ಮತ್ತಷ್ಟು ವಲಯಗಳಿಗೆ ಉತ್ಪಾದನಾ ಪ್ರೋತ್ಸಾಹಕ: ನೀತಿ ಆಯೋಗ
ನವದೆಹಲಿ, ಅಕ್ಟೋಬರ್ 31: ಸರ್ಕಾರವು ಇನ್ನಷ್ಟು ವಲಯಗಳಿಗೆ ಉತ್ಪಾದನೆಗೆ ಪ್ರೋತ್ಸಾಹಕಗಳನ್ನು ನೀಡಲಿದೆ. ಆದರೆ ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸಲು ನೀಡಲಾಗುವ ಟಾರಿಫ್ ರಕ್ಷಣೆಯ ಆಫರ್ ಕೆಲವೇ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ನಿಯಮಾವಳಿಗಳಿಗೆ ಬದ್ಧವಾಗಿ ಆರ್ಥಿಕ ಚೇತರಿಕೆಯನ್ನು ಬೆಂಬಲಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆಂತರಿಕ ಉದ್ಯಮಶೀಲತೆಗೆ ನೀಡಲಾಗುವ ಯಾವುದೇ ಬೆಂಬಲವನ್ನು, ಅದು ಜಾಗತಿಕ ಸ್ಪರ್ಧಾತ್ಮಕ ಸಾಮರ್ಥ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಗುರಿ ಹೊಂದಿರುತ್ತದೆ. ಹಾಗೆಯೇ ಅವರಿಗೆ ಟಾರಿಫ್ ಮೂಲಕ ನೀಡಲಾಗುವ ಬೆಂಬಲವು ಸೀಮಿತ ಕಾಲಾವಧಿ ಹೊಂದಿರುತ್ತದೆ ಎಂದು ಹೇಳಿದ್ದಾರೆ.
ನೀತಿನಿರೂಪಕರು ಪ್ರಸ್ತುತ ಆರ್ಥಿಕತೆಯ ಅನೇಕ ವಿಭಾಗಗಳಲ್ಲಿನ ಸ್ವಯಂ ಪೂರ್ಣತೆಯನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಭಾರತದ ಆರ್ಥಿಕತೆಯು ಬಹುರಾಷ್ಟ್ರೀಯ ಆದೇಶಗಳ ನಿಯಮಗಳಿಗೆ ಅನುಗುಣವಾಗಿ ತೆರೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಕಾನ್ಫಡೆರೇಷನ್ ಆಫ್ ಏಷ್ಯಾ ಪೆಸಿಫಿಕ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆನ್ಲೈನ್ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.