ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಪರಿಸ್ಥಿತಿ ದಿನೇ ದಿನೆ ಗಂಭೀರವಾಗುತ್ತಿದೆ. ಭೌಗೋಳಿಕ ಹಾಗೂ ರಾಜಕೀಯ ಮಟ್ಟದಲ್ಲಿ ತಲ್ಲಣ ಉಂಟಾಗುತ್ತಿದೆ. ಯಾವಾಗ ಏನು ಸಂಭವಿಸುತ್ತದೋ, ಯುದ್ಧ ಭೀಕರತೆಯತ್ತ ತಿರುಗುತ್ತದೆಯೋ ಎಂಬಂತಹ ಭಯ ಶುರುವಾಗಿದೆ. ಇದರ ನಡುವೆ ಒಂದು ಕಹಿಸುದ್ದಿ ಏನೆಂದರೆ, ಇಂದು ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೇರಿದ ಷೇರುಗಳು ಕಡಿತವಾಗುವ ಸಾಧ್ಯತೆ ಇದೆ.

ಹೌದು, ಮೇ 9ನೇ ತಾರೀಖಾದ ಇಂದು ವಹಿವಾಟಿನಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೇರಿದ ಷೇರುಗಳು ಕಡಿತ ಕಾಣುವ ಸಾಧ್ಯತೆ ಹೆಚ್ಚಾಗಿದೆ ಎನ್ನಬಹುದು. ಇದಕ್ಕೆ ಕಾರಣ ಇತ್ತೀಚೆಗೆ ಹಿಂದೆ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಎನ್ನಬಹುದು. ಅಲ್ಲದೇ ಈ ದಾಳಿಯ ನಂತರ ಭಾರತ ಪ್ರತೀಕಾರದಲ್ಲಿದೆ. ಪಾಕಿಸ್ತಾನಕ್ಕೆ ಪಾಠ ಕಲಿಸಲು ತೊಡೆತಟ್ಟಿ ನಿಂತಿರುವ ಭಾರತ, ಎಚ್ಚರದಿಂದ ಇರುವಂತೆ ಭಾರತೀಯರಿಗೂ ಸಲಹೆ ನೀಡುತ್ತಿದೆ.. ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿದೆ. ಇದೇ ಕಾರಣದಿಂದ, ಪ್ರವಾಸಿಗರು ಈ ಸಮಯದಲ್ಲಿ ಪ್ರಯಾಣಿಸುವುದು ಸರಿಯಲ್ಲ ಎಂದು ನಿರ್ಧರಿಸಿ ಹಿಂಜರಿದಿದ್ದಾರೆ.
ಈ ಗಂಭೀರ ಪರಿಸ್ಥಿತಿಯಿಂದ ಈಗ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಪ್ರಯಾಣದ ಪ್ರಮಾಣ ಕಡಿಮೆ ಮಾಡಿದ್ದು, ಭೀತಿ ಉಂಟಾಗಿದೆ. ಈಗಿನ ಪರಿಸ್ಥಿತಿಯಲ್ಲಿ ವಿದೇಶಿ ಪ್ರವಾಸಿಗರನ್ನು ತಡೆಯುವುದರ ಜೊತೆ, ದೇಶೀಯ ವಿಮಾನ ಸಂಸ್ಥೆಗಳ ವೆಚ್ಚ ಕೂಡ ನಿರ್ವಹಣೆಯಾಗಲಿದೆ. ಇದರಿಂದ ಬಂಡವಾಳದ ಒತ್ತಡ ಕೂಡ ಹೆಚ್ಚಾಗಿದೆ. ಇನ್ನು ಭಾರತೀಯ ವಾಯುಪಡೆಯು ನಿಲ್ದಾಣವಿರುವ ಜಮ್ಮು ವಿಮಾನ ನಿಲ್ದಾಣ, ಪಠಾಣ್ಕೋಟ್ ವಾಯುನೆಲೆಯ ಮೇಲೆ ಪಾಕಿಸ್ತಾನ ಡ್ರೋನ್ ಹಾಗೂ ಮದ್ದು ಗುಂಡುಗಳ ದಾಳಿ ನಡೆಸಿದೆ. ಈ ಭಾರಿ ದಾಳಿಯಿಂದ ಉತ್ತರ ಭಾರತದ ಹಲವಾರು ಪ್ರಮುಖ ಸ್ಥಳಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.
MakeMyTrip ಷೇರು 13% ಕುಸಿತ:
ಅಂತಾರಾಷ್ಟ್ರೀಯ ಬ್ರೋಕಿಂಗ್ ಸಂಸ್ಥೆಯಾದ ಜೆಫರೀಸ್, ಭಾರತ-ಪಾಕಿಸ್ತಾನ ನಡುವಿನ ಗಡಿ ಸಂಘರ್ಷ ಪ್ರವಾಸೋದ್ಯಮ, ಕೈಗಾರಿಕಾ ಮತ್ತು ಹೈ-ಬೀಟಾ ಷೇರುಗಳ ಮೌಲ್ಯವನ್ನು ಪ್ರತಿಕೂಲವಾಗಿ ಪ್ರಭಾವಿಸುತ್ತಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಸಂಸ್ಥೆಯು ತನ್ನ ಹೂಡಿಕೆ ಪೋರ್ಟ್ಫೋಲಿಯಲ್ಲಿನ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಷೇರುಗಳ ತೂಕವನ್ನು ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ, ನ್ಯೂಯಾರ್ಕ್ ಷೇರು ಬೋರ್ಟಿನಲ್ಲಿ ಲಿಸ್ಟ್ ಆಗಿರುವ MakeMyTrip ಕಂಪನಿಯ ಷೇರುಗಳು ಶೇಕಡಾ 13 ರಷ್ಟು ಕುಸಿದು ಪ್ರತಿ ಷೇರಿಗೆ $97.13 ರಷ್ಟು ಮೌಲ್ಯದಲ್ಲಿ ಸ್ಥಿರಗೊಂಡವು.
ಮತ್ತೊಂದೆಡೆ, ವಿಮಾನಯಾನ ಕ್ಷೇತ್ರದಲ್ಲೂ ಅನಿಶ್ಚಿತತೆ ಹೆಚ್ಚಾಗಿದೆ. ಗಡಿಯ ಉದ್ವಿಗ್ನತೆ ಹಿನ್ನೆಲೆಯಲ್ಲಿನ ಉನ್ನತ ಭದ್ರತಾ ಕ್ರಮಗಳು, ವಾಯುಪ್ರದೇಶ ನಿರ್ಬಂಧಗಳು ಮತ್ತು ನಿರಂತರ ವಿಮಾನ ರದ್ದತಿಗಳು ವಿಮಾನಯಾನ ಕಂಪನಿಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿವೆ. ಹಲವು ವಿಮಾನಗಳು ಬೇರೆ ದಿಕ್ಕಿಗೆ ತಿರುಗಿಸಲಾಗುತ್ತಿದ್ದು, ಕೆಲವು ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಯಾವ್ಯಾವ ಕಂಪನಿಯ ಷೇರು ಎಷ್ಟು ಕುಸಿತ..?
ಈ ಬೆಳವಣಿಗೆಗಳು ಷೇರು ಮಾರುಕಟ್ಟೆಯ ಮೇಲೆ ಪ್ರತಿಫಲಿತವಾಗುತ್ತಿವೆ. ಹಿಂದಿನ ವಹಿವಾಟಿನಲ್ಲಿ, ಇಂಡಿಗೋ ಆಪರೇಟರ್ ಇಂಟರ್ಗ್ಲೋಬ್ ಏವಿಯೇಷನ್ ಕಂಪನಿಯ ಷೇರುಗಳು ಶೇಕಡಾ 4 ರಷ್ಟು ಕುಸಿದಿದ್ದರೆ, ಸ್ಪೈಸ್ಜೆಟ್ ಶೇ. 3.7 ರಷ್ಟು ನಷ್ಟವನ್ನು ಅನುಭವಿಸಿತು. ಮೇ 7 ರಂದು ನಡೆದ ಭಾರತದ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂಧೂರ್' ಹೆಸರಿನ ದಾಳಿಯ ನಂತರ, ಎರಡೂ ವಿಮಾನಯಾನ ಕಂಪನಿಗಳು ತಮ್ಮ ಕೆಲವು ವಿಮಾನಗಳನ್ನು ರದ್ದುಗೊಳಿಸಿ, ಮರು ಮಾರ್ಗಕ್ಕೆ ತಿರುಗಿಸಿದ್ದವು.
ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ:
ಪ್ರಸ್ತುತ ಗಂಭೀರ ವಿದ್ಯಮಾನಗಳನ್ನು ಪ್ರತಿಬಿಂಬಿಸುವಂತೆ, ಭಾರತ ಸರ್ಕಾರವು ಉತ್ತರ ಭಾರತದ 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ನಾಗರಿಕ ವಿಮಾನ ಸೇವೆಗಳಿಗೆ ಮುಚ್ಚುವ ಆದೇಶ ಹೊರಡಿಸಿದೆ. ಇದರಲ್ಲಿ ಚಂಡೀಗಢ, ಶ್ರೀನಗರ, ಜೈಸಲ್ಮೇರ್, ಶಿಮ್ಲಾ ಸೇರಿ ಹಲವಾರು ಪ್ರಮುಖ ನಗರಗಳ ವಿಮಾನ ನಿಲ್ದಾಣಗಳು ಒಳಗೊಂಡಿವೆ. ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿರುವ ಈ ನಗರಗಳು ಅತೀದೊಡ್ಡ ಪ್ರವಾಸೋದ್ಯಮ ಕೇಂದ್ರಗಳಾಗಿದ್ದು, ಇದು ನೇರವಾಗಿ ಪ್ರವಾಸೋದ್ಯಮ ವಲಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ, ಹೂಡಿಕೆದಾರರಿಗೆ ತಮ್ಮ ಬಂಡವಾಳ ನಿರ್ಧಾರಗಳನ್ನು ಎಚ್ಚರಿಕೆಯಿಂದ ವಿಮರ್ಶೆ ಮಾಡುವ ಅವಶ್ಯಕತೆ ಇದೆ. ಭೌಗೋಳಿಕ ರಾಜಕೀಯ ಸ್ಥಿತಿಗತಿಯು ಹೇಗೆ ಮುಂದುವರಿಯುತ್ತದೆ ಎಂಬುದನ್ನು ಅವಲಂಬಿಸಿ, ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯದ ಷೇರುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಅಸ್ಥಿರತೆಯನ್ನೂ ಕಂಡುಬಿಡಬಹುದು.


Click it and Unblock the Notifications