ಆನ್ ಲೈನ್ ವ್ಯವಹಾರದ ಬಗ್ಗೆ 'ಭಾರತದ ಜೇಮ್ಸ್ ಬಾಂಡ್' ಅಜಿತ್ ದೋವಲ್ ಎಚ್ಚರಿಕೆ
"ಆನ್ ಲೈನ್ ನಲ್ಲಿ ಇರುವಾಗ ಬಹಳ ಎಚ್ಚರಿಕೆಯಿಂದ ಇರಿ" ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್ ಶುಕ್ರವಾರ (ಸೆಪ್ಟೆಂಬರ್ 18, 2020) ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಗಳ ಮೇಲೆ ಅವಲಂಬನೆ ಹೆಚ್ಚಾದಂತೆ ಹಣಕಾಸು ವಂಚನೆ ಕೂಡ ವಿಪರೀತ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಆನ್ ಲೈನ್ ನಲ್ಲಿ ಹೇಗಿರಬೇಕು? ಕೇಳಿಸಿಕೊಳ್ಳಿ ರತನ್ ಟಾಟಾ ಮಾತು
ಕೇಂದ್ರ ಸರ್ಕಾರದಿಂದ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸ್ಟ್ರಾಟೆಜಿ 2020 ಬರುತ್ತಿದೆ. ಭಾರತದ ಶ್ರೀಮಂತಿಕೆಗಾಗಿ ಸೈಬರ್ ಅವಕಾಶಗಳನ್ನು ನಂಬಿಕಸ್ತ ಹಾಗೂ ಭದ್ರತಾ ಮಾರ್ಗಗಳಿಂದ ಬಳಸಿಕೊಳ್ಳಬಹುದು ಎಂದಿದ್ದಾರೆ. ಕೇರಳ ಪೊಲೀಸ್ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ ಕುರಿತಾದ ಕಾರ್ಯಕ್ರಮದಲ್ಲಿ ದೋವಲ್ ಈ ಮಾತುಗಳನ್ನು ಹೇಳಿದ್ದಾರೆ.
ಡಿಜಿಟಲ್ ಪೇಮೆಂಟ್ ಮೇಲೆ ಅವಲಂಬನೆ
ಕೊರೊನಾ ಕಾರಣಕ್ಕೆ ಕೆಲಸ ಮಾಡುವ ವಾತಾವರಣವೇ ಬದಲಾಗಿದೆ. "ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರ್ಮ್ ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ನಗದು ನಿರ್ವಹಣೆ ಕಡಿಮೆ ಆಗಿದೆ. ಆ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಡೇಟಾಗಳು ಈ ಪ್ಲಾಟ್ ಫಾರ್ಮ್ ನಲ್ಲಿ ಹಂಚಿಕೆ ಆಗುತ್ತಿವೆ. ಇನ್ನು ಆನ್ ಲೈನ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿನ ಬಳಕೆ ಹೆಚ್ಚಾಗಿರುವುದರಿಂದಲೂ ಇಂಥದ್ದೊಂದು ಬೆಳವಣಿಗೆ ನಡೆಯುತ್ತಿದೆ ಎಂದಿದ್ದಾರೆ.
ಅಪರಾಧ ಪ್ರಮಾಣ ಐನೂರರಷ್ಟು ಹೆಚ್ಚಳ
ನಮ್ಮ ಕೆಲಸಗಳನ್ನಷ್ಟೇ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಮಟ್ಟಿಗೆ ಆನ್ ಲೈನ್ ಬಳಕೆ ಮಾಡಿದರೂ ಕೆಲವು ದುಷ್ಕರ್ಮಿಗಳು ಅದರಲ್ಲಿ ಕಂಡುಬರುತ್ತಾರೆ. ಅವರಿಗೆ ಹೊಸ ಅವಕಾಶಗಳು ದೊರೆಯುತ್ತವೆ ಎಂದು ದೋವಲ್ ಅಭಿಪ್ರಾಯ ಪಟ್ಟಿದ್ದಾರೆ. ಸೈಬರ್ ಸ್ವಚ್ಛತೆ ಬಗ್ಗೆ ಅರಿವಿನ ಕೊರತೆ ಇದೆ. ಆದ್ದರಿಂದ ಸೈಬರ್ ಕ್ರೈಮ್ ನಲ್ಲಿ ಐನೂರು ಪರ್ಸೆಂಟ್ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಜವಾಬ್ದಾರಿಯಿಂದ ಇಂಟರ್ ನೆಟ್ ಬಳಸಬೇಕು
ಜನರು ಬಹಳ ಜವಾಬ್ದಾರಿಯಿಂದ ಇಂಟರ್ ನೆಟ್ ಬಳಕೆ ಮಾಡಬೇಕು ಎಂದು ಅವರು ಎಚ್ಚರಿಸಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಕೇರಳ ಸರ್ಕಾರ ಹಾಗೂ ಪೊಲೀಸರನ್ನು ಅಭಿನಂದಿಸಲಾಯಿತು. ಎರಡು ದಿನಗಳ ಸಮಾವೇಶದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜ್ಯ ಪೊಲೀಸ್ ಮುಖ್ಯಸ್ಥರು ಪಾಲ್ಗೊಂಡಿದ್ದರು.