Bengaluru garbage: ಕಸ ಎಸೆಯೋದು ಕಂಡರೆ ವಿಡಿಯೋ ಮಾಡಿ 250 ರೂ. ಬಹುಮಾನ ಪಡೆಯಿರಿ..ತ್ಯಾಜ್ಯ ನಿಯಂತ್ರಣಕ್ಕೆ ಹೊಸ ಕ್ರಮ!

ಎಲ್ಲೆಂದರಲ್ಲಿ ಕಸ ಹಾಕ್ತೀರ? ನಿಮ್ಮನ್ನ ನೋಡೋಕೆ, ನೀವು ಕಸ ಹಾಕಿದ ವಿಡೀಯೋ ಮಾಡೋಕೆ ಅಂತಲೇ ಒಬ್ರು ಇರ್ತಾರೆ. ಕಾಣದ ಕೈಯೊಂದು ನೀವು ಕಸ ಹಾಕೋ ವಿಡಿಯೋ ಮಾಡಿ, ಬಹುಮಾನ ಪಡೆಯುತ್ತೆ ಗೊತ್ತಾ? ಬೃಹತ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಹೊಸ ಉಪಕ್ರಮವನ್ನ ಶುರು ಮಾಡಿದೆ. ಅದೇನಂತೀರ? ಇನ್ಮುಂದೆ ಯಾರಾದ್ರೂ ಎಲ್ಲಾದ್ರೂ ಕಸ ಹಾಕೋದನ್ನ ಕಂಡರೆ, ಅದನ್ನ ವೀಡಿಯೋ ಮಾಡಿದ್ದರೆ ಅಧಿಕೃತ ವಾಟ್ಸಾಪ್ ಸಂಖ್ಯೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರಿಗೆ 250 ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಕಸ ಎಸೆಯೋದು ಕಂಡರೆ ವಿಡಿಯೋ ಮಾಡಿ 250 ಬಹುಮಾನ ಪಡೆಯಿರಿ!

ಹೊಸ ಯೋಜನೆಯ ಉದ್ದೇಶ:

ಈ ಯೋಜನೆಯ ಮುಖ್ಯ ಉದ್ದೇಶ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಸಂಖ್ಯೆಯನ್ನು ಕಡಿಮೆ ಮಾಡಿ, ಜನರಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸುವುದು. ನಗರವನ್ನು ಸ್ವಚ್ಛವಾಗಿಡುವುದು ಕೇವಲ ಸರ್ಕಾರದ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಸಹಭಾಗಿತ್ವವೂ ಅಗತ್ಯ ಎಂಬ ಸಂದೇಶವನ್ನು ಈ ಯೋಜನೆ ನೀಡುತ್ತದೆ.

ಹೆಚ್ಚು ಕಸ ಸಂಗ್ರಹ ಆಟೋಗಳು, ಆದರೂ ಸಮಸ್ಯೆ ಮುಂದುವರೆಯುತ್ತಿದೆ:

BSWML ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಿ ಗೌಡ ಅವರ ಪ್ರಕಾರ, ಪ್ರತಿದಿನ ಸುಮಾರು 5,000 ಆಟೋಗಳು ನಗರಾದ್ಯಂತ ಮನೆಮನೆಗೆ ಹೋಗಿ ಒಣ ಹಾಗೂ ಒದ್ದೆ ಕಸ ಸಂಗ್ರಹಿಸುತ್ತಿವೆ. ಆದರೆ, ಕೆಲವರು ಇನ್ನೂ ರಸ್ತೆಗಳ ಬದಿಯಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಕಸ ಎಸೆಯುವುದನ್ನು ಮುಂದುವರಿಸುತ್ತಿದ್ದಾರೆ. ಈ ಹಿನ್ನೆಲೆ, ಜನರ ನಡವಳಿಕೆಯಲ್ಲಿ ಬದಲಾವಣೆ ತರಲು ಈ ಬಹುಮಾನ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ವೀಡಿಯೋ ಹಂಚಿದವರಿಗೆ ಬಹುಮಾನ:

ನಾಗರಿಕರು ಕಸ ಎಸೆಯುತ್ತಿರುವವರ ವೀಡಿಯೋವನ್ನು ಸ್ಪಷ್ಟವಾಗಿ ಸೆರೆಹಿಡಿದು, ಅಧಿಕಾರಿಗಳು ನೀಡಿರುವ ವಾಟ್ಸಾಪ್ ಸಂಖ್ಯೆ ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ಕಳುಹಿಸಬಹುದು. BSWML ತಂಡ ವೀಡಿಯೋ ಪರಿಶೀಲನೆ ನಡೆಸಿ, ಸತ್ಯವಾಗಿದ್ದರೆ ₹250 ನಗದು ಬಹುಮಾನ ನೀಡಲಿದೆ.

ದಂಡ ಮತ್ತು ಸಿಸಿಟಿವಿ ಕಣ್ಗಾವಲು:

ಈ ಹೊಸ ಕ್ರಮಕ್ಕೆ ಪೂರಕವಾಗಿ ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಸ ಎಸೆಯುವವರನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನೂ ಬಲಪಡಿಸಲಾಗಿದೆ. ಕಸ ಎಸೆಯುವವರಿಗೆ ₹2,000 ಅಥವಾ ಅದಕ್ಕಿಂತ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಸ್ವಚ್ಛ ನಗರಕ್ಕಾಗಿ ಜನರು ಸಹಕರಿಸಿದರೆ, ನಾವು ನೀಡುತ್ತಿರುವ ಈ ಬಹುಮಾನವನ್ನು ಜನರ ಸಹಕಾರದ ಪ್ರತಿಫಲವಾಗಿ ಪರಿಗಣಿಸಬಹುದು ಎಂದು ಹೇಳಿದ್ದಾರೆ.

'ರಿಟರ್ನ್ ಗಿಫ್ಟ್' ರೀತಿಯ ಪ್ರಯತ್ನ:

BSWML ಮುಖ್ಯಸ್ಥರು ಈ ಉಪಕ್ರಮವನ್ನು ಒಂದು ರೀತಿಯ "ರಿಟರ್ನ್ ಗಿಫ್ಟ್" ಎಂದಿದ್ದಾರೆ. ಅಂದರೆ, ನಗರದ ಸ್ವಚ್ಛತೆಗೆ ಸಹಕರಿಸುವ ನಾಗರಿಕರಿಗೆ ಸಣ್ಣ ಪ್ರಮಾಣದ ಹಣ ಬಹುಮಾನವಾಗಿ ನೀಡುವುದರ ಮೂಲಕ ಅವರ ಸೇವೆಯನ್ನು ಗೌರವಿಸುವ ಉದ್ದೇಶ ಈ ಹಿಂದೆ ಇದೆ.

ಹಿಂದಿನ ಕ್ರಮಗಳು ಮತ್ತು ಹೊಸ ಪ್ರಯತ್ನ:

ಹಿಂದಿನ ದಿನಗಳಲ್ಲಿ ನಗರ ಅಧಿಕಾರಿಗಳು ಕಸ ಎಸೆಯುವವರ ಮನೆ ಬಾಗಿಲಿಗೆ ಅವರೇ ಎಸೆದ ಕಸವನ್ನು ಹಿಂದಿರುಗಿಸುವಂತಹ ಕ್ರಮಗಳನ್ನು ಕೈಗೊಂಡಿದ್ದರು. ಈ ರೀತಿಯ ಕ್ರಮಗಳು ಕೆಲವೊಂದು ಸ್ಥಳಗಳಲ್ಲಿ ಪರಿಣಾಮಕಾರಿಯಾಗಿದ್ದರೂ, ನಗರವ್ಯಾಪಿ ಸಮಸ್ಯೆಯನ್ನು ನಿವಾರಿಸಲು ಸಾಕಾಗಿರಲಿಲ್ಲ. ಆದ್ದರಿಂದ, ಈಗ ವೀಡಿಯೋ ಹಂಚಿಕೆ ಹಾಗೂ ಬಹುಮಾನ ನೀಡುವ ಹೊಸ ಪ್ರಯತ್ನಕ್ಕೆ ಪ್ರಾರಂಭವಾಗಿದೆ.

ನಾಗರಿಕರ ಪಾತ್ರ ಮುಖ್ಯ:

ಸ್ವಚ್ಛ ನಗರಕ್ಕಾಗಿ ಸರ್ಕಾರ ಮತ್ತು ನಾಗರಿಕರ ಸಹಯೋಗ ಅಗತ್ಯ. ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ, ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು, ಪುನರುಪಯೋಗ ಮಾಡುವುದು ಮತ್ತು ಪರಿಸರದ ಹಿತಕಾಯುವ ನಡವಳಿಕೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಬೆಂಗಳೂರು ನಗರದಲ್ಲಿ ಕಸ ಎಸೆಯುವವರ ವಿರುದ್ಧ ಈ ಹೊಸ ಕ್ರಮವು ಸ್ವಚ್ಛತಾ ಅಭಿಯಾನಕ್ಕೆ ಹೊಸ ಶಕ್ತಿ ನೀಡಲಿದೆ. ಜನರು ಕಸ ಎಸೆಯುವವರ ವಿರುದ್ಧ ವೀಡಿಯೋ ಹಂಚಿಕೊಂಡು ಬಹುಮಾನ ಪಡೆಯುವ ಅವಕಾಶವಿದ್ದರೂ, ಇದರ ಹಿಂದಿನ ಮುಖ್ಯ ಉದ್ದೇಶ - ಕಸ ಎಸೆಯದ ಸಂಸ್ಕೃತಿ ಬೆಳೆಸುವುದು ಮತ್ತು ನಮ್ಮ ನಗರದ ಗೌರವವನ್ನು ಉಳಿಸುವುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+