ಕಳೆದ ವರ್ಷ ಕಣ್ಣೀರು ತರಿಸಿದ್ದ ಟೊಮೆಟೊ ದರ ಈಗ ಮತ್ತೆ ಹಬ್ಬದ ಸೀಸನ್ ನಲ್ಲಿ ಏರಿಕೆಯಾಗಿದೆ. ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಈಗಾಗಲೇ 80 ರ ಗಡಿ ದಾಟಿರುವ ಟೊಮೆಟೊ ದರ ಏರಿಕೆಗೆ ಇಳುವರಿ ಕುಸಿತವೂ ಕಾರಣವಾಗಿದೆ. ಜನಸಾಮಾನ್ಯರಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಏರಿಕೆಯಾಗಿದೆ.
ಇದರ ಜೊತೆ ಈಗ ಹಬ್ಬಗಳ ಸೀಸನ್ ಬೇರೆ. ನವರಾತ್ರಿ ಯ ಹಿನ್ನಲೆಯಲ್ಲಿ ಟೊಮೆಟೊ ಸಹಿತ ತರಕಾರಿಗಳಿಗೆ ಬೇಡಿಕೆ ಜಾಸ್ತಿ ಇದೆ. ಅಕಾಲಿಕ ಮಳೆಯಿಂದ ಇಳುವರಿ ಕುಸಿದಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನೊಂದೆಡೆ 1 ಕೆಜಿ ಈರುಳ್ಳಿ ದರ 70 ರೂ. ಗಡಿ ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ. ಸದ್ಯ ಟೊಮೇಟೊ ಬೆಲೆ ಏರಿಕೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್) ಸೋಮವಾರ ಮಂಡಿಗಳಿಂದ ನೇರವಾಗಿ ಟೊಮೆಟೊಗಳನ್ನು ಖರೀದಿಸಲು ಮತ್ತು ದೆಹಲಿ-ಎನ್ಸಿಆರ್ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ಸರ್ಕಾರದ ಈ ನಿರ್ಧಾರದಿಂದ, ದೆಹಲಿ-ಎನ್ಸಿಆರ್ನ ಸುತ್ತಮುತ್ತದ ಸುಮಾರು 50 ಸ್ಥಳಗಳಲ್ಲಿ ಟೊಮೆಟೊವನ್ನು ಕೆಜಿಗೆ 65 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್) ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು, "ಹೆಚ್ಚುತ್ತಿರುವ ಟೊಮೆಟೊ ಬೆಲೆಯಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ಮಧ್ಯವರ್ತಿಗಳು ಮಾಡಿಕೊಳ್ಳುವ ಲಾಭವನ್ನು ತಡೆಗಟ್ಟಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದೆ.
ಮಂಡಿಗಳಿಗೆ ನಿರಂತರ ಉತ್ತಮ ಆಗಮನದ ಹೊರತಾಗಿಯೂ, ಇತ್ತೀಚಿನ ವಾರಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆಯಲ್ಲಿ ವಿನಾಕಾರಣ ಏರಿಕೆ ಕಂಡುಬಂದಿದೆ ಎಂದು ಹೇಳಿಕೆ ಎನ್ಸಿಸಿಎಫ್ ತಿಳಿಸಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಟೊಮೆಟೊ ಬೆಲೆಗಳನ್ನು ನಿಯಂತ್ರಿಸುವ , ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ, ಶ್ರೀಮತಿ ನಿಧಿ ಖರೆ ಅವರು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್ಸಿಸಿಎಫ್) ಟೊಮೆಟೊವನ್ನು ಕೆಜಿಗೆ 65 ರೂ.ಗೆ ಮಾರಾಟ ಮಾಡುವ ವ್ಯಾನ್ಗಳಿಗೆ ಸೋಮವಾರ ಚಾಲನೆ ನೀಡಿದ್ದಾರೆ. NCCF ನೇರವಾಗಿ ಮಂಡಿಗಳಿಂದ ಟೊಮೆಟೊಗಳನ್ನು ಖರೀದಿಸಿ ಮತ್ತು ಪ್ರತಿ ಕಿಲೋಗ್ರಾಂಗೆ ರೂ.65 ರ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಹಸ್ತಕ್ಷೇಪವನ್ನು ನಿಗ್ರಹಿಸಲು ಕ್ರಮ ಕೈಗೊಂಡಿದೆ. ರೈತರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ನೀಡುವ ಮೂಲಕ, ಗ್ರಾಹಕರ ಮೇಲೆ ಬೆಲೆ ಏರಿಳಿತದ ಪರಿಣಾಮವನ್ನು ತಗ್ಗಿಸುವಲ್ಲಿ ಸಂಸ್ಥೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಮಾರುಕಟ್ಟೆಯಲ್ಲಿ ಸರ್ಕಾರದ ಮಧ್ಯಪ್ರವೇಶದಿಂದ ಮುಂದಿನ 3-4 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ದೀರ್ಘಕಾಲದ ಮಾನ್ಸೂನ್ ಮಳೆ ಮತ್ತು ಹೆಚ್ಚಿನ ತೇವಾಂಶದಿಂದ ಕೃಷಿ ಉತ್ಪನ್ನಗಳ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications