ಲಾಕ್ಡೌನ್ ಬಿಸಿ ತಟ್ಟಲಿಲ್ಲ ಈ ಕ್ಷೇತ್ರಕ್ಕೆ; ಶೇಕಡಾ 83 ರಷ್ಟು ಏರಿಕೆ
ನವದೆಹಲಿ: ಕಳೆದ ಮೂರು ತಿಂಗಳಕ್ಕೂ ಹೆಚ್ಚು ದಿನ ದೇಶದಲ್ಲಿ ಕೊರೊನಾ ಹಾವಳಿಯಿಂದ ಜನಜೀವನ ತತ್ತರಗೊಂಡಿದೆ. ಆರ್ಥಿಕ ಕ್ಷೇತ್ರ ಜರ್ಜರಿತವಾಗಿದೆ. ಲಾಕ್ಡೌನ್ ಹೊರತಾಗಿಯೂ ಈ ಒಂದು ಕ್ಷೇತ್ರದಲ್ಲಿ ಭಾರೀ ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ಅದುವೇ ರಸಗೊಬ್ಬರ ಕ್ಷೇತ್ರ.
ಕೊರೊನಾ ಲಾಕ್ಡೌನ್ ಪರಿಣಾಮ: ಅಕ್ಸೆಂಚರ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು
ಸತತ ಲಾಕ್ಡೌನ್ ಹೊರತಾಗಿಯೂ ಏಪ್ರಿಲ್-ಜೂನ್ ತಿಂಗಳಲ್ಲಿ ರಸಗೊಬ್ಬರ ಮಾರಾಟ ಶೇಕಡಾ 83 ರಷ್ಟು ಏರಿಕೆ ಕಂಡು 111.61 ಲಕ್ಷ ಟನ್ ದಾಖಲಿಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಏಪ್ರಿಲ್-ಜೂನ್ 2020 ರ ಅವಧಿಯಲ್ಲಿ, ರೈತರಿಗೆ ರಸಗೊಬ್ಬರಗಳ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಮಾರಾಟ 111.61 ಲಕ್ಷ ಟನ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 61.05 ಲಕ್ಷ ಟನ್ ಮಾರಾಟ ಮಾಡಿದ್ದಕ್ಕಿಂತ ಇದು 82.81 ಶೇಕಡಾ ಹೆಚ್ಚಾಗಿದೆ" ಎಂದು ಕೇಂದ್ರ ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಡಿಎಪಿ ಬೇಡಿಕೆ ಎರಡು ಪಟ್ಟು ಹೆಚ್ಚಾಗಿದೆ
ಯೂರಿಯಾ ಮಾರಾಟವು ಶೇಕಡಾ 67 ರಷ್ಟು ಹೆಚ್ಚಳಗೊಂಡು 64.82 ಲಕ್ಷ ಟನ್ಗಳಿಗೆ ತಲುಪಿದ್ದರೆ, ಪರಿಶೀಲನೆಯ ಅವಧಿಯಲ್ಲಿ ಡಿಎಪಿ ಬೇಡಿಕೆ ಎರಡು ಪಟ್ಟು ಹೆಚ್ಚಾಗಿ 22.46 ಲಕ್ಷ ಟನ್ಗಳಿಗೆ ತಲುಪಿದೆ. ಸಂಕೀರ್ಣ ರಸಗೊಬ್ಬರಗಳ ಮಾರಾಟವು ದ್ವಿಗುಣಗೊಂಡು 24.32 ಲಕ್ಷ ಟನ್ಗಳಿಗೆ ತಲುಪಿದೆ.
ಸಂಘಟಿತ ಪ್ರಯತ್ನದಿಂದ
ರಾಷ್ಟ್ರಮಟ್ಟದ ಕೋವಿಡ್ 19 ಲಾಕ್ಡೌನ್ನಿಂದಾಗಿ ಸಾಕಷ್ಟು ನಿರ್ಬಂಧಗಳ ಹೊರತಾಗಿಯೂ, ರಸಗೊಬ್ಬರ ಇಲಾಖೆ, ರೈಲ್ವೆ, ರಾಜ್ಯ ಸರ್ಕಾರಗಳು ಮತ್ತು ಬಂದರುಗಳ ಸಂಘಟಿತ ಪ್ರಯತ್ನದಿಂದ, ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆ ಮತ್ತು ಪೂರೈಕೆ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ಕೇಂದ್ರ ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು, ಖಾರಿಫ್ ಋತುವಿನಲ್ಲಿ ರೈತರಿಗೆ ರಸಗೊಬ್ಬರಗಳ ಸಂಗ್ರಹ ಮತ್ತು ಲಭ್ಯತೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಜ್ಯ ಸರ್ಕಾರಗಳಿಗೆ ಸಾಕಷ್ಟು ರಸಗೊಬ್ಬರಗಳನ್ನು ಅಗತ್ಯವಾಗಿ ಒದಗಿಸಿದ್ದೇವೆ. ಇದರಿಂದ ಈ ಸಾರಿ ರಸಗೊಬ್ಬರ ಮಾರಾಟ ಪ್ರಮಾಣ ಹೆಚ್ಚಾಗಿದೆ. ಇದು ಕೃಷಿ ಕ್ಷೇತ್ರದ ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ಉಳಿದ ಪ್ರಮುಖ ಕ್ಷೇತ್ರಗಳ ಬೆಳವಣಿಗೆ ಕುಂಠಿತ
ಆದರೆ, ಕೊರೊನಾವೈರಸ್ ಲಾಕ್ಡೌನ್ನಿಂದಾಗಿ ಮೇ ತಿಂಗಳಲ್ಲಿ ದೇಶದ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇಕಡಾ 23.4 ರಷ್ಟು ಕುಗ್ಗಿದೆ. ರಸಗೊಬ್ಬರವನ್ನು ಹೊರತುಪಡಿಸಿ, ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಈ ಎಲ್ಲಾ ಏಳು ವಲಯಗಳು ಮೇ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ.