ಬೆಂಗಳೂರು, ಸೆಪ್ಟೆಂಬರ್ 28: ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂತು. ಮಂಗಳವಾರದಿಂದ ಅಕ್ಟೋಬರ್ ಆರಂಭವಾಗಲಿದೆ. ಪ್ರತಿ ತಿಂಗಳು ಆರಂಭವಾಗುವಾಗ ಹಣಕಾಸು ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಪಿಎಫ್, ಆಧಾರ್ ಕಾರ್ಡ್, ಸಣ್ಣ ಉಳಿತಾಯ ಯೋಜನೆಗಳು, ಗೃಹ ಸಾಲದ ಮೇಲಿನ ಬಡ್ಡಿದರ, ಎಲ್ಪಿಜಿ ಸಿಲಿಂಡರ್ ಹೀಗೆ ಹಲವು ಬದಲಾವಣೆಗಳು ಸಾಮಾನ್ಯ. ಇವುಗಳನ್ನು ತಿಂಗಳ ಆರಂಭದಲ್ಲಿಯೇ ತಿಳಿದರೆ ಅದಕ್ಕೆ ತಕ್ಕಂತೆ ಮುಂದಿನ ತಿಂಗಳ ಹಣಕಾಸು ಯೋಜನೆಯನ್ನು ಮಾಡಬಹುದಾಗಿದೆ.
ಅಕ್ಟೋಬರ್ 1ರ ಮಂಗಳವಾರದಿಂದಲೂ ಹೀಗೆ ಹಣಕಾಸು ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳ ಏರಿಕೆ, ಇಳಿಕೆ ಮತ್ತು ಪೆಟ್ರೋಲ್ & ಡೀಸೆಲ್ ಬೆಲೆಗಳ ಏರಿಕೆ ಇಳಿಕೆ ಕುರಿತು ತಿಂಗಳ ಮೊದಲ ದಿನ ಮಾಹಿತಿ ತಿಳಿಯಲಿದೆ. ಉಳಿದಂತೆ ಬದಲಾವಣೆಯಾಗುವ ಕೆಲವು ನಿಯಮಗಳ ಮಾಹಿತಿ ಇಲ್ಲಿದೆ.

ಆಧಾರ್ ಕಾರ್ಡ್, ಬೋನಸ್ ಶೇರುಗಳು, ಸಣ್ಣ ಉಳಿತಾಯ ಯೋಜನೆಗಳು, ಎಸ್ಟಿಟಿ ಸೇರಿದಂತೆ ಕೆಲವು ಬದಲಾವಣೆಗಳು ಅಕ್ಟೋಬರ್ 1ರಿಂದ ಆಗಲಿವೆ. ಅವುಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್: ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜನರು ಶಾಶ್ವರ ಪಾನ್ ಸಂಖ್ಯೆಗಾಗಿ ಅರ್ಜಿ ಸಲ್ಲಿಸುವಾಗ ಅಥವ ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವಾಗ ಆಧಾರ್ ನೋಂದಣಿ ಐಡಿಯನ್ನು ಬಳಕೆ ಮಾಡಲು ಅವಕಾಶವಿಲ್ಲ. ಈ ಕುರಿತು ನಿಯಮಗಳಲ್ಲಿ ತಿದ್ದುಪಡಿಗಳನ್ನು ತರಲಾಗಿದ್ದು, ಇದು ಅಕ್ಟೋಬರ್ನಿಂದಲೇ ಜಾರಿಗೆ ಬರಲಿದೆ.
ಆದಾಯ ತೆರಿಗೆಯಲ್ಲಿ ಯಾವ ಬದಲಾವಣೆ: ಆದಾಯ ತೆರಿಗೆಯ ಕುರಿತು ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ವಿವಿಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಹಲವು ಅರ್ಜಿಗಳು ಬಾಕಿ ಇದೆ. ತೆರಿಗೆದಾರರು ಈ ಅರ್ಜಿಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಅನುಕೂಲವಾಗುವಂತೆ ಅಕ್ಟೋಬರ್ 1ರಿಂದ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ 'ವಿವಾದ್ ಸೆ ವಿಶ್ವಾಸ್' ಎಂಬ ಯೋಜನೆಯನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ ಜಾರಿಗೊಳಿಸಲಿದೆ. 2024ರ ಜು.22ಕ್ಕೆ ಅನ್ವಯವಾಗುವಂತೆ ವಿವಿಧ ಕಡೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಈ ಯೋಜನೆ ಅವಕಾಶವನ್ನು ನೀಡಲಿದೆ.
ಬಡ್ಡಿಗಳಲ್ಲಿ ಬದಲಾವಣೆ: ಎನ್ಎಸ್ಎಸ್ ಯೋಜನೆಯಡಿ ಅಂಚೆ ಕಛೇರಿಗಳಲ್ಲಿನ ಸಣ್ಣ ಉಳಿತಾಯ ಖಾತೆಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗುತ್ತದೆ. ಅಕ್ಟೋಬರ್ 1ರಿಂದಲೇ ಅನ್ವಯವಾಗುವಂತೆ ಉಳಿತಾಯಗಳ ಮೇಲಿನ ಬಡ್ಡಿಯ ಮೇಲೆ ಇದು ಪ್ರಭಾವ ಬೀರುವ ಕಾರಣ, ಜನರು ಅಂಚೆ ಕಛೇರಿಗಳಿಗೆ ಭೇಟಿ ನೀಡಿ ಈ ಕುರಿತು ಮಾಹಿತಿ ಪಡೆಯಬಹುದು.
ವಿಶೇಷ ಅಭಿಯಾನ: ಭಾರತೀಯ ರೈಲ್ವೆ ಅಕ್ಟೋಬರ್ 1ರಿಂದ ಹೊಸ ಅಭಿಯಾನವೊಂದನ್ನು ಆರಂಭಿಸಲಿದೆ. ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಿರುವಾಗ ಟಿಕೆಟ್ ಇಲ್ಲದೇ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅವರನ್ನು ಪತ್ತೆ ಹಚ್ಚಲು ವಿಶೇಷ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿದೆ.
ಸಣ್ಣ ಉಳಿತಾಯ ಯೋಜನೆ: ಅಂಚೆ ಕಛೇರಿಗಳಲ್ಲಿನ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳಡಿ ತೆರೆದಿರುವ ಅಸಮರ್ಪಕ ಖಾತೆಗಳನ್ನು ಸಮರ್ಕಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಅಪ್ರಾಪ್ತ ವಯಸ್ಕರ ಹೆಸರಿನ ಪಿಪಿಎಫ್, ಹೆತ್ತವರ ಬದಲು ಅಜ್ಜ-ಅಜ್ಜಿಯರು ತೆರೆದ ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಒಟ್ಟು 6 ಯೋಜನೆಗಳ ಅಡಿ ಇರುವ ಅಸಮರ್ಪಕ ಖಾತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಎನ್ಆರ್ಐಗಳ ಪಿಪಿಎಫ್ ಖಾತೆ: ಅನಿವಾಸಿ ಭಾರತೀಯರು ಪಿಪಿಎಫ್ ಖಾತೆಗಳನ್ನು ಹೊಂದಲು ಮಾರ್ಗಸೂಚಿಗಳಿವೆ. ತಮ್ಮ ಸ್ಥಿತಿ ಬಹಿರಂಗಪಡಿಸದೆ ಪಿಪಿಎಫ್ ಖಾತೆಗಳಲ್ಲಿ ಹೂಡಿಕೆ ಮಾಡುತ್ತಿರುವ ಎನ್ಆರ್ಐಗಳಿಗೆ ಖಾತೆಗಳ ವ್ಯವಹಾರ ಎಂದಿನಂತೆ ಸ್ಥಗಿತಗೊಳ್ಳಲಿದೆ. ಈ ಖಾತೆಗಳಿಗೆ ಅಂಚೆ ಕಛೇರಿಯ ಉಳಿತಾಯ ಖಾತೆಯ ಬಡ್ಡಿ ದರ ಜುಲೈ 12 ಮತ್ತು ಸೆಪ್ಟೆಂಬರ್ 30ರ ನಡುವೆ ಸಿಗಲಿದೆ. ಆದರೆ ಅಕ್ಟೋಬರ್ 1ರಿಂದ, ಈ ಖಾತೆಯು ಶೂನ್ಯ ಬಡ್ಡಿಯನ್ನು ಪಡೆಯಲಿದೆ.


Click it and Unblock the Notifications