ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್..ಇಡೀ ರಾಜ್ಯ ಹಾಗೂ ದೇಶದಲ್ಲಿ ಹಲ್ಚಲ್ ಎಬ್ಬಿಸಿದ ಪ್ರಕರಣ. ಈ ಪ್ರಕರಣದಲ್ಲಿ ಒಂದಾದ ಮೇಲೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಇದರ ನಡುವೆಯೇ ಮತ್ತೊಂದು ರೋಚಕ ಬೆಳವಣಿಗೆಯಾಗಿದೆ. ಅದೇನೆಂದರೆ ಇಂದು ( ಮೇ 21) ಇಡಿ ಅಧಿಕಾರಿಗಳು, ಕರ್ನಾಟಕ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಮೆಡಿಕಲ್ ಕಾಲೇಜಿನ ಮೇಲೆ ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಇರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಮೇಲೆ ದಾಳಿ ಮಾಡಿ, ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. . ಈ ಸಂಸ್ಥೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅಧ್ಯಕ್ಷರಾಗಿ ಪಟ್ಟಿ ಆಗಿರುವುದರಿಂದ ಈ ದಾಳಿಗೆ ರಾಜಕೀಯ ಪ್ರಸ್ತಾಪವೂ ದೊರಕಿದೆ. ದಾಳಿ ಸಂದರ್ಭ, ಹಣಕಾಸು ದಾಖಲೆಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿದ್ದು, ಕೆಲವು ಪ್ರಮುಖ ದಾಖಲೆಗಳು ಇಡಿ ಸುಳಿವಿಗೆ ಬಂದಿವೆ ಎನ್ನಲಾಗಿದೆ.
ರನ್ಯಾ ರಾವ್ ಮತ್ತು ವೈದ್ಯಕೀಯ ಸಂಸ್ಥೆ ನಡುವಿನ ಸಂಪರ್ಕ..?
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಜೈಲು ಸೇರಿದ್ದಾರೆ. ಇದರ ನಡುವೆಯೇ ರನ್ಯಾ ರಾವ್ ಅವರಿಂದ ವೈದ್ಯಕೀಯ ಸಂಸ್ಥೆಗೆ ಹಣ ವರ್ಗಾವಣೆಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆಯೇ ಪೂರ್ತಿ ಮಾಹಿತಿ ಕಲೆ ಹಾಕಲು ಇಂದು ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಹಣದ ಲೆಕ್ಕಪತ್ರಗಳು, ಬ್ಯಾಂಕ್ ಡಿಟೇಲ್ಸ್ ಮತ್ತು ಆಂತರಿಕ ಹಣಕಾಸು ವ್ಯವಹಾರಗಳನ್ನು ಇಡಿ ಪೂರಕವಾಗಿ ಪರಿಶೀಲಿಸುತ್ತಿದೆ. ಈ ಹಣದ ಹಾದಿಯು ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಗೃಹ ಸಚಿವರು ತಮ್ಮ ನಿವಾಸದಲ್ಲಿಲ್ಲದೆ, ಅಜ್ಞಾತ ಸ್ಥಳದಲ್ಲಿ ತಮ್ಮ ನಿಕಟವರ್ತಿಗಳೊಂದಿಗೆ ಭೇಟಿಯಾಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಈ ಬೆಳವಣಿಗೆಯ ತೀವ್ರತೆಯನ್ನು ಹೆಚ್ಚಿಸಿದೆ. ತನಿಖೆಯು ಕೇವಲ ಹಣದ ವ್ಯವಹಾರವಲ್ಲದೆ, ರಾಜಕೀಯ ಸಂಪರ್ಕಗಳೆಡೆಗೂ ವಿಸ್ತರಿಸುತ್ತಿರುವುದು ಸ್ಪಷ್ಟವಾಗಿದೆ.
ರನ್ಯಾ ರಾವ್ ಬಂಧನ ಮತ್ತು ರಾಜಕೀಯ ಭುಗಿಲು:
ಹೌದು, ಈ ಚಿನ್ನ ಕಳ್ಳಸಾಗಣೆ ಕೇಸ್ಗೆ ರಾಜಕೀಯ ಲೇಪನ ಮೆತ್ತಿಕೊಂಡಂತೆ ಕಾಣುತ್ತಿದೆ. ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ, ಅವರ ರಾಜಕೀಯ ಸಂಪರ್ಕಗಳ ಬಗ್ಗೆ ಹಲವಾರು ಅಧಿಕೃತವಲ್ಲದ ವರದಿಗಳು ಹರಿದಾಡಿದವು. ಅವರ ಮದುವೆಯ ವೇಳೆ ಡಾ. ಜಿ. ಪರಮೇಶ್ವರ ಹಾಗೂ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಬಿಜೆಪಿ ಈ ಪ್ರಕರಣದಲ್ಲಿ ಕಾಂಗ್ರೆಸ್ ನಂಟು ಹೊಂದಿದೆ ಎಂದು ಆರೋಪ ಮಾಡಿತ್ತು.
'ಇದು ರಾಜಕೀಯ ಗಾಸಿಪ್'-ಡಿ.ಕೆ ಶಿವಕುಮಾರ್:
ಇನ್ನು ಉಮಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೊಂದು ಗಾಸಿಪ್ ಎಂದು ಹೇಳಿ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಅವರು ಈ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಡಿಆರ್ಐನ ವರದಿ ಮತ್ತು ಸಂಪರ್ಕಗಳ ಪತ್ತೆ:
ಚಿನ್ನವಷ್ಟೇ ಅಲ್ಲ.. ರನ್ಯಾ ರಾವ್ ಅರೆಸ್ಟ್ ಆದ ಸಂದರ್ಭದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಕಣ್ಣಿಗೆ ಕೆಲವು ಸ್ಫೋಟಕ ವಿಚಾರಗಳು ಬಿದ್ದಿವೆ. ಅಂದರೆ ರನ್ಯಾ ರಾವ್ ಫೋನ್ ಚೆಕ್ ಮಾಡಿದಾಗ ರಾಜಕಾರಣಿಗಳು, ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ನಂಬರುಗಳಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಡಿಆರ್ಐ ರನ್ಯಾ ರಾವ್ ಅವರ ಕರೆ ದಾಖಲೆಗಳನ್ನು ಹಾಗೂ ಡೇಟಾ ವಿವರಗಳನ್ನು ವಿಶ್ಲೇಷಿಸುತ್ತಿದ್ದು, ಸಂಘಟಿತ ನೆಟ್ವರ್ಕ್ನೊಂದಿಗೆ ಅವರ ಸಂಪರ್ಕಗಳ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಯತ್ನಿಸುತ್ತಿದೆ.
ಜಾಮೀನು ಪಡೆಯಲಾದರೂ ಬಿಡುಗಡೆಯಿಲ್ಲ:
ತಾಜಾ ಮಾಹಿತಿಯ ಪ್ರಕಾರ, ಮಂಗಳವಾರದಂದು ಡಿಆರ್ಐ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ರನ್ಯಾ ರಾವ್ ಮತ್ತು ಮತ್ತೊಬ್ಬ ಆರೋಪಿ ತರುಣ್ ರಾಜು ಅವರಿಗೆ ಜಾಮೀನು ದೊರಕಿದೆ. ಆದರೆ ರವಾನಾ ವ್ಯವಹಾರಗಳು ಹಾಗೂ ವಿದೇಶಿ ವಿನಿಮಯ ಕಾನೂನಿನ ಉಲ್ಲಂಘನೆಯ ಆರೋಪಗಳು ಇರದ ಕಾರಣ, ನ್ಯಾಯಾಲಯವು ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ತನಿಖೆ ಇನ್ನಷ್ಟು ಆಳಕ್ಕೆ ಹೋಗುವ ಸಾಧ್ಯತೆ:
ಈ ಬೆಳವಣಿಗೆಯಿಂದ, ಕೇವಲ ನಟಿ ಅಥವಾ ಚಿನ್ನದ ಕಳ್ಳಸಾಗಣೆ ಎಂಬ ಬಿರುದನ್ನು ಮೀರಿ ಈ ಪ್ರಕರಣವು ರಾಜಕೀಯ, ಹಣಕಾಸು ಮತ್ತು ಸಂಸ್ಥೆಗಳ ನಡುವಿನ ನಂಟುಗಳನ್ನು ಬಿಚ್ಚಿಡುವ ಸಾಧ್ಯತೆಯಿದೆ. ಇಡಿ ಮತ್ತು ಡಿಆರ್ಐ ಮುಂದಿನ ದಿನಗಳಲ್ಲಿ ಹೆಚ್ಚಿನ ಪುಷ್ಟಿ ದಾಖಲೆಗಳನ್ನು ಸಮರ್ಪಿಸಿ ತನಿಖೆಯನ್ನು ಮುಂದುವರಿಸಲು ಸಿದ್ಧವಾಗಿವೆ.


Click it and Unblock the Notifications