ಇಂದಿನಿಂದ ವಿಶ್ವ ಆರ್ಥಿಕ ವೇದಿಕೆ ಸಮಾವೇಶ: ಭಾರತದ ಪಾತ್ರವೇನು?
ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 47ನೇ ಸಮಾವೇಶ ಜನೆವರಿ 17 ರಿಂದ 20ರವರೆಗೆ ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿದೆ.
ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 47ನೇ ಸಮಾವೇಶ ಜನೆವರಿ 17 ರಿಂದ 20ರವರೆಗೆ ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿದೆ.
ಸ್ವಿಟ್ಜರ್ಲೆಂಡ್ನ ವಿಹಾರಧಾಮದಲ್ಲಿ ನಡೆಯುವ ಸಮಾವೇಶದಲ್ಲಿ ಸರ್ಕಾರಿ ಮುಖ್ಯಸ್ಥರು, ಉದ್ಯಮ ವಲಯದ ಪ್ರಮುಖರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ 'ಜಾಗತಿಕ ಆರ್ಥಿಕತೆ ಹಾಗೂ ತ್ವರಿತವಾಗಿ ಸ್ಪಂದಿಸುವ ಮತ್ತು ಹೊಣೆಗಾರಿಕೆಯ ನಾಯಕತ್ವ' ಕುರಿತು ಸಂವಾದ ನಡೆಯಲಿದೆ.
ಭಾಗವಹಿಸಲಿರುವ ಪ್ರಮುಖರು
ಬ್ರಿಟನ್ ಪ್ರಧಾನಿ ತೆರೆಸಾ ಮೇ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ವಿವಿಧ ದೇಶಗಳ ಮುಖ್ಯಸ್ಥರು ಮತ್ತು ಭಾರತದ ಪ್ರಮುಖ ಸಿಇಒಗಳು, ಸಚಿವರು ಭಾಗವಹಿಸಲಿದ್ದಾರೆ. ಪ್ರತಿನಿಧಿಗಳಲ್ಲಿ ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರೂ ಇರಲಿದ್ದಾರೆ.
ಭಾರತದ ನಿಯೋಗದಲ್ಲಿ ಯಾರಿದ್ದಾರೆ?
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಸಚಿವಾಲಯದ ಕಾರ್ಯದರ್ಶಿ ರಮೇಶ್ ಅಭಿಷೇಕ್, ಟಾಟಾ ಸನ್ಸ್ನ ಎನ್. ಚಂದ್ರಶೇಖರನ್, ಹಾಗೂ ಚಂದ್ರಬಾಬು ನಾಯ್ಡು ಅವರು ಭಾರತದ ನಿಯೋಗದಲ್ಲಿದ್ದಾರೆ.
ವಿಚಾರಗೋಷ್ಟಿ ವಿಷಯಗಳು
ನೋಟುಗಳ ರದ್ದತಿ, ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಜಾಗತೀಕರಣಕ್ಕೆ ಹಿನ್ನಡೆ ಉಂಟಾಗಲಿರುವ ಸಾಧ್ಯತೆ, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ಪರಿಸರ ಸಂಬಂಧಿ ಗಂಡಾಂತರ ಮುಂತಾದ ವಿಚಾರಗಳು ಚರ್ಚೆಗೆ ಬರಲಿವೆ.
ಸಂವಾದದಲ್ಲಿ ಭಾರತ ವಿಷಯ
ಭಾರತಕ್ಕೆ ಸಂಬಂಧಿಸಿದ ವಿಶೇಷ ಅಧಿವೇಶನದಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಮ, ತೆರಿಗೆ ಸುಧಾರಣೆ ಮತ್ತು ಆರ್ಥಿಕ ಸೇರ್ಪಡೆಯ ಪರಿಣಾಮಗಳ ಕುರಿತು ಸಂವಾದ ನಡೆಯಲಿದೆ.