ಗುರು ರಾಘವೇಂದ್ರ ಬ್ಯಾಂಕ್: ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ವಾಸುದೇವ ಮಯ್ಯ
ಬೆಂಗಳೂರು, ಜುಲೈ 8: ಹಣಕಾಸು ಅವ್ಯವಹಾರ ಕೇಳಿ ಬಂದಿರುವ ಬೆಂಗಳೂರಿನ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ (73) ಅವರು ಕಳೆದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈಗ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು. ಆತ್ಮಹತ್ಯೆಗೂ ಮುನ್ನ ಮಯ್ಯ ಅವರು ಡೆತ್ ನೋಟ ಬರೆದಿಟ್ಟಿದ್ದರು ಎನ್ನಲಾಗಿದ್ದು, ಅದು ಬಹಿರಂಗಗೊಂಡಿದೆ. ಆರು ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಎಂಟು ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ಆತ್ಮಹತ್ಯೆ
ಬ್ಯಾಂಕಿನ ಅವ್ಯವಹಾರವನ್ನು ಪ್ರಸ್ತಾಪಿಸಿರುವ ಮಯ್ಯ ಅವರು ಬ್ಯಾಂಕಿನ ಅವ್ಯವಹಾರಕ್ಕೆ ನಾನೊಬ್ಬನೇ ಕಾರಣನಲ್ಲ, ಬೇರೆಯವರ ಪಾತ್ರವೂ ಇದೆ. ಅಪವಾದ ಮಾತ್ರ ನನ್ನ ಮೇಲೆ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಪೊಲೀಸರು ಆ ಜನರ ಹೆಸರನ್ನು ತನಿಖಾ ದೃಷ್ಠಿಯಿಂದ ಬಯಲು ಮಾಡಿಲ್ಲ ಎನ್ನಲಾಗಿದೆ.
'ಎಂಟು ಜನರು ನನಗೆ ಮೋಸ ಮಾಡಿದರು'
'ನಾನು ನಂಬಿದ್ದ ಎಂಟು ಜನರು ನನಗೆ ಮೋಸ ಮಾಡಿದರು. ಅವರನ್ನು ನಂಬಿ ಅನೇಕರಿಗೆ ಸಾಲ ಕೊಟ್ಟೆ. ಸಾಲ ಪಡೆದವರು ಮರು ಪಾವತಿ ಮಾಡದೇ ವಂಚಿಸಿದರು. ಆ ಎಂಟು ಜನರಿಂದ ನಾನು ಜನರ ನಂಬಿಕೆ ಕಳೆದುಕೊಳ್ಳಬೇಕಾಯಿತು. ಅಪಮಾನ ಎದುರಿಸಬೇಕಾಯಿತು. ಸಮಾಜಕ್ಕೆ ಮುಖ ತೋರಿಸದಂತಾಯಿತು' ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.
'ನನ್ನ ಹೆಸರ ಮೇಲೆ ಯಾರೋ ಮಜಾ ಮಾಡಿದರು'
'ನಾನು ಯಾವುದೇ ಆಸ್ತಿ ಸಂಪಾದನೆ ಮಾಡಲಿಲ್ಲ, ಬದಲಿಗೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಅನೇಕರು ನನ್ನಿಂದ ಸಹಾಯ ಪಡೆದು ನನಗೆ ಮೋಸ ಮಾಡಿದರು. ನನ್ನ ಹೆಸರ ಮೇಲೆ ಯಾರೋ ಮಜಾ ಮಾಡಿದರು. ವ್ಯವಹಾರದಲ್ಲಿ ನಾನು ಮಾತ್ರ ಬಲಿಪಶುವಾಗಿರುವುದು' ಎಂದು ಮಯ್ಯ ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 6 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಹುಕೋಟಿ ಹಗರಣಕ್ಕೆ ಕಾರಣವಾಗಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ ಜುಲೈ 6 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೂರ್ಣಪ್ರಜ್ಞಾ ಲೇಔಟ್ ನಲ್ಲಿ ಇರುವ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ನಲ್ಲಿ 1800 ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಹಗರಣದಲ್ಲಿ ವಾಸುದೇವ ಮಯ್ಯ ಪ್ರಮುಖ ಆರೋಪಿ ಕೂಡ ಆಗಿದ್ದರು. ಕಳೆದ ತಿಂಗಳು ಮಯ್ಯ ಅವರ ಮನೆ ಮೇಲೆ ಎಸಿಬಿ ದಾಳಿ ಕೂಡ ನಡೆದಿತ್ತು. ಈಚೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಕರ್ಣಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಯ್ಯ
ಈ ಮೊದಲು ಕರ್ಣಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಯ್ಯ, 2012ರಿಂದ 2018ರ ತನಕ ಗುರು ರಾಘವೇಂದ್ರ ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಆಡಳಿತ ಮಂಡಳಿ ಮಾರ್ಗದರ್ಶಕರಾಗಿಯೂ ಕೆಲ ಕಾಲ ಇದ್ದರು. ಆ ಅವಧಿಯಲ್ಲಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ನೀಡಲಾಗಿದೆ.