ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠದ ದಾಖಲೆ ನಿರ್ಮಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಹತ್ತು ಲಕ್ಷ ಕೋಟಿ ರುಪಾಯಿಗಳನ್ನು ದಾಟಿದ ಮೊದಲ ಕಂಪನಿ ಎಂಬ ದಾಖಲೆ ಸಹ ನಿರ್ಮಾಣವಾಗಿದೆ.
ಈ ಮಧ್ಯೆ ಒಂದು ಪ್ರಮುಖ ಬ್ರೋಕಿಂಗ್ ಸಂಸ್ಥೆಯು ತನ್ನ ಕಾರ್ಯ ನಿರ್ವಹಣೆಯಲ್ಲಿ ಹೂಡಿಕೆದಾರರ ಹಣ ದುರುಪಯೋಗಮಾಡಿದೆ ಎಂಬ ಕಾರಣದಿಂದ ಪೇಟೆಯ ನಿಯಂತ್ರಕ 'ಸೆಬಿ' ಆ ಕಂಪನಿಯ ಚಟುವಟಿಕೆಯ ಮೇಲೆ ನಿರ್ಬಂಧ ವಿಧಿಸಿದೆ. ಈ ಸಂದರ್ಭದಲ್ಲಿ ಹೂಡಿಕೆದಾರರ ಹಿತರಕ್ಷಣೆಗಾಗಿ ಇರುವ ವಿವಿಧ ನಿಯಮಾವಳಿಗಳ ಪಾಲನೆ ಸರಿಯಾಗಿದ್ದಲ್ಲಿ ಹೆಚ್ಚಿನ ಅಪಾಯಗಳು ದೂರವಾಗುತ್ತವೆ.

ಹೂಡಿಕೆದಾರರು ತಮ್ಮ ತಾತ್ಸಾರ ಮನೋಭಾವದಿಂದ ಅಪಾಯಕ್ಕೊಳಗಾಗುತ್ತಿದ್ದಾರೆ. ಮೊದಲಿಗೆ ಈ ನಿಯಮಾವಳಿಗಳು ನಿಷ್ಪ್ರಯೋಜಕ ಎಂಬ ಭಾವನೆ ಮೂಡಿಸಿದ್ದರು, ಈಗಿನ ಬದಲಾವಣೆಗಳನ್ನು, ಗೊಂದಲಗಳನ್ನು ಗಮನಿಸಿದಾಗ ಇವು ಗ್ರಾಹಕರ ಹಿತದ ಉತ್ತಮ ನಿಯಮಾವಳಿಗಳು ಎಂಬುದು ಖಾತ್ರಿಯಾಗಿದೆ.
*ಪ್ರತಿಯೊಂದು ಬ್ರೋಕಿಂಗ್ ಸಂಸ್ಥೆಯು ಗ್ರಾಹಕರ ವಹಿವಾಟು ನಡೆದ ದಿನ ಅವರಿಗೆ ಕಾಂಟ್ರಾಕ್ಟ್ ನೋಟ್ ಕಳುಹಿಸುತ್ತಾರೆ. ಮೊಬೈಲ್ ಮೂಲಕ ಅಂದು ನಡೆದ ಚಟುವಟಿಕೆ ಬಗ್ಗೆ ಮಾಹಿತಿಯನ್ನು ರವಾನೆ ಮಾಡುವ ವ್ಯವಸ್ಥೆಯಿರುತ್ತದೆ. ಈ ರೀತಿ ಬಂದ ಕಾಂಟ್ರಾಕ್ಟ್ ನೋಟ್ ತಾವು ನಡೆಸಿದ ಚಟುವಟಿಕೆಯ ರೀತಿ ಕ್ರಮಬದ್ಧವಾಗಿದೆಯೇ ಬರುವ ಮೊಬೈಲ್ ಸಂದೇಶದಲ್ಲಿ ತಾವು ನಡೆಸಿದ ಚಟುವಟಿಕೆಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳುವುದು ಅನಿವಾರ್ಯ.
* ಪ್ರತಿ ತಿಂಗಳಿಗೊಮ್ಮೆ ಬ್ರೋಕಿಂಗ್ ಸಂಸ್ಥೆ ಕೊಟ್ಟ ಮಾಹಿತಿಯಾಧಾರಿಸಿ ಬಾಂಬೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳು ಹಿಂದಿನ ಮಾಸಾಂತ್ಯದಲ್ಲಿ ಬ್ರೋಕರ್ ರವರ ಪೂಲ್ ಅಕೌಂಟ್ ನಲ್ಲಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗದೆ ಇರುವ ಷೇರುಗಳು ಮತ್ತು ಅವರ ಖಾತೆಯಲ್ಲಿರುವ ಹಣದ ಬಗ್ಗೆ ವಿವರ ನೀಡುವರು. ಇದನ್ನು ಹೆಚ್ಚಿನ ಹೂಡಿಕೆದಾರರು ನಿರ್ಲಕ್ಷಿಸುತ್ತಾರೆ. ಇದು ಬೇಜವಾಬ್ದಾರಿಯುತ ಕಾರ್ಯವಲ್ಲವೇ?
* ಪ್ರತಿ ಮೂರು ತಿಂಗಳ ಅಂತ್ಯದಲ್ಲಿ ಅಂದರೆ ಜೂನ್, ಸೆಪ್ಟೆಂಬರ್, ಡಿಸೆಂಬರ್ , ಮಾರ್ಚ್ ಅಂತ್ಯದಲ್ಲಿ ಗ್ರಾಹಕರ ಖಾತೆಯಲ್ಲಿ ಜಮೆ ಇರುವ ಹಣವನ್ನು ಅವರ ನೋಂದಾಯಿತ ಖಾತೆಗೆ ವರ್ಗಾಯಿಸಲಾಗುವುದು. ಇದನ್ನು ಸಹ ಹೆಚ್ಚಿನವರು ಪರಿಶೀಲಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.
ಈ ರೀತಿ ಕಾಂಟ್ರಾಕ್ಟ್ ನೋಟ್ ಪರಿಶೀಲಿಸಿಕೊಂಡು ಸರಿಯಾಗಿದೆ ಎಂಬುದು ದೃಢೀಕರಿಸಿಕೊಳ್ಳುವುದು, ಮೊಬೈಲ್ ಗೆ ಬಂದಂತಹ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಕೊಳ್ಳುವುದು, ಮಾಸಾಂತ್ಯದಲ್ಲಿ ಬರುವ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬೇಕು.
ತ್ರೈಮಾಸಿಕದ ಅಂತ್ಯದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾದ ಹಣ ಸರಿಯಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದಲ್ಲದೆ, ಎಂದಾದರೂ ವ್ಯತ್ಯಯ ಅಥವಾ ಗೊಂದಲವಿದ್ದಲ್ಲಿ ಆಯಾ ಬ್ರೋಕರ್ ಮೂಲಕ ಪರಿಹರಿಸಿಕೊಂಡರೆ ಎಲ್ಲವು ಸರಾಗವಾಗುತ್ತದೆ. ಕೆಲವು ಸಲ ತಮ್ಮ ಡಿಮ್ಯಾಟ್ ಖಾತೆಯಲ್ಲಿ ವ್ಯತ್ಯಾಸವಿದ್ದಲ್ಲಿ ಅದನ್ನು ಸಹ ಸರಿಪಡಿಸಕೊಳ್ಳುವುದು ಅತ್ಯವಶ್ಯಕ.
ಗ್ರಾಹಕರ ರಕ್ಷಣೆಗಾಗಿ ಪೇಟೆಯ ನಿಯಂತ್ರಕ 'ಸೆಬಿ' ಸಾಕಷ್ಟು ನಿಯಾಮಾವಳಿಗಳನ್ನು ಜಾರಿಗೊಳಿಸಿದ್ದರೂ, ಗ್ರಾಹಕರು ನಿರ್ಲಕ್ಷ್ಯ, ತಾತ್ಸಾರಗಳಿಂದ ಅಪಾಯ ತಂದುಕೊಳ್ಳದೆ ಅವುಗಳ ಅನುಷ್ಠಾನದ ಸದುಪಯೋಗ ಮಾಡಿಕೊಳ್ಳುವುದು ಸುರಕ್ಷಿತ.


Click it and Unblock the Notifications