ಬೆಂಗಳೂರು, ಅಕ್ಟೋಬರ್ 29: ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್ಬಿಐ) ಶಾಖೆಯಲ್ಲಿ ದರೋಡೆ ನಡೆದಿದೆ. ಬ್ಯಾಂಕ್ ಲಾಕರ್ನಲ್ಲಿದ್ದ ಸುಮಾರು 13 ಕೋಟಿ ರೂ. ಮೌಲ್ಯದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ಯಾಸ್ ಕಟರ್ ಬಳಸಿಕೊಂಡು ಕಿಟಕಿ ಸರಳುಗಳನ್ನು ಮುರಿದಿರುವ ಕಳ್ಳರು ಬಳಿಕ, ಬ್ಯಾಂಕ್ ಒಳಗೆ ನುಗಿದ್ದಾರೆ.
ಅಕ್ಟೋಬರ್ 27ರ ಭಾನುವಾರ ಈ ಘಟನೆ ನಡೆದಿದೆ. ಅಕ್ಟೋಬರ್ 28ರಸೋಮವಾರ ಬ್ಯಾಂಕ್ ಸಿಬ್ಬಂದಿ ಆಗಮಿಸಿದಾಗ ಈ ಕುರಿತು ಮಾಹಿತಿ ತಿಳಿದುಬಂದಿದೆ. ತಕ್ಷಣ ಈ ಕುರಿತು ಬ್ಯಾಂಕಿನವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಅಕ್ಟೋಬರ್ 25, 26ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಬ್ಯಾಂಕ್ ಕಟ್ಟಡದ ಎಡಭಾಗದ ಕಿಟಕಿ ಮೂಲಕ ದುಷ್ಕರ್ಮಿಗಳು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಗ್ಯಾಸ್ ಕಟರ್ ಮೂಲಕ ಕಿಟಕಿ, ಬ್ಯಾಂಕಿನ ಭದ್ರತಾ ಕೊಠಡಿ ಬಾಗಿಲು ಮುರಿದಿದ್ದಾರೆ. ಮೂರು ಲಾಕರ್ಗಳ ಪೈಕಿ ಒಂದು ಲಾಕರ್ ಅನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿದ್ದಾರೆ. ಆದರೆ ಉಳಿದ ಎರಡು ಲಾಕರ್ಗಳನ್ನು ಕಟ್ ಮಾಡುವ ಪ್ರಯತ್ನ ಫಲ ನೀಡಿಲ್ಲ.
ಎರಡು ದಿನ ಬ್ಯಾಂಕಿಗೆ ರಜೆ ಇದ್ದಿದ್ದನ್ನು ಗಮನಿಸಿದ್ದ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆ. ದುಷ್ಕರ್ಮಿಗಳು ಮಾಹಿತಿ ಸಿಗಬಾರದು ಎಂದು ಬ್ಯಾಂಕಿನ ಸಿಸಿಟಿವಿ ಧ್ವಂಸಗೊಳಿಸಿದ್ದಾರೆ. ಡಿವಿಆರ್ ಸಹ ಹೊತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಒಳಗೆ ನುಗ್ಗಿದ ಕಳ್ಳರು ಸಿಸಿಟಿವಿ, ಸೈರನ್ ಸ್ಥಗಿತಗೊಳಿಸಿದ್ದಾರೆ. 30 ಲಕ್ಷ ಹಣ, ಚಿನ್ನಾಭರಣವಿದ್ದ ಎರಡು ಲಾಕರ್ಗಳನ್ನು ಕತ್ತರಿಸಲು ಸಹ ಪ್ರಯತ್ನ ನಡೆಸಿದ್ದಾರೆ. ಆದರೆ ಗ್ಯಾಸ್ ಖಾಲಿಯಾದ ಕಾರಣ, ಸಮಯ ಮೀರಿದ್ದ ಕಾರಣದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡರು. ಆದರೆ ದುಷ್ಕರ್ಮಿಗಳು ಕೃತ್ಯ ನಡೆದ ಸ್ಥಳದಲ್ಲಿ ಶ್ವಾನದಳಕ್ಕೆ ಗುರುತು ಸಿಗಬಾರದು ಎಂದು ಖಾರದಪುಡಿಯನ್ನು ಚೆಲ್ಲಿದ್ದಾರೆ. ಶ್ವಾನದಳ ವಾಸನೆ ಗ್ರಹಿಸುತ್ತಾ ಸವಳಂಗ ರಸ್ತೆಯ ಸಾಲಬಾಲು ಗ್ರಾಮದ ತನಕ ಸಾಗಿವೆ.
ಘಟನೆ ಬಗ್ಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದ್ದು, "ಬ್ಯಾಂಕಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಹಳೆಯ ಕಾಲದ ಸೈರನ್ ವ್ಯವಸ್ಥೆಯನ್ನು ಹಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಭದ್ರತಾ ಲೋಪದಿಂದಲೇ ಘಟನೆ ನಡೆದಿದೆ" ಎಂದು ಹೇಳಿದ್ದಾರೆ.
"ಈ ದರೋಡೆ ಪ್ರಕರಣದ ತನಿಖೆಗೆ ಐವರು ಪೊಲೀಸ್ ಇನ್ಸ್ಪೆಕ್ಟರ್ಗಳ ನೇತೃತ್ವದ 5 ತಂಡಗಳನ್ನು ರಚನೆ ಮಾಡಲಾಗಿದೆ. 10 ಜನ ಪಿಎಸ್ಐ ಸೇರಿ ಹಲವು ಸಿಬ್ಬಂದಿಗಳು ತಂಡದಲ್ಲಿದ್ದಾರೆ. ತನಿಖೆಯನ್ನು ಆರಂಭಿಸಲಾಗಿದೆ" ಎಂದು ತಿಳಿಸಿದ್ದಾರೆ.
ಎಸ್ಬಿಐ ಬ್ಯಾಂಕ್ನ ಎಸಿಬಿ ನೆಹರು ರಸ್ತೆ ಶಾಖೆ ನ್ಯಾಮತಿ ಜನವಸತಿ ಪ್ರದೇಶದಿಂದ ಸ್ವಲ್ಪ ದೂರದಲ್ಲಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬ್ಯಾಂಕ್ನ ಬಾಗಿಲು ಮುಚ್ಚಿದ್ದರಿಂದ ಜನರಿಗೆ ಕಳ್ಳತನದ ಬಗ್ಗೆ ಜನರಿಗೆ ಮಾಹಿತಿ ತಿಳಿದಿಲ್ಲ. ಸಾಲಬಾಳು ರಸ್ತೆಯಲ್ಲಿನ ಒಂದು ಪೆಟ್ರೋಲ್ ಬಂಕ್ನಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಇಲ್ಲಿನ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬ್ಯಾಂಕಿನಲ್ಲಿ ಕಳ್ಳತನ ನಡೆದ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಜನರು ಬ್ಯಾಂಕ್ ಮುಂದೆ ಜಮಾಯಿಸಿದರು. ಹಣ, ಚಿನ್ನಾಭರಣ ಇಟ್ಟಿದ್ದ ಜನರು ಮುಂದೇನು? ಎಂದು ಆತಂಕಗೊಂಡಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.


Click it and Unblock the Notifications