ಬಂಡವಾಳ ಹಿಂತೆಗೆತ; ಲಾಭದ ಆಸೆಯಿಂದ ಪಿಗ್ಗಿ ಬಿದ್ದ ಹೂಡಿಕೆದಾರರು
ಇಂದಿನ ವ್ಯವಹಾರ ಎಷ್ಟು ಕ್ಲಿಷ್ಟಕರವಾಗಿದೆ ಎಂದರೆ ಕಾರ್ಪೊರೇಟ್ ಗಳು ತಮ್ಮ ಸ್ವಂತ ಚಟುವಟಿಕೆಯಿಂದ ಅಗತ್ಯವಿದ್ದಷ್ಟು ಲಾಭ ಗಳಿಕೆಯನ್ನು ಮಾಡುವುದು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿವೆ. ತಮ್ಮ ಹಣಕಾಸಿನ ಅಗತ್ಯವನ್ನು ಕಂಪೆನಿಗಳು ಹೊರಗಿನಿಂದ ಸಾಲ ಪಡೆಯುವ ಮೂಲಕವಾಗಲಿ, ಹೊಸದಾಗಿ ಷೇರು ಬಿಡುಗಡೆಯ ಮೂಲಕವಾಗಲಿ, ಡಿಬೆಂಚರ್ ಗಳನ್ನು ಬಿಡುಗಡೆ ಮಾಡುವ ಮೂಲಕವಾಗಲಿ ಸಂಗ್ರಹಿಸಲು ಪ್ರಯತ್ನಿಸುತ್ತವೆ.
ಇಲ್ಲವಾದಲ್ಲಿ ತಮ್ಮ ಚರ ಅಥವಾ ಸ್ಥಿರ ಸ್ವತ್ತನ್ನು ಮಾರಾಟ ಮಾಡುವತ್ತ ಗಮನ ಹರಿಸುತ್ತಾರೆ. ಇವು ಕೇವಲ ಖಾಸಗಿ ವಲಯದ ಕಂಪೆನಿಗಳ ಕಥೆಯಲ್ಲ, ಕೇಂದ್ರ ಸರಕಾರವು ಸಹ ತನ್ನ ವಿವಿಧ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹಣೆಗೆ ವೈವಿಧ್ಯಮಯ ವಿಧಗಳಿಂದ ಪ್ರಯತ್ನಿಸುತ್ತದೆ.
ಏರಿಳಿಕೆಗೆ ಒಳಗಾದ ಸೆನ್ಸೆಕ್ಸ್ 15 ಅಂಕ ನಷ್ಟ
ಅದರಲ್ಲಿ ತನ್ನಲ್ಲಿರುವ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿರುವ ಭಾಗಿತ್ವವನ್ನು ಮಾರಾಟ ಮಾಡುವ ಪ್ರಕ್ರಿಯೆಯೂ ಒಂದು ವಿಧವಾಗಿದೆ. ಇದನ್ನು ಬಂಡವಾಳ ಹಿಂತೆಗೆತ ಎನ್ನುವರು. ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರಕಾರವು ರು. ೧.೦೫ ಲಕ್ಷ ಕೋಟಿಯಷ್ಟು ಬಂಡವಾಳ ಹಿಂತೆಗೆತದ ಗುರಿ ಹೊಂದಿದೆ.
ಕೇಂದ್ರ ಸರಕಾರದ ಈ ಬಂಡವಾಳ ಹಿಂತೆಗೆತವು ಯಾವಾಗಲೂ ಯಶಸ್ವಿಯಾಗಿರುತ್ತದೆ ಎಂಬುದು ನಿಶ್ಚಿತವಲ್ಲ. ಕೆಲವು ಬಾರಿ ಅಗತ್ಯವಿದ್ದಷ್ಟು ಹಣ ಸಂಗ್ರಹವಾಗದಿದ್ದರೆ, ಎಲ್ ಐಸಿ ಯಂತಹ ಸಂಸ್ಥೆಗಳ ಮೂಲಕ ಗುರಿ ತಲುಪಿರುವ ನಿದರ್ಶನಗಳಿವೆ.
ಆರು ವರ್ಷ ಕಳೆದರೂ ವಿತರಣೆ ಬೆಲೆ ಬರಲಿಲ್ಲ
2011ರ ನವೆಂಬರ್ ನಲ್ಲಿ ಒಎನ್ ಜಿಸಿ ಕಂಪೆನಿಯ ಮತ್ತಷ್ಟು ಷೇರು ವಿತರಣೆಯನ್ನು ಮಾಡಲು ಅರ್ಜಿಗಳನ್ನು ಮುದ್ರಿಸಿ, ವಿತರಿಸಿತ್ತು. ಆದರೆ ಆ ಸಂದರ್ಭದಲ್ಲಿ ಪೇಟೆಯ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕಾಗಿ ವಿತರಣೆಯಿಂದ ಹಿಂದೆ ಸರಿಯಿತು. 2013, ಮಾರ್ಚ್ ನಲ್ಲಿ ಎಂಎಂಟಿಸಿ ಷೇರಿನ ಬೆಲೆ ರು. 250 ರಲ್ಲಿದ್ದು, ಸರಕಾರವು ಪ್ರತಿ ಷೇರಿಗೆ ರು. 60ರಂತೆ ಆಫರ್ ಫಾರ್ ಸೆಲ್ ಮೂಲಕ ಮಾರಾಟ ಮಾಡುವ ಯೋಜನೆ ಪ್ರಕಟಿಸುತ್ತಿದ್ದಂತೆಯೇ ಷೇರಿನ ಬೆಲೆ ನಿರಂತರವಾಗಿ ಕುಸಿದು, ರು. 50 ರೊಳಗೆ ಕುಸಿಯಿತು. ಜನವರಿ 2013ರಲ್ಲಿ ರು.430ರ ಸಮೀಪವಿದ್ದ ಷೇರಿನ ಬೆಲೆ ಜೂನ್ ತಿಂಗಳ ವಿತರಣೆ ವೇಳೆಗೆ ರು. 150ರ ಸಮೀಪಕ್ಕೆ ಕುಸಿಯಿತು. ಈ ಕುಸಿತವು ನಿರಂತರವಾದ ಕೆಳಗಿನ ಆವರಣ ಮಿತಿ ತಲುಪುವ ಮೂಲಕ ಪ್ರದರ್ಶಿತವಾಯಿತು. 2011- 12 ರಲ್ಲಿ ರು.70.72 ಕೋಟಿ ಲಾಭ ಗಳಿಸಿದ್ದ ಕಂಪೆನಿ, 2012- 13ರಲ್ಲಿ ರು.70.62 ಕೋಟಿಯಷ್ಟು ಹಾನಿಗೊಳಗಾಗಿತ್ತು. ಈ ವಿತರಣೆಯ ನಂತರ ಷೇರಿನ ಬೆಲೆ ನಿರಂತರವಾದ ಕುಸಿತದತ್ತ ಸಾಗಿ, ರು. 22ರ ಸಮೀಪಕ್ಕೆ ಸದ್ಯ್ ತಲುಪಿದೆ. ಈ ಮಧ್ಯೆ 2018ರಲ್ಲಿ 1:2 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಅಂದರೆ ಆರು ವರ್ಷಗಳಲ್ಲಿ ವಿತರಿಸಿದ ಬೆಲೆಗೂ ತಲುಪದೇ ಇರುವುದು ವಿಸ್ಮಯಕಾರಿ ಅಂಶವಾಗಿದೆ.
ಖಾಸಗಿ ಮತ್ತು ಸರಕಾರಿ ಎಲ್ಲವೂ ಒಂದೇ
2009ರಲ್ಲಿ ಎನ್ ಎಚ್ ಪಿಸಿ ಕಂಪೆನಿ ಪ್ರತಿ ಷೇರಿಗೆ ರು. 36 ರಂತೆ ಆರಂಭಿಕ ಷೇರು ವಿತರಣೆ ಮಾಡಿತು. 2010ರಲ್ಲಿ ವಿತರಣೆ ಬೆಲೆ ತಲುಪಿತ್ತಾದರೂ ನಂತರದಲ್ಲಿ ಷೇರಿನ ಬೆಲೆ ವಿತರಣೆ ಬೆಲೆಗೆ ತಲುಪಲೇ ಇಲ್ಲ. ಸೋಜಿಗವೆಂದರೆ ಈ ಕಂಪೆನಿ ಪ್ರತಿ ಷೇರಿಗೆ ರು. 26ರ ಪ್ರೀಮಿಯಂ ಸಂಗ್ರಹಿಸಿದ್ದರೂ ವಿತರಿಸಿದ ಲಾಭಾಂಶ ಮಾತ್ರ ನೀರಸಮಯವಾಗಿತ್ತು. 2013ರಲ್ಲಿ ಅಂದರೆ ಐಪಿಒ ಎಡಿಎ ನಾಲ್ಕು ವರ್ಷದ ನಂತರ ಈ ಕಂಪೆನಿ ಷೇರುದಾರರಿಂದ ರು. 19ರಂತೆ ಬೈ ಬ್ಯಾಕ್ ಮಾಡಿತು. ಅಷ್ಟಕ್ಕೇ ನಿಲ್ಲದೆ 2016ರಲ್ಲಿ ಈ ಕಂಪೆನಿ ಮತ್ತೊಮ್ಮೆ ಪ್ರತಿ ಷೇರಿಗೆ ರು. 21.75 ರಂತೆ ಷೇರು ವಿತರಿಸಿತು. ಸರಕಾರಿ ವಲಯದ ಸಾರ್ವಜನಿಕ ಕಂಪೆನಿಯಾದ್ದರಿಂದ ಹೂಡಿಕೆದಾರರಿಗೆ ಒಂದು ರೀತಿಯ ಸುರಕ್ಷತಾ ಭಾವನೆಯಿದ್ದು, ವಿತರಣೆಯಲ್ಲಿ ಭಾಗವಹಿಸಿರುತ್ತಾರೆ. ಮೊದಲ ವಿತರಣೆಯ ನಂತರದ ನಾಲ್ಕು ವರ್ಷವಾದ ಮೇಲೆ ಬೈಬ್ಯಾಕ್ ಮಾಡುವ ಬದಲು, ಆಕರ್ಷಕ ಲಾಭಾಂಶವನ್ನು ನೀಡಿದ್ದಲ್ಲಿ ನ್ಯಾಯಸಮ್ಮತ ಆಗುತ್ತಿರುತ್ತಿತ್ತು. ಐಪಿಒನಲ್ಲಿ ನೀಡಿದ್ದ ದುಡ್ಡಿನಿಂದ ಅವರದೇ ಷೇರನ್ನು ಕಡಿಮೆ ಬೆಲೆಗೆ ಬೈಬ್ಯಾಕ್ ಮಾಡುವ ಕ್ರಮ ಸಮಂಜಸವಲ್ಲ.
ಸೆನ್ಸೆಕ್ಸ್ 168 ಅಂಕ ಏರಿಕೆ, ನಿಫ್ಟಿ 11922ರ ಮಟ್ಟಕ್ಕೆ
ಎನ್ ಎಂಡಿಸಿ ಕಂಪೆನಿ ಕಥೆ ಹಾಗಾಯಿತು
ಎನ್ ಎಂಡಿಸಿ ಕಂಪೆನಿಯ ರು.1ರ ಮುಖಬೆಲೆಯ ಷೇರನ್ನು 2010ರಲ್ಲಿ ಪ್ರತಿ ಷೇರಿಗೆ ರು.300ರಂತೆ ಷೇರು ವಿತರಿಸಿತ್ತು. ಮತ್ತೊಮ್ಮೆ 2018ರ ಜನವರಿಯಲ್ಲಿ ರು.153.50ರ ಕನಿಷ್ಠ ಬೆಲೆಯಲ್ಲಿ ಷೇರು ವಿತರಿಸಿತು. ಆದರೆ ನಂತರದ ದಿನಗಳಲ್ಲಿ ನಿರಂತರವಾಗಿ ಷೇರಿನ ದರ ಕುಸಿದು ರು. 86.45ಕ್ಕೆ ಕುಸಿದು, ನಂತರ ಸ್ವಲ್ಪ ಚೇತರಿಕೆ ಕಂಡು ಸದ್ಯ ರು.115ರ ಸಮೀಪವಿದೆ. ಅಕ್ಟೊಬರ್ 2017 ರಲ್ಲಿ ಜನರಲ್ ಇನ್ಸೂರೆನ್ಸ್ ಕಾರ್ಪೊರೇಷನ್ ಪ್ರತಿ ಷೇರಿಗೆ ರು. 912ರಂತೆ ಸಾರ್ವಜನಿಕರಿಗೆ ಷೇರು ವಿತರಣೆ ಮಾಡಿ, ರು. 11,175 ಕೋಟಿ ಸಂಗ್ರಹಣೆ ಮಾಡಿತು. ನಂತರ 2018ರಲ್ಲಿ ಕಂಪೆನಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿತು. ಇದು ವಿತರಣೆ ಬೆಲೆಯನ್ನು ರು.456ಕ್ಕೆ ಇಳಿಸಿತು. ಅಲ್ಲಿಂದ ಇಳಿಕೆಯತ್ತ ಸಾಗಿದ್ದ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ ರು.383ರ ವಾರ್ಷಿಕ ಗರಿಷ್ಠದಿಂದ ರು.204.30ರ ವಾರ್ಷಿಕ ಕನಿಷ್ಠ್ಕ್ಕೆ ಕುಸಿತ ಕಂಡಿತು. ಇದು ಕಂಪೆನಿಯ ಹರಿದಾಡುವ ಷೇರುಗಳ ಬಂಡವಾಳ ಮೌಲ್ಯ ರು.5,542 ಕೋಟಿಗೆ ಕುಸಿದು, ಹೂಡಿಕೆದಾರರ ಬಂಡವಾಳ ಕರಗಿಸಿದೆ.
ಕೋಲ್ ಇಂಡಿಯಾ ಒಂದು ಉದಾಹರಣೆ
ನವೆಂಬರ್ 2017ರಲ್ಲಿ ನ್ಯೂ ಇಂಡಿಯಾ ಆಶುರನ್ಸ್ ಕಂಪೆನಿ ರು. 800ರಂತೆ ಷೇರು ವಿತರಣೆ ಮಾಡಿತು. ಈ ಮೂಲಕ ಸುಮಾರು ರು. 9,600 ಕೋಟಿ ಸಂಗ್ರಹಣೆ ಮಾಡಿತು. ನಂತರ ಜೂನ್ ತಿಂಗಳಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ವಿತರಣೆಯಾದ ಷೇರಿನ ಬೆಲೆ ರು.400 ರಂತಾಯಿತು. ಹಿಂದಿನ ವರ್ಷ ಜುಲೈನಲ್ಲಿ ರು.311 ರಲ್ಲಿದ್ದ ಷೇರು ನಿರಂತರವಾಗಿ ಏಕಮುಖವಾಗಿ ಇಳಿಕೆಗೊಳಪಟ್ಟು, ಸದ್ಯ ರು.131 ರ ಸಮೀಪಕ್ಕೆ ಕುಸಿದು ವಾರ್ಷಿಕ / ಸರ್ವಕಾಲೀನ ಕನಿಷ್ಠದ ದಾಖಲೆ ನಿರ್ಮಿಸಿದೆ. ಹರಿದಾಡುವ ಷೇರುಗಳ ಬಂಡವಾಳ ಮೌಲ್ಯ್ವು ರು. 3,264 ಕೋಟಿಗೆ ಕುಸಿದಿದೆ. ಇಂತಹ ಭಾರಿ ಗಾತ್ರದ ಬಂಡವಾಳ ಕರಗಿದಾಗಲೂ ಕಂಪೆನಿ ವಿತರಿಸಿದ ಲಾಭಾಂಶವು ಕೇವಲ ರು. 1.50 ಮಾತ್ರ. 2010 ರಲ್ಲಿ ನವರತ್ನ ಕಂಪೆನಿ ಕೋಲ್ ಇಂಡಿಯಾ ರು.15 ಸಾವಿರ ಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕ ಷೇರು ವಿತರಣೆ ಮಾಡಿತು. ಆ ಸಂದರ್ಭದಲ್ಲಿ ಸಾರ್ವಜನಿಕ ಸ್ಪಂದನ ಹೆಚ್ಚಾಗಿ, ಸುಮಾರು ಎರಡು ಲಕ್ಷ ಕೋಟಿ ಹಣ ಸಂಗ್ರಹಣೆಯಾಯಿತು. ಅಂದರೆ ಸುಮಾರು ರು.1.85 ಲಕ್ಷ ಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರ ಸರಿಯಿತು. ಈ ಷೇರು ಮೇ 2011 ರಲ್ಲಿ ರು.422 ರವರೆಗೂ ಏರಿಕೆ ಕಂಡು ವಿಜೃಂಭಿಸಿತು. ಅಲ್ಲಿಂದ ತನ್ನ ಸ್ಥಾನವನ್ನು ಕಳೆದುಕೊಂಡಿತು. ಈ ಕಂಪೆನಿಯನ್ನು ಸೆನ್ಸೆಕ್ಸ್ ನಲ್ಲಿ ಸೇರಿಸಿದ್ದು, ನಂತರ ಅದರಿಂದ ಹೊರಬಂದಿದೆ. ಈಗ ಕಂಪೆನಿಯ ವಿವಿಧ ವಿಭಾಗಗಳನ್ನು ಬೇರ್ಪಡಿಸುವ ಪ್ರಯತ್ನವು ನಡೆದಿದೆ. ಸದ್ಯದಲ್ಲಿ ಈ ಷೇರು ವಿತರಣೆ ಬೆಲೆಗಿಂತ ಕಡಿಮೆ ದರದಲ್ಲಿ ಅಂದರೆ ರು. 220ರ ಸಮೀಪ ವಹಿವಾಟಾಗುತ್ತಿದೆ.
ಜಾಗತಿಕ ಷೇರುಪೇಟೆ ಪ್ರಭಾವ, ಸೆನ್ಸೆಕ್ಸ್ 247 ಅಂಕ ಕುಸಿತ
ಬಂಡವಾಳ ಹಿಂತೆಗೆತ ಕಾರ್ಯಕ್ರಮಕ್ಕೆ ಬೆಂಬಲಿಸುವುದಾದರೂ ಹೇಗೆ?
ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿ ಲಿಮಿಟೆಡ್ 2018ರ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರು. 1,215 ರಲ್ಲಿ ಸಾರ್ವಜನಿಕ ಷೇರು ವಿತರಣೆ ಮಾಡಿತು. ನಂತರದ ದಿನಗಳಲ್ಲಿ ಷೇರಿನ ಬೆಲೆ ಸತತವಾದ ಇಳಿಕೆಯತ್ತ ಸಾಗಿದೆ. ಹಿಂದಿನ ವರ್ಷದ ಆಗಸ್ಟ್ ನಲ್ಲಿ ರು. 1,014 ರ ವಾರ್ಷಿಕ ಗರಿಷ್ಠದಲ್ಲಿದ್ದ ಷೇರು ಫೆಬ್ರವರಿಯಲ್ಲಿ ರು.603 ರ ಸಮೀಪಕ್ಕೆ ಕುಸಿದು, ವಾರ್ಷಿಕ ಕನಿಷ್ಠ ದಾಖಲಿಸಿದೆ. ಸದ್ಯ ರು.675ರ ಸಮೀಪವಿರುವ ಈ ಕಂಪೆನಿ ಷೇರು ಹೂಡಿಕೆದಾರರ ಸುಮಾರು ಶೇ. 45 ರಷ್ಟರ ಬಂಡವಾಳವನ್ನು ನಾಶಗೊಳಿಸಿ ನಿರುತ್ಸಾಹಿಗಳನ್ನಾಗಿಸಿದೆ. ಹಾಗೆ ಕಂಪೆನಿಗಳಾದ ಕೊಚಿನ್ ಶಿಪ್ ಯಾರ್ಡ್, ಹುಡ್ಕೋ, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ. ಈ ರೀತಿ ಅತಿ ಹೆಚ್ಚಿನ ಬೆಲೆಗೆ ವಿತರಿಸಿ ಸಾರ್ವಜನಿಕ ಹೂಡಿಕೆಯ ಮೊತ್ತವು ಪರೋಕ್ಷವಾಗಿ ಸರ್ಕಾರದ ಖಜಾನೆಗೆ ಸೇರಿಕೊಂಡರೆ, ಸಣ್ಣ ಹೂಡಿಕೆದಾರರು, ಮ್ಯುಚುಯಲ್ ಫಂಡ್ ಗಳು ಮುಂದಿನ ದಿನಗಳಲ್ಲಿ ಬಂಡವಾಳ ಹಿಂತೆಗೆತ ಕಾರ್ಯಕ್ರಮಕ್ಕೆ ಬೆಂಬಲಿಸುವುದಾದರೂ ಹೇಗೆ?
ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಸೂತ್ರ ಅನುಸರಿಸಲಿ
ಪೇಟೆಗಳು ಈಗ ನಿರುತ್ಸಾಹಿ ವಾತಾವರಣದಲ್ಲಿರುವಾಗ ಸರಕಾರ ಹೊಂದಿರುವ ಬಂಡವಾಳ ಹಿಂತೆಗೆತದ ಗುರಿ ಸಾಧನೆಯ ನೆಪದಲ್ಲಿ ಇತರೆ ಸರಕಾರಿ ಸ್ವಾಮ್ಯದ ಕಂಪೆನಿಗಳು ಹೊಂದಿರಬಹುದಾದ ಹೆಚ್ಚುವರಿ ರಿಸರ್ವ್ಸ್ ಗಳು ಸರಕಾರದ ಖಜಾನೆ ಸೇರುವಂತಾಗದಿದ್ದರೆ ಸಾಕು. ಕಾರಣ ಷೇರುಪೇಟೆಯಲ್ಲಿ ಅನೇಕ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವವರು ಆ ಕಂಪೆನಿಗಳು ಹೊಂದಿರುವ ರಿಸರ್ವ್ಸ್ ಗಳನ್ನು ಆಧರಿಸಿ ನಂಭಿಕೆಯಿಂದ ಹೂಡಿಕೆಗೆ ನಿರ್ಧರಿಸಿರುತ್ತಾರೆ. ಅವರ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಸಹ ಅಗತ್ಯವಾಗಿದೆ. ಈ ಬಗ್ಗೆ ಸರಕಾರ ಸಮತೋಲನೆ ನಿರ್ಧಾರ ತೆಗೆದುಕೊಂಡು ಈ ಹಿಂದೆ ಕೆನರಾ ಬ್ಯಾಂಕ್, ಮಾರುತಿ ಸುಜುಕಿಗಳಿಗೆ ವಿತರಣೆ ಬೆಲೆ ನಿರ್ಧರಿಸಿದ ಮಾರ್ಗ ಸೂತ್ರವನ್ನು ಅವಲಂಬಿಸಿದಲ್ಲಿ ಈಗಿನ ಕುಸಿಯುತ್ತಿರುವ ಪೇಟೆಗೆ ಚೇತರಿಕೆ, ಚೈತನ್ಯ ತಂದುಕೊಟ್ಟು ತನ್ನ ಗುರಿಯನ್ನು ಸಾಧಿಸಿದಂತಾಗುತ್ತದೆ.