ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ನಿಮಗೆ ಏನು ಕೊಟ್ಟಿದೆ?
ನರೇಂದ್ರ ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬಲ್ಲಂತಹ ಯಾವುದಾದರು ಸಂಗತಿ ನೆನಪಿಸಿಕೊಳ್ಳುವುದಾದರೆ, ಎ.ಟಿ.ಎಂ. ಗಳ ಹೊರಗಡೆ ಉದ್ದನೆಯ ಸಾಲುಗಳಲ್ಲಿ ಜನರು ನಿಂತಿದ್ದ ದೃಶ್ಯಾವಳಿಗಳು ಕಣ್ಣಮುಂದೆ ಹಾದು ಹೋಗುತ್ತವೆ.
ನರೇಂದ್ರ ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬಲ್ಲಂತಹ ಯಾವುದಾದರು ಸಂಗತಿಯನ್ನು ನೆನಪಿಸಿಕೊಳ್ಳುವುದಾದರೆ, ಎ.ಟಿ.ಎಂ. ಗಳ ಹೊರಗಡೆ ಉದ್ದನೆಯ ಸಾಲುಗಳಲ್ಲಿ ಜನರು ನಿಂತಿದ್ದ ದೃಶ್ಯಾವಳಿಗಳು ಕಣ್ಣಮುಂದೆ ಹಾದು ಹೋಗುತ್ತವೆ.
ಅನಾಣ್ಯೀಕರಣ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಗೊಂದಲಗಳು ಬಹುಶ: ಎಂದೆಂದಿಗೂ ಅಚ್ಚಳಿಯದೇ ಉಳಿಯುವ ನೆನಪುಗಳೇ ಆಗಿರುತ್ತವೆ. ಆದರೂ ಸಹ, ವರದಿಯ ಚಿತ್ರಣವು ಇನ್ನಿತರ ಮೂರು ಸಂಗತಿಗಳನ್ನೂ ಗಮನಿಸಬೇಕಾಗುತ್ತದೆ. ಆರ್ಥಿಕತೆಗೊಂದು ರೂಪುರೇಷೆ, ಆರ್ಥಿಕ ಒಳಗೊಳ್ಳುವಿಕೆ, ಮತ್ತು ಡಿಜಿಟಲೀಕರಣ. ನೇರವಾಗಿಯೇ ಆಗಲಿ ಅಥವಾ ತತ್ ಕ್ಷಣವೇ ಆಗಲೀ ಇವ್ಯಾವವೂ ನಿಮ್ಮ ಮೇಲೆ ಪ್ರಭಾವ ಬೀರಲಾರವು. ನೀವು ಸಿರಿವಂತರೂ ಆಗಲಾರಿರಿ ಅಥವಾ ಕಡಿಮೆ ತೆರಿಗೆಯನ್ನು ಪಾವತಿಸುವ ಯೋಗವೂ ನಿಮಗೇನೂ ಬರಲಾರದು. ಆದರೂ ಕೂಡಾ, ಈ ದಿಕ್ಕಿನತ್ತ ಸಾಗುವುದಕ್ಕೆ ಸತತವಾಗಿ ಪ್ರಯತ್ನಿಸುತ್ತಿದ್ದರೆ, ಕಟ್ಟಕಡೆಗೆ ನಿಮಗೆ ಸ್ವಚ್ಚವಾದ ಹಾಗೂ ಪರಿಣಾಮಕಾರಿಯಾದ ಅರ್ಥವ್ಯವಸ್ಥೆಯು ದಕ್ಕುತ್ತದೆ. ಇಂತಹ ಅರ್ಥವ್ಯವಸ್ಥೆಯು ತೆರಿಗೆಯ ದರದ ಮೇಲೆ, ಹಣದುಬ್ಬರದ ಮೇಲೆ ಮತ್ತು ಹಾಗೇನೇ ಆರ್ಥಿಕ ಹಿಂಜರಿತದ ಮೇಲೂ ಧನಾತ್ಮಕ ಪ್ರಭಾವವನ್ನುಂಟು ಮಾಡುತ್ತದೆ. ಮೋದಿ ಸರ್ಕಾರಕ್ಕೆ ನಾಲ್ಕು! ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು?
ಡಿಜಿಟಲೀಕರಣ
ಅನಾಣ್ಯೀಕರಣದ ಕೆಲವೇ ಕೆಲವು ತಿಂಗಳುಗಳ ಮೊದಲು ವಿಧ್ಯುಕ್ತವಾಗಿ ಚಾಲನೆಗೊಂಡ ಮೊಬೈಲ್ ವಾಲೆಟ್ ಗಳು ಮತ್ತು ಅಂತಿಮವಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಅಥವಾ ಯುಪಿಐ ಹಣಕಾಸಿನ ವ್ಯವಹಾರವನ್ನು ಮತ್ತಷ್ಟು ಸುಲಲಿತಗೊಳಿಸಿತು. ಸೆಲ್ ಫೋನ್ ನ ಮೂಲಕ ಒಂದು ಬ್ಯಾಂಕ್ ನ ಖಾತೆಯಿಂದ ಮತ್ತೊಂದಕ್ಕೆ ಬಳಕೆದಾರನು ತತ್ ಕ್ಷಣವೇ ಹಣವನ್ನು ವರ್ಗಾಯಿಸುವುದಕ್ಕೆ ಯು.ಪಿ.ಐ. ಅನುವು ಮಾಡಿಕೊಡುತ್ತದೆ ಮತ್ತು ಅನಾಣ್ಯೀಕರಣದ ಒಡನೆಯೇ ಕೀರ್ತಿ ಶಿಖರವನ್ನೇರಿದ ಇ-ವಾಲೆಟ್ ಗಳ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ಅಣಿಗೊಂಡಿದೆ. ಇಂಟರ್ನೆಟ್ ಬ್ಯಾಂಕಿಂಗ್ ನ ಹಂಗಿಲ್ಲದೆಯೇ ಪಾವತಿಗಳನ್ನು ಕೈಗೊಳ್ಳುವುದಕ್ಕೆ ಇ-ವಾಲೆಟ್ ಗಳು ನಿಮಗೆ ಅನುವು ಮಾಡಿಕೊಡುತ್ತವೆ. ಆದರೆ, ಹಾಗೆ ಪಾವತಿ ಕೈಗೊಳ್ಳುವುದಕ್ಕೆ ಮೊದಲು ಸ್ವಯಂ ಇ-ವಾಲೆಟ್ ನಗದನ್ನು ತುಂಬಿಸಿಕೊಂಡಿರಬೇಕು.
"ಡಿಜಿಟಲ್ ವ್ಯವಸ್ಥೆಯಡಿ ಪಾವತಿಯನ್ನು ಕೈಗೊಂಡು ರೂಢಿಯಿರದ ಹಿರಿಯ ನಾಗರೀಕರು ಹಾಗೂ ಇತರರು ಈ ಡಿಜಿಟಲ್ ಪಾವತಿಯನ್ನು ಅರ್ಥಮಾಡಿಕೊಳ್ಳಲು ಸಿಕ್ಕಾಪಟ್ಟೆ ಶ್ರಮವಹಿಸಿದ್ದಾರೆ. ಅನಾಣ್ಯೀಕರಣವೂ ಸಹ ಭಾರಿ ಪರಿಣಾಮವನ್ನುಂಟು ಮಾಡಿದೆ. ನಗದು ಅಥವಾ ಚೆಕ್ ಗಳ ಆಧಾರದ ಮೇಲೆ ಸಾಂಪ್ರದಾಯಿಕ ರೀತಿಯಲ್ಲಿ ವ್ಯವಹಾರಗಳನ್ನು ಕೈಗೊಳ್ಳುತ್ತಿದ್ದ ಸರಕಾರೀ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅಥವಾ ಹೌಸಿಂಗ್ ಸೊಸೈಟಿಗಳಂತಹ ಕೆಲವು ಕಾರ್ಯಕ್ಷೇತ್ರಗಳೂ ಸಹ ಇದೀಗ ಡಿಜಿಟಲ್ ಪಾವತಿಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡಿವೆ" ಎಂದು ಹೇಳುತ್ತಾರೆ ಪೇಯೂ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿರುವ ಅಮರಿಶ್ ರಾವ್ ಅವರು.
ಆರ್ಥಿಕ ಒಳಗೊಳ್ಳುವಿಕೆ
ಸರಕಾರದ ಮತ್ತೊಂದು ಮಹತ್ತರ ಮೈಲಿಗಲ್ಲು ಆರ್ಥಿಕ ಒಳಗೊಳ್ಳುವಿಕೆಯ ಕ್ಷೇತ್ರದ್ದಾಗಿದೆ. ಮೇ ತಿಂಗಳ 9 ನೇ ತಾರೀಖಿನಂದು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಜಾಲತಾಣದಲ್ಲಿ ಪರಿಷ್ಕರಿಸಿರುವ ಅಂಕಿಅಂಶಗಳ ಪ್ರಕಾರ, ಸರಿಸುಮಾರು 81,203.59 ಕೋಟಿ ರೂಪಾಯಿಗಳಷ್ಟು ಠೇವಣಿಯೊಂದಿಗೆ, ಸುಮಾರು 316 ಮಿಲಿಯನ್ ಗಳಷ್ಟು ಫಲಾನುಭವಿಗಳಿದ್ದಾರೆ.
ಜನ್ ಧನ್ ಯೋಜನೆಯು ಆರ್ಥಿಕತೆಯನ್ನು ಬ್ಯಾಂಕಿಂಗ್ ಕ್ಷೇತ್ರದೊಳಗೆ ತಂದಂತೆಯೇ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಜೀವ ವಿಮೆ) ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಅಪಘಾತ ವಿಮೆ) ಗಳಂತಹ ಯೋಜನೆಗಳ ಮೂಲಕ ವಿಮಾ ಕ್ಷೇತ್ರವೂ ಸಹ ಜನರಿಗೆ ಅತೀ ಅಗ್ಗದ ದರಗಳಲ್ಲಿ ಹಣಕಾಸಿನ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿವೆ.
ಆರೋಗ್ಯ ಉದ್ದಿಮೆಯ ಕ್ಷೇತ್ರವನ್ನೇ ಪುನರ್ ರೂಪಿಸಬಲ್ಲ ಸಾಮರ್ಥ್ಯವಿರುವ ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್ ನ ಘೋಷಣೆಯು ಅತೀ ಅಗಾಧ ಪ್ರಮಾಣದ ಸುಧಾರಣಾ ಕ್ರಮವಾಗಿದೆ. "5 ಲಕ್ಷ ರೂಪಾಯಿಗಳವರೆಗಿನ ವಿಮಾ ಸಂರಕ್ಷಣೆಯು ಸರಾಸರಿ ವ್ಯಕ್ತಿಯೊಬ್ಬನ ಅವಶ್ಯಕತೆಗೆ ಧಾರಾಳ ಸಾಕಾಗುತ್ತದೆ. ವೈದ್ಯಕೀಯ ಸೇವೆಯು ಕೈಗೆಟಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದರ ಮೂಲಕ, ಈ ಯೋಜನೆಯು ಭಾರತೀಯ ನಾಗರೀಕರ ಆಯುರ್ಮಾನವನ್ನು ಹೆಚ್ಚಿಸುವುದಷ್ಟೇ ಅಲ್ಲ, ಜೊತೆಗೆ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ವೈದ್ಯಕೀಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿರುವುದು ಈ ಯೋಜನೆಯ ಅತೀ ದೊಡ್ಡ ವರದಾನವಾಗಿದೆ" ಎಂದು ಹೇಳುತ್ತಾರೆ ಬಜಾಜ್ ಅಲೈನ್ಸ್ ಜೆನೆರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನ ನಿರ್ವಹಣಾ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ತಪನ್ ಸಿಂಘೆಲ್ ಅವರು.
ರೆಗ್ಯುಲೇಷನ್
ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪುನರ್ವ್ಯವಸ್ಥೆಗೊಳಿಸುವ ದಿಶೆಯಲ್ಲಿ ಇಟ್ಟಿರಬಹುದಾದ ದೊಡ್ಡ ಹೆಜ್ಜೆಗಳ ಪೈಕಿ ರಿಯಲ್ ಎಸ್ಟೇಟ್ (ರೆಗ್ಯುಲೇಷನ್ ಆಂಡ್ ಡೆವೆಲಪ್ಮೆಂಟ್) ಆಕ್ಟ್ (ಆರ್.ಇ.ಆರ್.ಎ) ಕೂಡಾ ಒಂದಾಗಿದೆ. ಮೇ 1, 2016 ರಂದು ಈ ಕ್ಷೇತ್ರವು ತನ್ನ ಮೊದಲನೆಯ ನಿಯಂತ್ರಕವನ್ನು ಪಡೆಯಿತು. ಡೆವಲಪರ್ ಗಳು ಒಂದು ಪ್ರೊಜೆಕ್ಟ್ ನಿಂದ ಮತ್ತೊಂದು ಪ್ರೊಜೆಕ್ಟ್ ನ ಫಂಡ್ ಗಳನ್ನು ಬರಿದಾಗಿಸುವ ಅನಿಷ್ಟ ಪದ್ಧತಿಯನ್ನು ತೆಗೆದು ಹಾಕುವುದರ ಮೂಲಕ ಮನೆಯನ್ನು ಖರೀದಿಸುವವರ ಬಡ್ಡಿಯ ಪಾರದರ್ಶಕತೆಯ ಮೇಲೆ ಹಾಗೂ ಸುರಕ್ಷತೆಯ ಮೇಲೆ ಆರ್.ಇ.ಆರ್.ಎ. ಗಮನ ಹರಿಸುತ್ತದೆ. ಹೀಗೆ ಮಾಡುವುದರ ಮೂಲಕ ನಿರ್ಮಾಣಕಾರ್ಯದ ವೇಗಕ್ಕಿರುವ ಅಡಚಣೆಯನ್ನು ನಿವಾರಿಸುತ್ತದೆ. ಎರಡು ವರ್ಷಗಳ ಬಳಿಕವೂ ಸಹ, ಅನೇಕ ರಾಜ್ಯಗಳಿನ್ನೂ ಪೂರ್ಣ ಪ್ರಮಾಣದಲ್ಲಿ ಈ ಕಾಯಿದೆ ಅಥವಾ ವಿಧೇಯಕವನ್ನು ಜಾರಿಗೊಳಿಸಿಲ್ಲ. ಇದು ಮನೆ ಖರೀದಿದಾರರ ಆತ್ಮವಿಶ್ವಾಸ ಮತ್ತು ನಿರೀಕ್ಷೆಗಳೆರಡರ ಮೇಲೂ ದುಷ್ಪ್ರಭಾವವನ್ನು ಬೀರುತ್ತದೆ.
ತೆರಿಗೆಯ ಅರ್ಥಪೂರ್ಣವಾಗಿಸುವಿಕೆ
ಪಾರದರ್ಶಕತೆಯನ್ನು ವೃದ್ಧಿಗೊಳಿಸುವ ದಿಶೆಯಲ್ಲಿ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಅಥವಾ ಜಿ.ಎಸ್.ಟಿ ಅನುಷ್ಟಾನವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಜಿ.ಎಸ್.ಟಿಯು ವಿವಿಧ ಬಗೆಯ ತೆರಿಗೆಗಳನ್ನು ಒಂದೇ ತೆರಿಗೆಯಲ್ಲಿ ವಿಲೀನಗೊಳಿಸುತ್ತದೆ. ಇದರ ಹಿಂದಿನ ಉದ್ದೇಶವು ತೆರಿಗೆಯ ಹೊರೆಯನ್ನು ತಗ್ಗಿಸುವುದು ಹಾಗೂ ಜೊತೆಗೆ ಕಾಂಪ್ಲಾಯೆನ್ಸ್ ಅನ್ನು ವೃದ್ಧಿಗೊಳಿಸುವುದೂ ಆಗಿದೆ. ಆರ್ಥಿಕತೆಗೆ ರೂಪುರೇಷೆಯನ್ನು ಒದಗಿಸುವುದರತ್ತ ಇದೊಂದು ಹೆಜ್ಜೆಯಾಗಿದ್ದು, ಇಂತಹ ಪ್ರಯತ್ನಗಳ ಫಲಿತವಾಗಿಯೇ ಟ್ಯಾಕ್ಸ್ ಬೇಸ್ ನಲ್ಲಿಂದು ವೃದ್ಧಿಯಾಗಿದೆ ಅರ್ಥಾತ್ ಬೊಕ್ಕಸಕ್ಕೆ ತೆರಿಗೆ ರೂಪದ ಆದಾಯದ ಹರಿವಿನಲ್ಲಿ ಹೆಚ್ಚಳವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಿಟರ್ನ್ ಫೈಲ್ ಗಳ ನೋಂದಣೆಯಲ್ಲಿ ಗಣನೀಯ ವೃದ್ಧಿಯಾಗಿದೆ ಹಾಗೂ ಅಂತೆಯೇ ತೆರಿಗೆ ಸಂಗ್ರಹವೂ ಗಣನೀಯವಾಗಿ ವೃದ್ಧಿಗೊಂಡಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ, 2014 ರ ವಿತ್ತೀಯ ವರ್ಷದಲ್ಲಿ 37.9 ಮಿಲಿಯನ್ ಗಳಷ್ಟು ಐ.ಟಿ.ಆರ್. ಗಳ ನೋಂದಣೆಯಾಗಿದ್ದರೆ, 2018 ರ ಆರ್ಥಿಕ ವರ್ಷದಲ್ಲಿ 68.4 ಮಿಲಿಯನ್ ಗಳಷ್ಟು ಐ.ಟಿ.ಆರ್. ಗಳು ನೋಂದಣಿಯಾಗಿದ್ದು, ತನ್ಮೂಲಕ ನೋಂದಣಿ ಪ್ರಕ್ರಿಯೆಯು 80.5% ರಷ್ಟು ವೃದ್ಧಿಗೊಂಡಿದೆ.
"ಗೊಂದಲಮಯ ಪ್ರಕ್ರಿಯೆಯಗಳ ನಿವಾರಣೆ, ತೆರಿಗೆ ದರಗಳ ತರ್ಕಬದ್ಧವಾಗಿಸುವಿಕೆ, ಅರ್ಥವ್ಯವಸ್ಥೆಯ ಡಿಜಿಟಲೀಕರಣ ಮತ್ತು ನಗದುರಹಿತ ಆರ್ಥಿಕತೆಯ ಉತ್ತೇಜನ ಇವೆಲ್ಲವೂ ಸರಕಾರದ ಆದ್ಯತೆಗಳಾಗಿವೆ" ಎನ್ನುತ್ತಾರೆ ನಂಜಿಯಾ & ಕಂಪನಿ; ಎಲ್.ಎಲ್. ಪಿ. ಎಂಬ ಚಾರ್ಟರ್ಡ್ ಅಕೌಂಟೆನ್ಸಿ ಸಂಸ್ಥೆಯ ನಿರ್ವಹಣಾ ಪಾಲುದಾರರಾಗಿರುವ ರಾಕೇಶ್ ನಂಜಿಯಾ ಅವರು.
ಇಕ್ವಿಟಿಗಳು
ಒಂದು ಅಸ್ಸೆಟ್ ಕ್ಲಾಸ್ ನ ರೂಪದಲ್ಲಿ, ಇಕ್ವಿಟಿಗಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಗೊಳಿಸುವುದೂ ಸಹ ಆರ್ಥಿಕ ಪುನರ್ರಚನೆಯ ಆಶಯವಾಗಿದೆ. ವಾಸ್ತವವಾಗಿ ಇಂದು ಇಕ್ವಿಟಿ ಮಾರುಕಟ್ಟೆಯನ್ನು ದೇಶೀಯ ಹರಿವು ಹೆಚ್ಚಾಗಿ ಬೆಂಬಲಿಸುತ್ತಿವೆಯೇ ಹೊರತು, ವಿದೇಶೀ ಸಾಂಸ್ಥಿಕ ಹೂಡಿಕೆ (ಎಫ್ಐಐ) ಗಳಲ್ಲ. ಜೊತೆಗೆ ಹೆಚ್ಚು ಹೆಚ್ಚು ಮಂದಿ ಇಕ್ವಿಟಿ ಸಿಸ್ಟೆಮಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಸಿಪ್) ಗಳಲ್ಲೇ ಹೂಡುತ್ತಿದ್ದಾರೆ. ನಿಜಕ್ಕೂ ಇದು ಪ್ರಮುಖ ವಿಚಾರವೇ ಆಗಿದೆ. ಏಕೆಂದರೆ, ದೀರ್ಘ ಕಾಲಾವಧಿಯ ಬಳಿಕ ಹಾಗೂ ತೆರಿಗೆಯೋತ್ತರ ಆಧಾರಿತ ನಿಶ್ಚಿತ ಆದಾಯದ ಮೇಲೆ, ಚಿನ್ನ ಅಥವಾ ರಿಯಲ್ ಎಸ್ಟೇಟ್ ಹೆಚ್ಚಿನದ್ದೇನನ್ನೂ ಕೊಡಮಾಡಲಾರವು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಸೂಚ್ಯಂಕವು ಸರಿಸುಮಾರು ಶೇ. 13.5 ದರದ ವಾರ್ಷಿಕ ರಿಟರ್ನ್ ಗಳನ್ನು ಕೊಡಮಾಡಿದವು. ಬಿ.ಎಸ್.ಇ. ಮಿಡ್ ಕ್ಯಾಪ್ ಮತ್ತು ಬಿ.ಎಸ್.ಇ. ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಸರಿಸುಮಾರು ತಲಾ 25% ವಾರ್ಷಿಕ ರಿಟರ್ನ್ ಗಳೊಂದಿಗೆ ಉತ್ತಮ ನಿರ್ವಹಣೆಯನ್ನು ತೋರಿದವು.
ಸರಕಾರದ ನ್ಯೂನತೆಗಳು
ಸರಕಾರವು ತೆಗೆದುಕೊಂಡಿರುವ ಕ್ರಮಗಳು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿವೆಯಾದರೂ ಸಹ ಅನುಷ್ಟಾನದ ಕಟ್ಟಕಡೆಯ ಹಂತಗಳು ಅಷ್ಟೊಂದು ಪ್ರಬಲವಾಗಿರಲಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. "ಕ್ರಮಗಳ ಸರಿಯಾದ ಅನುಷ್ಟಾನ ಮತ್ತು ನಿರ್ವಹಣಾ ಪ್ರಕ್ರಿಯೆಗಳಲ್ಲಿನ ಕೊರತೆಯೇ ಸರಕಾರದ ನ್ಯೂನತೆಗಳು. ಉದಾಹರಣೆಗೆ, ಎ.ಟಿ.ಎಂ. ಗಳ ಮರುಮೌಲ್ಯಾಂಕನ ಸಮರ್ಪಕವಾಗಿ ಆಗಿಲ್ಲ. ವಾಸ್ತವವಾಗಿ, ಪ್ರಧಾನ ಮಂತ್ರಿ ವಿಮಾ ಪಾಲಿಸಿಗಳ ಬೆಲೆಗಳು ಸರಕಾರದಿಂದಲೇ ನಿಗದಿಯಾಗುತ್ತಿದ್ದು, ಈಗಿನ ಧಾರಣೆಯ ದೃಷ್ಟಿಯಿಂದ ಪಾಲಿಸಿದಾರರ ಪಾಲಿಗೆ ಅರ್ಥಹೀನವೆಂದೆನಿಸಿಕೊಳ್ಳುತ್ತದೆ. ಈ ಪಾಲಿಸಿಗಳಿಗೆ ಮರುವಿಮೆ ಮಾಡುವುದು ನಮಗೆ ಕಷ್ಟಕರವೆಂದೆನಿಸುತ್ತದೆ" ಎಂದು ಹೆಸರು ಹೇಳಲಿಚ್ಚಿಸದ ಓರ್ವ ಹಿರಿಯ ವಿಮಾ ಏಜೆಂಟರು ಹೇಳುತ್ತಾರೆ. ಕೇರ್ ರೇಟಿಂಗ್ಸ್ ಲಿಮಿಟೆಡ್ ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಹೇಳುವ ಪ್ರಕಾರ, "ಸರಕಾರವು ವಹಿಸಿಕೊಂಡಿರುವ ಸುಧಾರಣಾ ಕ್ರಮಗಳು, ಇನ್ನಷ್ಟು ಉತ್ತಮ ಮೂಲಸೌಕರ್ಯ, ಆರ್ಥಿಕ ಚಟುವಟಿಕೆಗೊಂದು ಕಾಯಕಲ್ಪ, ಹಾಗೂ ಆರ್ಥಿಕ ವ್ಯವಹಾರಗಳ ಸರಳೀಕರಣಗಳ ಮೇಲೆ ಹೆಚ್ಚು ಗಮನ ಹರಿಸಿವೆ. ಮುಂಬರುವ ದಿನಗಳಲ್ಲಿ ಇವುಗಳ ಪ್ರಭಾವವು ನಾಗರೀಕರ ಅನುಭವಕ್ಕೆ ಬರಲಿವೆ. ಆದರೂ ಸಹ, ಈ ಸುಧಾರಣಾ ಕ್ರಮಗಳು ಪ್ರಗತಿಪರ ರೀತಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಉದ್ಯೋಗಾವಕಾಶಗಳನ್ನು ಇನ್ನೂ ಸೃಷ್ಟಿಸಿಲ್ಲ ಹಾಗೂ ಜೊತೆಗೆ ಕಪ್ಪು ಹಣವನ್ನು ಮರಳಿ ಅರ್ಥವ್ಯವಸ್ಥೆಗೆ ಸೇರಿಸಿರುವ ಅಥವಾ ಮರುಹಂಚಿಕೆ ಮಾಡಿರುವ ಲಕ್ಷಣಗಳು ನಿರೀಕ್ಷಿಸಿದಷ್ಟೇನೂ ಕಂಡುಬರುತ್ತಿಲ್ಲ.