ನವದೆಹಲಿ, ಜೂನ್ 11: ಬ್ಯಾಂಕಿಂಗ್ ಒಂದು ಖಾಸಗೀಕರಣದ ಬಹುಮುಖ್ಯ ಭಾಗವಾಗಲಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.
ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಸ್ತುತ ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಖಾಸಗೀಕರಣಕ್ಕಾಗಿ ಕಾರ್ಯತಂತ್ರದ ಮತ್ತು ಕಾರ್ಯತಂತ್ರರಹಿತ ಕ್ಷೇತ್ರಗಳನ್ನು ಗುರುತಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ. ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್ಇ) ಸರ್ಕಾರ ರೂಪಿಸಲಿರುವ ಹೊಸ ನೀತಿಯಡಿ ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಕಂಪನಿಗಳು ಇರಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಹೇಳಿದ ನಂತರ ಸುಬ್ರಮಣಿಯನ್ ಈ ಹೇಳಿಕೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ.
ಆರ್ಥಿಕ ಬೆಳವಣಿಗೆ ಬಗ್ಗೆ ನಿಶ್ಚಿತತೆ ಇಲ್ಲ
ಈ ವರ್ಷದ ಆರ್ಥಿಕ ಬೆಳವಣಿಗೆಯು ಕೊರೊನಾವೈರಸ್ ಲಾಕ್ಡೌನ್ ನಿಂದ ಚೇತರಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಅದು ಈ ವರ್ಷದ ದ್ವಿತೀಯಾರ್ಧದಲ್ಲಿ ಅಥವಾ ಮುಂದಿನ ವರ್ಷದಲ್ಲಿ ನಡೆಯುತ್ತದೆಯೇ ಎಂಬುದು ಖಚಿತವಾಗುತ್ತಿಲ್ಲ. ಎರಡೂ ಸನ್ನಿವೇಶಗಳು ಸರ್ಕಾರದ ಬೇಸ್ಲೈನ್ ನಿರೀಕ್ಷೆಗಳ ಭಾಗವಾಗಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.
ನಿರ್ಣಾಯಕ ಅಂಶವಾಗಿದೆ
ಭಾರತದ ಜಿಡಿಪಿ ಮುಂದಿನ ವರ್ಷ ಭಾರೀ ಏರಿಕೆ ಕಾಣಲಿದೆ ಎಂಬ ರೇಟಿಂಗ್ ಏಜೆನ್ಸಿಗಳ ವರದಿ ಬಗ್ಗೆ ಕುರಿತು ಪ್ರತಿಕ್ರಿಯಿಸಿದ ಸುಬ್ರಮಣಿಯನ್, ಭಾರತ ಕೈಗೊಂಡ ಸುಧಾರಣೆಗಳನ್ನು ರೇಟಿಂಗ್ ಏಜೆನ್ಸಿಗಳು ಗಮನಿಸಿವೆ. ಮುಂದಿನ ವರ್ಷದ ಬೆಳವಣಿಗೆಗೆ ಇದು ನಿರ್ಣಾಯಕ ಅಂಶವಾಗಿದೆ ಎಂದು ಹೇಳಿದರು.
ಮುಂದಿನ ವರ್ಷ 9.5 ಜಿಡಿಪಿ ದರ
ರೇಟಿಂಗ್ ಏಜೆನ್ಸಿಗಳಾದ ಫಿಚ್ ಮತ್ತು SI&P ಮುಂದಿನ ವರ್ಷಕ್ಕೆ ಕ್ರಮವಾಗಿ ಭಾರತದ ಬೆಳವಣಿಗೆಯ ದರವನ್ನು ಶೇಕಡಾ 9.5 ಮತ್ತು ಶೇ 8.5 ರಷ್ಟಿದೆ ಎಂದು ಉಲ್ಲೇಖಿಸಿವೆ. ಇದು ಒಳ್ಳೆಯ ಸುದ್ದಿ ಎಂದು ಅವರು ಹೇಳಿದ್ದಾರೆ.
ಖಾಸಗೀಕರಣದ ಸೂಚನೆ
ಒಟ್ಟಾರೆ ಸುಬ್ರಮಣಿಯನ್ ಅವರು ಬ್ಯಾಂಕುಗಳು ಖಾಸಗೀಕರಣ ಆಗಲಿವೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ರೇಟಿಂಗ್ ಏಜೆನ್ಸಿಗಳ ಜಿಡಿಪಿ ಕುರಿತ ವರದಿ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ರೇಟಿಂಗ್ ಏಜೆನ್ಸಿಗಳ ಉನ್ನತ ಮೇಲಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ಕೂಡ ನಡೆಸಿದ್ದಾರೆ. (ಕೃಪೆ: ಎನ್ಡಿಟಿವಿ)


Click it and Unblock the Notifications