ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೀಣು ಬಟ್ಟೆಗಾಗಿ ಎಂಬ ದಾಸ ನುಡಿಯು ಇಂದಿನ ಯುಗದಲ್ಲಿ ಎಷ್ಟೊಂದು ಅರ್ಥಗರ್ಭಿತವಾಗಿದೆ ಎಂದು ತಿಳಿಯುತ್ತದೆ. ಅದರೆ ಕೆಲವೊಂದು ಸಂದರ್ಭಗಳಲ್ಲಿ ಭೂಮಿಯಲ್ಲಿ ನಡೆಯುವ ಪರಿಸ್ಥಿತಿಗಳನ್ನು ನೋಡಿದರೆ ಇದೊಂದು ಅಷ್ಟಾಗಿ ಕಂಡುಬರುತ್ತಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಭಕ್ತಿ ಮಾರ್ಗದಲ್ಲಿ ಸಾಗಿದ ವ್ಯಕ್ತಿಗಳು ತಮ್ಮಲ್ಲಿರುವ ಎಲ್ಲಾ ಆಸ್ತಿ ಪಾಸ್ತಿಗಳನ್ನು ಬಿಟ್ಟು ತೆರಳಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇನ್ನು ಇಷ್ಟೆಲ್ಲಾ ಪೂರ್ವಪೀಠಿಕೆ ಯಾಕೆ ನೀಡಲಾಗಿದೆ ಎಂಬುದರ ಬಗ್ಗೆ ತಿಳಿಸುವುಕ್ಕಿಂತ ಮುನ್ನ ಒಂದು ವಿಚಾರದ ಬಗ್ಗೆ ಇಲ್ಲಿ ಉಲ್ಲೇಖಿಸಲೇಬೇಕಿದೆ. ಮಲೇಶ್ಯಾದ ಆರನೇ ಅತೀ ದೊಡ್ಡ ಶ್ರೀಮಂತ ಎಂಬ ಹೆಗ್ಗಲಿಕೆಗೆ ಪಾತ್ರರಾಗಿರುವ ಬಿಲಿಯನೇರ್ ಉದ್ಯಮಿ ಆನಂದ ಕೃಷ್ಣನ್ ಅವರು ನವೆಂಬರ್ 28ರಂದು ತಮ್ಮ 86 ನೇ ವಯಸ್ಸಿನಲ್ಲಿಇಹಲೋಕ ತ್ಯಜಿಸಿದರು. ಬರೊಬ್ಬರಿ 41500 ಕೋಟಿ ರೂ. ಆಸ್ತಿಗೆ ಒಡೆಯರಾಗಿರುವ ಅವರು ಹಲವು ಕಂಪೆನಿಗಳ ಮಾಲಕರಾಗಿದ್ದಾರೆ. ಇನ್ನು ಆನಂದ ಅವರ ನಿಧನದ ಸುದ್ದಿಯನ್ನು ಅವರ ಖಾಸಗಿ ಹೂಡಿಕೆ ಕಂಪನಿ ಉಸಾಹಾ ಟೆಗಾಸ್ ಎಸ್ಡಿಎನ್ ಬಿಎಚ್ಡಿ ಖಚಿತಪಡಿಸಿದೆ.
ಶತಕೋಟಿ ಡಾಲರ್ ಉದ್ಯಮಿ ಆನಂದ್
ಇನ್ನು ಆನಂದ್ ಅವರು ಮಲೇಶ್ಯಾದ ಕಾರ್ಪೊರೇಟ್ ಜಗತ್ತಿನ ಹೆಸರಾಂತ ಉದ್ಯಮಿಯಾಗಿದ್ದಾರೆ. ದೂರಸಂಪರ್ಕ, ಮಾಧ್ಯಮ ಮತ್ತು ತೈಲ ಮತ್ತು ಅನಿಲ ಮುಂತಾದ ಕ್ಷೇತ್ರ ಹಾಗೂ Maxis Bhd, Astro Malaysia Holdings Bhd, ಮತ್ತು Bumi Armada Bhd ಮುಂತಾದ ಕಂಪೆನಿಗಳಲ್ಲಿ ಆನಂದ್ ಅವರ ಉದ್ಯಮಿಗಳು ವ್ಯಾಪಿಸಿದೆ. ಈ ಉದ್ಯಮಗಳು ಅವರಿಗೆ ವಿಶೇಷವಾಗಿ 1980 ಮತ್ತು 1990 ರ ದಶಕದಲ್ಲಿ ಆನಂದ್ ಅವರಿಗೆ ಅಪಾರ ಯಶಸ್ಸನ್ನು ತಂದುಕೊಟ್ಟಿದ್ದವು. ಪರಿಣಾಮ ಇತ್ತೀಚಿಗೆ ಫೋರ್ಬ್ಸ್ ಪ್ರಕಟಿಸಿದ ವರದಿಯಲ್ಲಿ ಆನಂದ್ ಅವರು ಮಲೇಶ್ಯಾದ ಆರನೇ ಅತೀ ಶ್ರೀಮಂತ ಉದ್ಯಮಿ ಎಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದಾರೆ.

ಆಸ್ತಿ ಯಾರ ಪಾಲು?
ಆನಂದ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಸಹಜವಾಗಿಯೇ ಅವರ ಪುತ್ರನಿಗೆ ಈ ಆಸ್ತಿ ಹೋಗುತ್ತದೆ ಎಂಬ ನಿಮ್ಮ ಊಹೆಯಾಗಿದ್ದರೆ ಅದು ಸುಳ್ಳು. ಯಾಕೆಂದರೆ ಆನಂದ್ ಅವರ ಏಕೈಕ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿದ್ದು, ಥೈಲ್ಯಾಂಡ್ನಲ್ಲಿ ಬೌದ್ದ ಸನ್ಯಾಸಿಯಾಗಿದ್ದಾರೆ. ಸನ್ಯಾಸತ್ವಕ್ಕೆ ತನ್ನ ಜೀವನವನ್ನು ಮುಡಿಪಾಗಿಡಲು ವೆನ್ ಅಜಾನ್ ಸಿರಿಪಾನ್ಯೊ ತನ್ನ ಕೇವಲ 18 ನೇ ವಯಸ್ಸಿನಲ್ಲಿ 5 ಶತಕೋಟಿ ಡಾಲರ್ ಅಂದರೆ 41500 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ತ್ಯಜಿಸಿದ್ದಾರೆ ಎಂದರೆ ನಂಬಲೇ ಬೇಕಿದೆ. ಸನ್ಯಾಸಿ ದೀಕ್ಷೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ವೆನ್ ಅಜಾನ್ ಸಿರಿಪಾನ್ಯೊ ಅವರು ತಮ್ಮ ಕುಟುಂಬದ ಯಾವುದೇ ವ್ಯವಹಾರಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ದಾನಧರ್ಮದಲ್ಲೂ ಮುಂದಿದ್ದ ಅನಂದ್
ಇನ್ನು ಆನಂದ್ ಅವರು ಕೇವಲ ಉದ್ಯಮದಲ್ಲೇ ಅಲ್ಲದೆ ದಾನಧರ್ಮದಲ್ಲೂ ಬಹಳ ಮುಂದಿದ್ದರು. ಅವರ ದತ್ತಿ ಸಂಸ್ಥೆಗಳು ಮಲೇಷ್ಯಾ ಮತ್ತು ಅದರಾಚೆಗಿನ ಅನೇಕರ ಜೀವನದ ಮೇಲೆ ಧನಾತ್ಮಕವಾಗಿ ಪ್ರಭಾವವನ್ನು ಬೀರಿದೆ. ಅವರು ಧರ್ಮನಿಷ್ಠ ಬೌದ್ಧರಾಗಿದ್ದರು, ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನ ಎರಡಕ್ಕೂ ಮಾರ್ಗದರ್ಶನ ನೀಡುವ ಮೌಲ್ಯ ಬೆಳೆಸಿದ್ದರು. ಉದ್ಯಮಿ ಮತ್ತು ಲೋಕೋಪಕಾರಿಯಾಗಿ ಆನಂದ ಕೃಷ್ಣನ್ ಅವರ ಪರಂಪರೆಯು ಮಲೇಷ್ಯಾಕ್ಕೆ ಗಮನಾರ್ಹವಾಗಿ ಉಳಿಯುತ್ತದೆ. ರಾಷ್ಟ್ರ ನಿರ್ಮಾಣ ಮತ್ತು ಕಾರ್ಪೊರೇಟ್ ವಲಯಕ್ಕೆ ಅವರ ಕೊಡುಗೆಗಳು ಶಾಶ್ವತವಾದ ಪರಿಣಾಮವನ್ನು ಬೀರಿವೆ.
ಮಾನಸಿಕ ನೆಮ್ಮದಿಯೇ ಮುಖ್ಯ
ಹಣವೊಂದಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬ ಮಾತು ಪ್ರಚಲಿತದಲ್ಲಿರುವು ಸಾಮಾನ್ಯ ಸಂಗತಿ. ಆದರೆ ಕೇವಲ ಹಣವೊಂದಿದ್ದರೆ ಮಾತ್ರ ಮಾನಸಿಕ ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ ಎಂಬ ಮಾತು ಕೂಡ ಪ್ರಚಲಿತದಲ್ಲಿದೆ. ಹಣದಿಂದ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಕೆಲವರು ಭಕ್ತಿ ಮಾರ್ಗವನ್ನು ಅನುಸರಿಸಿ, ಸನ್ಯಾಸಿಗಳಾಗುತ್ತಿದ್ದಾರೆ. ತಂದೆ ಬಹುಕೋಟಿ ಉದ್ಯಮಿಯಾಗಿದ್ದರೂ ತಂದೆಯ ಯಾವುದೇ ಹಣದ ಮೇಲೆ ಆಸೆ ಇಲ್ಲದೆ ತಾನು ಇಷ್ಟಪಟ್ಟ ಭಕ್ತಿ ಮಾರ್ಗವನ್ನೇ ವೆನ್ ಅಜಾನ್ ಸಿರಿಪಾನ್ಯೊ ಅವರು ಅನುಸರಿಸಿ ಮಾನಸಿಕ ಖುಷಿ ಪಡುತ್ತಿದ್ದಾರೆ.


Click it and Unblock the Notifications