ಹಿರಿಯ ನಾಗರಿಕ ಉಳಿತಾಯ ಯೋಜನೆ ವಯಸ್ಸಾದ ಕಾಲದಲ್ಲಿ ಆರ್ಥಿಕ ಬೆಂಬಲ ನೀಡುವ ಒಂದು ಅತ್ಯುತ್ತಮ ಯೋಜನೆಯಾಗಿದೆ. ಇದು ಹಿರಿಯರಿಗಾಗಿಯೇ ಉತ್ತೇಜನ ನೀಡುವ ಅಂಚೆ ಕಚೇರಿಯ ಯೋಜನೆಯಾಗಿದೆ. ವಯಸ್ಸಾದ ಕಾಲದಲ್ಲಿ ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬನೆಯಾಗುವ ಬದಲು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು. ವೃದ್ಧಾಪ್ಯ ಸ್ಥಿತಿಗೆ ಬಂದ ನಾಗರಿಕರು ತಮ್ಮದೇ ಹಣದಲ್ಲಿ ಬದುಕಬಹುದು. ಈ ಯೋಜನೆಯನ್ನು 2004ರಲ್ಲಿ ಪರಿಚಯಿಸಲಾಗಿದ್ದು, ಒಂದು ಇದು ಭವಿಷ್ಯದಲ್ಲಿ ಒಂದು ಸುರಕ್ಷಿತ ನಿಧಿಯೂ ಆಗಿರುತ್ತದೆ. ಈ ಯೋಜನೆ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೂಕ್ತವಾದ ಹೂಡಿಕೆ ಆಯ್ಕೆಯಾಗಿದೆ. ಹಾಗೆಯೇ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ, ಇದರ ವೈಶಿಷ್ಟ್ಯತೆ ಏನು, ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆ ಬೇಕು ಎಂಬುದೆಲ್ಲದರ ಕುರಿತು ಇಲ್ಲಿದೆ ಒಂದು ಉಪಯುಕ್ತ ಮಾಹಿತಿ.
SCSS (ಹಿರಿಯ ನಾಗರಿಕರ ಉಳಿತಾಯ ಯೋಜನೆ) ಎಂದರೇನು..?
ಈ ಯೋಜನೆಯು ಒಂದು ಸರ್ಕಾರಿ ಬೆಂಬಲಿತವಾದ ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಈ ಯೋಜನೆಯಲ್ಲಿ ಭಾರತದಲ್ಲಿರುವ ಹಿರಿಯ ನಾಗರಿಕರು ವೈಯಕ್ತಿಕವಾಗಿ ಹಾಗೂ ಜಂಟಿಯಾಗಿ ಹೂಡಿಕೆ ಮಾಡಬಹುದಾಗಿದೆ. ಹಾಗೆಯೇ ಇಲ್ಲಿ ತೆರಿಗೆ ಪ್ರಯೋಜನಗಳ ಜೊತೆಗೆ ನಿಯಮಿತ ಆದಾಯವನ್ನೂ ಪಡೆಯಬಹುದಾಗಿದೆ. ಅಲ್ಲದೇ ಭಾರತ ಸರ್ಕಾರದ ಸುರಕ್ಷತೆ ಹೊಂದಿರುವ ಅಂಚೆ ಕಚೇರಿಯ ಯೋಜನೆಯಾಗಿದ್ದು, ಇಲ್ಲಿ ಭಾರತದ ಎಲ್ಲಾ ಹಿರಿಯ ನಾಗರಿಕರು SCSS ನ ಪ್ರಯೋಜನಗಳನ್ನು ಪಡೆಯಲು SCSS ಖಾತೆಯನ್ನು ತೆರೆಯಬಹುದು. ನಿವೃತ್ತಿಯ ನಂತರದ ವರ್ಷಗಳಲ್ಲಿ ಸ್ಥಿರವಾದ ಬಡ್ಡಿ ಆದಾಯವನ್ನು ಬಯಸುವ ಹಿರಿಯ ನಾಗರಿಕರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ.

ಇದು 5 ವರ್ಷಗಳ ಕಾಲ ಅವಧಿ ಹೊಂದಿರುವ ಯೋಜನೆಯಾಗಿದೆ. ಇಲ್ಲಿ ಕನಿಷ್ಠ ಹೂಡಿಕೆ 1,000 ರೂ. ಆಗಿದ್ದು, ಗರಿಷ್ಠ ಹೂಡಿಕೆ 30,00,000 ರೂ. ಆಗಿರುತ್ತದೆ. ಈ ಯೋಜನೆಯಲ್ಲಿ ವಾರ್ಷಿಕ ಬಡ್ಡಿದರ 8.2%ರಷ್ಟು ಸಿಗುತ್ತದೆ. ಸೆಕ್ಷನ್ 80C ಅಡಿಯಲ್ಲಿ ರೂ.1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು ಲಭ್ಯವಿದೆ. ಅಲ್ಲದೇ ಅಕಾಲಿಕವಾಗಿ ಈ ಯೋಜನೆಯನ್ನು ಮುಚ್ಚುವಂತ ಅವಕಾಶವೂ ಲಬ್ಯವಿದೆ. ಮತ್ತೊಂದು ಅಂಚೆ ಕಚೇರಿಗೆ ವರ್ಗಾವಣೆ ಸೌಲಭ್ಯವೂ ಒದಗಿಸಲಾಗುತ್ತದೆ.
ಠೇವಣಿ ಹೂಡಿಕೆ ವಿಧಾನ ಮತ್ತು ಲಾಭ:
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಒಂದು ಸಾವಿರ ರೂಪಾಯಿಯಿಂದ-1 ಲಕ್ಷ ಮತ್ತು ಅದಕ್ಕಿಂತ ಕಡಿಮೆ ಹಣವನ್ನು ನಗದು ರೂಪದಲ್ಲಿ ಠೇವಣಿ ಹೂಡಿಕೆ ಮಾಡಬಹುದು. 1 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ಹೂಡಿಕೆ ಮಾಡುವ ವ್ಯಕ್ತಿಯು ಚೆಕ್ ಮೂಲಕ ಪಾವತಿಸಬೇಕು. ಈ ಮೂಲಕ ಖಾತೆ ತೆರೆದು ಸರ್ಕಾರ ನಿಗದಿಪಡಿಸಿದ ದರದಲ್ಲಿ, ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಪರಿಷ್ಕರಣೆ ಮಾಡಿ ಬಡ್ಡಿದರ ನೀಡಲಾಗುತ್ತದೆ. ಸೆಪ್ಟೆಂಬರ್ 30ಕ್ಕೆ ಮೂರನೇ ಹಂತದ ಬಡ್ಡಿ, ಡಿಸೆಂಬರ್ 31ಕ್ಕೆ ನಾಲ್ಕನೇ ಹಂತದ ಬಡ್ಡಿಯನ್ನು ನೀಡಲಾಗುತ್ತದೆ. ಇಲ್ಲಿ ಗಮನಿಸಿ ನೋಡುವುದಾದರೆ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಮಾಡಿ, ನಾಲ್ಕು ಹಂತಗಳಲ್ಲಿ ನೀಡಲಾಗುತ್ತದೆ. ಅಂದರೆ ಹೂಡಿಕೆದಾರರು ತಮ್ಮ ಠೇವಣಿ ಮೊತ್ತದ ಮೇಲೆ ತ್ರೈಮಾಸಿಕ ಬಡ್ಡಿಯನ್ನು ಪಡೆಯುತ್ತಾರೆ.
ಹೀಗೆ ಐದು ವರ್ಷಗಳ ಕಾಲ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಆದರೆ ಪಾವತಿದಾರರು ತಮಗೆ ಬೇಕಾದರೆ ಇನ್ನೂ 3 ವರ್ಷಗಳವರೆಗೆ ಈ ಯೋಜನೆಯನ್ನು ವಿಸ್ತರಿಸಬಹುದು. ಇನ್ನು ಈ ಯೋಜನೆಯ ಖಾತೆ ತೆರೆಯುವಾಗ ಅಥವಾ ಖಾತೆಯನ್ನು ತೆರೆದ ನಂತರ ನಾಮಿನಿಗಳನ್ನು ಕೂಡ ನೇಮಿಸಬಹುದು. ಈ ಯೋಜನೆಯಲ್ಲಿರುವ ಇನ್ನೂ ಒಂದು ಸೌಲಭ್ಯವೇನೆಂದರೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು. ಹಾಗೆಯೇ ಅವರು ತಮ್ಮ ಸಂಗಾತಿಯೊಂದಿಗೆ ಜಂಟಿ ಖಾತೆಯನ್ನು ಸಹ ತೆರೆಯಬಹುದು. ಜೊತೆಗೆ ಅಂಚೆ ಕಚೇರಿಯಲ್ಲಿ ತೆರೆದ ಈ ಯೋಜನೆಯ ಖಾತೆಯನ್ನು ಬ್ಯಾಂಕ್ಗೆ ಕೂಡ ವರ್ಗಾಯಿಸಬಹುದು.
SCSS ಖಾತೆ ತೆರೆಯಲು ಬೇಕಾದ ಅರ್ಹತೆ:
ಇನ್ನು ಈ ಯೋಜನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮಾತ್ರ ಖಾತೆ ತೆರೆಯಬಹುದು. ಅದಕ್ಕಿಂತ ಕಡಿಮೆ ವಯಸ್ಸು ಎಂದರೆ 55 ವರ್ಷ ಮೇಲ್ಪಟ್ಟವರು ತೆರೆಯಬಹುದು. ಆದರೆ ಅವರು ಕಡ್ಡಾಯವಾಗಿ ನಿವೃತ್ತ ನಾಗರಿಕ ನೌಕರರಾಗಿರಬೇಕು. ಮತ್ತು ನಿವೃತ್ತಿ ಪ್ರಯೋಜನಗಳನ್ನು ಪಡೆದ 1 ತಿಂಗಳೊಳಗೆ ಹೂಡಿಕೆ ಮಾಡಬೇಕು. ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸಿದ ನೌಕರರು ಬೇಕಾದರೆ 50 ವರ್ಷವಾದ ಮೇಲೆ ಖಾತೆ ತೆರಯಬಹುದು. ಜಂಟಿ ಖಾತೆಯಲ್ಲಿ ಠೇವಣಿ ಇಟ್ಟಿರುವ ಸಂಪೂರ್ಣ ಮೊತ್ತವನ್ನು ಮೊದಲ ಖಾತೆದಾರರಿಗೆ ಮಾತ್ರ ಜಮಾ ಮಾಡಲಾಗುತ್ತದೆ. ಹಾಗೂ ಭಾರತದಲ್ಲಿ ನೆಲೆಸಿರುವ ಬೇರೆ ದೇಶದ ನಾಗರಿಕರು, ಹಿಂದೂ ಅವಿಭಜಿತ ಕುಟುಂಬಗಳು ಈ ಯೋಜನೆಯಲ್ಲಿ ಖಾತೆ ತೆರೆಯಲು ಅನರ್ಹರು ಎನ್ನಲಾಗಿದೆ.
ಹಾಗೆಯೇ ಹೂಡಿಕೆದಾರರು ಯಾವುದೇ ಸಮಯದಲ್ಲಿ ಫಾರ್ಮ್-2 ರಲ್ಲಿ ಅರ್ಜಿ ಸಲ್ಲಿಸಿ ತಮ್ಮ ಖಾತೆಯನ್ನು ಮುಚ್ಚಿಸಲೂ ಅವಕಾಶವಿದೆ. ಆದರೆ ಅದಕ್ಕೆ ಒಂದಷ್ಟು ಷರತ್ತುಗಳಿವೆ.
- ಒಂದು ವರ್ಷಕ್ಕಿಂತ ಮೊದಲೇ ಖಾತೆ ಮುಚ್ಚಿದರೆ ಪಾವತಿಸಿದ ಬಡ್ಡಿಯನ್ನು ಅಸಲು ಮೊತ್ತದಿಂದ ಹಿಂಪಡೆಯಲಾಗುತ್ತದೆ.
-ಒಂದು ವರ್ಷದ ಮೇಲೆ, ಎರಡು ವರ್ಷಗಳಿಗೂ ಮುನ್ನ ಖಾತೆ ಮುಚ್ಚುವುದಾದರೆ ಸಮಾನವಾದ ಮೊತ್ತವನ್ನು ಮೂಲ ಮೊತ್ತದಿಂದ 1.5%ಗೆ ಕಡಿತಗೊಳಿಸಲಾಗುತ್ತದೆ.
- ಎರಡು ವರ್ಷಗಳ ನಂತರ ಖಾತೆ ಮುಚ್ಚುವುದಾದರೆ ಅಸಲಿ ಮೊತ್ತದಿಂದ 1% ಮೊತ್ತವನ್ನು ಕಡಿತಗೊಳಿಸಿ ದಂಡ ವಿಧಿಸಲಾಗುತ್ತದೆ.


Click it and Unblock the Notifications