ಭಾರತ ಮತ್ತು ರಷ್ಯಾ ಪಾಲುದಾರಿಕೆ ನಿನ್ನೆ ಮೊನ್ನೆಯದಲ್ಲ. ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಇನ್ನು ಕೂಡ, ಭಾರತದ ಆಯ್ಕೆಯ ಪಾಲುದಾರನಾಗಿದೆ. ಹೀಗಂತ ಸ್ವತಃ ರಷ್ಯಾದ ಚಾರ್ಜ್ ಡಿ'ಅಫೇರ್ಸ್ ರೋಮನ್ ಬಾಬುಷ್ಕಿನ್ ಹೇಳಿದ್ದಾರೆ. ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷದಲ್ಲಿ, ರಷ್ಯಾದ S-400 ವಾಯು ರಕ್ಷಣಾ ವ್ಯವಸ್ಥೆ ಮತ್ತು ಬ್ರಹ್ಮೋಸ್ ಕ್ಷಿಪಣಿ ಪ್ರಮುಖ ಪಾತ್ರವಹಿಸಿದ್ದು, ಇದು ರಷ್ಯಾ ಶಸ್ತ್ರಾಸ್ತ್ರಗಳಿಗೆ ಯಶಸ್ವಿ ಪರೀಕ್ಷೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪುಟಿನ್ ಅವರ ಭಾರತ ಭೇಟಿ:
ಇನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡೋದಂತೂ ಪಕ್ಕಾ ಆಗಿದೆ. ಆದರೆ ದಿನಾಂಕ ಜಿಗದಿ ಕೆಲಸ ಮಾತ್ರ ಬಾಕಿ ಇದೆ. ಈ ಭೇಟಿಯಲ್ಲಿ ವಾಣಿಜ್ಯ, ಹೂಡಿಕೆ, ಇಂಧನ ಮೂಲಸೌಕರ್ಯ ಮತ್ತು ಪರಮಾಣು ಶಕ್ತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ಚರ್ಚೆಯಾಗಲಿವೆ.
ತೈಲ ಖರೀದಿಯಲ್ಲಿ ಭಾರತ-ರಷ್ಯಾ ಸಂಬಂಧ:
ಚೀನಾ ನಂತರ ಭಾರತವೇ ರಷ್ಯಾದ ತೈಲ ಖರೀದಿಸುವ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಪ್ರಸ್ತುತ ಭಾರತದ ತೈಲ ಪೂರೈಕೆಯ 40% ರಷ್ಯಾದಿಂದ ಬರುತ್ತಿದೆ. 2022ರಲ್ಲಿ ಉಕ್ರೇನ್ ಆಕ್ರಮಣದ ನಂತರ ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿದ ಬಳಿಕ, ಭಾರತದ ಖರೀದಿಗಳು ಇನ್ನಷ್ಟು ಹೆಚ್ಚಿದವು.
ಅಮೆರಿಕ ಆಗಸ್ಟ್ 28ರಿಂದ ಭಾರತೀಯ ರಫ್ತುಗಳ ಮೇಲೆ 25% ದಂಡಾತ್ಮಕ ಸುಂಕವನ್ನು ವಿಧಿಸಲು ತೀರ್ಮಾನಿಸಿದೆ. ಆದಾಗ್ಯೂ, ರಷ್ಯಾ ಅಧಿಕಾರಿಗಳ ಅಭಿಪ್ರಾಯದಲ್ಲಿ ಈ ಕ್ರಮದಿಂದ ತೈಲ ಪೂರೈಕೆ ಹೆಚ್ಚಿನ ಮಟ್ಟದಲ್ಲಿ ಬಾಧಿತವಾಗುವುದಿಲ್ಲ. ತೈಲ ಪೂರೈಕೆಗೆ ಪರ್ಯಾಯ ಮಾರ್ಗಗಳನ್ನು ಬಳಸುವ ವ್ಯವಸ್ಥೆಯನ್ನು ರಷ್ಯಾ ಈಗಾಗಲೇ ಮಾಡಿಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಾಣಿಜ್ಯ ಮತ್ತು ವ್ಯಾಪಾರದ ಬೆಳವಣಿಗೆ:
2024-25ರಲ್ಲಿ ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರ ದಾಖಲೆ ಮಟ್ಟದ $68.7 ಶತಕೋಟಿಗೆ ತಲುಪಿದೆ. ಆದರೆ ಇದರಲ್ಲಿ ಭಾರತದ ರಫ್ತು ಕೇವಲ $4.88 ಶತಕೋಟಿಯಾಗಿದ್ದು, ಸುಮಾರು $60 ಶತಕೋಟಿಯ ವ್ಯಾಪಾರ ಅಸಮತೋಲನ ಇದೆ. ಈ ಅಸಮತೋಲನ ಕಡಿಮೆ ಮಾಡುವ ಬಗ್ಗೆ ರಷ್ಯಾ ಬದ್ಧವಾಗಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $100 ಶತಕೋಟಿಗೆ ಏರಿಸುವ ಗುರಿ ಇರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ರಷ್ಯಾದ ಪಾತ್ರ:
ಭಾರತವು ರಷ್ಯಾದ ಶಸ್ತ್ರಾಸ್ತ್ರಗಳು ಮತ್ತು ಸೈನಿಕ ಉಪಕರಣಗಳನ್ನು ಬಳಸಿಕೊಂಡು ಬರುತ್ತಿದೆ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಯೋಜನೆ ಭಾರತ-ರಷ್ಯಾ ಜಂಟಿ ಅಭಿವೃದ್ಧಿಯ ಪ್ರಮುಖ ಉದಾಹರಣೆ. ಇತ್ತೀಚಿನ ಆಪರೇಷನ್ ಸಿಂಧೂರ್ ವೇಳೆ ಭಾರತ S-400 ವಾಯು ರಕ್ಷಣಾ ವ್ಯವಸ್ಥೆ ಮತ್ತು Su-30 ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಬಳಸಿತು.
ಮುಂದಿನ ದಿನಗಳಲ್ಲಿ ಭಾರತದ "ಸುದರ್ಶನ ಚಕ್ರ" ಹೆಸರಿನ ಹೊಸ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಗುರಾಣಿ ಯೋಜನೆಯಲ್ಲಿ ಕೂಡ ರಷ್ಯಾ ಪಾಲ್ಗೊಳ್ಳಲಿದೆ. ಈ ವ್ಯವಸ್ಥೆ 2035ರ ವೇಳೆಗೆ ನಗರಗಳು ಮತ್ತು ಪ್ರಮುಖ ಮೂಲಸೌಕರ್ಯವನ್ನು ರಕ್ಷಿಸಲು ಸಿದ್ಧವಾಗಲಿದೆ.
ಇದೀಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಸ್ಕೋಗೆ ಭೇಟಿ ನೀಡಿ ರಷ್ಯಾ ವಿದೇಶಾಂಗ ಸಚಿವ ಸೆರ್ಗೇ ಲಾವ್ರೊವ್ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಭಾರತ-ರಷ್ಯಾ ಅಂತರಸರ್ಕಾರಿ ಆಯೋಗದ ಸಭೆಯೂ ನಡೆಯಿತು. ಈ ಎಲ್ಲಾ ಸಿದ್ಧತೆಗಳು ವರ್ಷದ ಕೊನೆಯಲ್ಲಿ ನಡೆಯಲಿರುವ ಪುಟಿನ್-ಮೋದಿ ಶೃಂಗಸಭೆಯ ಭಾಗವಾಗಿದೆ.


Click it and Unblock the Notifications