ಮುಂಬೈ, ಜೂನ್ 8: ಕೊರೊನಾವೈರಸ್ ಪರಿಣಾಮವಾಗಿ ದೇಶದ ಬ್ಯಾಂಕಿಂಗ್ ವಲಯ ಸಂಕಷ್ಟಕ್ಕೆ ಸಿಲುಕಿದೆ. ಸಾಲದ ಮೇಲಿನ ಇಎಂಐಗಳನ್ನು ಮುಂದೂಡಲಾಗಿದೆ.
ಇದರಿಂದ ಬ್ಯಾಂಕ್ಗಳು ಹಣಕಾಸಿನ ಬಿಕ್ಕಟ್ಟನ್ನು ಅನುಭವಿಸುತ್ತಿವೆ. ಸದ್ಯ ಸಂಭವಿಸಿರುವ ಬಿಕ್ಕಟ್ಟಿನ ಬಗ್ಗೆ ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಚ್ಡಿಎಫ್ಸಿ ಯ ಚಿಲ್ಲರೆ ಬ್ಯಾಂಕಿಂಗ್ ಮುಖ್ಯಸ್ಥ ಅರವಿಂದ್ ಕಪಿಲ್ ಅವರು ಮಾತನಾಡಿದ್ದಾರೆ.
ಸದ್ಯ ಕೊರೊನಾ ಲಾಕ್ಡೌನ್ ಪರಿಣಾಮವಾಗಿ ದೇಶದ ಬ್ಯಾಂಕಿಂಗ್ ವಲಯದ ಮೇಲೆ ಬಿದ್ದಿರುವ ಕರಿನೆರಳು ದೂರವಾಗಲು ಇನ್ನೂ ಮೂರು ತಿಂಗಳಾದರೂ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬ್ಯಾಂಕುಗಳು ತೊಂದರೆಗೆ ಸಿಲುಕಿವೆ
ಸದ್ಯ ಎದ್ದಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಬ್ಯಾಂಕುಗಳು ತೊಂದರೆಗೆ ಸಿಲುಕಿವೆ. ಎಚ್ಡಿಎಫ್ಸಿ ಕೂಡ ತೊಂದರೆಗೆ ಸಿಲುಕಿದೆ. ಈ ಪರಿಸ್ಥಿತಿ ಸರಿ ಹೋಗಲು ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ ಎಂದು ಅರವಿಂದ್ ಕಪಿಲ್ ಹೇಳಿದ್ದಾರೆ.
ಸಾಲಗಳ ಬೇಡಿಕೆ ಹೆಚ್ಚಿದೆ
ಸದ್ಯದ ಮಟ್ಟಿಗೆ ಸಾಲಗಳ ಬೇಡಿಕೆ ಹೆಚ್ಚಿದೆ. ಮೇ ತಿಂಗಳ ನಂತರ, ಲಾಕ್ಡೌನ್ ಸಡಿಲಿಕೆಯಾದ ಬಳಿಕ ಆಟೋ ಹಾಗೂ ದ್ವಿಚಕ್ರ ವಾಹನಗಳ ಸಾಲಗಳ ವಿತರಣೆಯಿಂದ ಇದು ಸ್ಪಷ್ಟವಾಗಿದೆ. ಆದರೆ, ಬ್ಯಾಂಕುಗಳು ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿಲ್ಲ. ಎಂದು ಅರವಿಂದ್ ಕಪಿಲ್ ಹೇಳುತ್ತಾರೆ.
ಆರ್ಥಿಕತೆ ಬಹಳ ವೇಗವಾಗಿ ಪಾತಾಳಕ್ಕೆ ಕುಸಿಯುತ್ತಿದೆ
ಲಾಕ್ಡೌನ್ ಸಂಪೂರ್ಣ ತೆರವಾದ ಬಳಿಕ ಬ್ಯಾಂಕಿಂಗ್ ಸಹಜ ಸ್ಥಿತಿಗೆ ಮರಳಲಿದೆ. ಆದರೆ, ಆರ್ಥಿಕತೆ ಬಹಳ ವೇಗವಾಗಿ ಪಾತಾಳಕ್ಕೆ ಕುಸಿಯುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಜನರು ಹೊಸ ಆಶಾವಾದವನ್ನು ಎದುರು ನೋಡುತ್ತಿದ್ದಾರೆ ಎಂದು ಅರವಿಂದ್ ಕಪಿಲ್ ಹೇಳುತ್ತಾರೆ.
ಡಿಜಿಟಲ್ ವ್ಯಾಪ್ತಿಯ ಹೆಚ್ಚಳ
ಕೊರೊನಾವೈರಸ್ ನಮಗೆ ಸಾಕಷ್ಟು ಪಾಠ ಕಲಿಸಿದೆ. ಹೊಸ ಮತ್ತು ಹಳೆಯ ಗ್ರಾಹಕರಿಗೆ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಡಿಜಿಟಲ್ ವ್ಯಾಪ್ತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸುತ್ತಿದೆ. ಮತ್ತು ವಾಹನ ಸಾಲಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸಲು ಮಾರುತಿ ಸುಜುಕಿಯೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಅರವಿಂದ್ ಕಪಿಲ್ ಹೇಳಿದ್ದಾರೆ.


Click it and Unblock the Notifications