ಷೇರುಪೇಟೆಯಲ್ಲಿ ಕಾರಣಕ್ಕಿಂತ ಲಾಭ ಮುಖ್ಯ
ಷೇರುಪೇಟೆಯಲ್ಲಿ ಚಟುವಟಿಕೆ ನಿರ್ವಹಿಸಲು ಈಗಿನ ದಿನಗಳಲ್ಲಿ ತಕ್ಷಣ, ತ್ವರಿತವಾದ ನಿರ್ಧಾರ ತೆಗೆದುಕೊಳ್ಳುವ ಗುಣ ಅತ್ಯವಶ್ಯಕ ಹಾಗು ನಿರ್ಧಾರದ ಪರಿಣಾಮವನ್ನು ಎದುರಿಸುವ ಮಟ್ಟದಲ್ಲಿ ಮನಸ್ಸು ಸದೃಢವಾಗಿರಬೇಕಾಗಿರುವುದು ಮುಖ್ಯ.
ಷೇರುಪೇಟೆಯಲ್ಲಿ ಚಟುವಟಿಕೆ ನಿರ್ವಹಿಸಲು ಈಗಿನ ದಿನಗಳಲ್ಲಿ ತಕ್ಷಣ, ತ್ವರಿತವಾದ ನಿರ್ಧಾರ ತೆಗೆದುಕೊಳ್ಳುವ ಗುಣ ಅತ್ಯವಶ್ಯಕ ಹಾಗು ನಿರ್ಧಾರದ ಪರಿಣಾಮವನ್ನು ಎದುರಿಸುವ ಮಟ್ಟದಲ್ಲಿ ಮನಸ್ಸು ಸದೃಢವಾಗಿರಬೇಕಾಗಿರುವುದು ಮುಖ್ಯ. ಕಾರಣ ವಿವಿಧ ವಿಶ್ಲೇಷಣೆಗಳು ಷೇರುಗಳನ್ನು ಬೆಲೆ ಹೆಚ್ಚಾಗಿದ್ದಾಗಲೂ ಕೊಳ್ಳಲು ಪ್ರೇರೇಪಿಸುತ್ತವೆ. ಆದರೆ ಪೇಟೆಯ ಹಾದಿ ಯಾರ ಹಿಡಿತಕ್ಕೂ, ಕಲ್ಪನೆಗೂ ಸಿಗದ ರೀತಿಯಲ್ಲಿ ವಿಸ್ಮಯಕಾರಿಯಾಗಿರುತ್ತದೆ. ಶುಕ್ರವಾರದಂದು ಆರಂಭದಲ್ಲೇ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಸುಮಾರು ರೂ. 40ರಷ್ಟು ಏರಿಕೆ ಕಂಡು ರೂ. 630ನ್ನು ತಲುಪಿ ನಂತರ ರೂ. 605ರವರೆಗೂ ಇಳಿಕೆ ಪಡೆಯಿತು. ಅಂದರೆ ಒಂದೇ ದಿನ ಅಗ್ರಮಾನ್ಯ ಕಂಪನಿಯೊಂದು ಶೇ. 5ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿ, ಶಾರ್ಟ್ ಟರ್ಮ್ ಹೂಡಿಕೆದಾರರು ಮಾರಾಟ ಮಾಡಲು ಪ್ರೇರೇಪಿಸಿದೆ. ಇದಕ್ಕೆ ಕಾರಣ ಈ ಕಂಪನಿಯು ಡಿಎಂಆರ್ಸಿ ವಿರುದ್ಧದ ಆರ್ಬಿಟ್ರೇಷನ್ ಅವಾರ್ಡನ್ನು ತನ್ನ ಪರವಾಗಿ ಪಡೆದುಕೊಂಡ ಕಾರಣ ಈ ರೀತಿ ಏರಿಕೆ ಪಡೆದಿದೆ. ಆದರೆ ಈ ರೀತಿಯ ತ್ವರಿತ ಏರಿಕೆಯು ಅಸ್ಥಿರವೆಂಬುದಕ್ಕೆ ತಕ್ಷಣ ಇಳಿಕೆ ಕಂಡಿರುವುದೇ ಸಾಕ್ಷಿ.
ಏರಿಳಿತದ ಗೊಂದಲ
ಯೆಸ್ ಬ್ಯಾಂಕ್ ಶುಕ್ರವಾರದಂದು ಆರಂಭದಲ್ಲಿ ರೂ. 1580ರಲ್ಲಿದ್ದು ನಂತರ ರೂ. 1472ರವರೆಗೂ ಇಳಿಕೆ ಕಂಡು ಇಳಿಕೆಗೆ ಕೊನೆ ಎಲ್ಲಿರಬಹುದು ಎಂಬ ಪ್ರಶ್ನೆಯನ್ನು ಹೂಡಿಕೆದಾರರಲ್ಲಿ ಮೂಡಿಸಿದೆ. ಈ ಕಂಪನಿಯು ಪ್ರಕಟಿಸಿರುವ ಎನ್ಪಿಎ ಅಂಶಗಳು ಗೊಂದಲ ಮೂಡಿಸಿರುವ ಕಾರಣ ಈ ಭರ್ಜರಿ ಇಳಿಕೆ ಕಂಡುಬಂದಿದೆ. ಅಂದರೆ ಒಮ್ಮೆ ಕಾರ್ಪೊರೇಟ್ ನೀತಿ ಪಾಲನೆಯಲ್ಲಿ ಸಂಶಯ ಮೂಡಿದಲ್ಲಿ ಪೇಟೆಯಲ್ಲಿ ಷೇರಿನ ಬೆಲೆಯು ಕುಸಿಯುವ ಮಟ್ಟ ಇನ್ ಫಿನಿಟಿ ಎನ್ನಬಹುದು. ಇದಕ್ಕೆ ಹಿಂದಿನ ವರ್ಷಗಳಲ್ಲಿ ಸತ್ಯಂ ಕಂಪ್ಯೂಟರ್ ಘಟನೆಗಳೇ ಸಾಕ್ಷಿ.
ಕಳಪೆ ಸಾಧನೆ
ಅದೇ ರೀತಿ ಶುಕ್ರವಾರದಂದು, ನಿನ್ನೆ, ಗ್ಲೆನ್ಮಾರ್ಕ್ ಫಾರ್ಮ ಷೇರಿನ ಬೆಲೆಯು ಹಿಂದಿನ ದಿನದಲ್ಲಿದ್ದ ರೂ. 904-814ರ ಸಮೀಪ ಆರಂಭವಾಗಿ ರೂ. 752ರ ಸಮೀಪಕ್ಕೆ ಕುಸಿಯಿತು. ಈ ಕುಸಿತದ ಹಿಂದೆ ಕಂಪನಿಯ ಸಾಧನೆಯು ತೃಪ್ತಿದಾಯಕವಿಲ್ಲ ಎಂಬ ಅಂಶವಾಗಿದೆ. ಕೇವಲ ಅಮೆರಿಕಾ ಎಫ್ ಡಿ ಎ ಕ್ರಮದಿಂದ ಷೇರಿನ ಬೆಲೆಯಲ್ಲಿ ಕುಸಿತ ಕಾಣುತ್ತಿದ್ದ ಪೇಟೆಗೆ ಕಳಪೆ ಸಾಧನೆ ಕಾರಣ ಭಾರಿ ಕುಸಿತ ಕಂಡಿರುವುದು ವಿಸ್ಮಯಕಾರಿ ಅಂಶವಾಗಿದೆ.
ಅಗ್ರಮಾನ್ಯ ಕಂಪೆನಿಗಳಲ್ಲಿ ಹೂಡಿಕೆ ಉತ್ತಮ
ಕಳೆದ ಡಿಸೆಂಬರ್ ತಿಂಗಳಲ್ಲಿ ರೂ. 358ನ್ನು ತಲುಪಿ ವಾರ್ಷಿಕ ಗರಿಷ್ಟ ದಾಖಲೆ ನಿರ್ಮಿಸಿದ ಅಂದಿನ ಮೋದಿ ಉದ್ಯೋಗ ಲಿ ಈಗ ತನ್ನ ಹೆಸರನ್ನು ಪಿನ್ ಕಾನ್ ಲೈಫ್ ಸ್ಟೈಲ್ ಲಿ ಎಂದು ಬದಲಿಸಿಕೊಂಡಿದೆ. ಈ ಷೇರಿನ ಬೆಲೆಯು ನಿರಂತರವಾಗಿ ಇಳಿಕೆ ಕಂಡು ಏಪ್ರಿಲ್ ಕೊನೆವಾರದಲ್ಲಿ ರೂ. 62ರ ಸಮೀಪಕ್ಕೆ ತಲುಪಿ ವಾರ್ಷಿಕ ಕನಿಷ್ಠದ ದಾಖಲೆಯನ್ನು ನಿರ್ಮಿಸಿದೆ. ಈಗಲೂ ಕಂಪನಿಯ ಷೇರಿನ ಬೆಲೆಯು ರೂ. 68ರ ಸಮೀಪವಿದ್ದು ಏರಿಕೆ ಕಾಣದೆ ಅಮಾಯಕ ಹೂಡಿಕೆದಾರರನ್ನು ಬಲಿ ತೆಗೆದುಕೊಂಡಿದೆ. ಪೇಟೆಗಳು ಉತ್ತುಂಗದಲ್ಲಿರುವಾಗ ಸೀಮಿತ ಚಟುವಟಿಕೆಯನ್ನು ಅಗ್ರಮಾನ್ಯ ಕಂಪೆನಿಗಳಲ್ಲಿ ನಡೆಸುವುದು ಉತ್ತಮ. ಇದು ಹೂಡಿಕೆದಾರರ ಬಂಡವಾಳವನ್ನು ಅಲ್ಪಮಟ್ಟಿಗೆ ಸುರಕ್ಷಿತಗೊಳಿಸಬಹುದು.
ಅಚ್ಚರಿ ಬೆಳವಣಿಗೆ
ಷೇರುಪೇಟೆಯಲ್ಲಿ ಎಲ್ಲರೂ ಎಷ್ಟು ತ್ವರಿತವಾಗಿ, ಕ್ಷಿಪ್ರವಾಗಿ ಹಣ ಗಳಿಸಬಹುದೆಂದುಕೊಂಡಿರುವವರಿಗೆ ಎಚ್ಚರಿಕೆಯ ಸಂದೇಶ. ಇಲ್ಲಿ ಮಿಂಚಿನ ವೇಗದಲ್ಲಿ ಹಣ ಹೇಗೆ ಕರಗುವುದೆಂದು ಕಲ್ಪಿಸಿಳ್ಳಲು ಸಾಧ್ಯವಿಲ್ಲದ ಮಟ್ಟದಲ್ಲಿ ನಡೆದ ಬೆಳವಣಿಗೆಯು ಅಚ್ಚರಿ ಮೂಡಿಸುವಂತಹುದಾಗಿದೆ. ಸ್ಮಾಲ್ ಕ್ಯಾಪ್ ಕಂಪನಿ ಶಿಲ್ಪಿ ಕೇಬಲ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆಯು ಒಂದು ತಿಂಗಳ ಹಿಂದಷ್ಟೇ ಅಂದರೆ ಏಪ್ರಿಲ್ 13ರಂದು ರೂ. 252ರಲ್ಲಿ ವಾರ್ಷಿಕ ಗರಿಷ್ಠದ ದಾಖಲೆ ಕಂಡು ಅಲ್ಲಿಂದ ಒಂದೇ ದಿಕ್ಕಿನಲ್ಲಿ ಕುಸಿಯುತ್ತಾ ಒಂದು ತಿಂಗಳಲ್ಲಿ ಅಂದರೆ ಮೇ 12, ಶುಕ್ರವಾರದಂದು ವಾರ್ಷಿಕ ಕನಿಷ್ಠ ರೂ. 67.45ಕ್ಕೆ ಕುಸಿದಿದೆ. ಕಂಪನಿಯ ವಿರುದ್ಧ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನಲ್ಲಿ ಇನ್ ಸಾಲ್ವನ್ ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ ಅಡಿಯಲ್ಲಿ ಪಿಟಿಷನ್ ಫೈಲ್ ಮಾಡಲಾಗಿರುವುದು ಈ ಭಾರಿ ಕುಸಿತಕ್ಕೆ ಕಾರಣವಾಗಿದೆ. ಈ ಮಧ್ಯೆ ಕಂಪನಿಯ ಆಡಳಿತ ಮಂಡಳಿಯ ಸಭೆಯನ್ನು ಕೋರಂ ಕೊರತೆಯ ಕಾರಣ ಏಪ್ರಿಲ್ 18ರಂದು ಒಂದು ವಾರ ಮುಂದೂಡಿತಾದರೂ ಮತ್ತೆ ಏಪ್ರಿಲ್ 25ರಂದು ಅದೇ ಕಾರಣಕ್ಕಾಗಿ ರದ್ದುಪಡಿಸಲಾಯಿತು.
ಜಾಣ ನಿರ್ಧಾರ ಮುಖ್ಯ
2014ರಲ್ಲಿ 1:1 ರ ಅನುಪಾತದ ಬೋನಸ್ ವಿತರಿಸಿದ್ದ ಈ ಕಂಪನಿ ಈಗ ಮತ್ತೊಮ್ಮೆ 28ರಂದು ಬೋನಸ್ ಷೇರು ವಿತರಿಸುವ ಅಜೇಂಡಾ ಪ್ರಕಟಿಸಿದೆ. ಆದರೆ ಅಂದು ಕೋರಂ ದೊರೆಯುವುದೇ ಎಂಬ ಸಂಶಯ ಸಹಜ. ಬೋನಸ್ ಷೇರಿನ ಪರಿಶೀಲನೆಯು ಸಹ ಷೇರಿನ ಬೆಲೆ ಕುಸಿತವನ್ನು ತಡೆಯಲಾರದಾಗಿದೆ. ಕಂಪನಿಯ ಕಾರ್ಪೊರೇಟ್ ಗೌರ್ನನ್ಸ್ ಕಳಪೆಯಾಗಿದೆಯೇ? ಅಥವಾ ಇನ್ನಾವ ಕಾರಣಕ್ಕಾಗಿ ಈ ಪಿಟಿಷನ್ ಹಾಕಲಾಗಿದೆ ಎಂಬುದು ಅಸ್ಪಷ್ಟವಾಗಿದೆ. ಸ್ಮಾಲ್ ಕ್ಯಾಪ್ ಮತ್ತು ಕಳಪೆ ಷೇರುಗಳಲ್ಲಿ ವಹಿವಾಟು ನಡೆಸುವಾಗ, ವಿಶೇಷವಾಗಿ ಇಂಡೆಕ್ಸ್ ಗಳು ಗರಿಷ್ಟದಲ್ಲಿದ್ದಾಗ ಮೈಯೆಲ್ಲಾ ಕಣ್ಣಾಗಿ, ಸುತ್ತಲಿನ ವಿಚಾರಗಳಿಗೆ ಸದಾ ತೆರೆದ ಮನಸ್ಸಿನಿಂದ ವಿಚಾರ ಮಾಡಿ ನಂತರ ನಿರ್ಧರಿಸುವುದು ಉತ್ತಮ. ಅವಕಾಶ ಹಾನಿಯಾದರೂ ಚಿಂತೆಯಿಲ್ಲ ಆದರೆ ಹಣ ಹಾನಿಗೊಳಗಾಗಬಾರದು.