"ದೇಶವು ಆರ್ಥಿಕ ಕುಸಿತದಲ್ಲಿದ್ದರೂ ಪ್ರೋತ್ಸಾಹದಾಯಕ ಅಂಶ ಸಹ ಇದೆ"
ಸತತ ಎರಡನೇ ತ್ರೈಮಾಸಿಕ ಕೂಡ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿರುವ ಭಾರತವು ಅಧಿಕೃತವಾಗಿ ತಾಂತ್ರಿಕ ಆರ್ಥಿಕ ಕುಸಿತವನ್ನು ಪ್ರವೇಶಿಸಿದೆ. ಆದರೂ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿಯು "ಪ್ರೋತ್ಸಾಹದಾಯಕ" ಆಗಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ. ಸುಬ್ರಮಣಿಯನ್ ಹೇಳಿದ್ದಾರೆ.
2020- 21ನೇ ಸಾಲಿನ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ 7.5 ಪರ್ಸೆಂಟ್ ಕುಗ್ಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ದತ್ತಾಂಶವು ತೋರುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ಆದ 23.9 ಪರ್ಸೆಂಟ್ ಕುಸಿತಕ್ಕೆ ಹೋಲಿಸಿದಲ್ಲಿ ಇದು ದೊಡ್ಡ ಮಟ್ಟದ ಚೇತರಿಕೆ. ಆದರೂ ಸತತವಾಗಿ ನಕಾರಾತ್ಮಕ ಬೆಳವಣಿಗೆ ಕಾರಣಕ್ಕೆ ಭಾರತವು ಆರ್ಥಿಕ ಕುಸಿತವನ್ನು ಪ್ರವೇಶಿಸಿದೆ.
ಭಾರತದಲ್ಲಿ ಈಗ ಆರ್ಥಿಕ ಕುಸಿತ ಅಧಿಕೃತ; 7.5% ಕುಗ್ಗಿದ ಜಿಡಿಪಿ
ಈಚಿನ ಜಿಡಿಪಿ ದತ್ತಾಂಶದ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಮಾತನಾಡಿ, ಆರ್ಥಿಕತೆ ದೃಷ್ಟಿಯಿಂದ ನಾವು ತುಂಬ ಎಚ್ಚರಿಕೆಯಿಂದ ಸಕಾರಾತ್ಮಕವಾಗಿದ್ದೇವೆ. ಎರಡನೇ ತ್ರೈಮಾಸಿಕದ ಜಿಡಿಪಿ ಅಂಕಿಗಳು ಬಹಳ ಉತ್ತೇಜನಕಾರಿಯಾಗಿದೆ. ಆದರೆ ನಾವು ಕಾಯ್ದು ನೋಡಬೇಕು," ಎಂದಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು "V" ಆಕಾರದ ಚೇತರಿಕೆ ಎದುರು ನೋಡುತ್ತಿದ್ದೇವೆ. ಮೂಲಸೌಕರ್ಯ, ಉತ್ಪಾದನೆ ಮತ್ತು ವಿದ್ಯುತ್ ವಲಯಗಳು ಬೆಳವಣಿಗೆ ಪಥದಲ್ಲಿವೆ. ಭಾರತದ ಆರ್ಥಿಕತೆಯಲ್ಲಿ ಕೃಷಿಗೆ ಉಜ್ವಲ ಸ್ಥಾನವಿದೆ ಎಂದು ಹೇಳಿದ್ದಾರೆ.
ಸ್ಪ್ಯಾನಿಷ್ ಜ್ವರದ ಎರಡಮೇ ಅಲೆ ಅದೆಷ್ಟು ತೀವ್ರವಾಗಿತ್ತು ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಆದ್ದರಿಂದ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ ಪಾಲಿಸಬೇಕು. ಕೊರೊನಾ ಬಿಕ್ಕಟ್ಟು ಮತ್ತು ಆರ್ಥಿಕತೆ ಒಂದಕ್ಕೊಂದು ತಳುಕು ಹಾಕಿಕೊಂಡಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು ಎಂದಿದ್ದಾರೆ.