ಎಫ್ಆರ್ಡಿಐ ಮಸೂದೆ: ಬ್ಯಾಂಕುಗಳಲ್ಲಿ ನಿಮ್ಮ ಹಣ ಸುರಕ್ಷಿತವೇ?
ಕೇಂದ್ರ ಸರಕಾರದ 'ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ' (ಎಫ್ಆರ್ಡಿಐ) ಸಾರ್ವಜನಿಕರಲ್ಲಿ ದಿಗಿಲು ಹುಟ್ಟಿಸಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ.
ಕೇಂದ್ರ ಸರಕಾರದ 'ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ' (ಎಫ್ಆರ್ಡಿಐ) ಸಾರ್ವಜನಿಕರಲ್ಲಿ ದಿಗಿಲು ಹುಟ್ಟಿಸಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ.
ಎಫ್ಆರ್ಡಿಐ ಮಸೂದೆಯ ಪ್ರಸ್ತಾವನೆಯಲ್ಲಿ ಗ್ರಾಹಕರ ಖಾತೆಯಲ್ಲಿನ ಹಣವನ್ನು ಬಳಕೆ ಮಾಡಲು ಬ್ಯಾಂಕುಗಳಿಗೆ ಅವಕಾಶ ನೀಡುವ ಅಂಶ ಇದೆ ಎನ್ನಲಾಗಿದೆ. ಇದರಿಂದಾಗಿ ಬ್ಯಾಂಕು ಠೇವಣಿಗಳ ಸುರಕ್ಷತೆಯ ಬಗ್ಗೆ ಗ್ರಾಹಕರಿಗೆ ಚಿಂತೆ ಉಂಟಾಗಿದೆ.
ಎಫ್ಆರ್ಡಿಐ ವಿವಾದ?
ಹಣಕಾಸು ಇಲಾಖೆಯ ಹೊಸ ಎಫ್ಆರ್ಡಿಐ ವಿಧೇಯಕ ಸಂಸತ್ತಿನ ಜಂಟಿ ಸಮಿತಿಯ ಮುಂದಿದೆ. ಈ ಮಸೂದೆ ಚಳಿಗಾಲದ ಅಧೀವೇಶನದಲ್ಲಿ ಸಂಸತ್ತಿನ ಮುಂದೆ ಬರಲಿದೆ.
ಬ್ಯಾಂಕುಗಳು ನಷ್ಟ ಅಥವಾ ದೀವಾಳಿಯಾಗುವ ಸಂದರ್ಭ ಎದುರಾದರೆ ಠೇವಣಿದಾರರ ಹಣವನ್ನು ಬಳಸಿಕೊಳ್ಳಲು ಮಸೂದೆಯಲ್ಲಿ 'ಬೇಲ್ ಇನ್' (bail-in) ಪ್ರಸ್ತಾವ ಒಳಗೊಂಡಿದೆ. ಇದು ಗ್ರಾಹಕರ ಖಾತೆಯಲ್ಲಿನ ಹಣ ಬಳಕೆಗೆ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.
ಆನ್ಲೈನ್ ಪ್ರತಿಭಟನೆ
ಜನರು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಭದ್ರತೆಗಾಗಿ ಬ್ಯಾಂಕುಗಳಲ್ಲಿ ಇಡುತ್ತಾರೆ. ಆದರೆ ಈ ಹಣವನ್ನೇ ಬ್ಯಾಂಕುಗಳು ಬಳಕೆ ಮಾಡಿದರೆ? ಇಂತಹ ವಿವಾದಾತ್ಮಕ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈಗಾಗಲೇ ಎಫ್ಆರ್ಡಿಐ ಕುರಿತಾಗಿ ಆನ್ಲೈನ್ ನಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಯುತ್ತಿದೆ.
ಚೇಂಜ್ಡಾಟ್ ಆರ್ಗ್ ನಲ್ಲಿ (change.org) ಶಿಲ್ಪಶ್ರೀ ಅಭಿಯಾನ
'ಅಮಾಯಕ ಠೇವಣಿದಾರರ ಹಣ ಬಳಸಬೇಡಿ' (Do not use money from innocent depositors) ಎಂದು ಮಸೂದೆ ಅಂಗೀಕರಿಸದಂತೆ ಚೇಂಜ್ಡಾಟ್ ಆರ್ಗ್ (change.org) ಮೂಲಕ ಶಿಲ್ಪಶ್ರೀ ಎಂಬುವರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ವ್ಯಾಪಕವಾಗಿ ಬೆಂಬಳ ವ್ಯಕ್ತವಾಗಿದ್ದು, 70 ಸಾವಿರಕ್ಕೂ ಹೆಚ್ಚು ಜನ ಬೆಂಬಲ ಸೂಚಿಸಿದ್ದಾರೆ.
ಮಕ್ಕಳು ಮತ್ತು ನಮ್ಮ ಭವಿಷ್ಯದ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ಹಣ ಇಡುತ್ತೇವೆ. ಅಂತಹ ಹಣ ಬಳಸಿಕೊಳ್ಳಲು ಬ್ಯಾಂಕುಗಳಿಗೆ ಅಕಾಶ ಸಿಗುತ್ತದೆ ಎಂದು ಅಭಿಯಾನದ ಅರ್ಜಿಯಲ್ಲಿ ತಿಳಿಸಲಾಗಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ
ಎಫ್ಆರ್ಡಿಐ ಮಸೂದೆಯನ್ನು ಅಂಗೀಕರಿಸಿದರೆ, ವಿಶ್ವಾಸ ಕಳೆದುಹೋಗುತ್ತದೆ" ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ವಿಶ್ವಾಸ್ ಉಟಗಿ ಹೇಳಿದ್ದಾರೆ. ಬ್ಯಾಂಕುಗಳು ಠೇವಣಿದಾರರ ಇಚ್ಛೆಯಂತೆ ಅವರ ಹಣ ಬಳಕೆಗೆ ಅವಕಾಶ ನೀಡುತ್ತವೆ. ಅಲ್ಲದೆ ಸಾಕಷ್ಟು ಬಡ್ಡಿಯನ್ನು ಕೂಡ ಪಡೆಯುವುದಿಲ್ಲ. ಈಗ ಬ್ಯಾಂಕ್ ನಷ್ಟ ಅಥವಾ ದೀವಾಳಿ ಅನುಭವಿಸಿದರೆ ಅದಕ್ಕಾಗಿಯೂ ನಮ್ಮ ಹಣವನ್ನು ಬಳಸಲು ಬಯಸುತ್ತಿದ್ದಾರೆ. ಠೇವಣಿದಾರರಿಗೆ ಎರಡು ಕಡೆಗಳಿಂದಲೂ ನಷ್ಟ ಎಂದಿದ್ದಾರೆ.
ಎಫ್ಆರ್ಡಿಐ ಠೇವಣಿದಾರರ ಸ್ನೇಹಿ
ಎಫ್ಆರ್ಡಿಐ ಹೊಸ ವಿಧೇಯಕ ಬ್ಯಾಂಕು ಠೇವಣಿದಾರರ ಸ್ನೇಹಿಯಾಗಿದೆ ಎಂದು ಹಣಕಾಸು ಸಚಿವಾಲಯ ಈಗಾಗಲೇ ಸ್ಪಷ್ಟನೆ ನೀಡಿದೆ. ಆದರೆ ಮಸೂದೆ ಒಳಗೊಂಡಿರುವ ವಿವಾದಾತ್ಮಕ ಅಂಶಗಳು ತೀವ್ರತರ ಚರ್ಚೆಗೆ ಗ್ರಾಸವಾಗಿದ್ದು, ಗೊಂದಲಗಳು ಬಗೆಹರಿದಿಲ್ಲ.
ಸಚಿವಾಲಯ ಸ್ಪಷ್ಟನೆ
ದೇಶದ ಬ್ಯಾಂಕುಗಳು ಸಾಕಷ್ಟು ಹಣವನ್ನು ಹೊಂದಿದ್ದು, ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆಯಿದ್ದು, ಜಾರಿಯಲ್ಲಿರುವ ನಿಯಮಾವಳಿಗಳು ಜನರಲ್ಲಿ ಸುರಕ್ಷತೆ ಮತ್ತು ಭರವಸೆ ನೀಡುತ್ತಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಠೇವಣಿದಾರರ ಹಿತಕ್ಕೆ ಧಕ್ಕೆಯಾಗುವಂತ ಯಾವುದೇ ಪ್ರಸ್ತಾವ ಇಲ್ಲ ಎಂದು ತಿಳಿಸಿದ್ದು, ಈ ಮಸೂದೆ ಪ್ರಸ್ತುತ ಇರುವ ನಿಯಮಾವಳಿಗಿಂತ ಹೆಚ್ಚಿನ ರಕ್ಷಣೆ ನೀಡಲಿದೆ ಎಂದಿದೆ.