ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda Airport) ಭಾರೀ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ದಿನಂಪ್ರತಿ ಲಕ್ಷಗಟ್ಟಲೆ ಈ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಮಾಡುತ್ತಾರೆ. ಇದೀಗ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (BIAL) ಇದೀಗ ತನ್ನ ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ಆಗಮನದ ಪಿಕಪ್ ವಲಯಗಳಲ್ಲಿ ಪಾರ್ಕಿಂಗ್ ಮಾಡಲು ವೈಟ್ಬೋರ್ಡ್ ವಾಹನಗಳಿಗೆ (ಖಾಸಗಿ ವಾಹನಗಳು) ಎಂಟು ನಿಮಿಷಗಳ ಕಾಲ ಉಚಿತವಾಗಿ ಅವಕಾಶ ನೀಡಲಾಗಿದೆ.
ಖಾಸಗಿ ವಾಹನಗಳಿಗೆ ಶುಲ್ಕ ಫಿಕ್ಸ್!
ಒಂದು ವೇಳೆ ಈ ಉಚಿತ ಅವಧಿ ಮೀರಿದರೆ, 8 ನಿಮಿಷದಿಂದ ಹದಿಮೂರು ನಿಮಿಷಗಳವರೆಗೆ ₹150 ರೂ. ಶುಲ್ಕ ವಿಧಿಸಲಾಗುವುದು ಎನ್ನಲಾಗಿದೆ. 13 ನಿಮಿಷದಿಂದ 18 ನಿಮಿಷಗಳವರೆಗೆ ₹300 ರೂ. ಶುಲ್ಕವಿರುತ್ತದೆ. ಒಂದು ವೇಳೆ 18 ನಿಮಿಷಗಳ ಮೀರಿದ ಯಾವುದೇ ವಾಹನ ಅಲ್ಲೇ ನಿಂತಿದ್ದರೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ದು, ದಂಡ ವಿಧಿಸಲಾಗುವುದು ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.
ಹಾಗೆಯೇ, ಹಳದಿ ಬೋರ್ಡ್ ಟ್ಯಾಕ್ಸಿಗಳು ಮತ್ತು ಎಲೆಕ್ಟ್ರಿಕ್ ಕ್ಯಾಬ್ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿತ ಪಾರ್ಕಿಂಗ್ ಜಾಗದಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕು. ಈ ವಾಹನಗಳಿಗೆ ಮೊದಲ 10 ನಿಮಿಷಗಳು ಉಚಿತ ಪಾರ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ. ಟರ್ಮಿನಲ್ 1ಕ್ಕೆ ಬರುವ ಕಮರ್ಷಿಯಲ್ ವಾಹನಗಳು P4 ಮತ್ತು P3 ಪಾರ್ಕಿಂಗ್ ವಲಯಗಳಿಗೆ, ಟರ್ಮಿನಲ್ 2ರಲ್ಲಿ ಸೇವೆ ನೀಡುವ ವಾಹನಗಳು P2 ಪಾರ್ಕಿಂಗ್ ಜಾಗದಲ್ಲೇ ಇರಬೇಕು.
ಬಿಐಎಎಲ್ನ ಪ್ರಕಟಣೆ ಪ್ರಕಾರ, ಎಲ್ಲಾ ವೈಟ್ಬೋರ್ಡ್ ವಾಹನಗಳನ್ನು ಖಾಸಗಿ ವಾಹನಗಳೆಂದು ಪರಿಗಣಿಸಲಾಗಿದೆ. ಜೊತೆಗೆ ಹಳದಿ ಬೋರ್ಡ್, ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಮತ್ತು ಸ್ವಯಂ-ಚಾಲಿತ ಹಳದಿ ಬೋರ್ಡ್ ವಾಹನಗಳೆಲ್ಲವೂ ವಾಣಿಜ್ಯ ವಾಹನಗಳ ವರ್ಗಕ್ಕೆ ಸೇರಿಸಲಾಗಿದೆ.
ಇನ್ನು ಬಿಐಎಎಲ್ ವಿಧಿಸುವ ಶುಲ್ಕಗಳು ಪ್ರಯಾಣಿಕರನ್ನು ಎಕ್ಸಿಟ್ ವಲಯದಲ್ಲಿ ಇಳಿಸುವ ವಾಹನಗಳಿಗೆ ಅನ್ವಯವಾಗುವುದಿಲ್ಲ. ಇದು ಕೇವಲ ಆಗಮನದ ಪಿಕಪ್ ವಲಯಕ್ಕೆ ಮಾತ್ರ ಸೀಮಿತವಾಗಿದೆ.
ಕಾರಣವೇನು?
ಇತ್ತೀಚಿನ ತಿಂಗಳುಗಳಲ್ಲಿ, ವಿಮಾನ ನಿಲ್ದಾಣದಲ್ಲಿ ಅನಧಿಕೃತ ಕ್ಯಾಬ್ಗಳು, ಆಗಮನ ಮಾರ್ಗಗಳ ಹೊರಗಡೆ ವಾಹನ ನಿಲ್ಲುವುದು ಮತ್ತು ರೋಡ್ಸೈಡ್ಗಳಲ್ಲೇ ಪಿಕಪ್ಗಳು ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಬಿಐಎಎಲ್ ಗಮನಿಸಿದೆ. ಪ್ರತಿದಿನ ಸುಮಾರು 1 ಲಕ್ಷ ವಾಹನಗಳು ವಿಮಾನ ನಿಲ್ದಾಣದ ರಸ್ತೆ ಸುತ್ತಮುತ್ತ ಸಂಚರಿಸುವುದರಿಂದ, ಟರ್ಮಿನಲ್ಗಳ ಮುಂಭಾಗದಲ್ಲಿ ಸಮಸ್ಯೆ ಉಂಟಾಗುತ್ತಿದೆ.. ಇದು ಸಂಚಾರ ದಟ್ಟಣೆಗೂ ಕಾರಣವಾಗುತ್ತದೆ. ಇದೇ ಕಾರಣದಿಂದ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವೆಂದು ಗುರುತಿಸಿಕೊಂಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಪ್ರತಿದಿನ ಸರಾಸರಿ 1.3 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ, ಸುಗಮ ಸಂಚಾರಕ್ಕಾಗಿ ಈ ಕ್ರಮಗಳು ಅತ್ಯಗತ್ಯವೆಂದು ಬಿಐಎಎಲ್ ಸ್ಪಷ್ಟಪಡಿಸಿದೆ.
ಬಿಐಎಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಹರಿ ಮಾರರ್ ಅವರು ಈ ಬಗ್ಗೆ ಮಾತನಾಡಿದ್ದು, "ಪ್ರಯಾಣಿಕರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಅದರಲ್ಲೂ ಹಬ್ಬದ ಸೀಸನ್ಗಳಲ್ಲಿ, ಪಿಕಪ್ ಜಾಗಗಳಲ್ಲಿ ಶಿಸ್ತು ಕಾಪಾಡುವುದು ಅತ್ಯಗತ್ಯವಾಗಿದೆ. ಇದು ಕೇವಲ ನಿಯಮ ಜಾರಿಯಲ್ಲದೆ, ಪ್ರಯಾಣಿಕರಿಗೆ ಸಹಕಾರಿಯಾಗಲು, ಸುಗಮ ಸಂಚಾರಕ್ಕೆ ಮತ್ತು ವಿಮಾನ ನಿಲ್ದಾಣದ ಸೇವೆಯನ್ನು ಉತ್ತಮ ಗೊಳಿಸಲು ಕೈಗೊಂಡಿರುವ ಕ್ರಮ" ಎಂದು ಹೇಳಿದ್ದಾರೆ.


Click it and Unblock the Notifications