್ ಸಚಿವ ಸಮಿತಿ ಕೇಂದ್ರ ವ್ಯಾಪಾರ ಒಕ್ಕೂಟದೊಂದಿಗೆ ಸಭೆ ನಡೆಸಿತ್ತು.
ಕೇಂದ್ರ ವ್ಯಾಪಾರ ಒಕ್ಕೂಟವು ಆರ್ಥಿಕ ನೀತಿ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿತ್ತು. ಅವರ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಕೆಲ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಅಸಂಘಟಿತ ವಲಯಕ್ಕೆ ಭದ್ರತೆ
ಅಂಗನವಾಡಿ, ಮಧ್ಯಾಹ್ನನದ ಬಿಸಿಯೂಟ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ಮತ್ತು ಹೆಚ್ಚು ಸೌಲಭ್ಯಗಳನನ್ಉ ಒದಗಿಸಲು ಸಮಿತಿ ಯೋಚನೆ ಮಾಡುತ್ತಿದೆ. ಅಲ್ಲದೇ ಆದಷ್ಟು ಬೇಗ ಜಾರಿ ತರಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.
ಶೇ.42ರಷ್ಟು ಕನಿಷ್ಠ ವೇತನ ಹೆಚ್ಚಳ
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಪರಿಷ್ಕೃತ ಅಂಶಗಳನ್ನು ಆಧರಿಸಿ 2008ರಿಂದ ಕೇಂದ್ರ ಸರ್ಕಾರದ ನೌಕರರ ಬೋನಸ್ ಬಿಡುಗಡೆಗೆ ಗಮನಾರ್ಹ ಬದಲಾವಣೆ ತಂದಿದ್ದು, ಶೇ.42ರಷ್ಟು ಕನಿಷ್ಠ ವೇತನವನ್ನು ಹೆಚ್ಚಿಸಿದೆ.
ದೇಶವ್ಯಾಪಿ ಮುಷ್ಕರ
ಅನೇಕ 10ಕ್ಕಿಂತಲೂ ಹೆಚ್ಚಿನ ಕೇಂದ್ರ ಸಂಘಟನೆಗಳು ಸರ್ಕಾರದ ಕಾರ್ಮಿಕ ಸುಧಾರಣೆ ಮತ್ತು ಬಾಕಿ ಬೇಡಿಕೆಗಳನ್ನು ಈಡೇರಿಸದ ವಿರುದ್ದ ಒಂದು ದಿನದ ಮುಷ್ಕರವನ್ನು ಸೆಪ್ಟಂಬರ್ 2, 2016ರಂದು ಹಮ್ಮಿಕೊಂಡಿವೆ.
ಮುಷ್ಕರದಿಂದ ಭಾರತೀಯ ಮಜದೂರ್ ಸಂಘ ಹಿಂದಕ್ಕೆ
ಸೆಪ್ಟಂಬರ್ 2ರಂದು ನಡೆಯಲಿರುವ ದೇಶವ್ಯಾಪಿ ಮುಷ್ಕರದಿಂದ ಭಾರತೀಯ ಮಜದೂರ್ ಸಂಘ ಹಿಂದಕ್ಕೆ ಸರಿದಿರುವುದಾಗಿ ತಿಳಿಸಿದ್ದು, ಸರ್ಕಾರ ಅವರ ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ: 45 ಸಾವಿರ ಕೋಟಿ ಬಾಕಿ ಪಾವತಿ ನಿರ್ಧಾರ