ಇಎಂಐ ಮುಂದೂಡಿಕೆ ಅವಧಿ ಮೇಲೆ ಬಡ್ಡಿ: ಆಗಸ್ಟ್ನಲ್ಲಿ ನಿರ್ಧಾರ
ನವದೆಹಲಿ, ಜೂನ್ 17: ಲಾಕ್ಡೌನ್ ನಿಂದ ತೊಂದರೆಗೆ ಒಳಗಾಗಿರುವ ಜನರಿಗೆ ತಮ್ಮ ಬ್ಯಾಂಕ್ ಇಎಂಐಗಳನ್ನು ಕಟ್ಟಲು ಪರಿಹಾರವಾಗಿ ಆರ್ಬಿಐ ಆರು ತಿಂಗಳು ಮುಂದೂಡಿಕೆ ಅವಧಿ ಕೊಟ್ಟಿದೆ. ಆದರೆ, ಇದಕ್ಕೆ ಬಡ್ಡಿ ಮನ್ನಾ ಮಾಡಿಲ್ಲ. ಮುಂದೂಡಿಕೆ ಅವಧಿಯಲ್ಲಿ ಬಡ್ಡಿಯನ್ನು, ಬಡ್ಡಿ ಮೇಲಿನ ಬಡ್ಡಿಯನ್ನು ಗ್ರಾಹಕರು ಕಟ್ಟಲೇಬೇಕು ಎಂದು ಆರ್ಬಿಐ ಹೇಳಿದೆ. ಹಾಗೆಯೇ ಬ್ಯಾಂಕುಗಳು ಕೂಡ ಬಡ್ಡಿ ಮನ್ನಾ ಮಾಡಲು ಆಗುವುದಿಲ್ಲ ಎಂದೇ ಈಗಾಗಲೇ ಹೇಳಿವೆ.
ಮುಂದೂಡಿಕೆ ಅವಧಿಯಲ್ಲಿನ ಇಎಂಐ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಲಾಕ್ಡೌನ್ ಪ್ರಭಾವ: ಎಂಎಸ್ಎಂಇ ಗಳ ಆದಾಯದಲ್ಲಿ ಶೇ 21 ಕುಸಿತ
ಈ ಕುರಿತು ಬುಧವಾರ ವಿಚಾರಣೆ ಮುಂದುವರೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಸಾಲ ನಿಷೇಧದ ಪ್ರಯೋಜನಗಳನ್ನು ಸರ್ಕಾರವು ಜನರಿಗೆ ಲಭ್ಯವಾಗುವಂತೆ ಮಾಡಬೇಕಿದೆ ಎಂದು ಹೇಳಿದೆ. ಸಾಲ ಕಟ್ಟಲು ಆರು ತಿಂಗಳು ವಿನಾಯಿತಿ ನೀಡಿ, ಮುಂದೆ ಅದಕ್ಕೆ ಬಡ್ಡಿ ತೆಗೆದುಕೊಂಡರೆ ಅದರ ಲಾಭ ಜನಕ್ಕೆ ಆಗವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿದೆ.
ಎಲ್ಲವನ್ನೂ ಬ್ಯಾಂಕುಗಳಿಗೆ ಬಿಡಲು ಸಾಧ್ಯವಿಲ್ಲ
ಸರ್ಕಾರವು ಎಲ್ಲವನ್ನೂ ಬ್ಯಾಂಕುಗಳಿಗೆ ಬಿಡಲು ಸಾಧ್ಯವಿಲ್ಲ ಮತ್ತು ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದನ್ನು ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಡ್ಡಿ ಮನ್ನಾ ಮಾಡುವುದು ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಶೇ 90 ಜನ ವಿನಾಯಿತಿ ಬಗ್ಗೆ ಕೇಳಿಲ್ಲ
90 ಪ್ರತಿ ಶತದಷ್ಟು ಸಾಲಗಾರರು ಇಎಂಐ ಮುಂದೂಡಿ ಎಂದೂ ಸಹ ಕೋರಿಲ್ಲ ಹಾಗಾಗಿ ಬಡ್ಡಿ ಮನ್ನಾವನ್ನು ಉಚಿತ ಉಡುಗೊರೆಯಂತೆ ನೀಡಲಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ.
ಯಾವುದೇ ಪ್ರಯೋಜನಗಳನ್ನು ಪಡೆಯುತ್ತಿಲ್ಲ
ಇದಕ್ಕೆ ಪ್ರತಿಯಾಗಿ ಅರ್ಜಿ ಪರ ವಕೀಲರು, ಬಹಳಷ್ಟು ಗ್ರಾಹಕರು ಇಎಂಐ ಮುಂದೂಡಿಕೆ ಆರಿಸಿಕೊಂಡಿಲ್ಲ. ಏಕೆಂದರೆ ಅವರು ಆರ್ಬಿಐ ನಿರ್ಧಾರದಿಂದ ಯಾವುದೇ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಅವರಿಗೆ ತಿಳಿದಿದೆ. ಆದರೆ, ತಿಂಗಳ ಆದಾಯವನ್ನೇ ನೆಚ್ಚಿಕೊಂಡು ಇಎಂಐ ಕಟ್ಟುವವರಿಗೆ ಇದು ತೀವ್ರ ಹೊರೆಯನ್ನುಂಟು ಮಾಡಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ಬಡ್ಡಿ ಮನ್ನಾ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಕೇಂದ್ರಕ್ಕೆ ಇನ್ನಷ್ಟು ಸಮಯಾವಕಾಶ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಆಗಸ್ಟ್ 31 ರವರೆಗೆ ಇಎಂಐಗಳನ್ನು ಮರುಪಾವತಿ ಮಾಡಲು ಅವಕಾಶ ನೀಡಿದೆ. ಮುಂದೂಡಲ್ಪಟ್ಟ ಅವಧಿಗೆ ಬ್ಯಾಂಕುಗಳು ಬಡ್ಡಿ ವಿಧಿಸಬಹುದೇ ಎಂದು ಸ್ಪಷ್ಟಪಡಿಸುವಂತೆ ಸುಪ್ರೀಂ ಕೇಂದ್ರವನ್ನು ಕೇಳಿದೆ. ಬುಧವಾರದ ವಿಚಾರಣೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸಮಯಾವಕಾಶ ನೀಡಿದೆ.