ಬಿಎಸ್ಎನ್ಎಲ್ ನಾಶದತ್ತ ಸಾಗಲು ಕಾರಣವೇನು?: ವಿತ್ತ ಸಚಿವರು ಹೇಳಿದ್ದು ಹೀಗೆ
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಾಶದತ್ತ ಸಾಗುತ್ತಿದ್ದು, ಈಗ ಖಾಸಗಿ ಕಂಪನಿಗಳು ಹೆಚ್ಚಾಗಿ ಬಿಎಸ್ಎನ್ಎಲ್ಗೆ ಸ್ಫರ್ಧೆ ನೀಡುತ್ತಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಎಸ್ಎನ್ಎಲ್ ನಾಶದತ್ತ ಸಾಗಲು ಕಾರಣ ಏನು ಎಂಬುವುದನ್ನು ಹೇಳಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು "ಬಹುತೇಕ ಕೊಂದಿದೆ" ಎಂದು ಆರೋಪಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರವು 4G ನೆಟ್ವರ್ಕ್ಗಾಗಿ ಹಾಗೂ ಬಿಎಸ್ಎನ್ಎಲ್ ಸ್ಪರ್ಧಾತ್ಮಕವಾಗಲು ಕಂಪನಿಗೆ ಹಣವನ್ನು ನೀಡುತ್ತಿದೆ ಎಂದು ಹೇಳಿದರು.
5ಜಿ ಪರೀಕ್ಷೆಗಾಗಿ ವಿ ಹಾಗೂ ರಿಲಯನ್ಸ್ಗೆ ಲೈಸನ್ಸ್ ನೀಡಿದ ಇಲಾಖೆ
ಸರ್ಕಾರವು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಅನ್ನು ಕೊಲ್ಲುತ್ತಿದೆ ಮತ್ತು ಮತ್ತೊಂದೆಡೆ ಖಾಸಗಿ ವಲಯದ ಕಂಪನಿಯಾದ ವೊಡಾಫೋನ್ಗೆ ಸಹಾಯ ಮಾಡುತ್ತಿದೆ ಎಂದು ಲೋಕಸಭೆಯಲ್ಲಿ ಶಿವಸೇನಾ ಸದಸ್ಯ ಅರವಿಂದ್ ಸಾವಂತ್ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಬೊಟ್ಟು ಮಾಡಿದ್ದಾರೆ.
"ಬಿಎಸ್ಎನ್ಎಲ್ ನಮ್ಮ ಕಾರ್ಯತಂತ್ರದ ಆಸ್ತಿಯ ಒಂದು ಭಾಗವಾಗಿದೆ. ನಾವು 4G ಸ್ಪೆಕ್ಟ್ರಮ್ ಖರೀದಿಸಲು ಮತ್ತು ಸ್ಪರ್ಧಾತ್ಮಕವಾಗಲು ಬಿಎಸ್ಎನ್ಎಲ್ಗೆ ಹಣವನ್ನು ನೀಡುತ್ತಿದ್ದೇವೆ," ಎಂದು ಸಾಮಾನ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಬಂದ ಪ್ರಶ್ನೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದಿಂದ 40,000 ಕೋಟಿ ರೂಪಾಯಿ ಆರ್ಥಿಕ ಸಹಾಯ ಕೇಳಿದ BSNL
ಬಿಎಸ್ಎನ್ಎಲ್ ನಾಶದತ್ತ ಸಾಗಲು ಕಾಂಗ್ರೆಸ್ ಕಾರಣ ಎಂದ ಸಚಿವೆ
"ಹಿಂದಿನ ಕಾಂಗ್ರೆಸ್ ಸರ್ಕಾರವು ಬಿಎಸ್ಎನ್ಎಲ್ ಸಂಸ್ಥೆಯನ್ನು ನೋಡಿಕೊಂಡ ರೀತಿಯ ಪ್ರತಿಫಲವೇ ಬಿಎಸ್ಎನ್ಎಲ್ ಅವಸಾನದತ್ತ ಸಾಗಲು ಕಾರಣವಾಗಿದೆ. 2ಜಿ ಶೋಷಣೆಯಿಂದ ಬಿಎಸ್ಎನ್ಎಲ್ ಸೋತಿದೆ. ನೀವು (ಕಾಂಗ್ರೆಸ್) 2ಜಿಯಲ್ಲಿ ಎಲ್ಲಾ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ," ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೂರಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದಾಗ ಬಿಎಸ್ಎನ್ಎಲ್ ಬೊಕ್ಕಸ ಬರಿದಾಗಿತ್ತು!
"2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಿಎಸ್ಎನ್ಎಲ್ ಕೆಟ್ಟ ಸ್ಥಿತಿಯಲ್ಲಿತ್ತು. ಮೋದಿ ಅಧಿಕಾರಕ್ಕೆ ಬಂದಾಗ ಬಿಎಸ್ಎನ್ಎಲ್ ಬೊಕ್ಕಸ ಬರಿದಾಗಿತ್ತು. ಸಂಬಳ ನೀಡಲು ಕೂಡಾ ಹಣ ಇರಲಿಲ್ಲ. ಕಂಪನಿಯು ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್) ಯೊಂದಿಗೆ ಹೊರಬರಲು ಎನ್ಡಿಎ ಸರ್ಕಾರ ಹಣವನ್ನು ನೀಡಿತು. ಉದ್ಯೋಗಿಗಳ ಎಲ್ಲಾ ಬಾಕಿ ಹಣವನ್ನು ನೀಡಲಾಗಿದೆ. ಮೋದಿ ಸರ್ಕಾರವು 4G ಸ್ಪೆಕ್ಟ್ರೈಮ್ ಅನ್ನು ಖರೀದಿಸಲು ಕಂಪನಿಗೆ ಹಣವನ್ನು ನೀಡಿದೆ," ಎಂದು ತಿಳಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸಾವಂತ್, ಸರ್ಕಾರ ಅದಾನಿ ಸಮೂಹಕ್ಕೆ ವಿಮಾನ ನಿಲ್ದಾಣಗಳನ್ನು ಹಸ್ತಾಂತರಿಸುತ್ತಿದೆ ಎಂದು ಆರೋಪಿಸಿದರು. ಮೋದಿ ಸರ್ಕಾರವು ಭವಿಷ್ಯದ ಬಗ್ಗೆ ಚಿಂತಿತವಾಗಿದೆ ಆದರೆ ವರ್ತಮಾನದ ಬಗ್ಗೆ ಕಾಳಜಿಯಿಲ್ಲ, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ಜನರ ಬಗ್ಗೆ ಸರ್ಕಾರ ಯಾವುದೇ ಚಿಂತೆ ಹೊಂದಿಲ್ಲ ಎಂದು ಹೇಳಿದರು.
ಹಣಕಾಸು ಸಚಿವರು ಸಾಮಾಜಿಕ ಕ್ಷೇತ್ರದ ಯೋಜನೆಗಳಿಗೆ ಮೀಸಲಿಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ ತೃಣಮೂಲ ಸದಸ್ಯ ಕಲ್ಯಾಣ್ ಬ್ಯಾನರ್ಜಿ, ಬಜೆಟ್ ನಿರುದ್ಯೋಗಿಗಳು, ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಯಾವುದೇ ಭರವಸೆಯನ್ನು ನೀಡಿಲ್ಲ. ಬಜೆಟ್ನಲ್ಲಿ ವೇತನದಾರರಿಗೆ, ಮಧ್ಯಮ ವರ್ಗದವರಿಗೆ ಮತ್ತು ವೃದ್ಧರಿಗೆ ಯಾವುದೇ ಪರಿಹಾರ ನೀಡಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಸುಶೀಲ್ ಕುಮಾರ್ ಸಿಂಗ್, ಪ್ರತಿಪಕ್ಷಗಳು ಬಡ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ ಯೋಜನೆಗಳನ್ನು ನೋಡಿ ಮತ್ತು ಪ್ರಶಂಸಿಸುವಲ್ಲಿ ವಿಫಲವಾಗಿವೆ ಎಂದು ಆರೋಪ ಮಾಡಿದರು.