ದೇಶವ್ಯಾಪಿ ಮುಷ್ಕರ 18 ಸಾವಿರ ಕೋಟಿ ನಷ್ಟ
ಕಾರ್ಮಿಕ ಸಂಘಟನೆಗಳು ಶುಕ್ರವಾರ ದೇಶವ್ಯಾಪಿ ಹಮ್ಮಿಕೊಂಡಿದ್ದ ಮುಷ್ಕರದ ಫಲವಾಗಿ ದೇಶದ ಆರ್ಥಿಕತೆಗೆ ಹೆಚ್ಚು ಕಡಿಮೆ 18 ಸಾವಿರ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.
ಮೂಲಭೂತ ಸೌಕರ್ಯ, ಕಾರ್ಮಿಕ ನಿಯಮ ಜಾರಿ, ಕಾರ್ಮಿಕರಿಗೆ ನ್ಯಾಯಯುತ ವೇತನ, ಸಾರ್ವತ್ರಿಕ ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ಜೀವನ ಮಟ್ಟ ಸುಧಾರಣೆ ಅಂಗವಾಗಿ ದೇಶವ್ಯಾಪಿ ಮುಷ್ಕರ ನಡೆಸಲಾಗಿತ್ತು.
ನಷ್ಟ ಸಂಭವಿಸಲು ಕಾರಣ
ವ್ಯಾಪಾರ, ಸಾರಿಗೆ, ತಯಾರಿಕೆ, ಉದ್ಯಮ, ಹೋಟೆಲ್, ಬ್ಯಾಂಕಿಂಗ್ ಸೇವೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಈ ನಷ್ಟ ಸಂಭವಿಸಿದೆ.
ಅಸೋಚಾಂ ಹೇಳಿಕೆ
ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿತ್ತು. ಇದರಿಂದ ಬಹುತೇಕ ಆರ್ಥಿಕ ಚಟುವಟಿಕೆಗಳು ಕಾರ್ಯನಿರ್ವಹಿಸಿಲ್ಲ. ಆಂತರಿಕ ಉತ್ಪನ್ನದ ಪ್ರಮುಖ ಮೂಲಗಳಾದ ವ್ಯಾಪಾರ, ಸಾರಿಗೆ ಮತ್ತು ಹೋಟೆಲ್ ವಹಿವಾಟು ಚಟುವಟಿಕೆಗಳು ಸ್ತಬ್ದಗೊಂಡಿದ್ದವು. ಅಲ್ಲದೇ ಬ್ಯಾಂಕಿಂಗ್ ಸೇರಿದಂತೆ ಒಟ್ಟಾರೆ ಹಣಕಾಸು ವಲಯ ಮುಷ್ಕರದ ಫಲವಾಗಿ ನಷ್ಟಕ್ಕೆ ಗುರಿಯಾಗಿದೆ ಎಂದು ಅಸೋಚಾಂ ಕಾರ್ಯದರ್ಶಿ ಡಿ. ಎಸ್. ರಾವತ್ ಹೇಳಿದ್ದಾರೆ.
ಸಂಧಾನ ಮಾಡಿದರೆ ನಷ್ಟ ಆಗದು
ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಮಾಡುವ ಬದಲು ಸರ್ಕಾರದ ಜತೆ ಶಾಂತಿಯುತ ಸಂಧಾನಕ್ಕೆ ಮುಂದಾಗಬೇಕು ಎಂದು ಅಸೋಚಾಂ ಕಾರ್ಯದರ್ಶಿ ಡಿ. ಎಸ್. ರಾವತ್ ಹೇಳಿದ್ದಾರೆ.
ಸಮತೋಲನ ಸಾಧಿಸಬೇಕು
ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು, ಮೂಲಭೂತ ಸೌಕರ್ಯ ಮತ್ತು ನ್ಯಾಯಯುತ ವೇತನ ಒದಗಿಸಲು ದೇಶಿ ಕೈಗಾರಿಕಾ ವಲಯ ಮತ್ತು ಸರ್ಕಾರ ಸಹಕರಿಸಬೇಕು. ಕನಿಷ್ಟ ವೇತನದ ಬೇಡಿಕೆ ಆರ್ಥಿಕತೆಗೆ ಹೊರೆಯಾಗದಂತೆ ಸಮತೋಲನ ಸಾಧಿಸಬೇಕು ಎಂದು ಹೇಳಿದೆ.
ಮುಷ್ಕರದ ಪರಿಣಾಮ
ದೇಶವ್ಯಾಪಿ ನಡೆದ ಮುಷ್ಕರದ ಹಿನ್ನೆಲೆ ತಯಾರಿಕರ, ಹಣಕಾಸು ಸೇವೆ, ಸಾರಿಗೆ, ಸರಕು ಪೂರೈಕೆ ವಲಯ ಮತ್ತು ರಪ್ತು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿ ನಷ್ಟ ಸಂಭವಿಸಿದೆ.
ಕಾಸಿಯಾ ಅಭಿಮತ
ಕನಿಷ್ಟ ವೇತನ ಹೆಚ್ಚಳದ ಬೇಡಿಕೆ ಜತೆಗೆ ಉದ್ಯಮದ ವೇತನ ಪಾವತಿಯ ಸಾಮರ್ಥ್ಯವನ್ನು ಕಾರ್ಮಿಕ ಸಂಘಟನೆಗಳು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಭಿಪ್ರಾಯ ಪಟ್ಟಿದೆ.
ರಾಜ್ಯದಲ್ಲಿ 300 ಕೋಟಿ ನಷ್ಟ
ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 300 ರಿಂದ 350 ಕೋಟಿ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.