ಗ್ರೇಟರ್ ಬೆಂಗಳೂರು.. ಸರ್ಕಾರದ ಬಹುನಿರೀಕ್ಷಿತ ಮಸೂದೆ. ಈ ಮಸೂದೆಯನ್ನು ಕರ್ನಾಟಕ ಉಪಮುಖ್ಯ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದ್ರು. ಇದು ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಉದ್ದೇಶಿಸಿರುವ ಮಸೂದೆ ಅಂತ ಹೇಳಲಾಗಿದೆ. ಆದರೆ ಈ ಮಸೂದೆ ಹಲವು ರೀತಿಯ ಭಿನ್ನಾಭಿಪ್ರಾಯಗಳನ್ನು ಹುಟ್ಟಿಸಿದೆ. ಇದಕ್ಕೆ ಹಲವು ರೀತಿಯ ವಿರೋಧಗಳು ಕೇಳಿ ಬಂದಿವೆ. ಹೀಗಾಗಿ ಈ ಮಸೂದೆಗೆ ಇನ್ನು ರಾಜ್ಯಪಾಲರ ಒಪ್ಪಿಗೆ ಸಿಕ್ಕಿಲ್ಲ. ಅದಕ್ಕಾಗಿ ಕಾಯಲಾಗ್ತಿದೆ. ಈ ಮಸೂದೆಯ ಹಿನ್ನೆಲೆ ಏನೆಂದರೆ ಏಳು ಸಣ್ಣ ನಗರ ನಿಗಮಗಳನ್ನು ಮತ್ತು ಅವುಗಳ ಮೇಲ್ವಿಚಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ಉನ್ನತ ಸಂಸ್ಥೆಯ ರಚನೆಯನ್ನು ಪ್ರಸ್ತಾಪಿಸಿದೆ. ಆದರೆ ಇದು ನಿಜಕ್ಕೂ ಆಡಳಿತ ವ್ಯವಸ್ಥೆಯಲ್ಲಿ ಹೊಸ ಪ್ರಭಾವ ಬೀರುತ್ತದಾ, ಅಥವಾ ಬೆಂಗಳೂರು ಅಭಿವೃದ್ಧಿಗೆ ಅಡಚಣೆಯೋ ಎಂದು ಗೊಂದಲ ಉಂಟಾಗಿದೆ.

ಹೌದು, ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ನಿಟ್ಟಿನಲ್ಲಿ, ಮಂಡಿಸಿರುವ 2024ರ ಗ್ರೇಟರ್ ಬೆಂಗಳೂರು ಮಸೂದೆ ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿದೆ. ಈ ಮಸೂದೆಯು ರಾಜಕೀಯ ಮತ್ತು ನಗರ ಯೋಜನಾ ವಲಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದೆ. ಅಂದರೆ, ಇತ್ತೀಚೆಗೆ ಮಂಡನೆಯಾದ 2025-26ರ ಬಿಬಿಎಂಪಿ ಬಜೆಟ್ನಲ್ಲಿ, ಆಡಳಿತಾತ್ಮಕ ವೆಚ್ಚಗಳಿಗಾಗಿ 2,144 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದು ಒಟ್ಟು ಬಜೆಟ್ನ ಸುಮಾರು ಶೇ.11ರಷ್ಟಾಗಿದೆ. ನಗರ ತಜ್ಞರ ಅನಿಸಿಕೆ ಪ್ರಕಾರ, ಹೊಸ ನಿಗಮಗಳು ಸ್ಥಾಪನೆಯಾದರೆ ಈ ವೆಚ್ಚವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಈ ವೆಚ್ಚ ಹೆಚ್ಚಿದರೂ, ಬದಲಿಗೆ ನಗರೀಕರಣದಲ್ಲಿ ಗುಣಾತ್ಮಕ ಸುಧಾರಣೆ ಕಂಡುಬರುತ್ತದೆಯೇ ಎಂಬುದೇ ಇದೀಗ ಪ್ರಮುಖ ಪ್ರಶ್ನೆಯಾಗಿದೆ.
ಈ ಮಸೂದೆ ಏನು ಹೇಳುತ್ತದೆ?
ಅಂದಹಾಗೆ ಈ ಮಸೂದೆ ಪ್ರಕಾರ ಹೇಳುವುದಾದರೆ, ಪ್ರತಿ ನಿಗಮವು ಗರಿಷ್ಠ 150 ವಾರ್ಡ್ಗಳನ್ನು ಹೊಂದಿರುತ್ತವೆ. ಪ್ರತಿಯೊಂದು ನಿಗಮಕ್ಕೂ ಎಂಜಿನಿಯರ್ಗಳು, ಕಾನೂನು ಸಲಹೆಗಾರರು, ವಿಜಿಲೆನ್ಸ್ ಘಟಕಗಳು ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಗಳಂತಹ ಸಿಬ್ಬಂದಿಯನ್ನು ನೇಮಿಸುವ ಅಗತ್ಯವಿದೆ. ಇದು ಹೆಚ್ಚುವರಿ ಬಜೆಟ್ ಒತ್ತಡಕ್ಕೆ ಕಾರಣವಾಗಬಹುದು. ಹೆಚ್ಚುವರಿ ವೆಚ್ಚಗಳ ಜೊತೆಗೆ, ಕೌನ್ಸಿಲರ್ಗಳ ಭತ್ಯೆ, ವಾಹನ, ವೈದ್ಯಕೀಯ ಮತ್ತು ಪಿಂಚಣಿ ವೆಚ್ಚಗಳು ಕೂಡ ನಿಗಮಗಳ ಹಣಕಾಸಿಗೆ ಭಾರವಾಗಬಹುದು ಎನ್ನಲಾಗಿದೆ.
ಈ ಮಸೂದೆಗೆ ಎಷ್ಟು ಖರ್ಚಾಗಬಹುದು..?
ಸದ್ಯ ಬಿಬಿಎಂಪಿ ಬಜೆಟ್ನಲ್ಲಿ ₹2,144 ಕೋಟಿ ಮೊತ್ತವನ್ನು ಕೇವಲ ನಿಗಮದ ಕೆಲಸದ ವೆಚ್ಚಕ್ಕೆ ಮೀಸಲಿಟ್ಟಿದ್ದಾರೆ. ಈ ಗ್ರೇಟರ್ ಬೆಂಗಳೂರು ಮಸೂದೆ ಅನುಸರಿಸಿದರೆ, ಹೊಸ ಹೊಸ ನಿಗಮ ಕಚೇರಿಗಳು, ಅಧಿಕಾರಿಗಳು, ಸಿಬ್ಬಂದಿ, ಕಾನೂನು ವಿಭಾಗ, ಎಂಜಿನಿಯರ್, ವಾಹನಗಳು ಇತ್ಯಾದಿ ಸೇರಿ ಈ ವೆಚ್ಚ ಹೆಚ್ಚಾಗಬಹುದು.
ತಜ್ಞರ ಅಭಿಪ್ರಾಯವೇನು..?
ನಿರ್ವಹಣಾ ವೆಚ್ಚಗಳು ಸ್ವಲ್ಪ ಹೆಚ್ಚಾದರೂ, ಜನರಿಗೆ ನೇರವಾಗಿ ಸೇವೆ ನೀಡಬಲ್ಲ ಸಮೀಪದ ಆಡಳಿತ ಶಾಖೆಗಳು ಒಂದು ಉತ್ಕೃಷ್ಟ ಹೂಡಿಕೆಯಾಗಬಹುದು. ಬ್ರ್ಯಾಂಡ್ ಬೆಂಗಳೂರು ಸಮಿತಿಯ ಸದಸ್ಯ ವಿ. ರವಿಚಂದರ್ ಅವರ ಪ್ರಕಾರ, ಸದ್ಯದ ಸಿಬ್ಬಂದಿಯಿಂದಲೇ ಮೂರುರಿಂದ ಐದು ನಿಗಮಗಳ ನಿರ್ವಹಣೆ ಸಾಧ್ಯವಿದೆ. ಕೆಲವು ವಲಯ ಕಚೇರಿಗಳನ್ನು ನಿಗಮದ ಪ್ರಧಾನ ಕಚೇರಿಗಳಾಗಿ ಪರಿವರ್ತಿಸಬಹುದೆಂಬ ತಾತ್ವಿಕ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಇನ್ನು ಈ ಹೊಸ ನಿಗಮಗಳಿಗೆ ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಸಾಮರ್ಥ್ಯವಿಲ್ಲ ಎಂಬ ಆತಂಕವೂ ಕೇಳಿಬರುತ್ತಿದೆ. ಆಸ್ತಿ ತೆರಿಗೆಯನ್ನೇ ಮುಖ್ಯ ಆದಾಯ ಮೂಲವನ್ನಾಗಿ ಹೊಂದಿರುವ ಈ ಸಣ್ಣ ನಿಗಮಗಳು, ಉದ್ಯಾನವನಗಳು, ಬೀದಿ ದೀಪಗಳು ಮತ್ತು ವಾರ್ಡ್ ಮಟ್ಟದ ರಸ್ತೆಗಳಲ್ಲಿ ಮಾತ್ರ ಸೀಮಿತವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಆದರೆ ಜನಾಂಗ್ರಹದ ಸಿಇಒ ಶ್ರೀಕಾಂತ್ ವಿಶ್ವನಾಥನ್ ಹಾಗೂ ವಿಧಾನ ಸೌಧ ನೈಋತ್ಯದ ನಿಲುವು ಇದು ಅರ್ಥಪೂರ್ಣ ವ್ಯವಸ್ಥೆಯೆಂದು ಸೂಚಿಸುತ್ತಿದೆ. ಅವರ ಪ್ರಕಾರ, ಪಾದಚಾರಿ ಮಾರ್ಗಗಳು, ಬಸ್ ನಿಲ್ದಾಣಗಳು ಮತ್ತು ಬೀದಿ ದೀಪಗಳ ಗುಣಮಟ್ಟ ಇತ್ತೀಚೆಗೆ ಕುಸಿದಿದ್ದು, ಸ್ಥಳೀಯ ನಿರ್ವಹಣೆ ಈ ಕೊರತೆಯನ್ನು ಭರಿಸಬಹುದು. ಆದರೆ, ಈ ವ್ಯವಸ್ಥೆಯನ್ನು ಚುನಾವಣೆಯಿಂದ ಆಯ್ಕೆಯಾದ ಮೇಯರ್ ಮುನ್ನಡೆಸಬೇಕು ಎಂಬುದರ ಮೇಲೆ ಅವರು ದೃಢ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಎಲ್ಲದಕ್ಕೂ ವಿರೋಧವಾಗಿ, ಕೆಲವರು ಬಿಬಿಎಂಪಿಯೇ ಪ್ರಬಲವಾಗಿ ಇರಲಿ ಆದರೆ ಅದರೊಳಗೆ ಸಣ್ಣ ವಾರ್ಡ್ಗಳನ್ನು ರಚಿಸಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸೋಣ ಎಂದು ಸಲಹೆ ನೀಡುತ್ತಿದ್ದಾರೆ. ಮಾಜಿ ಕೌನ್ಸಿಲರ್ ಪದ್ಮನಾಭ್ ರೆಡ್ಡಿ ಅವರ ಪ್ರಕಾರ, ಪ್ರತ್ಯೇಕ ನಿಗಮಗಳಿಗಿಂತ ಈ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ. ಒಟ್ಟಿನಲ್ಲಿ 'ನಮ್ಮ ನಗರ, ನಮ್ಮ ಹೊಣೆ' ಎಂಬ ನಿಷ್ಠೆಯು ಅಧಿಕಾರಿಗಳ ಪಾಲಿಗೆ ದಿಶಾಸೂಚಕವಾಗಬೇಕಾಗಿದೆ. ಸಣ್ಣ ನಿಗಮಗಳು ಮಾತ್ರ ಭ್ರಷ್ಟಾಚಾರ ಮತ್ತು ಹೊಣೆಗಾರಿಕೆಯ ಕೊರತೆಯನ್ನು ನಿವಾರಣೆಯಾಗುವುದಿಲ್ಲ. ಇದಕ್ಕಾಗಿ ಸರಿಯಾದ ಕಾನೂನು, ನಿಗಾ ವ್ಯವಸ್ಥೆ ಮತ್ತು ಪ್ರಾಮಾಣಿಕ ಆಡಳಿತ ಶಕ್ತಿಯ ಅಗತ್ಯವಿದೆ.


Click it and Unblock the Notifications