ಷೇರುಪೇಟೆಯ ಪರಿಸ್ಥಿತಿ ಹೇಗಿದೆ ಎಂದರೆ ಸೆನ್ಸೆಕ್ಸ್ ಮಾತ್ರ ಉತ್ತುಂಗದ ಹಂತದಲ್ಲಿದೆ ಆದರೆ ಹಲವಾರು ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತ ಕಂಡಿವೆ.
ಷೇರುಪೇಟೆಯ ಪರಿಸ್ಥಿತಿ ಹೇಗಿದೆ ಎಂದರೆ ಸೆನ್ಸೆಕ್ಸ್ ಮಾತ್ರ ಉತ್ತುಂಗದ ಹಂತದಲ್ಲಿದೆ ಆದರೆ ಹಲವಾರು ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತ ಕಂಡಿವೆ. ಅಂದರೆ ಹೆಸರು ಸಂಪತ್ತಯ್ಯ ಕಿಸೆಯಲ್ಲಿ ಕಾಸಿಲ್ಲಯ್ಯ ಎನ್ನುವಂತಾಗಿದೆ. ಆರ್ಥಿಕ ಹಿಂಜರಿತ ಎಂಬುದು ಇದೀಗ ಹೊಸದಾಗಿ ಪ್ರಚಲಿತದಲ್ಲಿರುವ ಸುದ್ಧಿ. ಇದರ ಹಿಂದೆ ವಾಣಿಜ್ಯ ಸಮರ, ಎನ್ ಬಿ ಎಫ್ ಸಿ ಗೊಂದಲ, ಬ್ಯಾಂಕಿಂಗ್ ಎನ್ ಪಿ ಎ ಹಾವಳಿ, ಆಟೋಮೊಬೈಲ್ ಸೇಲ್ಸ್ ನಲ್ಲಿ ಕ್ಷೀಣಿತ, ಡಾಲರ್ ಬೆಲೆ ಏರಿಕೆ ಕಾರಣ ರೂಪಾಯಿ ಬೆಲೆ ಕುಸಿತ ಮುಂತಾದ ನಕಾರಾತ್ಮಕ ಅಂಶಗಳಿಂದ ಈಗಾಗಲೇ ಹೆಚ್ಚಿನ ಕಂಪನಿಗಳ ಷೇರುಗಳ ಬೆಲೆ ಕುಸಿತದಲ್ಲಿರುವುದು, ವಿಶೇಷವಾಗಿ ಬ್ಯಾಂಕಿಂಗ್ ಸಂಬಂಧಿತ ಕಂಪನಿಗಳು ಅಗಾದವಾದ ಕುಸಿತಕ್ಕೊಳಗಾಗಿವೆ. ಸಾಮಾನ್ಯವಾಗಿ ಸುರಕ್ಷಿತ ವಹಿವಾಟು ನಡೆಸಬೇಕೆಂದರೆ ಪೇಟೆಗಳು ಕುಸಿತದಲ್ಲಿರುವಾಗ ದೀರ್ಘಕಾಲೀನ ಹೂಡಿಕೆಯಾಗಿ, ಅಂತರ್ಗತವಾಗಿ ಸಬಲವಾಗಿರುವ, ಉತ್ತಮ ಚಾರಿತ್ರವುಳ್ಳ, ಹೂಡಿಕೆದಾರ ಸ್ನೇಹಿ ಕಂಪೆನಿಗಳಲ್ಲಿ ಹೂಡಿಕೆ ಮಾಡಬೇಕು. ಪೇಟೆಗಳು ಗರಿಷ್ಟದಲ್ಲಿರುವಾಗ ಷೇರುಪೇಟೆ ಚಟುವಟಿಕೆಯು ಟೆಕ್ನಿಕಲ್ಸ್ ಆಧಾರಿತ ನಿರ್ಧಾರ ಅಗತ್ಯ. ಪೇಟೆಗಳು ಏರಿಕೆಯಲ್ಲಿರಲಿ, ಇಳಿಕೆಯಲ್ಲಿರಲಿ ಹೂಡಿಕೆಯ ಮೂಲ ಉದ್ದೇಶ ಸಾಮಾನ್ಯವಾದ ಬ್ಯಾಂಕ್ ಬಡ್ಡಿ ದರಕ್ಕಿಂತ ಸ್ವಲ್ಪ ಹೆಚ್ಚಿನ ಆದಾಯ ಬಂದಾಗ ಸಂದರ್ಭವನ್ನವಲಂಭಿಸಿ, ನಗದೀಕರಣ ಮಾಡಿಕೊಳ್ಳುವುದು ಉತ್ತಮ.
ಬ್ಯಾಂಕ್ ಮಹಾ ವಿಲೀನ ಎಫೆಕ್ಟ್
ಸದ್ಯ ಈಗ ಮತ್ತೊಂದು ಸುತ್ತು ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ವಿಲೀನ, ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ವಿಲೀನ, ಇಂಡಿಯನ್ ಬ್ಯಾಂಕ್ ನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬೆಳವಣಿಗೆಯ ನಂತರ ಆಂಕರ್ ಮತ್ತು ವಿಲೀನಗೊಳ್ಳುವ ಬ್ಯಾಂಕ್ ಗಳು ಹೆಚ್ಚಿನ ಕುಸಿತ ಕಂಡಿವೆ. ಇದಕ್ಕೆ ಪ್ರಮುಖ ಕಾರಣ ವಿಲೀನದ ಅನುಪಾತದ ಬಗ್ಗೆ ಇರುವ ಗೊಂದಲ. ಆದರೂ ಷೇರುಪೇಟೆಯ ಒಂದು ಅತಿ ಮುಖ್ಯ ಹೇಳಿಕೆಯೊಂದಿದೆ ಅದೆಂದರೆ ' ಎಲ್ಲರೂ ಬೇಡವೆಂದಾಗ ಬೇಕು ಅಂದವರಿಗೆ ಲಾಭ ಹೆಚ್ಚು' ಎಂಬುದು. ಅದರಂತೆ ಎಲ್ಲರೂ ಗೊಂದಲದ ಕಾರಣ ಮಾರಾಟಮಾಡುವತ್ತ ಸಾಗಿದ್ದಾರೆ. ಇಂತಹ ಕುಸಿತವು ಉತ್ತಮ ಕಂಪನಿಗಳ ಆಯ್ಕೆಗೆ ಸದಾವಕಾಶವಾಗಿದೆ. ಆರ್ಥಿಕ ಹಿಂಜರಿತದ ನೆಪದಿಂದ ಹೆಚ್ಚಿನ ಕುಸಿತಕಂಡಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಂಡರು ವಿತ್ತೀಯ ವಲಯ ಕೇಂದ್ರಬಿಂದುವಾಗಿರುತ್ತದೆ. ಹಾಗಾಗಿ ಈ ವಲಯ ಚೇತರಿಕೆಗೆ ಆಧ್ಯತೆ ಇರುತ್ತದೆ.
ಕೆನರಾ ಬ್ಯಾಂಕ್
ಈ ಬ್ಯಾಂಕ್ ನ ಷೇರುಗಳನ್ನು 2002 ರಲ್ಲಿ ಕೇಂದ್ರ ಸರ್ಕಾರವು ಪ್ರತಿ ಷೇರಿಗೆ ರೂ.35 ರಂತೆ ಬುಕ್ ಬ್ಯುಲ್ಡ್ ಮೂಲಕ ವಿತರಿಸಿತು. ನಂತರದಲ್ಲಿ ಈ ಷೇರಿನ ಬೆಲೆ ರೂ.900 ನ್ನು ದಾಟಿತ್ತು. ಹಿಂದಿನ ವರ್ಷ ಈ ಬ್ಯಾಂಕ್ ತನ್ನ ನೌಕರರಿಗೆ E S O P ಮೂಲಕ ಪ್ರತಿ ಷೇರಿಗೆ ರೂ.186 ರಂತೆ ವಿತರಿಸಿದ್ದು, ಈ ವರ್ಷದ ಏಪ್ರಿಲ್ ೧ ರಂದು ಕೆನರಾ ಬ್ಯಾಂಕ್ ಷೇರಿನ ಬೆಲೆ ರೂ.302 ರ ವಾರ್ಷಿಕ ಗರಿಷ್ಟವಿತ್ತು. ಅಲ್ಲದೆ ಜೂನ್ ಅಂತ್ಯದ ಸಾಧನೆಯು ಸಹ ಪ್ರೋತ್ಸಾಹದಾಯಕವಾಗಿತ್ತು. ಹಾಗಿದ್ದರೂ ಸಿಂಡಿಕೇಟ್ ಬ್ಯಾಂಕ್ ನ್ನು ಈ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ಪ್ರಸ್ತಾವನೆಯ ಕಾರಣ ಷೇರಿನ ಬೆಲೆ ಸತತವಾದ ಮಾರಾಟದ ಒತ್ತಡದಿಂದ ವಾರ್ಷಿಕ ಕನಿಷ್ಟಕ್ಕೆ ಕುಸಿದಿದೆ. ಸಧ್ಯ ರೂ.191 ರ ಸಮೀಪವಿರುವ ಈ ಷೇರು ಆಕರ್ಷಕ ಹೂಡಿಕೆಯಾಗಿದೆ. ಈ ಆಂಕರ್ ಬ್ಯಾಂಕ್ ವಿಲೀನಕ್ಕೂ ಮುಂಚೆಯೇ ಕುಸಿದಿರುವುದು ಹೊಸ ಹೂಡಿಕೆಗೆ ಪ್ರೋತ್ಸಾಹದಾಯಕವಾಗಿದೆ. ಎರಡು ಬ್ಯಾಂಕ್ ಗಳು ರೂ.10 ರ ಮುಖಬೆಲೆ ಹೊಂದಿರುವುದರಿಂದ ವಿಲೀನದ ಅನುಪಾತ ನಿರ್ಧರಿಸುವುದು ಹೆಚ್ಚು ಸುಲಭವಾಗಿದೆ.
ಬ್ಯಾಂಕ್ ಆಫ್ ಬರೋಡ
ಈ ಬ್ಯಾಂಕ್ ನಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳು ಎರಡನೇ ಸುತ್ತಿನಲ್ಲಿ ವಿಲೀನವಾಗಿವೆ. ವಿಲೀನದ ಸಂದರ್ಭದಲ್ಲಿ ರೂ.125 ರ ಸಮೀಪವಿದ್ದಂತಹ ಈ ಬ್ಯಾಂಕ್ ನಂತರದಲ್ಲಿ ಕುಸಿಯುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ರೂ.105 ರ ಸಮೀಪದಿಂದ ರೂ.89 .10 ರವರೆಗೂ ಕುಸಿದು ಪುಟಿದೆದ್ದು ಚೇತರಿಕೆಯ ಹಾದಿಯಲ್ಲಿದೆ. ಈ ಬ್ಯಾಂಕ್ ಗೆ ಕೇಂದ್ರಸರ್ಕಾರ ರೂ.7 ,000 ಕೋಟಿಯಷ್ಟು ಬಂಡವಾಳ ಒದಗಿಸಲಿರುವುದು ಮತ್ತು ಜೂನ್ ತ್ರೈಮಾಸಿಕದಲ್ಲಿ ವಿಲೀನದ ನಂತರದಲ್ಲೂ ಉತ್ತಮ ಫಲಿತಾಂಶ ಪ್ರಕಟಿಸಿದೆ. ಆದರೂ ಷೇರಿನ ಬೆಲೆ ಕುಸಿತ ಕಂಡಿದೆ. ಇದು ಹೂಡಿಕೆಗೆ ಆಕರ್ಷಣೀಯ ಅವಕಾಶ ಕಲ್ಪಿಸಿದೆ.
ಕರ್ನಾಟಕ ಬ್ಯಾಂಕ್ ಲಿಮಿಟೆಡ್
ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಷೇರಿನ ಬೆಲೆ ರೂ.75 ರ ಸಮೀಪವಿದೆ. ಈ ಷೇರಿನ ಬೆಲೆ ಕಳೆದ ಏಪ್ರಿಲ್ ತಿಂಗಳಲ್ಲಿ 141 ರ ವಾರ್ಷಿಕ ಗರಿಷ್ಟದಲ್ಲಿದ್ದು, ಕೇವಲ ನಾಲ್ಕೇ ತಿಂಗಳಲ್ಲಿ ರೂ.71.90 ರ ವಾರ್ಷಿಕ ಕನಿಷ್ಟಕ್ಕೆ ಕುಸಿದಿದೆ. ಈ ಕುಸಿತಕ್ಕೆ ಪೇಟೆಯ ನಿರುತ್ಸಾಹಿ ವಾತಾವರಣವಾಗಿದೆ. ಕಾರಣ ಜೂನ್ ತ್ರೈಮಾಸಿಕದಲ್ಲೂ ಈ ಬ್ಯಾಂಕ್ ಉತ್ತಮವಾದ ಸಾಧನೆಯನ್ನು ಪ್ರಕಟಿಸಿದೆ. ಪ್ರತಿ ಷೇರಿಗೆ ರೂ.3.50 ಯಂತೆ ಲಾಭಾಂಶ ವಿತರಿಸಿದ ಈ ಬ್ಯಾಂಕ್ ದಕ್ಷಿಣಭಾರತದ ಖಾಸಗಿ ವಲಯದ ಉತ್ತಮ ಸಂಸ್ಥೆಯಾಗಿದೆ. ಲಾಭಾಂಶ ವಿತರಣೆಯ ನಂತರದಲ್ಲಿ, ಬ್ಯಾಂಕಿಂಗ್ ವಲಯದ ಕುಸಿತದ ಕಾರಣ ಇದು ಹೆಚ್ಚಿನ ಕುಸಿತ ಕಂಡಿದೆ. ಈ ಬ್ಯಾಂಕ್ ಕಾಫಿ ಡೇ ಕಂಪನಿಗೆ ಕೊಟ್ಟಿರುವ ಸಾಲಕ್ಕೆ ಅಗತ್ಯವಿರುವ ಆಧಾರ ಪತ್ರಗಳನ್ನು ಹೊಂದಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆಯಾದರು, ಬ್ಯಾಂಕಿಂಗ್ ವಲಯ ನಿರಾಸಮಯವಾಗಿರುವ ಕಾರಣ ಚೇತರಿಕೆ ಕಾಣದಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಈ ಬ್ಯಾಂಕ್ ಕಳೆದ ಜುಲೈ ಮಧ್ಯಂತರದಲ್ಲಿ ರೂ.373 ರ ಸಮೀಪವಿದ್ದು, ಕೇವಲ ಕೆಲವೇ ದಿನಗಳಲ್ಲಿ ಪೇಟೆಯ ವಾತಾವರಣದ ಕಾರಣ ರೂ.273 ರವರೆಗೂ ಕುಸಿದಿದೆ. ತನ್ನ ಅಂಗ ಸಂಸ್ಥೆಗಳ ವಿಲೀನದ ನಂತರದಲ್ಲೂ ಉತ್ತಮ ಸಾಧನೆ ಪ್ರದರ್ಶಿಸುತ್ತಿರುವ ಈ ಬ್ಯಾಂಕ್ ಜೂನ್ ಅಂತ್ಯದ ತ್ರೈಮಾಸಿಕದಲ್ಲೂ ಗಣನೀಯ ಪ್ರಗತಿ ಹೊಂದಿದೆ. ಆ ಸಂದರ್ಭದಲ್ಲಿದ್ದ ರೂ.೩೦೦/೩೦೫ ರ ಷೇರಿನ ದರದಿಂದ ರೂ.273 ಕ್ಕೆ ಇಳಿದಿರುವುದು, ಒಂದು ಉತ್ತಮ ಹೂಡಿಕೆಗೆ ಅವಕಾಶವೆನ್ನಬಹುದು. ದೇಶದ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣುತ್ತಿದೆ ಎಂದರೆ ಈ ಷೇರಿನ ಬೆಲೆ ಪುಟಿದೇಳುವುದು ದಿಟ.


Click it and Unblock the Notifications